/newsfirstlive-kannada/media/post_attachments/wp-content/uploads/2025/03/yash-3.jpg)
ಕನ್ನಡ ಸಿನಿಮಾದ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ ಇದೆ. ಕೆಲವರು ಅತಿ ಹೆಚ್ಚು ಕನ್ನಡ ಸಿನಿಮಾವನ್ನು ನೋಡಿದ್ರೆ, ಇನ್ನೂ ಕೆಲವರು ಕನ್ನಡ ಸಿನಿಮಾ ಚೆನ್ನಾಗಿಲ್ಲ, ಆ ಸಿನಿಮಾದಲ್ಲಿ ಕಥೆನೇ ಇಲ್ಲ, ಕನ್ನಡ ಸಿನಿಮಾಗಳು ಬರೋದೇ ಕಡಿಮೆ ಆಗುತ್ತಿದೆ ಎಂಬೆಲ್ಲಾ ಅಭಿಪ್ರಾಯವನ್ನು ನೀಡುತ್ತಾರೆ.
ಇದನ್ನೂ ಓದಿ:ಯಶ್ ಯಶಸ್ಸಿನ ಮಾತು.. ಬೆಳೆದು ಬಂದ ದಾರಿ ಮೆಲುಕು ಹಾಕಿದ ರಾಕಿಂಗ್ ಸ್ಟಾರ್..!
ಈಗ ರಾಕಿಂಗ್ ಸ್ಟಾರ್ ಯಶ್ ಅವರೇ ಕನ್ನಡ ಚಿತ್ರರಂಗದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ‘ಮನದ ಕಡಲು’ ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಹೀಗಾಗಿ ನಿನ್ನೆ ಸಂಜೆ ಟ್ರೈಲರ್ ಲಾಂಚ್ ಇವೆಂಟ್ಗೆ ರಾಕಿಂಗ್ ಸ್ಟಾರ್ ಯಶ್ ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಇದೇ ವೇಳೆ ನಟ ಯಶ್ ತಾವು ಸಿನಿಮಾ ರಂಗದಲ್ಲಿ ಬೆಳೆದು ಬಂದ ಹಾದಿಯನ್ನ ಮೆಲುಕು ಹಾಕಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ನೋಡ್ತಾನೇ ಇರ್ತೀನಿ, ನನಗೆ ಬೇಜಾರಾಗೋ ವಿಚಾರ ಏನೆಂದ್ರೆ, ನಾವು ಗೋಳಾಡೋದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು. ನಾನು ಕೂಡ ಒಂದು ಸಂದರ್ಶನದಲ್ಲಿ ಜನ ಕನ್ನಡ ಸಿನಿಮಾಗಳನ್ನು ನೋಡಲ್ಲ ಎಂದಿದ್ದೆ. ಆ ಮೇಲೆ ಮನೆಯಲ್ಲಿ ಕುಳಿತುಕೊಂಡು ಯೋಚನೆ ಮಾಡಿದಾಗ ನನಗೆ ಅನ್ನಿಸಿತು. ನಮ್ಮ ಕೆಲಸ ನಾವು ಮಾಡೋಣ. ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು, ಅಭಿಮಾನಿಗಳು ಯಾವಾಗಲೂ ಕೈಬಿಡೋದಿಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಕೇಳಿಕೊಳ್ಳುತ್ತೇನೆ, ಅಪ್ಗ್ರೇಡ್ ಆಗೋಣ, ಕೆಲಸ ಕಲಿಯೋಣ, ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳೋಣ, ಸ್ವಾಭಿಮಾನ ಬೆಳಸಿಕೊಳ್ಳೋಣ, ಬೇರೆಯವರು ಗೌರವಿಸೋ ತರ ಕೆಲಸ ಮಾಡೋಣ ಎಂದರು.
ಮತ್ತೆ ಮಾತನ್ನು ಮುಂದುವರೆಸಿದ ಅವರು, ಅಭಿಮಾನಿಗಳು ಒಳ್ಳೆಯ ಸಿನಿಮಾವನ್ನು ಹರಸಿಯೇ ಹರಸುತ್ತಾರೆ. ಹೊಸಬರನ್ನು ಲಾಂಚ್ ಮಾಡಿ, ಹೊಸಬರ ಈವೆಂಟ್ಗೆ ಹೋಗಿ ಎಂದು ಕೇಳಿಕೊಳ್ಳುತ್ತಾರೆ. ನಾನು ಬಂದೆ ಎಂದು ಕೂಡಲೇ ಸಿನಿಮಾ ಗೆಲ್ಲೋದಿಲ್ಲ. ನಿಜವಾದ ಗೆಲುವು ಸಿಗುವುದು ನೀವು ಮಾಡೋ ಕೆಲಸದಿಂದ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ