/newsfirstlive-kannada/media/media_files/2026/02/25/deve-gowda-and-pm-modi-2026-02-25-18-41-02.jpg)
ಮಾಜಿ ಪ್ರಧಾನಿ ದೇವೇಗೌಡರ ರಾಜ್ಯಸಭೆ ಅವಧಿ ಕೆಲವೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ವಯಸ್ಸಿನ ಕಾರಣ, ರಾಜ್ಯಸಭೆ ಮರು ಪ್ರವೇಶಕ್ಕೆ ದೇವೇಗೌಡ್ರು ಹಿಂದೇಟು ಹಾಕಿದ್ರು.. ಆದ್ರೀಗ ಮೋದಿ ಮನವೊಲಿಕೆಯಿಂದ ಮಾಜಿ ಪ್ರಧಾನಿ ರಾಜ್ಯಸಭೆಗೆ ಮತ್ತೆ ಆಯ್ಕೆ ಆಗೋದು ಬಹುತೇಕ ಖಚಿತವಾಗಿದೆ. ಇದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಥಾನ ಕಳೆದುಕೊಳ್ಳಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮತ್ತೊಮ್ಮೆ ರಾಜ್ಯಸಭೆಗೆ ಹೋಗ್ತಾರಾ ಮಾಜಿ ಪ್ರಧಾನಿ ದೇವೇಗೌಡ್ರು?
ಪ್ರಧಾನಿ ಮೋದಿ ಅಭಿಲಾಷೆ.. ಬಿಜೆಪಿಗೆ ಕೈ ತಪ್ಪುತ್ತಾ ರಾಜ್ಯಸಭೆ ಸ್ಥಾನ?
ಹೆಚ್​.ಡಿ. ದೇವೇಗೌಡರು.. ಭಾರತದ ಮಾಜಿ ಪ್ರಧಾನಿ.. ಇವರು ಪ್ರಧಾನಿ ಆಗಿದ್ದಾಗ ನಡೆಸಿದ ಆಡಳಿತ ವೈಖರಿ.. ಇಂದಿಗೂ ಅದೆಷ್ಟೋ ರಾಜಕಾರಣಿಗಳಿಗೆ ಮಾದರಿಯಾಗಿದೆ. ಪ್ರಧಾನಿ ಮೋದಿ ಕೂಡ.. ಆಡಳಿತದ ವಿಚಾರದಲ್ಲಿ ದೇವೇಗೌಡರ ಸಲಹೆಗಳನ್ನು ಕೇಳಿದ್ದೂ ಇದೆ. ಸದ್ಯ ದೇವೇಗೌಡರ ರಾಜ್ಯಸಭೆ ಸದಸ್ಯ ಸ್ಥಾನ ಅವಧಿ ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಆದ್ರೀಗ ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ.
ದೇವೇಗೌಡರು ವಯಸ್ಸಿನ ಕಾರಣದಿಂದ ಮತ್ತೊಮ್ಮೆ ರಾಜ್ಯಸಭೆಗೆ ಪ್ರವೇಶ ಬೇಡ ಎಂಬ ನಿರ್ಧಾರ ಮಾಡಿದ್ರು.. ಆದ್ರೆ ಇತ್ತೀಚೆಗೆ ಬಜೆಟ್​ ಅಧಿವೇಶನದ ವೇಳೆ ದೇವೇಗೌಡ್ರು ಪ್ರಧಾನಿಯನ್ನು ಭೇಟಿ ಆಗಿದ್ದರು. ಆಗ, ಹೆಚ್.ಡಿ.ದೇವೇಗೌಡರಿಗೆ ನೀವು ರಾಜ್ಯಸಭೆಯಲ್ಲಿ ಇರಲೇಬೇಕೆಂದು ಪ್ರಧಾನಿ ಮೋದಿ ಮನವೊಲಿಕೆ ಮಾಡಿದ್ದಾರೆ. ಹೀಗಾಗಿ ಮೋದಿ ಅಭಿಲಾಷೆಯಂತೆ.. ಮಾಜಿ ಪ್ರಧಾನಿ ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಆಗೋದು ಬಹುತೇಕ ಖಚಿತ ಎಂಬ ಮಾತು ಮೈತ್ರಿ ಪಡೆಯಲ್ಲಿ ಕೇಳಿ ಬರ್ತಿದೆ. ಮೋದಿ ಮಾತಿನ ಮೇರೆಗೆ ರಾಜ್ಯಸಭೆಗೆ ದೇವೇಗೌಡರ ಆಯ್ಕೆ ಆಗೋದು ನಿಶ್ಚಿತ.. ಇದರಿಂದಾಗಿ ಈ ಬಾರಿ ಬಿಜೆಪಿ ಸ್ಥಾನ ಕಳೆದುಕೊಳ್ಳಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿಗೆ ಕೈ ತಪ್ಪುತ್ತಾ ರಾಜ್ಯಸಭೆ ಸ್ಥಾನ?
ಜೂನ್ 30ರಂದು ದೇವೇಗೌಡರ ರಾಜ್ಯಸಭಾ ಸದಸ್ಯ ಸ್ಥಾನ ಅಂತ್ಯ
ಇದೇ ಜುಲೈನಲ್ಲಿ ಮತ್ತೆ ನಡೆಯಲಿರುವ ರಾಜ್ಯಸಭಾ ಚುನಾವಣೆ
ರಾಜ್ಯಸಭೆಗೆ ಆಯ್ಕೆಯಾಗಲು ಬೇಕಾಗಿರುವುದು 45 ಮತಗಳು
ಬಿಜೆಪಿ ಬಳಿ ಹಾಲಿ 65 ಶಾಸಕರು, ಜೆಡಿಎಸ್ ಪಕ್ಷದಲ್ಲಿ 18 ಮತಗಳಿವೆ
ಮೈತ್ರಿ ಅಂತ HDD ಮಣೆ ಹಾಕಿದ್ರೆ, ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆ
ಸದ್ಯ ನಾಲ್ಕು ಸ್ಥಾನದ ಪೈಕಿ ಎರಡು ಸ್ಥಾನಗಳು ಬಿಜೆಪಿ ಪಕ್ಷಕ್ಕೆ ಇದೆ
ಈಗ ಮೈತ್ರಿಯಲ್ಲಿ ಶಾಸಕರ ಸಂಖ್ಯೆಯಲ್ಲಿ ಇಳಿಮುಖ ಆಗಿದ್ದು ಸಂಕಷ್ಟ
BJP - JDS ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಕಣಕ್ಕಿಳಿದ್ರೆ ಕಷ್ಟ
ಆಗ ಬಿಜೆಪಿ ಪಕ್ಷ ಯಾರನ್ನೂ ಕೂಡ ಕಣಕ್ಕಿಳಿಸಲು ಸಾಧ್ಯವಿಲ್ಲ
ಪ್ರಧಾನಿ ಮೋದಿ ಮಾತು ಪಾಲಿಸಬೇಕಾಗಿರುವುದರಿಂದ ಬಿಜೆಪಿಗೆ ಕಷ್ಟ
ಜೂನ್ 30ರಂದು ದೇವೇಗೌಡರ ರಾಜ್ಯಸಭಾ ಸದಸ್ಯ ಅವಧಿ ಅಂತ್ಯವಾಗಲಿದ್ದು, ಆ ಸ್ಥಾನಕ್ಕೆ ಜುಲೈನಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು 45 ಮತಗಳು ಬೇಕು. ಬಿಜೆಪಿ ಬಳಿ ಹಾಲಿ 65 ಶಾಸಕರು, ಜೆಡಿಎಸ್ ಪಕ್ಷದಲ್ಲಿ 18 ಮತಗಳಿವೆ. ಮೈತ್ರಿ ಅಂತ HDDಗೆ ಮಣೆ ಹಾಕಿದ್ರೆ, ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಆಗಲಿದೆ. ಸದ್ಯ ನಾಲ್ಕು ಸ್ಥಾನದ ಪೈಕಿ ಎರಡು ಸ್ಥಾನಗಳು ಬಿಜೆಪಿ ಪಕ್ಷಕ್ಕೆ ಇದೆ. ಈಗ ಮೈತ್ರಿಯಲ್ಲಿ ಶಾಸಕರ ಸಂಖ್ಯೆಯಲ್ಲಿ ಇಳಿಮುಖ ಆಗಿದ್ದು, BJP - JDS ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಕಣಕ್ಕಿಳಿದ್ರೆ ಬಿಜೆಪಿಗೆ ಕಷ್ಟ. ಆಗ ಬಿಜೆಪಿ ಪಕ್ಷ ಯಾರನ್ನೂ ಕೂಡ ಕಣಕ್ಕಿಳಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಮಾತು ಪಾಲಿಸಬೇಕಾಗಿರುವುದರಿಂದ ಬಿಜೆಪಿ ಮೈತ್ರಿಗಾಗಿ ತ್ಯಾಗಮಾಡ್ಬೇಕಾದ ಅನಿವಾರ್ಯತೆ ಎದುರಾಗಿದೆ.
ಬಿಜೆಪಿ-ಜೆಡಿಎಸ್​ ಮೈತ್ರಿಯಾಗೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸುತ್ತಾ ಅನ್ನೋ ಪ್ರಶ್ನೆಗೆ ಮಾಜಿ ಪ್ರಧಾನಿ ದೇವೇಗೌಡರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಜೆಪಿ ಭವನದಲ್ಲಿ ಸಭೆ ಬಳಿಕ ಮಾತನಾಡಿ ಹೆಚ್​ಡಿಡಿ, ಮೈತ್ರಿಯಾಗಿಯೇ ಚುನಾವಣೆ ಎದುರಿಸಬೇಕು ಅನ್ನೋದು ನಮ್ಮ ಅಭಿಲಾಷೆ ಎಂದಿದ್ದಾರೆ.
/filters:format(webp)/newsfirstlive-kannada/media/media_files/2026/02/25/deve-gowda-and-pm-modi-1-2026-02-25-18-43-37.jpg)
‘NDA ಜೊತೆ ಹೋಗಬೇಕು ಅನ್ನೋದೇ ಆಕಾಂಕ್ಷೆ’
‘ಬಿಜೆಪಿಯ ನಿರ್ಧಾರದ ಮೇಲೆ ಮುಂದಿನ ಹೆಜ್ಜೆ’
ಹುಣಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ರೋಡ್ ಶೋ
ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ದಳಪತಿಗಳು.. ದೇಶದ ರಾಜಕಾರಣಕ್ಕಿಂತ ರಾಜ್ಯದ ರಾಜಕಾರಣಕ್ಕೆ ವಾಪಸ್​ ಆಗುವ ಚಿಂತನೆಯಲ್ಲಿದ್ದಾರೆ. ರಾಜ್ಯದಲ್ಲಿ ನೆಲಕಚ್ಚಿರುವ ಪಕ್ಷವನ್ನು ಮತ್ತೆ ಬಲಪಡಿಸಲು ಮುಂದಾಗಿದ್ದಾರೆ. ಇದೇ ತಿಂಗಳ 27ರಂದು ಬಿಜಾಪುರದಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದೆ ಮತ್ತೊಂದೆಡೆ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​​ ರಾಜ್ಯಪ್ರವಾಸ ಮೂಲಕ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತು ಹುಣಸೂರಿನಲ್ಲಿ ಭರ್ಜರಿ ರೋಡ್​ ಶೋ ನಡೆಸಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಮಾಡಿದ್ದಾರೆ.
ಒಟ್ಟಾರೆ.. ರಾಜಕೀಯದಲ್ಲಿ ಎಲ್ಲ ತಂತ್ರಗಳನ್ನು ಕರಗತ ಮಾಡಿಕೊಂಡಿರುವ ದೇವೇಗೌಡರಿಗೆ ಯಾವಾಗ ಯಾವ ದಾಳ ಉರುಳಿಸಬೇಕು ಅನ್ನೋದು ಚೆನ್ನಾಗೇ ಗೊತ್ತಿದೆ.. ಸದ್ಯ ಬಿಜೆಪಿ-ಜೆಡಿಎಸ್​​ ಮೈತ್ರಿ ಲೋಕಲ್​​ ಫೈಟ್​​ನಲ್ಲೂ ವರ್ಕೌಟ್​ ಆಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಮಧುಸೂದನ್, ನ್ಯೂಸ್​ಫಸ್ಟ್​ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us