/newsfirstlive-kannada/media/media_files/2025/10/11/jarakiholi-brothers-of-belagavi-2025-10-11-17-22-34.jpg)
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ : ಜಾರಕಿಹೊಳಿ ಬ್ರದರ್ಸ್ ಮೇಲುಗೈ!
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದು ನಾಮ ಪತ್ರ ಸಲ್ಲಿಕೆ ಮುಕ್ತಾಯವಾಗಿವೆ. ಹದಿನಾರು ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕಣದಲ್ಲಿ ಘಟಾನುಘಟಿ ನಾಯಕರೇ ಅಖಾಡಕ್ಕೆ ಧುಮ್ಮಿಕ್ಕಿದ್ದಾರೆ. ಆರಂಭದ ಹಂತದಲ್ಲೇ ಜಾರಕಿಹೊಳಿ ಬ್ರದರ್ಸ್ ಪೆನಲ್ ಮೆಲುಗೈ ಸಾಧಿಸಿದೆ. ಇತ್ತ ಕತ್ತಿ ಮತ್ತು ಸವದಿ ಪ್ಲ್ಯಾನ್ ಏನೂ ಅನ್ನೋದು ಇನ್ನು ಸಸ್ಪೆನ್ಸ್ ಆಗಿದೆ.
ಹೌದು, ಬೆಳಗಾವಿ ಜಿಲ್ಲೆಯಲ್ಲಿ ಜಿದ್ದಾ ಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಡಿಸಿಸಿ ಬ್ಯಾಂಕ್ ನ ಹದಿನಾರು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು 19ರಂದು ಮತದಾನ ನಡೆಯಲಿದೆ. ಇನ್ನೂ ಈ ವರೆಗೂ ಒಟ್ಟು 64 ನಾಮ ಪತ್ರ ಸಲ್ಲಿಕೆಯಾಗಿವೆ. ಈ ಪೈಕಿ ಆರು ತಾಲೂಕಿನಲ್ಲಿ 6 ಮಂದಿ ಹೊರತುಪಡಿಸಿ, ಉಳಿದವರು ಯಾವುದೇ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಈ ಮೂಲಕ ಆರಂಭದಲ್ಲೇ ಜಾರಕಿಹೊಳಿ ಪೆನಲ್ ಮೇಲುಗೈ ಸಾಧಿಸಿದೆ.
ರಾಜಕೀಯ ಭವಿಷ್ಯ ನಿರ್ಧಾರ ಮಾಡುವ ಚುನಾವಣೆಗೆ ಘಟಾನುಘಟಿ ನಾಯಕರೇ ಸ್ಪರ್ಧೆ ಮಾಡುತ್ತಿದ್ದಾರೆ. ಹಾಲಿ, ಮಾಜಿ ಶಾಸಕರು ಸೇರಿದಂತೆ ಮಾಜಿ ಸಂಸದರು ಕೂಡ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ಈಗಾಗಲೇ ಜಾರಕಿಹೊಳಿ ಬ್ರದರ್ಸ್ 13 ಜನರ ಒಂದು ಪೆನಲ್ ರೆಡಿ ಮಾಡಿಕೊಂಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಥಣಿ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಯಾವುದೇ ಅಭ್ಯರ್ಥಿಗಳನ್ನ ಕಣಕ್ಕಿಳಿಸದೇ ಇನ್ನೂಳಿದ ಕಡೆಗಳಲ್ಲಿ ತಮ್ಮವರನ್ನ ಅಖಾಡಕ್ಕಿಳಿಸಿದ್ದಾರೆ. ಇತ್ತ ರಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ನಡೆ ಇನ್ನೂ ನಿಗೂಢವಾಗಿದ್ದು ಜಾರಕಿಹೊಳಿ ಸಹೋದರರಿಗೆ ಶಾಕ್ ಕೊಡಲು ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಸದ್ಯ ಆರಂಭಿಕ ಹಂತದಲ್ಲಿ ಜಾರಕಿಹೊಳಿ ಬ್ರದರ್ಸ್ ಮೇಲುಗೈ ಸಾಧಿಸಿದ್ದು ಆರು ತಾಲೂಕಿನ ಪೈಕಿ ಐದು ಮಂದಿ ಜಾರಕಿಹೊಳಿ ಬ್ರದರ್ಸ್ ಪ್ಯಾನಲ್ ನವರು ಆಯ್ಕೆಯಾಗಿದ್ದಾರೆ. ಯಾವ ಕ್ಷೇತ್ರದಿಂದ ಯಾರು ಯಾರು ಆಯ್ಕೆ ಅನ್ನೋದನ್ನ ನೋಡೊದಾದ್ರೇ
ಗೋಕಾಕ್ ದಿಂದ ಅಮರನಾಥ್ ಜಾರಕಿಹೊಳಿ,
ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ
ಯರಗಟ್ಟಿ ಕ್ಷೇತ್ರದಿಂದ ವಿಶ್ವಾಸ್ ವೈದ್ಯ
ಸವದತ್ತಿ ವಿರೂಪಾಕ್ಷ ಮಾಮನಿ
ಮೂಡಲಗಿ ನೀಲಕಂಠ ಜಾರಕಿಹೊಳಿ
ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲಾ ಜಾರಕಿಹೊಳಿ ಪ್ಯಾನಲ್ ನಲ್ಲಿದ್ದವರು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತ ಯಾವುದೇ ಪೆನಲ್ ನಲ್ಲಿ ಗುರುತಿಸಿಕೊಳ್ಳದೇ ಚಿಕ್ಕೋಡಿಯಿಂದ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಕೂಡ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆವರೆಗೂ ಕಾದು ತಮ್ಮ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ, ನೀಲಕಂಠ, ಗಣೇಶ್ ಹುಕ್ಕೇರಿ ಬೆಂಬಲಿಗರು ಗುಲಾಲ್ ಹಚ್ಚಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಾರಕಿಹೊಳಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಇನ್ನೂ ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದ್ರೂ ಅದಕ್ಕೆ ಠಕ್ಕರ್ ಕೊಡಲು ಲಕ್ಷ್ಮಣ ಸವದಿ ಹಾಗೂ ರಮೇಶ್ ಕತ್ತಿ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಹೇಗಾದ್ರೂ ಮಾಡಿ ಡಿಸಿಸಿ ಬ್ಯಾಂಕ್ ಅಧ್ಯಕ್ಷಗಾದಿ ಹಿಡಿಯಬೇಕು ಅಂತ ಪ್ಲ್ಯಾನ್ ಮಾಡಿದ್ದಾರೆ. ತಮ್ಮ ಹಿಡಿತದಲ್ಲಿ ಡಿಸಿಸಿ ಬ್ಯಾಂಕ್ ಇರಬೇಕು ಅನ್ನೋ ನಿಟ್ಟಿನಲ್ಲಿ ಪ್ಲ್ಯಾನ್ ಮಾಡ್ತಿದ್ದು 19ರ ವರೆಗೂ ಕಾದು ನೋಡಿ ಅಂತಿದ್ದಾರೆ. ಇನ್ನೊಂದು ಕಡೆ ಇದೇ ಮೊದಲ ಬಾರಿಗೆ ಅಣ್ತಮ್ಮಂದಿರು ತಾವು ಸ್ಪರ್ಧೆ ಮಾಡುವುದನ್ನ ಬಿಟ್ಟು ತಮ್ಮ ಕುಡಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು ಈ ಮೂಲಕ ಜಾರಕಿಹೊಳಿ ಮನೆತನದ ಎರಡನೇ ಪೀಳಿಗೆ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದೆ.
ಗೋಕಾಕ್ ನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಅಮರನಾಥ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಪುತ್ರ. ಇನ್ನೂ ಬೆಳಗಾವಿಯಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ರಾಹುಲ್ ಜಾರಕಿಹೊಳಿ , ಸಚಿವ ಸತೀಶ್ ಜಾರಕಿಹೊಳಿ ಪುತ್ರ.
ಈ ಕುರಿತು ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ತಾವು ಎಳೆದುಕೊಂಡು ಹೋಗ್ತಿರುವ ತೇರು ಅನ್ನ ಮಕ್ಕಳು ಎಳೆಯಬೇಕು, ಜನರ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಚುನಾವಣೆಗೆ ನಿಲ್ಲಿಸಿದ್ದಾಗಿ ಹೇಳಿದ್ದಾರೆ. ಇತ್ತ ತಾನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಎಂಟ್ರಿಯಾಗಿದ್ದಾರೆ. ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದು ಜಾರಕಿಹೊಳಿ ಸಹೋದರರ ಮತ್ತೊಂದು ದಾಳ ಅಂತಾ ಹೇಳಲಾಗುತ್ತಿದೆ. ಬಾಲಚಂದ್ರ ಜಾರಕಿಹೊಳಿ ಕೂಡ ರಾಜಕಾರಣದಲ್ಲಿ ಎಲ್ಲವೂ ಮಾಡಬೇಕು ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಕ್ಟೋಬರ್ 19ರಂದು ಮತದಾನ ನಡೆಯಲಿದ್ದು ಈಗಾಗಲೇ ಆರು ತಾಲೂಕಿನಲ್ಲಿ 6 ಮಂದಿ ಹೊರತುಪಡಿಸಿ, ಉಳಿದವರಾರು ಯಾವುದೇ ನಾಮ ಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಖಚಿತವಾಗಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಇತ್ತ ಜಾರಕಿಹೊಳಿ ಬ್ರದರ್ಸ್ ಕಡೆಯಿಂದ ಡಿಸಿಸಿ ಬ್ಯಾಂಕ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಲಿಂಗಾಯತ ಅಸ್ತ್ರ ಕೂಡ ಪ್ರಯೋಗ ಆಗ್ತಿದ್ದು ಇದರಿಂದ ತಮ್ಮ ಪೆನಲ್ ಗೆದ್ರೇ ಲಿಂಗಾಯತರೇ ಅಧ್ಯಕ್ಷ ಅಂತಾ ಬಾಲಚಂದ್ರ ಜಾರಕಿಹೊಳಿ ಹೇಳಿದ್ದು ಮತ್ತಷ್ಟು ರೋಚಕತೆ, ಕುತೂಹಲ ಹೆಚ್ಚಿಸಿದೆ.
ಶ್ರೀಕಾಂತ ಕುಬಕಡ್ಡಿ, ನ್ಯೂಸ್ ಫಸ್ಟ್, ಬೆಳಗಾವಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.