/newsfirstlive-kannada/media/post_attachments/wp-content/uploads/2025/06/CHM_TIGER_PUVAIAH.jpg)
ಮೈಸೂರು: ಮಲೆ ಮಹದೇಶ್ವರ ಕಾಡಿನಲ್ಲಿ 5 ಹುಲಿಗಳು ಅಸಹಜವಾಗಿ ಜೀವ ಕಳೆದುಕೊಂಡಿವೆ. ಇವುಗಳ ಜೀವ ತೆಗೆದವರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ ದಂಡ ಕೂಡ ಪಾವತಿಸಬೇಕು ಎಂದು ನಿವೃತ್ತ ಹಿರಿಯ ಅರಣ್ಯ ಅಧಿಕಾರಿ, ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಪೂವಯ್ಯ ಹೇಳಿದ್ದಾರೆ.
ಒಂದೇ ಸ್ಥಳದಲ್ಲಿ ಐದು ಹುಲಿಗಳು ಉಸಿರು ಚೆಲ್ಲಿರುವುದು ನೋಡಿದರೆ ಇದು ಅಸಹಜ ಆಗಿರುತ್ತದೆ. ವಿಷಪ್ರಾಶನದಿಂದ ಇದು ಆಗಿರಬಹುದು. ಅರಣ್ಯದ ಸುತ್ತ ಗ್ರಾಮಗಳು ಇರುತ್ತವೆ. ದನಕರುಗಳನ್ನು ಕಾಡಿಗೆ ಮೇಯಿಸಲು ಬಿಡುತ್ತಾರೆ. ಆದರೆ ಕಾನೂನು ಪ್ರಕಾರ ಬಿಡಬಾರದು. ಹುಲಿಗಳು ಕಾಡಿನಿಂದ ಹೊರಗೆ ಹೋಗಿ ಹಸು, ಕುರಿಗಳನ್ನು ತಿಂದರೆ 10 ರಿಂದ 20 ಸಾವಿರ ಪರಿಹಾರ ಕೊಡುತ್ತಾರೆ. ಕಾಡಿನ ಒಳಗೆ ತಿಂದರೆ ಪರಿಹಾರ ಇರಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ತಾಯಿ ಮೇಲೆ ಬೈಕ್ನಲ್ಲಿ ಬಂದವರಿಂದ ಗುಂಡಿನ ದಾಳಿ.. ಉಸಿರು ಚೆಲ್ಲಿದ ಇಬ್ಬರು!
ಈ ರೀತಿ ತಮ್ಮ ಹಸುಗಳನ್ನು ಕಳೆದುಕೊಂಡಾಗ ಮಾಲೀಕರು ವಿಷಪ್ರಾಶನ ಮಾಡಿರಬಹುದು. ಪಾಲಿಡಾಲ್ ಹಾಕಿರಬಹುದು. ವಿಷ ಹಾಕಿದವರಿಗೆ 7 ವರ್ಷ ಶಿಕ್ಷೆ ಆಗಲಿದೆ. ದಂಡ ಕೂಡ ಇದ್ದು 25,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಪ್ರಕರಣ ಒಂದೇ ಆಗಿರುವುದರಿಂದ ಒಂದೇ ಶಿಕ್ಷೆ ಆಗಬಹುದು. ಕರ್ನಾಟಕದಲ್ಲಿ ಸುಂದರ ವಾತಾವರಣ ಇದೆ. ಇಂತಹ ಕೃತ್ಯಕ್ಕೆ ಯಾರು ಕೈ ಹಾಕಬಾರದು ಎಂದು ಪೂವಯ್ಯ ಹೇಳಿದ್ದಾರೆ.
ಈ ಕುರಿತು ಫೋರೆನ್ಸಿಕ್ ತಂಡ ಪರಿಶೀಲನೆ ನಡೆಸಲಿದೆ. ಬೆಂಗಳೂರು, ಹೈದರಾಬಾದ್ ಎರಡೂ ಕಡೆಯಿಂದಲೂ ವರದಿ ಬರುತ್ತದೆ. 15 ದಿನಗಳ ಒಳಗೆ ಬರುವ ವರದಿಯಲ್ಲಿ ಹುಲಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಈ ಹಿಂದೆ ಬಂಡೀಪುರದಲ್ಲಿ ಚಿರತೆಗಳ ಜೀವ ಕೂಡ ತೆಗೆದಿರುವುದು ಇದೆ. ಒಂದು ಕಪ್ಪು ಚಿರತೆ ಹಾಗೂ ಇತರೆ ಎರಡು ಚಿರತೆಗಳ ಪ್ರಾಣ ತೆಗೆದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೆ. ಯಾರೂ ಕೂಡ ಇಂತಹ ಕೃತ್ಯ ಮಾಡಬಾರದು. ಇಷ್ಟೊಂದು ವಿಕೃತಿ ಮೆರೆದವರ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು, ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ