/newsfirstlive-kannada/media/post_attachments/wp-content/uploads/2025/02/Haveri-man-dhaba-2.jpg)
ಹಾವೇರಿ ಜಿಲ್ಲೆಯಲ್ಲೊಂದು ಪವಾಡ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸತ್ತಿದ್ದಾನೆ ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದರು. ಇದನ್ನು ನಂಬಿದ ಕುಟುಂಬಸ್ಥರು ಕಣ್ಣೀರಿಡುತ್ತ ಮನೆಗೆ ವಾಪಸ್ ಬರುವಾಗ ವ್ಯಕ್ತಿಯ ನೆಚ್ಚಿನ ಡಾಬಾ ಅಂಗಡಿ ಬಂದಾಗ ಪವಾಡವೇ ನಡೆದು ಹೋಗಿದೆ.
ಅನಾರೋಗ್ಯಕ್ಕೆ ತುತ್ತಾಗಿದ್ದ 45 ವರ್ಷದ ವ್ಯಕ್ತಿಗೆ ಪುನರ್ಜನ್ಮ
ಸತ್ತಿದ್ದಾನೆ ಎಂದು ಊರಿಗೆ ತೆಗೆದುಕೊಂಡು ಹೋಗುವಾಗ ಪವಾಡ
ಜಗತ್ತಿನಲ್ಲಿ ಎಂಥೆಂಥಾ ವಿಚಿತ್ರಗಳನ್ನು ನೋಡಿರಬಹುದು. ಕೇಳಿರಬಹುದು. ಆದರೆ ಹಾವೇರಿಯ ಬಂಕಾಪುರ ಗ್ರಾಮದಲ್ಲಿ ನಡೆದಿರೋ ಅಚ್ಚರಿಯ ಘಟನೆಯಂಥ ಪ್ರಕರಣವನ್ನು ಕೇಳಿರೋದಕ್ಕೆ ಸಾಧ್ಯವಿಲ್ಲ. ಆಸ್ಪತ್ರೆಯ ICUನಲ್ಲಿ ಮಲಗಿದ್ದ ವ್ಯಕ್ತಿ ಬದುಕಿಲ್ಲ ಎಂದು ವೈದ್ಯರೇ ಹೇಳಿದ್ರು. ದುಃಖದಲ್ಲಿ ಮನೆಗೆ ವಾಪಸ್ ಬರುವಾಗ ಒಂದು ಡಾಬಾ ಅಂಗಡಿ ಮುಂದೆ ಪವಾಡವೇ ನಡೆದಿದ್ದು, ಸತ್ತಿದ್ದ ವ್ಯಕ್ತಿಗೆ ಮರಳಿ ಉಸಿರು ಬಂದಿದೆ.
ಇವರೇ ನೋಡಿ ಪವಾಡ ಸದೃಶ್ಯ ರೀತಿ ಸತ್ತು ಬದುಕಿ ಬಂದಿರುವ ವ್ಯಕ್ತಿ. ಹೆಸರು ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್. ಬಂಕಾಪುರದ ಮಂಜುನಾಥ ನಗರದ ನಿವಾಸಿ.
ಏನಿದು ವಿಚಿತ್ರ.. ಅಚ್ಚರಿ ಪ್ರಕರಣ?
ಕಳೆದ 3-4 ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಷ್ಣಪ್ಪನನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಬಿಷ್ಣಪ್ಪ ಉಸಿರಾಡದಿದ್ದಾಗ ಅವರು ಮೃತಪಟ್ಟಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು. ವೈದ್ಯರ ಮಾತು ಕೇಳಿ ಸಂಬಂಧಿಕರಿಗೆಲ್ಲ ಬಿಷ್ಣಪ್ಪನ ಸಾವಿನ ಸುದ್ದಿಯನ್ನ ಕುಟುಂಬಸ್ಥರು ತಿಳಿಸಿದ್ರು.
ಸಂಬಂಧಿಕರ ಜೊತೆ ಆಂಬ್ಯುಲೆನ್ಸ್ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಬಿಷ್ಣಪ್ಪನ ನೆಚ್ಚಿನ ಡಾಬಾ ಸಿಕ್ಕಿದೆ. ಈ ವೇಳೆ ಕಿರಿಯ ಮಗ ನೋವಿನಿಂದ ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಗೋಳಾಡಿದ್ದಾನೆ. ಈ ವೇಳೆ ಮೃತಪಟ್ಟಿದ್ದಾನೆಂದು ಊರಿಗೆ ಕರೆದೊಯ್ಯುತ್ತಿದ್ದ ಬಿಷ್ಣಪ್ಪ ಹಾ.. ಎಂದು ಉಸಿರಾಡಲು ಶುರು ಮಾಡಿದ್ದಾನೆ.
ಇನ್ನು ಅಚ್ಚರಿಯ ವಿಚಾರ ಏನಂದ್ರೆ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿದ್ದಾನೆ ಎಂದು ನಿಧನ ಸುದ್ದಿಯ ಬ್ಯಾನರ್ ಸಹ ಹಾಕಿದ್ದರು. ಸ್ನೇಹಿತರು, ಮನೆಯವರು ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಓಂ ಶಾಂತಿ ಎಂದು ಸಹ ಹಾಕಿದ್ದರು. ಇದೀಗ ಸತ್ತಿದ್ದವನು ಮತ್ತೆ ಬದುಕಿದ್ದಕ್ಕೆ ಸ್ಥಳೀಯರು ಇದು ದೇವರ ಪವಾಡ ಎನ್ನುತ್ತಿದ್ದಾರೆ
ಮೃತಪಟ್ಟಿದ್ದಾನೆಂದು ಭಾವಿಸಿದ್ದ ಬಿಷ್ಣಪ್ಪಗೆ ಸದ್ಯ ಪುನರ್ಜನ್ಮ ಸಿಕ್ಕಿದೆ. ಎಲ್ಲರಿಗೂ ಆಶ್ಚರ್ಯವಾಗಿ ಸಮೀಪದ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಎನ್​ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಫ್ರೀ ಮಟನ್ ಕೇಳಿದ.. ಕೊಡದಿದ್ದಕ್ಕೆ ಸ್ಮಶಾನದಿಂದಲೇ ಪಾರ್ಸಲ್ ತಂದ; ಮಾಂಸ ಪ್ರಿಯನ ಕೋಪಕ್ಕೆ ಬೆಚ್ಚಿ ಬಿದ್ದ ಜನ!
ವೈದ್ಯರೇ ಸತ್ತಿದ್ದಾನೆಂದು ಹೇಳಿದ್ದ ವ್ಯಕ್ತಿ ಮರಳಿ ಬದುಕಿದ್ದು ನಿಜಕ್ಕೂ ಪವಾಡವೇ ಸರಿ.. ಅಂತ್ಯಕ್ರಿಯೆ ಸಿದ್ಧವಾಗಿದ್ದ ಮನೆಯಲ್ಲಿ ಇದೀಗ ಕೊಂಚ ನೆಮ್ಮದಿಯ ವಾತಾವರಣ ಮೂಡಿದೆ. ಆದ್ರೂ ಆತಂಕ ಇದ್ದು, ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಬಿಷ್ಣಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಿಕರು ಪುನರ್ಜನ್ಮ ಪಡೆದ ಬಿಷ್ಣಪ್ಪ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ