ಕನ್ನಡಿಗ ದ್ರಾವಿಡ್​ -ಸಂಜು ಮಧ್ಯೆ ಮುನಿಸು.. ಕ್ರಿಕೆಟ್ ಲೋಕ ಕಂಡ ದೀ ಬೆಸ್ಟ್​ ಗುರು- ಶಿಷ್ಯರ ಮಧ್ಯೆ ಆಗಿದ್ದೇನು?

author-image
Bheemappa
Updated On
ಕನ್ನಡಿಗ ದ್ರಾವಿಡ್​ -ಸಂಜು ಮಧ್ಯೆ ಮುನಿಸು.. ಕ್ರಿಕೆಟ್ ಲೋಕ ಕಂಡ ದೀ ಬೆಸ್ಟ್​ ಗುರು- ಶಿಷ್ಯರ ಮಧ್ಯೆ ಆಗಿದ್ದೇನು?
Advertisment
  • ಸುಲಭಕ್ಕೆ ಗೆಲ್ಲುತ್ತಿದ್ದ ಮ್ಯಾಚ್ ಕೈಚೆಲ್ಲಿದಕ್ಕೆ ಬೇಸರ ಮಾಡಿಕೊಂಡ್ರಾ?
  • ಇಡೀ ಕ್ರಿಕೆಟ್​ ಲೋಕವೇ ಮೆಚ್ಚಿದ್ದ ಗುರು- ಶಿಷ್ಯರ ನಡುವೆ ಹುಳಿ
  • ರಾಜಸ್ಥಾನ್- ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ನಡೆದ ಆ ಘಟನೆ ಏನು.?

ಇವರಿಬ್ಬರು ಅಪ್ಪಟ ಗುರು-ಶಿಷ್ಯರು. ಕ್ರಿಕೆಟ್​ ಕರಿಯರ್​ನ ಆರಂಭಿಕ ದಿನಗಳಿಂದ ದಾರಿ ತೋರಿಸಿದ ಗುರು. ಆ ಗುರುವಿನ ಮಾರ್ಗದರ್ಶನ ಚಾಚೂ ತಪ್ಪದೇ ಫಾಲೋ ಮಾಡಿಕೊಂಡು ಬಂದ ಶಿಷ್ಯ. ತಪ್ಪುಗಳನ್ನ ತಿದ್ದಿ ತೀಡಿ, ಸೋತಾಗ ಬೆನ್ನಿಗೆ ನಿಂತ ಗುರುವಿನ ವಿರುದ್ಧ ಶಿಷ್ಯ ಮುನಿಸಿಕೊಂಡಂತಿದೆ. ಇಡೀ ಕ್ರಿಕೆಟ್​ ಲೋಕವೇ ಮೆಚ್ಚಿದ್ದ ಗುರು-ಶಿಷ್ಯರ ಸಂಬಂಧಕ್ಕೆ ಒಂದು ಪಂದ್ಯ ಹುಳಿ ಹಿಂಡಿದೆ ಅನ್ನೋ ಟಾಕ್​ ಶುರುವಾಗಿದೆ.

ರಾಹುಲ್ ದ್ರಾವಿಡ್ -ಸಂಜು ಸ್ಯಾಮ್ಸನ್​ ವಿಶ್ವ ಕ್ರಿಕೆಟ್ ಲೋಕ ಕಂಡ ದಿ ಬೆಸ್ಟ್​ ಗುರು ಶಿಷ್ಯರು. ಕನ್ನಡಿಗ ರಾಹುಲ್ ದ್ರಾವಿಡ್ ಗರಡಿಯಲ್ಲಿ ಅದೆಷ್ಟೋ ಯುವ ಆಟಗಾರರು ಪಳಗಿದ್ದಾರೆ. ವಿಶ್ವ ಕ್ರಿಕೆಟ್​ ಲೋಕದಲ್ಲಿ ಮಿಂಚುತ್ತಿದ್ದಾರೆ. ಆದ್ರೆ, ಈ ಪೈಕಿ ರಾಹುಲ್ ದ್ರಾವಿಡ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಮಾತ್ರ ವಿಶೇಷವಾಗಿ ಕಾಣುತ್ತೆ. ಸಂಜು ಅಂದ್ರೆ ದ್ರಾವಿಡ್​ಗೆ ಅದೇನೋ ಗೊತ್ತಿಲ್ಲ, ವಿಶೇಷವಾದ ಪ್ರೀತಿ. ಇವತ್ತು ಸಂಜು ಸ್ಯಾಮ್ಸನ್ ಏನೇ ಆಗಿದ್ರೂ ಅದರ ಹಿಂದೆ ರಾಹುಲ್ ದ್ರಾವಿಡ್​ ಪಾತ್ರ ಮಹತ್ವದ್ದು.

publive-image

ದ್ರಾವಿಡ್​​​​​​​, ಸಂಜು ನಡುವೆ ಮೂಡಿದ ಬಿರುಕು?

ದ್ರಾವಿಡ್ ಹೊರತಾಗಿ ಸಂಜು ಸ್ಯಾಮ್ಸನ್​​ ಕ್ರಿಕೆಟ್ ಕರಿಯರ್​ನ ಊಹಿಸಲು ಅಸಾಧ್ಯ. ಸಂಜು ಕರಿಯರ್​ನ ರೂಪಿಸುವಲ್ಲಿ​ ದ್ರೋಣಾಚಾರ್ಯ ದ್ರಾವಿಡ್ ಪಾತ್ರ ಮಹತ್ವದ್ದು. ಅಂದ್ಹಾಗೆ ಇವರಿಬ್ಬರ ಭಾಂದವ್ಯ ಕ್ರಿಕೆಟ್​ಗೆ ಸೀಮಿತವಾಗಿದ್ದಲ್ಲ. ಇಬ್ಬರದ್ದೂ ಬೌಂಡರಿ ಆಚೆಗಿನ ಬಂಧ. ಅತ್ಯಂತ ಅನ್ಯೋನ್ಯವಾಗಿದ್ದ ಈ ಗುರು-ಶಿಷ್ಯರ ಸಂಬಂಧದಲ್ಲಿ ಇದೀಗ ಶೀತಲ ಸಮರ ಶುರುವಾದಂತಿದೆ.

ಡೆಲ್ಲಿ ಪಂದ್ಯದ ವೇಳೆ ಬಯಲಾಯ್ತು ಅಸಮಾಧಾನ..!

ಈ ಸೀಸನ್​​ ಐಪಿಎಲ್​​ನ 32ನೇ ಪಂದ್ಯದಲ್ಲಿ ಡೆಲ್ಲಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿ ಆಗಿದ್ವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ, ರಾಜಸ್ಥಾನ್ ರಾಯಲ್ಸ್​ಗೆ 189 ರನ್‌ಗಳ ಟಾರ್ಗೆಟ್ ನೀಡಿತ್ತು. ಆದ್ರೆ, ಕೊನೆಯ ಓವರ್​ನಲ್ಲಿ ರಾಜಸ್ಥಾನ್​ ಗೆಲುವಿಗೆ 9 ರನ್​ಗಳು ಬೇಕಿದ್ವು. ಕೊನೆಯ ಓವರ್​​​ನಲ್ಲಿ ಸ್ಟಾರ್ಕ್ ಹಾಕಿದ​ ಬೆಂಕಿ ಎಸೆತಗಳಿಗೆ ಸ್ಟನ್​ ಆದ ರಾಜಸ್ಥಾನ್ ರಾಯಲ್ಸ್, ಹೋರಾಟ ನಡೆಸಿ ಮ್ಯಾಚ್​ನ ಟೈ ಮಾಡಿಕೊಳ್ತು. ಈ ಮ್ಯಾಚ್​ ಟೈ ಆದ ಬಳಿಕ ನಡೆದ ಕೆಲ ಘಟನಾವಳಿಗಳು, ಸೂಪರ್ ಓವರ್​ನ ಡಿಸ್ಕಷನ್​, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ವಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಸೂಪರ್ ಓವರ್ ಚರ್ಚೆ.. ಮೀಟಿಂಗ್​ನಿಂದ ಸಂಜು ದೂರ..!

ಪಂದ್ಯ ಟೈ ಆದ ಬಳಿಕ ರಾಜಸ್ಥಾನ್​ ರಾಯಲ್ಸ್​ ಡಗೌಟ್​ ಬಳಿ ಚರ್ಚೆಗಳು ನಡೆದಿದ್ವು. ಕೋಚ್ ರಾಹುಲ್ ದ್ರಾವಿಡ್ ಸಪೋರ್ಟ್​ ಸ್ಟಾಫ್ಸ್​ ಹಾಗೂ ಕೆಲ ಆಟಗಾರರ ಜೊತೆ ಗೇಮ್​​ ಪ್ಲಾನ್​ನಲ್ಲಿ ಮಾಡ್ತಿದ್ರು. ಯಾರನ್ನು ಬ್ಯಾಟಿಂಗ್​ಗೆ ಕಳುಹಿಸಬೇಕು ಎಂಬೆಲ್ಲಾ ಚರ್ಚೆಗಳು ನಡೀತಿದ್ವು. ಡಗೌಟ್​ ಬಳಿ ಹೈವೋಲ್ಟೆಜ್​​ ಚರ್ಚೆ ನಡೀತಿದ್ರು ಕ್ಯಾಪ್ಟನ್​ ಸಂಜು ಮಾತ್ರ ತನಗೆ ಇದಕ್ಕೆ ಸಂಬಂಧ ಇಲ್ಲ ಎಂಬಂತೆ ದೂರ ಉಳಿದಿದ್ದರು.

ಮೀಟಿಂಗ್ ನಡೀತಿದ್ದಾಗ ಪಕ್ಕದಲ್ಲೇ ಓಡಾಡ್ತಿದ್ದ ನಾಯಕ ಸಂಜು ಸ್ಯಾಮ್ಸನ್, ನೋಡಿಯೂ ನೋಡದಂತೆ ಹೆಜ್ಜೆ ಹಾಕ್ತಿದ್ರು. ಇದೇ ವೇಳೆ ತಂಡದ ಸಹ ಆಟಗಾರ ಯಧುವೀರ್ ಸಿಂಗ್, ಟೀಮ್​​​​​ ಮೀಟಿಂಗ್​ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿದ ಸಂಜು ಮೀಟಿಂಗ್​ನಿಂದ ದೂರ ಉಳಿದ್ರು.

ದ್ರಾವಿಡ್ ನಿರ್ಧಾರಕ್ಕೆ ಮುನಿಸಿಕೊಂಡ್ರಾ ಸಂಜು..?

ರಾಜಸ್ಥಾನ್ ರಾಯಲ್ಸ್ ತಂಡ ಸೂಪರ್ ಓವರ್ ವೇಳೆ ತೆಗೆದುಕೊಂಡ ಡಿಸಿಷನ್ ಎಲ್ಲರಲ್ಲೂ ಅಚ್ಚರಿ ತರಿಸಿತು. ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ನಿತಿಶ್ ರಾಣಾ, ಯಶಸ್ವಿ ಜೈಸ್ವಾಲ್ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ, ಶಿಮ್ರಾನ್ ಹೆಟ್ಮೆಯರ್ ಹಾಗೂ ರನ್​ಗಳಿಕೆಗೆ ಪರದಾಡ್ತಿದ್ದ ರಿಯಾನ್ ಪರಾಗ್ ಬ್ಯಾಟಿಂಗ್​ಗೆ ಬಂದ್ರು. ದ್ರಾವಿಡ್​ರ ಈ ನಿರ್ಧಾರ ಸಂಜು ಸ್ಯಾಮ್ಸನ್ ಮುನಿಸಿಗೆ ಕಾರಣ ಎನ್ನಲಾಗ್ತಿದೆ.

ಇದನ್ನೂ ಓದಿ: IPLನಲ್ಲಿ ಬೌಲರ್​ಗಳಿಗೆ ಗುಡ್​ನ್ಯೂಸ್​.. ಆ ಸ್ವೀಟ್ ಸ್ಪಾಟ್​​​​​​​​​​​​​ ಮೇಲೆ ಹದ್ದಿನ ಕಣ್ಣು!

publive-image

ಸೂಪರ್ ಓವರ್​ನಲ್ಲಿ ಮಿಚೆಲ್ ಸ್ಟಾರ್ಕ್​ ಎದುರಿಸಲು ಜೈಸ್ವಾಲ್​ ಬೆಸ್ಟ್​ ಆಯ್ಕೆಯಾಗಿದ್ರು. ರಿಯಾನ್​ ಪರಾಗ್​ ಆಗಲೇ ಫ್ಲಾಪ್​ ಶೋ ನೀಡಿದ್ರು. ಪರಾಗ್​ ಬದಲಿಗೆ ಜೈಸ್ವಾಲ್ ಬಂದಿದ್ರೆ, ಕೌಂಟರ್ ಅಟ್ಯಾಕ್ ನೀಡ್ತಿದ್ರು. ಆದ್ರೆ, ಜೈಸ್ವಾಲ್​ನ 2ನೇ ಬ್ಯಾಟರ್ ಆಗಿ ಕಳುಹಿಸಲಾಯ್ತು. ಈ ನಿರ್ಣಯವನ್ನೇ ಆಗಲೇ ಬಹಳಷ್ಟು ಮಾಜಿ ಕ್ರಿಕೆಟರ್ಸ್, ಕಾಮೆಂಟೇಟರ್ಸ್ ಪ್ರಶ್ನಿಸಿದ್ರು.

ಅಂದು ಮ್ಯಾಚ್​ ವೇಳೆ ಸಂಜು ಸ್ಯಾಮ್ಸನ್​​, ರಾಹುಲ್ ದ್ರಾವಿಡ್​ ಮೇಲೆ ಮುನಿಸಿಕೊಂಡಿದ್ರು ಅನ್ನೋದಕ್ಕೆ ವಿಡಿಯೋಗಳೇ ಸಾಕ್ಷಿಯಾಗಿವೆ. ಆದ್ರೆ, ಆ ಮುನಿಸು ಆ ಪಂದ್ಯಕ್ಕೆ ಮಾತ್ರ ಸೀಮಿತವಾಗಲಿ. ಯಾಕಂದ್ರೆ, ಮೊದಲೇ ಹೇಳಿದಂತೆ ದ್ರಾವಿಡ್​-ಸಂಜುವಿನ ಸಂಬಂಧ ಕ್ರಿಕೆಟ್​​ ಅನ್ನೂ ಮೀರಿದ್ದು. ಒಂದು ನಿರ್ಧಾರ, ಒಂದು ಪಂದ್ಯದ ಸೋಲು ದ್ರಾವಿಡ್​-ಸಂಜುವಿನ ಅವಿನಾಭಾವ ಸಂಬಂಧಕ್ಕೆ ದಕ್ಕೆ ತರದಿರಲಿ ಅನ್ನೋದು ಕ್ರಿಕೆಟ್​ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment