Advertisment

ವಯನಾಡ್‌ಗೆ ಪ್ರವಾಸ ಆಯೋಜಿಸಿದ ಕರ್ನಾಟಕ ಪ್ರವಾಸೋದ್ಯಮ ನಿಗಮ! ಟೂರ್ ಆಯೋಜಿಸಿದ ಬಗ್ಗೆ ವಿವರಣೆ ಕೇಳಿದ ಸಚಿವರು

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸಬೇಕು. ಆದರೇ, ಕೇರಳದ ಪ್ರವಾಸಿ ತಾಣಗಳಿಗೆ ಕನ್ನಡಿಗ ಪ್ರವಾಸಿಗರನ್ನು ಕರೆದೊಯ್ಯಲು ಹೊರಟಿದೆ. ಈ ಮೂಲಕ ಕೇರಳ ಪ್ರವಾಸೋದ್ಯಮ ಅಭಿವೃದ್ದಿಪಡಿಸುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

author-image
Chandramohan
KSTDC WAYANAD TOUR PACKAGES

ವಯನಾಡ್‌ಗೆ ಟೂರ್ ಆಯೋಜಿಸಿದ ಕೆಎಸ್‌ಟಿಡಿಸಿ!

Advertisment

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದಿಂದ ಕೇರಳ ಪ್ರವಾಸಿತಾಣ ಪ್ರಚಾರ ಮಾಡಲಾಗುತ್ತಿದೆ. ಜೊತೆಗೆ  ಕೆಎಸ್ ಟಿಡಿಸಿಯಿಂದ ಕೇರಳದ  ವಯನಾಡ್ ಪ್ರವಾಸದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಕೇರಳದ ವಯನಾಡ್‌ಗೆ ಕರ್ನಾಟಕದ ಜನರನ್ನು ಪ್ರವಾಸಕ್ಕೆ ಕರೆದೊಯ್ಯಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದವು ಟೂರ್ ಆಯೋಜಿಸಿದೆ. 
ಕರ್ನಾಟಕದಲ್ಲಿ ಸಾವಿರಾರು ಪ್ರವಾಸಿ ತಾಣಗಳಿದ್ದು, ಅವುಗಳನ್ನ ಕಣ್ತುಂಬಿಕೊಳ್ಳಲು  ದೇಶದ ನಾನಾ ಭಾಗದಿಂದ ಜನರು ಬರ್ತಾರೆ, ಅದನ್ನ ಪ್ರಚಾರ ಮಾಡುವ ಬದಲು  ಕೆಎಸ್ ಟಿಡಿಸಿ ಕೇರಳದ ವಯನಾಡು ಪ್ರವಾಸಿ ತಾಣದ ಬಗ್ಗೆ ಪ್ರಚಾರ ಮಾಡುತ್ತಿದೆ . ವಯನಾಡ್‌ಗೆ ಕರ್ನಾಟಕದ ಜನರನ್ನು ಕರೆದೊಯ್ಯಲು ಟೂರ್ ಆಯೋಜಿಸಿದೆ. 
ಕರ್ನಾಟಕದ ಕಾಂಗ್ರೆಸ್ ಸರ್ಕಾರ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ  ಮನಮೆಚ್ಚಿಸೋದಕ್ಕೆ ಮುಂದಾಯ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ.  ಈ ಹಿಂದೆ ಕೇರಳದಲ್ಲಿ ಆನೆದಾಳಿಗೆ ಸತ್ತ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ನೀಡಿತ್ತು .  ಈಗ ಕೇರಳ ಪ್ರವಾಸಿ ತಾಣಗಳನ್ನ ಪ್ರಚಾರ  ಮಾಡಿ, ಅಲ್ಲಿಗೆ ಕನ್ನಡಿಗರನ್ನು ಕರೆದೊಯ್ಯುತ್ತಿರುವುದು ಏಕೆ?  ಕರ್ನಾಟಕದಲ್ಲೇ ವಯನಾಡ್‌ನಂಥ ಪ್ರಕೃತಿ ಸೌಂದರ್ಯ ಹೊಂದಿರುವ ಮಡಿಕೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿವೆ. ಇಲ್ಲೇ ಏಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿಲ್ಲ. ಕರ್ನಾಟಕದ ಆಚೆಗೆ ಪ್ರವಾಸ ಆಯೋಜಿಸಿ, ಅವುಗಳ ಪ್ರವಾಸೋದ್ಯಮ ಉತೇಜಿಸುವುದು  ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಉದ್ದೇಶ, ಗುರಿಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. 
ಮಂಜಿನ ಹೊದಿಕೆಯೊಳಗೆ ಸುಂದರ ವಯನಾಡ್ ನಿಮ್ಮನ್ನು ಕಾಯುತ್ತಿದೆ ಎಂದು ಕೆಎಸ್‌ಟಿಡಿಸಿ ಅಧಿಕೃತ ಟ್ವೀಟರ್ ಹ್ಯಾಂಡಲ್ ನಿಂದ 2 ದಿನದ ಹಿಂದೆ ಪೋಸ್ಟ್ ಮಾಡಲಾಗಿದೆ. ಮಂಜಿನ ಹೊದಿಕೆಯೊಳಗೆ ಸುಂದರ ಮಡಿಕೇರಿ, ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದರೇ, ಕನ್ನಡಿಗರು ಮೆಚ್ಚಿಕೊಳ್ಳುತ್ತಿದ್ದರು. ಇದು ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಮಾಡಬೇಕಾಗಿದ್ದ ಕೆಲಸ. ಅದು ಬಿಟ್ಟು ಕೇರಳದ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಕೆಲಸವನ್ನು ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹೊರ ಗುತ್ತಿಗೆ ಪಡೆಯಿತೇ ಎಂಬ ಪ್ರಶ್ನೆ ಅದರ ಪೋಸ್ಟ್ ನೋಡಿದ ಕನ್ನಡಿಗರ ಮನಸ್ಸಿನಲ್ಲಿ ಉದ್ಭವವಾಗಿದೆ. ಈ ಪ್ರಶ್ನೆಯನ್ನು ಆ ಪೋಸ್ಟ್ ಗೆ  ಉತ್ತರವಾಗಿ ನೀಡಿದ್ದಾರೆ. 
ಕೇರಳದ ವಯನಾಡ್‌ಗೆ  ಎರಡು ರಾತ್ರಿ ಮತ್ತು ಮೂರು ದಿನದ ಪ್ರವಾಸವನ್ನ  ಕೆಎಸ್‌ಟಿಡಿಸಿ ಆಯೋಜಿಸಿದೆ. 

Advertisment

ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಕೆಎಸ್‌ಟಿಡಿಸಿ ವಯನಾಡಿಗೆ ಕನ್ನಡಿಗರನ್ನು ಕರೆಯುತ್ತಿದೆ!!!  ವಯನಾಡು ಕರ್ನಾಟಕಕ್ಕೆ ಸೇರಿತೇ? ಅಥವಾ ಕೆಎಸ್‌ಟಿಡಿಸಿ ಕೇರಳದ್ದಾಯಿತೇ? 
ತಮ್ಮ ಪಕ್ಷದ ಅಧಿನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಮೆಚ್ಚಿಸಲು ಕನ್ನಡ ನಾಡಿನ ಗೌರವವನ್ನು ಅಡವಿಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ. ಇನ್ನೂ ಬಿಜೆಪಿಯ ರಾಜ್ಯ ಘಟಕದಿಂದಲೂ ವಯನಾಡ್‌ಗೆ ಟೂರ್ ಆಯೋಜಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಲಾಗಿದೆ. 

Advertisment

 ಇನ್ನೂ  ಪ್ರವಾಸೋದ್ಯಮ ಇಲಾಖೆಯಿಂದ ವಯನಾಡಿನ ಟೂರ್ ಆಯೋಜನೆಗೆ  ವಿಧಾನಸೌಧದಲ್ಲಿ  ಸಾರಿಗೆ ಸಚಿವ  ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.  ವಯನಾಡ್ ನಮ್ಮ ಪಕ್ಕದ ರಾಜ್ಯದ ಕೇರಳ‌ ಜಿಲ್ಲೆ. ಬಿಜೆಪಿಯವರು ಅದನ್ನು ಟೀಕೆ ಮಾಡಿದ್ದಾರೆ.  ವಯನಾಡ್ ಅನ್ನು  ಪ್ರಿಯಾಂಕ್ ಗಾಂಧಿ ಅವ್ರು ಪ್ರತಿನಿಸುತ್ತಿದ್ದಾರೆ ಅನ್ನೋದಷ್ಟೇ .  ಮುಜರಾಯಿ ಇಲಾಖೆಯಲ್ಲೂ ನಮ್ಮದು‌ ಗುತ್ತಿಗೆ ಆಧಾರದಡಿ ಟ್ರೈನ್ ಇದೆ .  ವಾರಣಾಸಿ ಸೇರಿ ಬೇರೆಡೆ‌ಗೆ ಜನರನ್ನು ಕಳಿಸುತ್ತಿರುತ್ತೇವೆ. ಮಾನಸ ಸರೋವರ ಸೇರಿ ಹಲವೆಡೆ ಪ್ಯಾಕೇಜ್ ರೂಪದಲ್ಲಿಯೂ ಕಳಿಸುತ್ತಿದ್ದೇವೆ.  ಇದು ಬಿಜೆಪಿಯವರಿಗೆ ಗೊತ್ತಿಲ್ವಾ?  ಈ ಎಲ್ಲಾ ಪ್ರದೇಶಗಳು ಬೇರೆ ರಾಜ್ಯದಲ್ಲೇ ಇರೋದು .  ಸುಳ್ಳು ಸುದ್ದಿ‌ಹಬ್ಬಿಸದೇ ಇದ್ದರೇ,   ತಿಂದ ಅನ್ನ ಜೀರ್ಣ ಆಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. 
ಇನ್ನೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯಡಿ ಬರುವ ನಿಗಮ. ಹೀಗಾಗಿ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ  . ವಯನಾಡ್ ಬಗ್ಗೆ ಏಕೆ ಜಾಹೀರಾತು ಕೊಟ್ಟಿದ್ದೀರಾ.‌..? ಕಾರಣ ಏನು ಎಂಬ ಬಗ್ಗೆ ಮಾಹಿತಿ ಕೇಳಿದ್ದೇನೆ.  ಕೆಎಸ್ ಟಿಡಿಸಿ ಎಂಡಿಗೆ ಮಾಹಿತಿ ಕೇಳಿದ್ದೇನೆ. ಮಾಹಿತಿ ಕೊಟ್ಟ ಮೇಲೆ ಮಾತಾಡುತ್ತೇನೆ.  ಸಿ‌.ಟಿ‌.ರವಿ ಅವರ ಟ್ವೀಟ್ ನೋಡಿದ್ದೇನೆ.  ಆ ರೀತಿ ಜಾಹೀರಾತು ಏಕೆ ಕೊಟ್ಟಿದ್ದಾರೆ ಎಂದು ಮಾಹಿತಿ ಕೇಳಿದ್ದೇನೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ.ಪಾಟೀಲ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
Advertisment
Advertisment