/newsfirstlive-kannada/media/post_attachments/wp-content/uploads/2024/10/RATAN-TATA-GOA-DOG.jpg)
ಭಾರತ ಕಂಡ ಅತ್ಯಂತ ಧೀಮಂತ ಹಾಗೂ ಶ್ರೀಮಂತ ಚೇತನ ರತನ್ ಟಾಟಾ ಅವರ ಅಗಲಿಕೆ ಇಡೀ ದೇಶದ ಜನರ ಕಣ್ಣಂಚು ತೇವಗೊಳಿಸಿತ್ತು. ರತನ್ ಟಾಟಾ ಅವರಿಗೆ ಇರುವ ಶ್ವಾನ ಪ್ರೀತಿಯ ಬಗ್ಗೆಯೂ ಎಲ್ಲೆಡೆ ಚರ್ಚೆಯಾಗಿತ್ತು. ಅವರ ನೆಚ್ಚಿನ ಶ್ವಾನ ಗೋವಾ ಅವರ ಪಾರ್ಥೀವ ಶರೀರದ ಮುಂದೆ ನಿಂತು ದುಃಖಿಸಿದ ವಿಡಿಯೋ ಎಲ್ಲೆಡೆ ಹರಿದಾಡಿ ವೈರಲ್ ಆಗಿತ್ತು. ಇದಾದ ಮೂರು ದಿನಗಳ ಬಳಿಕ ರತನ್ ಟಾಟಾ ಅಗಲಿಕೆಯ ನೋವನ್ನು ಭರಿಸಲಾಗದೆ, ಗೋವಾ ಮೃತಪಟ್ಟಿದೆ ಎಂದು ವಾಟ್ಸಾಪ್, ಫೇಸ್​ಬುಕ್​ನಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಈ ಒಂದು ಸುದ್ದಿ ಸುಳ್ಳು. ಗೋವಾ ಜೀವಂತವಾಗಿಯೇ ಇದೆ ಹಾಗೂ ಆರೋಗ್ಯವಾಗಿ ಇದೆ ಎಂದು ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಮುಂಬೈನ ಪೊಲೀಸ್ ಇಲಾಖೆಯ ಸಿನಿಯರ್ ಇನ್ಸ್​ಪೆಕ್ಟರ್​ ಸುಧಾಕರ್ ಕುಡಲ್ಕರ್ ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಗೋವಾ ರತನ್ ಟಾಟಾ ಅಗಲಿಕೆಯ ಮೂರು ದಿನಗಳ ನಂತರ ಮೃತಪಟ್ಟಿದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಸುಳ್ಳು ಎಂದು ತಮ್ಮ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಸುಧಾಕರ್ ಕುಡಲ್ಕರ್ ಕೂಡಲೇ ರತನ್ ಟಾಟಾ ಅವರ ಆತ್ಮೀಯ ಶಾಂತನು ನಾಯ್ಡು ಅವರನ್ನು ಸಂಪರ್ಕಿಸಿ ಗೋವಾ ಹೇಗಿದೆ ಎಂದು ವಿಚಾರಸಿದ್ದಾರೆ. ಅವನು ಚೆನ್ನಾಗಿಯೇ ಇದ್ದಾನೆ ಎಂದು ಶಾಂತನು ಉತ್ತರಿಸಿದ್ದಾರೆ. ಹಾಗಿದ್ರೆ ಇದು ಫೇಕ್​ನ್ಯೂಸ್ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಸುಧಾಕರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿವರವಾದ ಒಂದು ಪೋಸ್ಟ್​ನ್ನು ಹಾಕಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿ ನದಿಯಲ್ಲಿರುವ ಡಾಲ್ಫಿನ್​ಗಳ ಗಣತಿ! ಯಾವ್ಯಾವ ನದಿಗಳಲ್ಲಿ ಇವೆ ಡಾಲ್ಫಿನ್ ಸಂತತಿ?
View this post on Instagram
ವಾಟ್ಸಾಪ್​ನಲ್ಲಿ ರತನ್ ಟಾಟಾ ಅವರ ಮುದ್ದಿನ ಶ್ವಾನ ಗೋವಾ ಮೃತಪಟ್ಟಿದೆ ಎಂಬ ಸಂದೇಶವೊಂದು ಹರಿದಾಡುತ್ತಿದೆ. ನಾನು ರತನ್ ಟಾಟಾಜಿಯವರ ಆತ್ಮೀಯ ಶಾಂತನು ಅವರ ಹತ್ತಿರ ಮಾತನಾಡಿ ಖಚಿತ ಮಾಹಿತಿ ಪಡೆದಿದ್ದೇನೆ. ಗೋವಾ ಚೆನ್ನಾಗಿಯೇ ಇದ್ದಾನೆ. ದಯವಿಟ್ಟು ಈ ತರಹದ ಸುದ್ದಿಯನ್ನು ಹಬ್ಬಿಸುವಾಗ ವಾಸ್ತವದ ಬಗ್ಗೆ ಅರಿವು ಇರಲಿ ಎಂದು ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಸುಧಾಕರ್ ಅವರ ಈ ಪೋಸ್ಟ್​ಗೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಗೋವಾ ಚೆನ್ನಾಗಿದ್ದಾನೆ ಎಂಬ ಸುದ್ದಿ ಕೇಳಿ ನಿಜಕ್ಕೂ ನಮಗೆ ಸಂತವಾಯ್ತು ಎಂದು ಕಮೆಂಟ್​ಗಳನ್ನು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us