Rain effect: ರಾಜ್ಯದಲ್ಲಿ ಮಳೆ ರಗಳೆ, ಇನ್ನೂ ಎಷ್ಟು ದಿನ ಮಳೆ ಬೀಳಲಿದೆ..?

author-image
Ganesh
Updated On
Rain effect: ರಾಜ್ಯದಲ್ಲಿ ಮಳೆ ರಗಳೆ, ಇನ್ನೂ ಎಷ್ಟು ದಿನ ಮಳೆ ಬೀಳಲಿದೆ..?
Advertisment
  • ಬೆಂಗಳೂರಲ್ಲಿ ಭಾರೀ ಗಾಳಿ ಮಳೆ.. ಸಂಚಾರಕ್ಕೆ ರಗಳೆ
  • ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿಯ ಭೀತಿ
  • ಗಾಳಿ-ಮಳೆಗೆ ಮುರಿದ ಬೃಹತ್ ಜಾಹೀರಾತು ಹೋರ್ಡಿಂಗ್

ಬಿಸಿಲ ಬೇಗೆಗೆ ಬಸವಳಿದಿದ್ದ ಕರುನಾಡಿನ ಹಲವೆಟೆ ಆಗಮಿಸಿದ ಮಳೆ, ಇಳೆಯನ್ನ ತಂಪಾಗಿಸಿದೆ. ಬೆಂಗಳೂರು, ಕರಾವಳಿ, ಮಲೆನಾಡಿಗೆಲ್ಲ ದರ್ಶನ ಕೊಟ್ಟ ವರುಣ ತನ್ನ ಆಟ ಶುರು ಮಾಡಿದ್ದಾನೆ. ಮಳೆರಾಯನ ಆಗಮನದಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಸಣ್ಣ-ಪುಟ್ಟ ರಗಳೆಯನ್ನೂ ಕೊಟ್ಟಿದ್ದಾನೆ.

ಬೆಂಗಳೂರು: ಭಾರೀ ಗಾಳಿ ಮಳೆ.. ಸಂಚಾರಕ್ಕೆ ರಗಳೆ

ಬೆಂಗಳೂರಿನ ಹಾಟ್ ವೆದರ್ ವರುಣನ ಎಂಟ್ರಿಯೊಂದಿಗೆ ಕೂಲ್ ಆಗಿತ್ತು. ಜೆ.ಸಿ ರೋಡ್​, ಕೆ.ಆರ್​ ಮಾರ್ಕೆಟ್​, ಇಂದಿರಾ ನಗರದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ದ್ವಿಚಕ್ರ ವಾಹನ ಸವಾರರು ಅಂಡರ್​ಪಾಸ್‌ನಲ್ಲಿ ನಿಂತು ಆಶ್ರಯ ಪಡೆದ ದೃಶ್ಯ ಕಾಣಿಸ್ತು.

ಇದನ್ನೂ ಓದಿ: ಅಬ್ಬಾ! ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ ಗ್ರೌಂಡ್ ಫ್ಲೋರ್‌ನಿಂದ ಫಸ್ಟ್ ಫ್ಲೋರ್‌ವರೆಗೂ ಕ್ಯೂ; ಕಾರಣವೇನು?

publive-image

ತೆಂಗಿನ ಮರ ಬಿದ್ದು ಆಟೋ ಜಖಂ

ಬಸವೇಶ್ವರ ನಗರದ ಶಂಕರಮಠ ವಾರ್ಡ್​​​ನಲ್ಲಿ ಭಾರೀ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಎರಡು ವಿದ್ಯುತ್​ ಕಂಬಗಳು ಮುರಿದಿವೆ. ಆಟೋ ಜಖಂಗೊಂಡಿದೆ. ಬೆಸ್ಕಾಂ ಹಾಗೂ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಗಾಳಿ-ಮಳೆಗೆ ಮುರಿದ ಬೃಹತ್ ಜಾಹೀರಾತು ಹೋರ್ಡಿಂಗ್

ದಕ್ಷಿಣ ಕನ್ನಡದಲ್ಲಿ ಮಳೆಗಿಂತ ಗಾಳಿಯಬ್ಬರ ಜೋರಾಗಿತ್ತು. ಮೂಡಬಿದ್ರೆಯಲ್ಲಿ ಭಾರೀ ಗಾಳಿಗೆ ಬೃಹತ್ ಜಾಹೀರಾತು ಹೋರ್ಡಿಂಗ್ ಮಗುಚಿಬಿದ್ದಿದೆ. ಕಟ್ಟಡದಿಂದ ವಿದ್ಯುತ್ ತಂತಿಯ ಮೇಲೆ ಉರುಳಿದ ಪರಿಣಾಮ ಅಪಾಯ ಎದುರಾಗಿತ್ತು. ಮುಖ್ಯರಸ್ತೆಯಲ್ಲೇ ಅವಘಡ ನಡೆದ ಕಾರಣ ಸಂಚಾರಕ್ಕೂ ಸಂಕಷ್ಟ ತಂದಿಟ್ಟಿತ್ತು. ಕ್ರೇನ್ ಮೂಲಕ ಹೋರ್ಡಿಂಗ್ ತೆರವು ಮಾಡಲಾಯ್ತು.

ಇದನ್ನೂ ಓದಿ: ಲವ್ವರ್​ ಜೊತೆ AC ಲಾಡ್ಜ್​ನಲ್ಲಿ​ದ್ದ.. ಸುದ್ದಗುಂಟೆ ಪಾಳ್ಯದ ಕಾಮುಕನ ಕ್ಲೂ ಕೊಟ್ಟಿದ್ದು ಒಂದು ಸಿಮ್!

publive-image

ಬಿರುಗಾಳಿ ಸಹಿತ ಮಳೆಗೆ ಹತ್ತಾರು ರಗಳೆ

ಉಡುಪಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಏಕಾಏಕಿ ಗಾಳಿ ಬೀಸಿದ್ರಿಂದ ಜನರು ದಿಕ್ಕಾಪಾಲಾದ್ರು. ರಸ್ತೆಯಾದ್ಯಂತ ಧೂಳು ಎದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆಯ ಮೇಲೆಲ್ಲಾ ತರಗೆಲೆಗಳ ಹಾರಾಟ ಓಡಾಟಕ್ಕೆ ಸಮಸ್ಯೆ ತಂದಿಟ್ಟಿತ್ತು.

ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿಯ ಭೀತಿ

ಚಿಕ್ಕಮಗಳೂರಲ್ಲಿ ವರುಣನಬ್ಬರ ಮುಂದುವರೆದಿದ್ದು, ಹಲವೆಡೆ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ಆಲಿಕಲ್ಲು ಬಿದ್ದಿದ್ದು, ರೈತರಿಗೆ ಬೆಳೆಹಾನಿಯ ಭೀತಿ ಶುರುವಾಗಿದೆ. ರಾಮನಗರ ಜಿಲ್ಲೆಯ ವಿವಿಧೆಡೆ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಜನ ನಲುಗಿದ್ದಾರೆ. ಕೆಲವೆಡೆ ವಿದ್ಯುತ್‌ ವ್ಯತ್ಯಯ ಕಾಡಿತ್ತು. ಸಕಲೇಶಪುರ ತಾಲೂಕಿನ ಹಲವೆಡೆ ವರುಣ ಅಬ್ಬರಿಸಿದ್ದಾನೆ. ಮಿಂಚು-ಗುಡುಗು ಸಮೇತ ಆಲಿಕಲ್ಲು ಮಳೆ, ಕೆಲವೆಡೆ ಮರಗಳು ಧರೆಗುರುಳಿವೆ.

publive-image

ಒಟ್ನಲ್ಲಿ ಮಳೆರಾಯನ ಆಗಮನದಿಂದ ಕರುನಾಡು ತಂಪಾಗಿದೆ. ಇನ್ನೂ 3 ದಿನ ವರುಣನ ಆಟ ಇರೋ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್​ ಮಾಡಿ ನೋಡೋಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment