/newsfirstlive-kannada/media/post_attachments/wp-content/uploads/2024/03/pm-modi-2024-03-05T214238.013.jpg)
ಮೋದಿಗೆ ಪರಿವಾರವೇ ಇಲ್ಲ ಎಂಬ ಲಾಲೂ ಪ್ರಸಾದ್ ಯಾದವ್ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಜಟಾಪಟಿಗೆ ಕಾರಣವಾಗಿದೆ. ಜನರೇ ನನ್ನ ಪರಿವಾರ ಎಂದು ಮೋದಿ ಕೌಂಟರ್ ಕೊಟ್ಟ ಬಳಿಕ ಕಾಂಗ್ರೆಸ್ನಿಂದ ಹೊಸ ಅಭಿಯಾನ ಶುರು ಮಾಡಿದೆ. ಮೋದಿಯ ನಿಜವಾದ ಪರಿವಾರ ವಿಜಯ್ ಮಲ್ಯ, ನೀರವ್ ಮೋದಿ ಅಂತ ರಾತ್ರೋ ರಾತ್ರಿ ಪೋಸ್ಟರ್ ಅಂಟಿಸಿ ಅಣಕಿಸಿದೆ. ಇದು ಧರ್ಮ ಮತ್ತು ಸಂಪ್ರದಾಯದ ಕದನ. ಲೋಕಸಮರದಲ್ಲಿ ಕಾಣಿಸಿದ ಧರ್ಮಸೂಕ್ಷ್ಮ ಮಾತೊಂದು ಮತಯುದ್ಧದಲ್ಲೇ ಸಂಚಲನ ಸೃಷ್ಟಿಸಿದೆ. ಆರ್ಜೆಡಿ ವರಿಷ್ಠ ನಾಯಕ ಲಾಲೂ ಪ್ರಸಾದ್ ಯಾದವ್ ಮೊನ್ನೆ ನೀಡಿದ ಹೇಳಿಕೆ ಧರ್ಮಯುದ್ಧಕ್ಕೆ ನಾಂದಿ ಹಾಡಿದೆ. ಬಿಜೆಪಿ ಮತ್ತು ಇಂಡಿಯಾ ಒಕ್ಕೂಟದ ನಡುವೆ ಸಮರವನ್ನ ತಾರಕಕ್ಕೇರುವಂತೆ ಮಾಡಿದೆ.
ಮೋದಿ ಭಾವನಾತ್ಮಕ ಅಸ್ತ್ರಕ್ಕೆ ಕೈಪಡೆ ಪೋಸ್ಟರ್ ಅಟ್ಯಾಕ್!
ಪ್ರಧಾನಿ ನರೇಂದ್ರ ಮೋದಿ ಹಿಂದೂ ಅಲ್ಲ. ಇದು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ನಡೆಸಿದ ಅತ್ಯಂತ ತೀಕ್ಷ್ಣ ದಾಳಿ. ಈ ದಾಳಿ ಮಾಡಲು ಲಾಲೂ ಬಳಸಿಕೊಂಡಿದ್ದು ತಾಯಿ ಹೀರಾಬೆನ್ ನಿಧನ. ತಾಯಿ ನಿಧನದ ವೇಳೆ ಪ್ರಧಾನಿ ಮೋದಿ ಕೇಶ ಮುಂಡನ ಮಾಡಿಸಿಲ್ಲ ಅಂತ ಧರ್ಮಸೂಕ್ಷ್ಮವನ್ನ ರಾಜಕೀಯಕ್ಕೆ ಎಳೆದು ತಂದು ವಿವಾದ ಎಬ್ಬಿಸಿದ್ದರು. ಅಷ್ಟಕ್ಕೂ ಪಾಟ್ನಾದಲ್ಲಿ ನಡೆದ ಜನ್ ವಿಶ್ವಾಸ ಮೆಗಾ ಱಲಿಯಲ್ಲಿ ಲಾಲೂ ಹೇಳಿದ್ದೇನು?
‘ಹೆಚ್ಚು ಮಕ್ಕಳು ಹೆತ್ತವರನ್ನ ಕುಟುಂಬವಾದ ಅಂತ ಹೇಳ್ತಾರೆ, ಕುಟುಂಬಕ್ಕಾಗಿ ಹೋರಾಡ್ತಿದ್ದಾರೆ ಅಂತಾರೆ. ನಿಮ್ಮ ಹತ್ತಿರ ಕುಟುಂಬವಿಲ್ಲ. ನೀವು ಹಿಂದೂ ಸಹ ಅಲ್ಲ. ಪ್ರತಿಯೊಬ್ಬ ಹಿಂದೂ ತಮ್ಮ ತಾಯಿಯ ಶೋಕದಲ್ಲಿ ಕೇಶ, ಗಡ್ಡ ತೆಗೆಸುತ್ತಾರೆ. ನೀವು ಯಾಕೆ ತೆಗಿಲಿಲ್ಲ ಹೇಳಿ’
- ಲಾಲೂ ಪ್ರಸಾದ್ ಯಾದವ್, ಆರ್ಜೆಡಿ ವರಿಷ್ಠ
ಹೀಗೆ ಕುಟುಂಬ ರಾಜಕಾರಣದ ಮೇಲೆ ಮುಗಿಬಿದ್ದಿದ್ದ ಮೋದಿ ವಿರುದ್ಧ ಲಾಲೂ ಧರ್ಮದ ದಾಳಿ ನಡೆಸಿದ್ದರು. ಇದಕ್ಕೆ ಪ್ರಧಾನಿ ಮೋದಿ, ಇದೇ ಮಾತನ್ನೆ ತಮ್ಮ ಅಸ್ತ್ರವಾಗಿ ಪ್ರಯೋಗಿಸಿದ್ರು. ದೇಶದ ಕೋಟ್ಯಂತರ ಜನರೇ ನನ್ನ ಕುಟುಂಬ ಅಂತ ಭಾವನಾತ್ಮವಾಗಿ ತಿರುಗೇಟು ಕೊಟ್ಟಿದ್ದಾರೆ.
140 ಕೋಟಿ ಭಾರತೀಯರು. ಇವರೇ ನನ್ನ ಕುಟುಂಬ. ಈ ಯುವಕರು ಇವರೇ ನನ್ನ ಕುಟುಂಬ. ಇಂದು ದೇಶದ ಕೋಟಿ ಹೆಣ್ಮಕ್ಕಳು, ತಾಯಂದಿರು, ಸಹೋದರಿಯರು ಇವರೇ ಮೋದಿ ಕುಟುಂಬ. ಇಂದು ದೇಶದ ಪ್ರತಿ ಬಡವನೂ ನನ್ನ ಕುಟುಂಬ. ದೇಶದ ಕೋಟಿ ಕೋಟಿ ಮಕ್ಕಳು, ಹಿರಿಯರೆಲ್ಲರೂ ಮೋದಿ ಕುಟುಂಬ ಆಗಿದೆ.
- ನರೇಂದ್ರ ಮೋದಿ, ಪ್ರಧಾನಮಂತ್ರಿ
ರಾಷ್ಟ್ರೀಯ ಯುತ್ ಕಾಂಗ್ರೆಸ್ನಿಂದ ಪೋಸ್ಟರ್ ವಾರ್!
ದೇಶದ ಜನರೇ ನನ್ನ ಪರಿವಾರ ಎಂದು ಮೋದಿ ಹೇಳಿಕೆ ಬೆನ್ನಲ್ಲೆ ಎಲೆಕ್ಷನ್ನಲ್ಲಿ ಬಿಜೆಪಿ ಇದನ್ನೆ ಅಭಿಯಾನವಾಗಿ ಆರಂಭಿಸಿದೆ. ಬಿಜೆಪಿ ಮೋದಿ ಮೇರಾ ಪರಿವಾರ ಅಭಿಯಾನಕ್ಕೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ. ದೆಹಲಿಯ ಪ್ರಮುಖ ರಸ್ತೆಯಲ್ಲಿ ರಾತ್ರೋರಾತ್ರಿ ಬ್ಯಾನರ್ಗಳು ಪ್ರತ್ಯಕ್ಷವಾಗಿವೆ. ಪ್ರಧಾನಿ ನರೇಂದ್ರ ಮೋದಿ ಬ್ಯಾನರ್ನ ಮದ್ಯಭಾಗದಲ್ಲಿದ್ದು, ಮೋದಿಯ ಸುತ್ತ ನೀರವ್ ಮೋದಿ, ವಿಜಯ್ ಮಲ್ಯ, ಸಾಕ್ಷಿ ಪ್ರಜ್ಞಾ, ಅದಾನಿ, ಲಲಿತ್ ಮೋದಿ, ಅನುರಾಗ್ ಠಾಕೂರ್, ಬ್ರಿಜ್ ಭೂಷಣ್ ಸೇರಿ ಹಲವರ ಫೋಟೊಗಳಿವೆ. ಈ ಎಲ್ಲರನ್ನ ಮೋದಿ ತನ್ನ ಬೆರಳಿಂದ ಆಟವಾಡಿಸೋ ರೀತಿ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ಇವರೆಲ್ಲ ಮೋದಿ ಪರಿವಾರ ಎಂದು ಟಾಂಗ್ ಕೊಟ್ಟಿದೆ. ಸೇಮ್ ಟು ಸೇಮ್ ಕರ್ನಾಟಕ ಎಲೆಕ್ಷನ್ ವೇಳೆ, ಕಾಂಗ್ರೆಸ್ ಆರಂಭಿಸಿದ್ದ ಅಭಿಯಾನದ ರೀತಿ ಕಾಂಗ್ರೆಸ್ ಪೋಸ್ಟರ್ ವಾರ್ ಆರಂಭಿಸಿದೆ. ಹೀಗಾಗಿ ಲೋಕಸಭೆ ಚುನಾವಣೆ ವೇಳೆ, ಪರಿವಾರವಾದ ವರ್ಸಸ್ ಮೋದಿ ಪರಿವಾರ್ ನಡುವೆ ಈ ವಾರ್ ಮತ್ತು ತೀಕ್ಷ್ಣಗೊಳ್ಳೋದು ನಿಶ್ಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ