/newsfirstlive-kannada/media/media_files/2025/08/20/kerala-wayanda-victim-fund-kartka022-2025-08-20-18-06-54.jpg)
ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರದಿಂದ ಮನೆ ನಿರ್ಮಾಣ
ಸಿಎಂ ಸಿದ್ದರಾಮಯ್ಯನವರ ಸರ್ಕಾರವು ಕರ್ನಾಟಕದ ಬಡಜನರಿಗೆ ಮನೆ ಕಟ್ಟಿಕೊಡುವುದಕ್ಕಿಂತ ನೆರೆಯ ಕೇರಳದ ವಯನಾಡ್ ಕ್ಷೇತ್ರದ ಭೂಕುಸಿತ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಕೇರಳದ ವಯನಾಡ್ ನಲ್ಲಿ ಕಳೆದ ವರ್ಷ ಜುಲೈ 30 ರಂದು ಭೂಕುಸಿತ ಸಂಭವಿಸಿ ಜನರು ತಮ್ಮ ಮನೆಗಳನ್ನ ಕಳೆದುಕೊಂಡಿದ್ದರು. ಭೂಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರ 100 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಕರ್ನಾಟಕ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಹಣವನ್ನು ಹಂಚಿಕೆ ಮಾಡಿದೆ. ರಾಜ್ಯ ಬಜೆಟ್ನ ಪೂರಕ ಅಂದಾಜಿನಲ್ಲಿ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿರುವ ಉಲ್ಲೇಖ ಇದೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಎಸ್ಡಿಆರ್ಎಫ್ ಅನುದಾನ ನೀಡುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಸದ್ಯ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಪ್ರಿಯಾಂಗಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧಿನಾಯಕಿಯ ಪುತ್ರಿ ಪ್ರಿಯಾಂಕಾ ಗಾಂಧಿ ವಯನಾಡ್ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಕಾರಣದಿಂದ, ಪ್ರಿಯಾಂಕಾ ಗಾಂಧಿರನ್ನು ಮೆಚ್ಚಿಸಲು 10 ಕೋಟಿ ರೂಪಾಯಿ ಅನುದಾನವನ್ನು ವಯನಾಡ್ ಭೂಕುಸಿತ ಸಂತ್ರಸ್ತರ ಪುನರ್ ವಸತಿಗಾಗಿ ಬಿಡುಗಡೆ ಮಾಡಲಾಗಿದೆ ಎಂಬ ಟೀಕೆ ಕೇಳಿ ಬಂದಿದೆ.
ಈ ಹಿಂದೆ ಕರ್ನಾಟಕದ ಆನೆಯೊಂದು ಕೇರಳ ರಾಜ್ಯ ಪ್ರವೇಶಿಸಿ ವ್ಯಕ್ತಿಯ ಸಾವಿಗೆ ಕಾರಣವಾಗಿತ್ತು ಎಂದು ಕೇರಳದಲ್ಲಿ ಸತ್ತಿದ್ದ ವ್ಯಕ್ತಿಗೂ ರಾಜ್ಯ ಅರಣ್ಯ ಇಲಾಖೆ ಪರಿಹಾರ ಘೋಷಿಸಿತ್ತು. ಅದು ಆಗ ಟೀಕೆಗೂ ಗುರಿಯಾಗಿತ್ತು. ಈಗ ನೇರವಾಗಿ ವಯವಾಡ್ ಭೂಕುಸಿತ ಸಂತ್ರಸ್ತರ ಪುನರ್ ವಸತಿಗಾಗಿ 10 ಕೋಟಿ ರೂಪಾಯಿ ಹಣ ನೀಡಲಾಗಿದೆ.
ನೆರೆಹೊರೆಯ ರಾಜ್ಯವಾಗಿ ಮಾನವೀಯತೆಯಿಂದ ಪಕ್ಕದ ರಾಜ್ಯಕ್ಕೆ ನೆರವು ನೀಡಿದ್ದರೇ, ತಪ್ಪಿಲ್ಲ. ಕರ್ನಾಟಕ ಸರ್ಕಾರವು ಈ ಹಿಂದೆ ಗುಜರಾತ್ ಭೂಕಂಪ ಸಂಭವಿಸಿದಾಗ, ಮಾನವೀಯತೆಯ ದೃಷ್ಟಿಯಿಂದ ಹಣಕಾಸಿನ ನೆರವು ಅನ್ನು ಘೋಷಿಸಿದೆ. ಬೇರೆ ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಗಳಾದಾಗಲೂ ಕರ್ನಾಟಕ ರಾಜ್ಯ ಸರ್ಕಾರ ಹಣಕಾಸಿನ ನೆರವು ಘೋಷಿಸಿದೆ.
/filters:format(webp)/newsfirstlive-kannada/media/media_files/2025/08/20/kerala-wayanda-victim-fund-kartka-2025-08-20-18-09-13.jpg)
ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾದ ಎಸ್ಡಿಆರ್ಎಫ್ ಹಣ ಹಂಚಿಕೆಯ ದಾಖಲೆ ಪತ್ರ.
ಆದರೇ, ವಯನಾಡ್ ಲೋಕಸಭಾ ಕ್ಷೇತ್ರವನ್ನು ರಾಹುಲ್, ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವಾಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ವಿಶೇಷ ಆಸಕ್ತಿಯನ್ನು ವಯನಾಡ್ ಬಗ್ಗೆ ವಹಿಸುವುದರ ಹಿಂದೆ ರಾಜಕೀಯ ತುಷ್ಟೀಕರಣದ ಉದ್ದೇಶ ಇದೆ ಎಂಬ ಅನುಮಾನ ರಾಜ್ಯದ ಜನರಿಗೆ ಬರುತ್ತೆ.
ಕರ್ನಾಟಕದಿಂದ ಉತ್ತರಕಾಂಡ ರಾಜ್ಯಕ್ಕೆ ತೆರೆಳಿದ ಸಂದರ್ಭದಲ್ಲಿ ಪ್ರಕೃತಿ ವೈಪರೀತ್ಯದಿಂದ ಮೃತ ಪಟ್ಟವರ ದೇಹಗಳನ್ನು ಹಾಗೂ ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಹಾಗೂ ಈ ಪ್ರಕೃತಿ ವೈಪರೀತ್ಯದಿಂದ ಸಂಕಷ್ಟದಲ್ಲಿ ಸಿಲುಕಿದ್ದವರ ನೆರವಿಗಾಗಿ ರಾಜ್ಯದಿಂದ ನಿಯೋಜಿಸಲಾದ ಅಧಿಕಾರಿಗಳ ವೆಚ್ಚಕ್ಕಾಗಿ ಒಟ್ಟು ರೂ.56.64 ಲಕ್ಷಗಳನ್ನು ಮತ್ತು ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ರೂ.1000.00 ಲಕ್ಷಗಳು ಸೇರಿದಂತೆ ಒಟ್ಟಾರೆಯಾಗಿ ರೂ.1056.64 ಲಕ್ಷಗಳನ್ನು ಎಸ್.ಡಿ.ಆರ್.ಎಫ್ ಅಡಿಯಲ್ಲಿ ರಾಜ್ಯದ ಹೆಚ್ಚುವರಿ ಪಾಲಾಗಿ ಒದಗಿಸಲಾಗುತ್ತಿದೆ. ಆದ್ದರಿಂದ, ಈ ಅಭಿಯಾಚನೆಯಲ್ಲಿ ಸೇರಿಸಿದೆ ಎಂದು ಉಲ್ಲೇಖಿಸಲಾಗಿದೆ. ಇದರ ದಾಖಲೆ ಪತ್ರಗಳು ನ್ಯೂಸ್ ಫಸ್ಟ್ ಗೆ ಲಭ್ಯವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us