/newsfirstlive-kannada/media/post_attachments/wp-content/uploads/2024/08/haseena-home-looted-1.jpg)
ಢಾಕಾ: ಕಳೆದ ಎರಡು ತಿಂಗಳಿನಿಂದ ಬಾಂಗ್ಲಾದೇಶ ಅಕ್ಷರಶಃ ಬೆಂಕಿಯ ಮೇಲೆಯೇ ನಿಂತಿದೆ. ಮುಷ್ಕರ, ಸಾವು, ನರಳಿಕೆ, ಸರ್ಕಾರದ ಮೇಲಿನ ಆಕ್ರೋಶ ಎಲ್ಲವೂ ಒಟ್ಟಾಗಿ ಬಾಂಗ್ಲಾದೇಶವನ್ನು ಹುರಿದು ಮುಕ್ಕಿವೆ. ಎಲ್ಲೆಂದರಲ್ಲಿ ಬೆಂಕಿ ಹಚ್ಚುವುದು, ಗಲಭೆ ಸೃಷ್ಟಿಸುವುದು, ಕಲ್ಲು ತೂರಾಟ ಹೀಗೆ ಒಂದಿಲ್ಲೊಂದು ಹಿಂಸಾಚಾರವನ್ನು ಕಳೆದ ಹಲವು ತಿಂಗಳಿಂದ ಬಾಂಗ್ಲಾಭೂಮಿ ಕಂಡಿದೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ನೀಡಲಾಗಿದ್ದ ಮೀಸಲಾತಿ ವಿರೋಧಿಸಿ ಬಾಂಗ್ಲಾದಲ್ಲಿ ದೊಡ್ಡದೊಂದು ಹೋರಾಟ ಶುರುವಾಗಿತ್ತು. ಮುಷ್ಕರಗಳು ಚಾಲ್ತಿಯಲ್ಲಿದ್ದವು, ಹಿಂಸಾಚಾರ ಎಲ್ಲೆ ಮೀರಿತ್ತು ಅದೆಲ್ಲವೂ ಈಗ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಭಾರತಕ್ಕೆ ಪಲಾಯನ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.
ಇದನ್ನೂ ಓದಿ:ಇಡೀ ದೇಶದಲ್ಲಿ ಕುರಿಯ ಓಡಾಟ ಬಂದ್ ಮಾಡಿದ ಗ್ರೀಸ್; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ಒಂದು ಕಡೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ಬಿಟ್ಟು ಹೊರಡುತ್ತಿದ್ದಂತೆ ಅವರ ಮನೆ ಲೂಟಿಕೋರರಿಗೆ ದೊಡ್ಡ ಸುಪ್ಪತ್ತಿಗೆಯಾಗಿ ಬದಲಾಗಿದೆ. ಹಸೀನಾ ರಾಜೀನಾಮೆ ಬೆನ್ನಲ್ಲಿಯೇ ದೊಣ್ಣೆ, ಹಾರಿಯನ್ನು ಹಿಡಿದುಕೊಂಡು ಮನೆಗೆ ನುಗ್ಗಿದ ಉದ್ರಿಗ್ತ ಗುಂಪು, ಹಸೀನಾ ಮನೆಯನ್ನು ಧ್ವಂಸ ಮಾಡುವುದಲ್ಲದೇ, ಸೇನೆಯ ಉಪಸ್ಥಿತಿಯಲ್ಲಿಯೇ ಐಷಾರಾಮಿ ವಸ್ತುಗಳನ್ನು ತೆಗೆದುಕೊಂಡು ಓಡಿದ್ದಾರೆ. ಹಸೀನಾ ಬೆಡ್ರೂಮ್ನಲ್ಲಿರುವ ಬೆಡ್ ಮೇಲೆ ಮಲಗಿ ಕ್ಷಣಿಕ ಆನಂದ ಅನುಭವಿಸಿದ್ದಾರೆ.
ಈಗ ಹಸೀನಾ ಮನೆಗೆ ನುಗ್ಗಿರುವ ಪ್ರತಿಭಟನಾಕಾರರು, ಕೈಗೆ ಸಿಕ್ಕಿರುವ ಐಷಾರಾಮಿ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ. ಕೈಗೆ ಸಿಕ್ಕ ಯಾವ ವಸ್ತುವನ್ನು ಬಿಡುತ್ತಿಲ್ಲ. ಹಾಸಿಗೆ ದಿಂಬು, ಹೀಗೆ ಕೈಗೆ ಏನೇ ಸಿಕ್ಕರು ಹೊತ್ತುಕೊಂಡು ಹೋಗುತ್ತಿದ್ದಾರೆ. ಅವರು ಲೂಟಿ ಮಾಡಿದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಕನ್ನಡ ಸಿನಿಮಾ ಭೂತಯ್ಯನ ಮಗ ಅಯ್ಯು ಸಿನಿಮಾದ ಕ್ಲೈಮಾಕ್ಸ್ ನೆನಪಿಸುತ್ತಿದೆ ಹಸೀನಾ ಮನೆ ಲೂಟಿ ಮಾಡುತ್ತಿರುವ ದೃಶ್ಯಗಳು.
ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಪ್ರಧಾನಿ ತಲೆದಂಡ.. ದೇಶ ಬಿಟ್ಟು ಹೊರಟ ಶೇಖ್ ಹಸೀನಾಗೆ ಭಾರತದಲ್ಲಿ ಆಶ್ರಯ; ಆಗಿದ್ದೇನು?
ಕೆಲವು ಹಲವು ತಿಂಗಳಿಂದ ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ನೀಡಲಾದ ಶೇಕಡಾ 30 ರಷ್ಟು ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳ ಪಡೆ ಬೀದಿಗಿಳಿದಿದ್ದವು ನಿರಂತರ ಹೋರಾಟ ಜಾರಿಯಲ್ಲಿತ್ತು. ಕಾರಣ ಬಾಂಗ್ಲಾದೇಶದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಪದವಿಧರರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ, ಇದಕ್ಕೆಲ್ಲಾ ಕಾರಣವೇ ಆ 30% ಮೀಸಲಾತಿ ಅನ್ನೋದು. ಕೊನೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಮೀಸಲಾತಿಯ್ನು 30 ರಿಂದ ಶೇಕಡಾ 5ಕ್ಕೆ ಇಳಿಸಿತು. ಆದ್ರೆ ಹೋರಾಟಗಾರರ ಒಡಲಿನ ಬೆಂಕಿ ಮಾತ್ರ ಆರಿರಲಿಲ್ಲ.
ಪ್ರತಿಭಟನೆಕಾರರನ್ನು ರಜಾಕರು, ಉಗ್ರರು ಎಂದು ಕರೆಯುವ ಮೂಲಕ 300 ಜನರ ಹತ್ಯೆಗೆ ಕಾರಣವಾಗಿರುವ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೇಳಿ ಬಂತು. ಈ ಹೋರಾಟ ಮತ್ತೊಂದು ಮಜಲಿಗೆ ಹೋಯ್ತು. ಪ್ರತಿಭಟನೆ ಉಗ್ರರೂಪ ಪಡೆದುಕೊಂಡಾಗ ಬೇರೆ ದಾರಿಯಿಲ್ಲದೇ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶವನ್ನೇ ಬಿಟ್ಟು ಭಾರತದತ್ತ ಪ್ರಯಾಣ ಬೆಳೆಸಿದ್ದರು. ಸದ್ಯ ಉತ್ತರ ಪ್ರದೇಶದ ಗಾಜಿಯಾಬಾದ್ಗೆ ಬಂದಿಳಿದಿರುವ ಶೇಕ್ ಹಸೀನಾಗೆ ಭಾರತೀಯ ಸಶಸ್ತ್ರ ಪಡೆ ಭದ್ರತೆಯನ್ನು ಒದಗಿಸಿದೆ. ಇಲ್ಲಿ ಹೆಲಿಕಾಪ್ಟರ್ಗೆ ಇಂಧನ ತುಂಬಿಸಿಕೊಂಡು ಲಂಡನ್ಗೆ ಹಸೀನಾ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇದೆ.
ಈ ಹಿಂದೆ ಹಸೀನಾ ತಂದೆ ಮುಜಿಬುರ್ ರೆಹಮಾನ್ ಹತ್ಯೆಯಾದಾಗ ಭಾರತದಲ್ಲಿ ಆಶ್ರಯ ಪಡೆದಿದ್ದ ಹಸೀನಾ, ಈ ಬಾರಿ ಭಾರತವನ್ನು ಆಶ್ರಯಿಸದೇ, ಲಂಡನ್ನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಹಸೀನಾಳ ನಿರಂತರ 15 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಮುಂದೆ ಬಾಂಗ್ಲಾದೇಶ ಯಾವ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ ಅನ್ನೋದು ಸದ್ಯದ ಕುತೂಹಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ