/newsfirstlive-kannada/media/post_attachments/wp-content/uploads/2025/06/RCB_FANS.jpg)
ಈ ಸಲ ಕಪ್​ ನಮ್ದೇ ಅಲ್ಲ, ಈ ಸಲ ಕಪ್​ ನಮ್ದು. 2008 ರಿಂದ 2025 ಅಂದರೆ 18 ವರ್ಷ. ಸುದೀರ್ಘ 18 ವರ್ಷಗಳ ಪ್ರಯಾಣದ ಅಮರಪ್ರೇಮದ ಯಾತ್ರೆ. ಈ ಪ್ರಯಾಣದಲ್ಲಿ ಅನುಭವಿಸಿದ ಅವಮಾನ, ಟೀಕೆ, ಹಿಂಸೆ ಅದೆಷ್ಟೋ. ಪ್ರತಿಷ್ಠೆ, ಆತ್ಮಾಭಿಮಾನಕ್ಕೆ ಧಕ್ಕೆಯಾದರೂ ಆರ್​​ಸಿಬಿ ​​ಫ್ಯಾನ್ಸ್ ಡೋಂಟ್​ಕೇರ್​​ ಅಂದಿದ್ರು​. ನಮ್ಮ ಆರ್​​ಸಿಬಿ ನಮ್ಮ ಹೆಮ್ಮೆ ಎಂದಿದ್ದರು. ಇಂತಯ ಅಲ್ಟಿಮೇಟ್​ ಕನಸು ನನಸಾಗಿದೆ. ಕೊನೆಗೂ ಆರ್​ಸಿಬಿ ಐಪಿಎಲ್​ ಟ್ರೋಫಿಗೆ ಮುತ್ತಿಟ್ಟಿದೆ. ಅಭಿಮಾನಿಗಳ ಸಂಭ್ರಮ ಅಂತೂ ನೆಕ್ಸ್ಟ್​ ಲೆವೆಲ್​ನಲ್ಲಿತ್ತು.
ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫೈನಲ್​ ಪಂದ್ಯ ಗೆಲ್ಲುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ರಾಯಚೂರು, ಕಲಬುರಗಿ, ಧಾರವಾಡ, ದಾವಣಗೆರೆ, ಮಂಡ್ಯ, ರಾಮನಗರ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಹಲವೆಡೆ ಲೈವ್ ಸ್ಕ್ರೀನ್ನಲ್ಲಿ ಪಂದ್ಯ ವೀಕ್ಷಿಸಿದ ಫ್ಯಾನ್ಸ್ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಸೆಲೆಬ್ರೇಟ್ ಮಾಡಿದರು.
/newsfirstlive-kannada/media/post_attachments/wp-content/uploads/2025/06/RCB_FANS_2.jpg)
ಆರ್​ಸಿಬಿ ಸ್ಟಾರ್​ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲುವ ಹಂತದಲ್ಲಿದ್ದಾಗ ಮೈದಾನದಲ್ಲಿ ಅಳುವುದನ್ನು ಕಂಡು ಹಲವು ಅಭಿಮಾನಿಗಳು ಕಣ್ಣೀರಿಟ್ಟರು. ಏಕೆಂದರೆ ಆರ್​ಸಿಬಿ ತಂಡದಲ್ಲಿ ಕಳೆದ 18 ವರ್ಷಗಳಿಂದ ಕೊಹ್ಲಿ ಶ್ರಮವಹಿಸಿದ್ದಾರೆ. ಹೀಗಾಗಿ ಟ್ರೋಫಿ ಕೈಗೆ ಬರುತ್ತಿದೆಯಲ್ಲ ಎಂದು ಕೊಹ್ಲಿ ಭಾವನೆಗೆ ಸಿಕ್ಕಿ ಕಣ್ಣೀರು ಸುರಿದರು. ಈ ಎಲ್ಲಾ ಭಾವನೆಗಳೂ ಒಂದಾಗಿ ಅಭಿಮಾನದ ಹಬ್ಬದ ಆಚರಣೆಗೆ ರಾತ್ರಿ ಇಡೀ ಕರುನಾಡು ಸಾಕ್ಷಿಯಾಯಿತು.
ಕಪ್ ಗೆಲ್ಲುತ್ತಿದ್ದಂತೇ ಆರ್​ಸಿಬಿಗೆ ಜೈಕಾರ
ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುತ್ತಿಡುತ್ತಿದ್ದಂತೇ ಅಭಿಮಾನಿಗಳ ಸಂಭ್ರಮ ಸಖತ್ ಜೋರಿತ್ತು. ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಆರ್​ಸಿಬಿ ಎಂದು ಜೈಕಾರ ಕೂಗಿದರು. ಸಣ್ಣಮಕ್ಕಳಿಂದ ಹಿಡಿದು ದೊಡ್ಡವರ ತನಕ ರಸ್ತೆಗಳಲ್ಲಿ ಡ್ಯಾನ್ಸ್ ಮಾಡಿದರು. ಇನ್ನು ಧಾರವಾಡ ಕೆಸಿಡಿಯಿಂದ ಸಪ್ತಾಪೂರವರೆಗೂ ಸಂಭ್ರಮದ ವಾತಾವರಣ ನೆರೆದಿತ್ತು.
/newsfirstlive-kannada/media/post_attachments/wp-content/uploads/2025/06/RCB_FANS_1.jpg)
ಇತ್ತ ಮೈಸೂರಿನಲ್ಲಿ ಸಹ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆರ್​ಸಿಬಿ ಗೆಲುವಿಗಾಗಿ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ್ದರು. ಎಲ್ಲಿಲ್ಲದ ದೇವರಿಗೂ ಹರಕೆ ಹೊತ್ತಿದ್ದರು. ಅದರಂತೆ ಅಭಿಮಾನಿ ದೇವ್ರುಗಳ ಕನಸು ನನಸಾಗಿದೆ. ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದುʼ ಎಂದು ಅಭಿಮಾನಿಗಳು ಕೂಗಿ ಹೇಳಿದ್ದಾರೆ.
ಕೊಪ್ಪಳ ನಗರದಲ್ಲಿ ಆರ್​ಸಿಬಿ ಅಭಿಮಾನಿಗಳು ರಾತ್ರಿ ಕುಣಿದು ಕುಪ್ಪಳಿಸಿದ್ದಾರೆ. ಪಂಜಾಬ್​ ತಂಡವನ್ನು ಬೌಲಿಂಗ್​ನಿಂದ ಕಟ್ಟಿ ಹಾಕಿದ ಆರ್​ಸಿಬಿ, ಈ ವೇಳೆ ಪಂಜಾಬ್​ ವಿಕೆಟ್ ಪತನ ಆಗುತ್ತಿದ್ದಂತೆ RCB ಅಭಿಮಾನಿಗಳಲ್ಲಿ ಜೋಶ್ ಹೆಚ್ಚಾಗಿತ್ತು. ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು, ಈ ವೇಳೆ ಮಕ್ಕಳು ವೇದಿಕೆ ಮೇಲೆ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/RCB_FANS_3.jpg)
ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ
ಬೆಂಗಳೂರಿನ ಘನತೆ ಅಂದ್ರೆ ತಪ್ಪೇ ಇಲ್ಲ, ಕಪ್​ ಗೆದ್ದ ಮೇಲೆ ಸಿಲಿಕಾನ್​ ಸಿಟಿ ಸೈಲೆಂಟ್​ ಆಗಿರೋಕೆ ಸಾಧ್ಯಾನಾ, ನೋ ವೇ ಚಾನ್ಸೇ ಇಲ್ಲ, ಫ್ಯಾನ್ಸ್​ಗಳು ಸಂಭ್ರಮದ ರಂಗು ತಂದಿದ್ದರು. ಕೋಟ್ಯಾನುಕೋಟಿ ಜೀವಗಳು, ಮನಸ್ಸುಗಳು ಅಪರಿಮಿತ ಪ್ರೀತಿ. ಒಂದು ಸಲ ಆರ್​​ಸಿಬಿ ಕಪ್​ ಗೆದ್ದಿದ್ದನ್ನ ನೋಡಿದರೆ ಸಾಕು ಅಂತ ಕಾಯುತ್ತಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮಧ್ಯೆರಾತ್ರಿವರೆಗೂ ಅಭಿಮಾನಿಗಳು ಸೆಲೆಬ್ರೆಟ್ ಮಾಡಿದರು. ಬೈಕ್ ರ್ಯಾಲಿ, ಪಟಾಕಿ ಹೊಡೆದು, ಸಿಹಿ ಹಂಚಿ, ಆರ್​ಸಿಬಿಗೆ ಜೈ ಎಂದು ಕೂಗಿ ಗೆಲುವನ್ನು ಖುಷಿ ಪಟ್ಟರು.
18 ವರ್ಷಗಳ ಸತತ ಕನಸು.. ‘ಈ ಸಲ ಕಪ್ ನಮ್ದು’ ಆಗಿದೆ. ಆರ್​ಸಿಬಿ ಮ್ಯಾನೇಜ್ಮೆಂಟ್​ ಪರಿಶ್ರಮ, ಆಟಗಾರರ ನಿರಂತರ ಪ್ರಯತ್ನ, ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ. ಸತತ ವರ್ಷಗಳ ಕಾಯುವಿಕೆ ನಂತರ ಆರ್​ಸಿಬಿ ಟ್ರೋಫಿಗೆ ಮುತ್ತಿಟ್ಟಿದೆ. ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ. ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆಯೇ ಆರ್​ಸಿಬಿ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ರೆ. ಕ್ರೀಡಾಂಗಣದ ಹೊರಗೆ ಫ್ಯಾನ್ಸ್ ಸಂಭ್ರಮ ಜೋರಾಗಿತ್ತು.
ಇದನ್ನೂ ಓದಿ: RCB ಆಟಗಾರರಿಗೆ ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್ ಮೇಲೆ ಸರ್ಕಾರದಿಂದ ಸನ್ಮಾನ.. ಅನುಮತಿ ಸಿಗುತ್ತಾ?
/newsfirstlive-kannada/media/post_attachments/wp-content/uploads/2025/06/RCB_FANS_4.jpg)
ಗುಜರಾತ್​ನ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ​ ಪಂಜಾಬ್ ಹಾಗೂ ಆರ್​ಸಿಬಿ ತಂಡದ ಪಂದ್ಯಕ್ಕೆ ಸಾಕ್ಷಿಯಾಗಿದೆ. ಪಂಜಾಬ್​ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಆರ್​ಸಿಬಿ​, ಕಪ್​​ ಗೆದ್ದುಕೊಂಡಿದ್ದು, ಸ್ಟೇಡಿಯಂನಲ್ಲೇ ಆರ್​ಸಿಬಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿತ್ತು.. ಇನ್ನು ಸ್ಟೇಡಿಯಂನ ಹೊರಗೆ ರಸ್ತೆಗಳಲ್ಲಿ ಜನಸಾಗರವೇ ತುಂಬಿತ್ತು.. ಇನ್ನು ಇದೇ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us