/newsfirstlive-kannada/media/post_attachments/wp-content/uploads/2025/07/saroja2.jpg)
ಖ್ಯಾತ ಬಹುಭಾಷಾ ನಟಿ, ಹಿರಿಯ ಕಲಾವಿದೆ ಸರೋಜಾದೇವಿ ಅವರು ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಅವರ ನಿವಾಸದಲ್ಲೇ ಇಡಲಾಗಿದ್ದು, ಸ್ಟಾರ್​ ನಟ, ನಟಿಯರು ಸರೋಜಾದೇವಿ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿದ್ದಾರೆ.
ಇನ್ನೂ, ನಟಿ ಸರೋಜಾದೇವಿ ಅಂತ್ಯ ಸಂಸ್ಕಾರದ ಬಗ್ಗೆ ಅವರ ಪುತ್ರ ಗೌತಮ್ ಅವರು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಬೆಳಗ್ಗೆ 8.30ಕ್ಕೆ ತಾಯಿಯವ್ರು ಕೊನೆಯುಸಿರೆಳೆದರು. ನಾಳೆ 11.30ಕ್ಕೆ ಇಲ್ಲಿಂದ ಹೊರಡುತ್ತೇವೆ. ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆಯ ಕಣ್ವ ಡ್ಯಾಮಿನ ಪಕ್ಕದಲ್ಲೇ ಇರೋ ದಶಾವರದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇವೆ. ಒಕ್ಕಲಿಗ ಸಂಪ್ರದಾಯದಂತೆ ಎಲ್ಲ ವಿಧಿ ವಿಧಾನಗಳು ನೆರವೇರುತ್ತೇವೆ ಎಂದಿದ್ದಾರೆ.
ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. 1938ರ ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್ಸ್ಟಾರ್ ಆಗಿದ್ದವರು. 1962ರಲ್ಲಿ ಪ್ರಸಾರವಾದ ‘ಕಿತ್ತೂರ ರಾಣಿ ಚೆನ್ನಮ್ಮ’ ಸಿನಿಮಾದಲ್ಲಿ ಬಿ ಸರೋಜಾದೇವಿ ಅವರು ನಟಿಸಿದ್ದರು.
ಸರೋಜಾ ದೇವಿ ಅವರು ಅಮರ ಶಿಲ್ಪಿ ಜಕಣಾಚಾರಿ, ಭಾಗ್ಯವಂತರು, ಮಲ್ಲಮ್ಮನ ಪವಾಡ, ಬಬ್ರುವಾಹನ, ಲಕ್ಷ್ಮೀಸರಸ್ವತಿ, ಕಥಾಸಂಗಮ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳಿನ ಪಾಟ್ಟಾಲಿ ಮುತ್ತು, ಕಲ್ಯಾಣ ಪರಿಸು, ಪಡಿಕಥ ಮೇಥೈ, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಮೆಹಂದಿ ಲಗ ಕೆ ರಖನಾ, ಹಿಂದಿಯ ಆಶಾ, ಮಲೆಯಾಳಂನ ಮುತ್ತುಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಸರೋಜಾದೇವಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್ಫೇರ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಸಿಕ್ಕಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ