/newsfirstlive-kannada/media/media_files/2025/09/01/knr-and-swamiji-meeting03-2025-09-01-13-08-59.jpg)
ಶಾಸಕ ಕೆ.ಎನ್.ರಾಜಣ್ಣರನ್ನು ಮತ್ತೆ ಕ್ಯಾಬಿನೆಟ್ ಸೇರ್ಪಡೆಗೆ ಒತ್ತಾಯ
ಮಾಜಿ ಸಚಿವ ಕೆ.ಎನ್. ರಾಜಣ್ಣ ಒಂಟಿಯಲ್ಲ.. ಅವರ ಹಿಂದೆ ಹಿಂದ ಬಲವಿದೆ ಅನ್ನೋದು ಸಾಬೀತಾಗಿದೆ. ಸಚಿವ ಸ್ಥಾನ ಕಳೆದ್ಕೊಂಡ ಬಳಿಕ ಮೊದಲ ಬಾರಿಗೆ ರಾಜಣ್ಣರನ್ನ 10ಕ್ಕೂ ಅಧಿಕ ಸ್ವಾಮೀಜಿಗಳು, ಭೇಟಿ ಮಾಡಿ ರಾಜಕೀಯವಾಗಿ ನೈತಿಕ ಬೆಂಬಲ ನೀಡಿದ್ದಾರೆ.. ಮಠಾಧೀಶರ ಈ ಭೇಟಿಯಿಂದ ರಾಜ್ಯ ರಾಜಕೀಯ ಮೇಲಾಟದಲ್ಲಿ ಹೊಸ ದಿಕ್ಕು ಕಲ್ಪಿಸಿದೆ..
ಮಾತು ಬಂಗಾರ.. ಮೌನ ಅಂಗಾರವಂತೆ.. ಆದ್ರೆ, ಇಲ್ಲಿ ಅದು ತಿರುವು ಮುರುವು.. ಮಾತು ಮನೆ ಕೆಡಸಿತ್ತು, ತೂತು ಒಲೆ ಕೆಡಿಸಿತ್ತು.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ನೇರ ನುಡಿಯ ಕೆ.ಎನ್. ರಾಜಣ್ಣ.. ಸಚಿವ ಸ್ಥಾನ ಕೈತಪ್ಪಿದ ಬಳಿಕ ಕೆ.ಎನ್.ರಾಜಣ್ಣರ ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ.. ಮುಂದೇನು ಅನ್ನೋದು ಅವರಿಗೂ ಗೊತ್ತಿಲ್ಲ.. ಆದ್ರೆ, ಸುಮ್ನೇ ಅಂತೂ ಕುಳಿತಿಲ್ಲ. ಸಿಂಹ ಯಾವಾಗಲೂ ಘರ್ಜಿಸುತ್ತೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಸಿಂಹ ಯಾವಾಗಲೂ ಗುರ್ ಅಂತಲೇ ಇರುತ್ತೆ ಎಂದು ಸಹ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ , ಕೆ.ಎನ್.ರಾಜಣ್ಣ ಬಗ್ಗೆಯೇ ಹೇಳಿದ್ದರು. ಈಗ ಅದೇ ರೀತಿ ಮತ್ತೆ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಹೈಕಮ್ಯಾಂಡ್ಗೆ ಸಂದೇಶ ಕೊಡುತ್ತಿದ್ದಾರೆ. ಡೆಲ್ಲಿಗೆ ಒಂದು ಗಟ್ಟಿ ಸಂದೇಶ ಕೊಡಲು ನಿರಂತರ ಯತ್ನಗಳು ಸಾಗಿವೆ. ಇದಕ್ಕೆ ಸಾಕ್ಷಿ ನಿನ್ನೆ ನಡೆದ ಇದೊಂದು ಸಭೆ. ತುಮಕೂರಿನ ಕ್ಯಾತಸಂದ್ರದಲ್ಲಿರುವ ಕೆ.ಎನ್.ರಾಜಣ್ಣ ನಿವಾಸಕ್ಕೆ ಹತ್ತಾರು ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಭೇಟಿ ನೀಡಿ ಕೆ.ಎನ್.ರಾಜಣ್ಣಗೆ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಡಿಸಿಎಂ ಡಿಕೆಶಿ ಅವರನ್ನು ಇತ್ತೀಚೆಗೆ ಕಾಂಗ್ರೆಸ್ ಹೈಕಮ್ಯಾಂಡ್ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಕ್ಷಮಿಸಿದೆ. ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಡಿಕೆಶಿ ಅವರನ್ನು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಿದ್ದಾರೆ. ಅದೇ ರೀತಿ ಕೆಎನ್ಆರ್ ರನ್ನು ಕ್ಷಮಿಸಿ, ಮತ್ತೆ ಕ್ಯಾಬಿನೆಟ್ಗೆ ಸೇರ್ಪಡೆ ಮಾಡಿಕೊಳ್ಳಿ ಎಂದಿದ್ದಾರೆ ವಿವಿಧ ಮಠಾಧೀಶರು.
ಕೆ.ಎನ್.ರಾಜಣ್ಣ ಬೆಂಬಲಕ್ಕೆ ಬಂದ ‘ಹಿಂದ’ ಸ್ವಾಮೀಜಿಗಳು!
ರಾಜಣ್ಣಗೆ ಸಚಿವ ಸ್ಥಾನ ಮರಳಿಸುವಂತೆ ರಾಹುಲ್ಗೆ ಆಗ್ರಹ
ಇಡೀ ವಾಲ್ಮೀಕಿ ಸಮುದಾಯ ಮಾತ್ರವಲ್ಲ, ಹಿಂದುಳಿದ, ದಲಿತ ಮಠಾಧೀಶರು ರಾಜಣ್ಣ ಬೆಂಬಲಕ್ಕೆ ಬಂದಿದ್ದಾರೆ.. ನಿನ್ನೆ ತುಮಕೂರಿನ ಕ್ಯಾತಸಂದ್ರದ ರಾಜಣ್ಣ ನಿವಾಸದಲ್ಲಿ 10ಕ್ಕೂ ಹೆಚ್ಚು ಮಠಾಧೀಶರು ಆಗಮಿಸಿ ಸುಮಾರು ಒಂದು ಘಂಟೆಗೂ ಹೆಚ್ಚು ಸಮಯ ರಾಜಣ್ಣನ ಜೊತೆ ಚರ್ಚಿಸಿದ್ದು ಕುತೂಹಲಕ್ಕೆ ಕಾರಣ ಆಗಿದೆ.. ತಪ್ಪು ಗ್ರಹಿಕೆಯಿಂದ ಸಂಪುಟದಿಂದ ಹೊರ ಹಾಕುವ ಕೆಲಸ ಆಗಿದೆ.. ರಾಜಣ್ಣಗೆ ಮತ್ತೆ ಸಚಿವ ಸ್ಥಾನ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದೆ. ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿಕೆಶಿ ಅವರನ್ನು ಕಾಂಗ್ರೆಸ್ ಹೈಕಮ್ಯಾಂಡ್ ಕ್ಷಮಿಸಿ, ಡಿಸಿಎಂ ಹುದ್ದೆಯಲ್ಲೇ ಮುಂದುವರಿಸಿದೆ. ಅದೇ ರೀತಿ ಸಣ್ಣ ತಪ್ಪು ಮಾಡಿದ ಕೆ.ಎನ್.ರಾಜಣ್ಣರನ್ನು ಕ್ಷಮಿಸಿ ಮತ್ತೆ ಕ್ಯಾಬಿನೆಟ್ಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ವಿವಿಧ ಮಠಾಧೀಶರು ಕಾಂಗ್ರೆಸ್ ಹೈಕಮ್ಯಾಂಡ್ಗೆ ಆಗ್ರಹಿಸಿದ್ದಾರೆ.
ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಸ್ವಾಮೀಜಿ ರಾಜಣ್ಣರನ್ನು ‘ಸಂಪುಟಕ್ಕೆ ಸೇರಿಸಿಕೊಳ್ಳಿ’ ಎಂದಿದ್ದಾರೆ.
ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಬೋವಿ ಗುರುಪೀಠದ ಸ್ವಾಮೀಜಿ, ‘ರಾಜಣ್ಣನಂತವರು ಬೇಕು’ ಎಂದಿದ್ದಾರೆ.
ಈಶ್ವರಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ, ‘ಇದು ಶೋಷಿತರಿಗೆ ಆಘಾತ’ ಎಂದಿದ್ದಾರೆ.
ಮಾದಾರ ಚೆನ್ನಯ್ಯ ಶ್ರೀ, ಮಾದಾರ ಗುರುಪೀಠ, ‘ಗೌರವಯುತವಾಗಿ ರಾಜಣ್ಣರನ್ನು ನಡೆಸ್ಕೋಬೇಕು’ ಎಂದಿದ್ದಾರೆ.
ಮಾಜಿ ಸಚಿವ ಕೆ.ಎನ್.ಆರ್. ದಂಪತಿಯನ್ನು ಸನ್ಮಾನಿಸಿದ ಮಠಾಧೀಶರು.
ಸಚಿವ ಸ್ಥಾನದಿಂದ ವಜಾಕ್ಕೆ ಮತಗಳವು ಹೇಳಿಕೆ ಕಾರಣವಲ್ಲ!
ಆ ಎರಡು ವಿಚಾರಗಳನ್ನ ಮುಂದಿಟ್ಟ ಮಾಜಿ ಸಚಿವ ರಾಜಣ್ಣ!
ಸ್ವಾಮೀಜಿಗಳು ಬಂದು ಹೋದ ಬಳಿಕ ಮಾತ್ನಾಡಿದ ಕೆ.ಎನ್.ರಾಜಣ್ಣ, ಕೆಲವೊಮ್ಮೆ ಸತ್ಯಕ್ಕೆ ತಾತ್ಕಾಲಿಕ ಹಿನ್ನೆಡೆ ಆಗ್ಬಹುದು ಅಂತ ತಮ್ಮ ನಿಲುವು ಸಮರ್ಥಿಸಿದ್ದಾರೆ.. ತಮ್ಮ ವಜಾಕ್ಕೆ ಮತಗಳವು ಹೇಳಿಕೆ ಜೊತೆಗೆ ಬೇರೆ ಕಾರಣಗಳಿವೆ ಅಂತ ಹನಿಟ್ರ್ಯಾಪ್, ಮೂವರು ಡಿಸಿಎಂ ಹೇಳಿಕೆ ನೀಡಿದ್ದು ಕೂಡ ಕಾರಣ ಎಂದು ದಾಳ ಮುಂದುಬಿಟ್ಟಿದ್ದಾರೆ.
ಒಟ್ಟಾರೆ, ರಾಜಕೀಯಕ್ಕೆ ಧರ್ಮದ ಮಾರ್ಗದರ್ಶನ ಅವಶ್ಯಕತೆ ಇದೆ.. ಹಾಗಾಗಿ ಸ್ವಾಮೀಜಿಗಳು ಮಾರ್ಗದರ್ಶನ ಮಾಡ್ತಾರೆ ಎನ್ನುವ ಮೂಲಕ ಮಾಜಿ ಸಚಿವರ ಮನೆಗೆ ಹತ್ತಾರು ಮಠಾಧೀಶರು ಆಗಮಿಸಿ ಧೈರ್ಯ ತುಂಬಿದ್ದಾರೆ. ರಾಜ್ಯದಲ್ಲಿ ಹೈಕಮಾಂಡ್ಗೆ ಕೊಟ್ಟ ದೂರುಗಳ ಹಿಂದಿನ ಕೈಗಳಿಗೆ ಈ ಭೇಟಿ ಒಂದು ಸಂದೇಶ ಕೊಟ್ಟಿದೆ.. ಅಲ್ಲದೆ, ಮಠಾಧೀಶರ ಬೆಂಬಲವು ರಾಜಣ್ಣಗೆ ಹೆಚ್ಚು ಶಕ್ತಿ ತುಂಬಿದ್ದು, ಪಕ್ಷದ ಒಳ ರಾಜಕಾರಣದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಮಧು ಇಂಗಳದಾಳ್, ನ್ಯೂಸ್ಫಸ್ಟ್, ತುಮಕೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ