/newsfirstlive-kannada/media/post_attachments/wp-content/uploads/2025/04/SANJU_DRAVID_NEW.jpg)
ಇವರಿಬ್ಬರು ಅಪ್ಪಟ ಗುರು-ಶಿಷ್ಯರು. ಕ್ರಿಕೆಟ್ ಕರಿಯರ್ನ ಆರಂಭಿಕ ದಿನಗಳಿಂದ ದಾರಿ ತೋರಿಸಿದ ಗುರು. ಆ ಗುರುವಿನ ಮಾರ್ಗದರ್ಶನ ಚಾಚೂ ತಪ್ಪದೇ ಫಾಲೋ ಮಾಡಿಕೊಂಡು ಬಂದ ಶಿಷ್ಯ. ತಪ್ಪುಗಳನ್ನ ತಿದ್ದಿ ತೀಡಿ, ಸೋತಾಗ ಬೆನ್ನಿಗೆ ನಿಂತ ಗುರುವಿನ ವಿರುದ್ಧ ಶಿಷ್ಯ ಮುನಿಸಿಕೊಂಡಂತಿದೆ. ಇಡೀ ಕ್ರಿಕೆಟ್ ಲೋಕವೇ ಮೆಚ್ಚಿದ್ದ ಗುರು-ಶಿಷ್ಯರ ಸಂಬಂಧಕ್ಕೆ ಒಂದು ಪಂದ್ಯ ಹುಳಿ ಹಿಂಡಿದೆ ಅನ್ನೋ ಟಾಕ್ ಶುರುವಾಗಿದೆ.
ರಾಹುಲ್ ದ್ರಾವಿಡ್ -ಸಂಜು ಸ್ಯಾಮ್ಸನ್ ವಿಶ್ವ ಕ್ರಿಕೆಟ್ ಲೋಕ ಕಂಡ ದಿ ಬೆಸ್ಟ್ ಗುರು ಶಿಷ್ಯರು. ಕನ್ನಡಿಗ ರಾಹುಲ್ ದ್ರಾವಿಡ್ ಗರಡಿಯಲ್ಲಿ ಅದೆಷ್ಟೋ ಯುವ ಆಟಗಾರರು ಪಳಗಿದ್ದಾರೆ. ವಿಶ್ವ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಆದ್ರೆ, ಈ ಪೈಕಿ ರಾಹುಲ್ ದ್ರಾವಿಡ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಮಾತ್ರ ವಿಶೇಷವಾಗಿ ಕಾಣುತ್ತೆ. ಸಂಜು ಅಂದ್ರೆ ದ್ರಾವಿಡ್ಗೆ ಅದೇನೋ ಗೊತ್ತಿಲ್ಲ, ವಿಶೇಷವಾದ ಪ್ರೀತಿ. ಇವತ್ತು ಸಂಜು ಸ್ಯಾಮ್ಸನ್ ಏನೇ ಆಗಿದ್ರೂ ಅದರ ಹಿಂದೆ ರಾಹುಲ್ ದ್ರಾವಿಡ್ ಪಾತ್ರ ಮಹತ್ವದ್ದು.
ದ್ರಾವಿಡ್, ಸಂಜು ನಡುವೆ ಮೂಡಿದ ಬಿರುಕು?
ದ್ರಾವಿಡ್ ಹೊರತಾಗಿ ಸಂಜು ಸ್ಯಾಮ್ಸನ್ ಕ್ರಿಕೆಟ್ ಕರಿಯರ್ನ ಊಹಿಸಲು ಅಸಾಧ್ಯ. ಸಂಜು ಕರಿಯರ್ನ ರೂಪಿಸುವಲ್ಲಿ ದ್ರೋಣಾಚಾರ್ಯ ದ್ರಾವಿಡ್ ಪಾತ್ರ ಮಹತ್ವದ್ದು. ಅಂದ್ಹಾಗೆ ಇವರಿಬ್ಬರ ಭಾಂದವ್ಯ ಕ್ರಿಕೆಟ್ಗೆ ಸೀಮಿತವಾಗಿದ್ದಲ್ಲ. ಇಬ್ಬರದ್ದೂ ಬೌಂಡರಿ ಆಚೆಗಿನ ಬಂಧ. ಅತ್ಯಂತ ಅನ್ಯೋನ್ಯವಾಗಿದ್ದ ಈ ಗುರು-ಶಿಷ್ಯರ ಸಂಬಂಧದಲ್ಲಿ ಇದೀಗ ಶೀತಲ ಸಮರ ಶುರುವಾದಂತಿದೆ.
ಡೆಲ್ಲಿ ಪಂದ್ಯದ ವೇಳೆ ಬಯಲಾಯ್ತು ಅಸಮಾಧಾನ..!
ಈ ಸೀಸನ್ ಐಪಿಎಲ್ನ 32ನೇ ಪಂದ್ಯದಲ್ಲಿ ಡೆಲ್ಲಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿ ಆಗಿದ್ವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ, ರಾಜಸ್ಥಾನ್ ರಾಯಲ್ಸ್ಗೆ 189 ರನ್ಗಳ ಟಾರ್ಗೆಟ್ ನೀಡಿತ್ತು. ಆದ್ರೆ, ಕೊನೆಯ ಓವರ್ನಲ್ಲಿ ರಾಜಸ್ಥಾನ್ ಗೆಲುವಿಗೆ 9 ರನ್ಗಳು ಬೇಕಿದ್ವು. ಕೊನೆಯ ಓವರ್ನಲ್ಲಿ ಸ್ಟಾರ್ಕ್ ಹಾಕಿದ ಬೆಂಕಿ ಎಸೆತಗಳಿಗೆ ಸ್ಟನ್ ಆದ ರಾಜಸ್ಥಾನ್ ರಾಯಲ್ಸ್, ಹೋರಾಟ ನಡೆಸಿ ಮ್ಯಾಚ್ನ ಟೈ ಮಾಡಿಕೊಳ್ತು. ಈ ಮ್ಯಾಚ್ ಟೈ ಆದ ಬಳಿಕ ನಡೆದ ಕೆಲ ಘಟನಾವಳಿಗಳು, ಸೂಪರ್ ಓವರ್ನ ಡಿಸ್ಕಷನ್, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ವಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಸೂಪರ್ ಓವರ್ ಚರ್ಚೆ.. ಮೀಟಿಂಗ್ನಿಂದ ಸಂಜು ದೂರ..!
ಪಂದ್ಯ ಟೈ ಆದ ಬಳಿಕ ರಾಜಸ್ಥಾನ್ ರಾಯಲ್ಸ್ ಡಗೌಟ್ ಬಳಿ ಚರ್ಚೆಗಳು ನಡೆದಿದ್ವು. ಕೋಚ್ ರಾಹುಲ್ ದ್ರಾವಿಡ್ ಸಪೋರ್ಟ್ ಸ್ಟಾಫ್ಸ್ ಹಾಗೂ ಕೆಲ ಆಟಗಾರರ ಜೊತೆ ಗೇಮ್ ಪ್ಲಾನ್ನಲ್ಲಿ ಮಾಡ್ತಿದ್ರು. ಯಾರನ್ನು ಬ್ಯಾಟಿಂಗ್ಗೆ ಕಳುಹಿಸಬೇಕು ಎಂಬೆಲ್ಲಾ ಚರ್ಚೆಗಳು ನಡೀತಿದ್ವು. ಡಗೌಟ್ ಬಳಿ ಹೈವೋಲ್ಟೆಜ್ ಚರ್ಚೆ ನಡೀತಿದ್ರು ಕ್ಯಾಪ್ಟನ್ ಸಂಜು ಮಾತ್ರ ತನಗೆ ಇದಕ್ಕೆ ಸಂಬಂಧ ಇಲ್ಲ ಎಂಬಂತೆ ದೂರ ಉಳಿದಿದ್ದರು.
ಮೀಟಿಂಗ್ ನಡೀತಿದ್ದಾಗ ಪಕ್ಕದಲ್ಲೇ ಓಡಾಡ್ತಿದ್ದ ನಾಯಕ ಸಂಜು ಸ್ಯಾಮ್ಸನ್, ನೋಡಿಯೂ ನೋಡದಂತೆ ಹೆಜ್ಜೆ ಹಾಕ್ತಿದ್ರು. ಇದೇ ವೇಳೆ ತಂಡದ ಸಹ ಆಟಗಾರ ಯಧುವೀರ್ ಸಿಂಗ್, ಟೀಮ್ ಮೀಟಿಂಗ್ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿದ ಸಂಜು ಮೀಟಿಂಗ್ನಿಂದ ದೂರ ಉಳಿದ್ರು.
ದ್ರಾವಿಡ್ ನಿರ್ಧಾರಕ್ಕೆ ಮುನಿಸಿಕೊಂಡ್ರಾ ಸಂಜು..?
ರಾಜಸ್ಥಾನ್ ರಾಯಲ್ಸ್ ತಂಡ ಸೂಪರ್ ಓವರ್ ವೇಳೆ ತೆಗೆದುಕೊಂಡ ಡಿಸಿಷನ್ ಎಲ್ಲರಲ್ಲೂ ಅಚ್ಚರಿ ತರಿಸಿತು. ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ನಿತಿಶ್ ರಾಣಾ, ಯಶಸ್ವಿ ಜೈಸ್ವಾಲ್ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ, ಶಿಮ್ರಾನ್ ಹೆಟ್ಮೆಯರ್ ಹಾಗೂ ರನ್ಗಳಿಕೆಗೆ ಪರದಾಡ್ತಿದ್ದ ರಿಯಾನ್ ಪರಾಗ್ ಬ್ಯಾಟಿಂಗ್ಗೆ ಬಂದ್ರು. ದ್ರಾವಿಡ್ರ ಈ ನಿರ್ಧಾರ ಸಂಜು ಸ್ಯಾಮ್ಸನ್ ಮುನಿಸಿಗೆ ಕಾರಣ ಎನ್ನಲಾಗ್ತಿದೆ.
ಇದನ್ನೂ ಓದಿ: IPLನಲ್ಲಿ ಬೌಲರ್ಗಳಿಗೆ ಗುಡ್ನ್ಯೂಸ್.. ಆ ಸ್ವೀಟ್ ಸ್ಪಾಟ್ ಮೇಲೆ ಹದ್ದಿನ ಕಣ್ಣು!
ಸೂಪರ್ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಎದುರಿಸಲು ಜೈಸ್ವಾಲ್ ಬೆಸ್ಟ್ ಆಯ್ಕೆಯಾಗಿದ್ರು. ರಿಯಾನ್ ಪರಾಗ್ ಆಗಲೇ ಫ್ಲಾಪ್ ಶೋ ನೀಡಿದ್ರು. ಪರಾಗ್ ಬದಲಿಗೆ ಜೈಸ್ವಾಲ್ ಬಂದಿದ್ರೆ, ಕೌಂಟರ್ ಅಟ್ಯಾಕ್ ನೀಡ್ತಿದ್ರು. ಆದ್ರೆ, ಜೈಸ್ವಾಲ್ನ 2ನೇ ಬ್ಯಾಟರ್ ಆಗಿ ಕಳುಹಿಸಲಾಯ್ತು. ಈ ನಿರ್ಣಯವನ್ನೇ ಆಗಲೇ ಬಹಳಷ್ಟು ಮಾಜಿ ಕ್ರಿಕೆಟರ್ಸ್, ಕಾಮೆಂಟೇಟರ್ಸ್ ಪ್ರಶ್ನಿಸಿದ್ರು.
ಅಂದು ಮ್ಯಾಚ್ ವೇಳೆ ಸಂಜು ಸ್ಯಾಮ್ಸನ್, ರಾಹುಲ್ ದ್ರಾವಿಡ್ ಮೇಲೆ ಮುನಿಸಿಕೊಂಡಿದ್ರು ಅನ್ನೋದಕ್ಕೆ ವಿಡಿಯೋಗಳೇ ಸಾಕ್ಷಿಯಾಗಿವೆ. ಆದ್ರೆ, ಆ ಮುನಿಸು ಆ ಪಂದ್ಯಕ್ಕೆ ಮಾತ್ರ ಸೀಮಿತವಾಗಲಿ. ಯಾಕಂದ್ರೆ, ಮೊದಲೇ ಹೇಳಿದಂತೆ ದ್ರಾವಿಡ್-ಸಂಜುವಿನ ಸಂಬಂಧ ಕ್ರಿಕೆಟ್ ಅನ್ನೂ ಮೀರಿದ್ದು. ಒಂದು ನಿರ್ಧಾರ, ಒಂದು ಪಂದ್ಯದ ಸೋಲು ದ್ರಾವಿಡ್-ಸಂಜುವಿನ ಅವಿನಾಭಾವ ಸಂಬಂಧಕ್ಕೆ ದಕ್ಕೆ ತರದಿರಲಿ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ