/newsfirstlive-kannada/media/post_attachments/wp-content/uploads/2025/04/KOHLI_SALT_KRUNAL.jpg)
2025ರ ಐಪಿಎಲ್ ಟೂರ್ನಿಯಲ್ಲಿ ತವರಿನಲ್ಲಿ ನಡೆದ ಮೊಟ್ಟ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದುಕೊಂಡಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ರಜತ್ ಪಡೆ ಗೆಲುವು ಪಡೆದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ರಿಯಾನ್ ಪರಾಗ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಹೀಗಾಗಿ ಆರ್ಸಿಬಿ ಮೊದಲ ಬ್ಯಾಟಿಂಗ್ ಮಾಡಿತು. ಆರ್ಸಿಬಿ ಪರ ಓಪನರ್ಸ್ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಆರಂಭ ಚೆನ್ನಾಗಿ ಇರಲಿಲ್ಲ. ಸಾಲ್ಟ್ 26 ರನ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಇವರ ನಂತರ ಬ್ಯಾಟಿಂಗ್ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು.
ಓಪನರ್ ಆಗಿ ಕ್ರೀಸ್ಗೆ ಬಂದಿದ್ದ ಕಿಂಗ್ ಕೊಹ್ಲಿ ರಾಜಸ್ಥಾನ್ ವಿರುದ್ಧ ಅರ್ಧಶತಕ ಬಾರಿಸಿದರು. 32 ಎಸೆತಗಳಲ್ಲಿ 8 ಬೌಂಡರಿಗಳಿಂದ 51 ರನ್ ಗಳಿಸಿದರು. ಪಂದ್ಯದಲ್ಲಿ ಒಟ್ಟು 42 ಬಾಲ್ ಆಡಿದ ಕೊಹ್ಲಿ, 8 ಬೌಂಡರಿ, 2 ಅಮೋಘ ಸಿಕ್ಸರ್ನಿಂದ 70 ರನ್ ಗಳಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಡಿಕ್ಕಲ್ ಕೂಡ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರಲ್ಲಿ 4 ಫೋರ್ ಹಾಗೂ 3 ಸಿಕ್ಸರ್ ಸೇರಿವೆ. ಕ್ಯಾಪ್ಟನ್ ರಜತ್ ಪಾಟಿದಾರ್ 1, ಟಿಮ್ ಡೇವಿಡ್ 23, ವಿಕೆಟ್ ಕೀಪರ್ ಜಿತೇಶ್ 20 ರನ್ಗಳಿಂದ ಆರ್ಸಿಬಿ 5 ವಿಕೆಟ್ಗೆ 206 ರನ್ಗಳ ದೊಡ್ಡ ಗುರಿ ನೀಡಿತ್ತು.
ಈ ಗುರಿ ಹಿಂದೆ ಬಿದ್ದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಆಘಾತಕ್ಕೆ ಸಿಲುಕಿತು. 14 ವರ್ಷದ ಯುವ ಆಟಗಾತ ವೈಭವ್ ಸೂರ್ಯವಂಶಿ 2 ಸಿಕ್ಸ್ನಿಂದ 16 ರನ್ಗೆ ಕ್ಲೀನ್ ಬೋಲ್ಡ್ ಆದರು. ಬಳಿಕ ನಿತೀಶ್ ರಾಣಾ ಬ್ಯಾಟಿಂಗ್ಗೆ ಬಂದರು. ರಾಣಾ 28 ರನ್ ಗಳಿಸಿ ಆಡುವಾಗ ಕ್ಯಾಚ್ಗೆ ಬಲಿಯಾದ್ರು. ಇನ್ನೊಂದಡೆ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಆರ್ಸಿಬಿ ಬೌಲರ್ಗಳಿಗೆ ಬಿಸಿ ಮುಟ್ಟಿಸಿದರು. ಕೇವಲ 19 ಎಸೆತದಲ್ಲಿ 7 ಬೌಂಡರಿ, 3 ಸಿಕ್ಸರ್ನಿಂದ 49 ರನ್ಗೆ ಔಟ್ ಆಗಿ ಒಂದೇ ಒಂದು ರನ್ನಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ನಾಯಕ ಪರಾಗ್ ಕೂಡ 22 ರನ್ಗೆ ಆಟ ನಿಲ್ಲಿಸಿದ್ರು.
ಇದನ್ನೂ ಓದಿ: 4, 4, 4, 4, 4, 4, 4, 4, ಕೊಹ್ಲಿ ಭರ್ಜರಿ ಅರ್ಧಶತಕ.. ರಾಯಲ್ಸ್ ಬೌಲರ್ಸ್ಗೆ ಸ್ಟಾರ್ ಬ್ಯಾಟರ್ ಟಕ್ಕರ್
ಶಿಮ್ರಾನ್ ಹೆಟ್ಮೆಯರ್ 11, ಶುಭಂ ದುಬೆ 12 ರನ್ಗೆ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ಗೆ ನಡೆದರು. ಧೃವ್ ಜುರೆಲ್ ಕೊನೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಪಣ ತೊಟ್ಟಿದ್ದರು. ಆದರೆ 3 ಫೋರ್, 3 ಸಿಕ್ಸರ್ನಿಂದ 47 ರನ್ ಗಳಿಸಿ ಆಡುವಾಗ ಕೀಪರ್ ಕ್ಯಾಚ್ ಆದರು. ಇದು ಆರ್ಸಿಬಿಗೆ ದೊಡ್ಡ ತಿರುವು ತಂದುಕೊಟ್ಟಿತು. ಹೀಗಾಗಿ ಪಂದ್ಯದಲ್ಲಿ 11 ರನ್ಗಳಿಂದ ಆರ್ಸಿಬಿ ರೋಚಕ ಗೆಲುವನ್ನು ಪಡೆಯಿತು. ಪಂದ್ಯವಂತೂ ಕೊನೆವರೆಗೂ ಕುತೂಹಲವಾಗಿತ್ತು. ಇನ್ನು ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್ 4 ವಿಕೆಟ್ ಉರುಳಿಸಿ ಸಂಭ್ರಮಿಸಿದರು.
ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಈ ಮೊದಲು ಮೂರು ಪಂದ್ಯಗಳನ್ನು ಸತತವಾಗಿ ಸೋತಿತ್ತು. ಮೊದಲ ಪಂದ್ಯ ಗುಜರಾತ್ ವಿರುದ್ಧ ಸೋಲು ಕಂಡಿತ್ತು. ಇದಾದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇನ್ನು ತವರಿನಲ್ಲಿ 3ನೇ ಪಂದ್ಯ ಪಂಜಾಬ್ ಕಿಂಗ್ಸ್ ಜೊತೆ ಮಳೆಯ ನಂತರ ನಡೆದ ಮ್ಯಾಚ್ನಲ್ಲಿ ಸೋಲು ಕಂಡಿತ್ತು. ಇದೆಲ್ಲಾ ಆದ ಮೇಲೆ ಕೊನೆಗೆ ರಾಜಸ್ಥಾನ್ ವಿರುದ್ಧ ಅಮೋಘವಾದ ಮೊದಲ ಗೆಲುವು ಪಡೆದು ಆರ್ಸಿಬಿ ಸಂಭ್ರಮಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ