/newsfirstlive-kannada/media/post_attachments/wp-content/uploads/2025/02/UDP-MALLIGE-RATE.jpg)
ಕರಾವಳಿಯಲ್ಲಿ ಈಗ ದೈವಗಳ ನೇಮೋತ್ಸವ, ಜಾತ್ರೆಗಳದ್ದೇ ಸಡಗರ ಮನೆ ಮಾಡಿದೆ. ಜಿಲ್ಲೆಯ ಹಲವೆಡೆ ಪ್ರಮುಖ ದೇವಾಲಯಗಳ ಜೀರ್ಣೋದ್ದಾರಗಳು, ಕೋಲ ಹೀಗೆ ಧಾರ್ಮಿಕ ಆಚರಣೆಗಳ ವೈಭವ ಜೋರಾಗಿದೆ. ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳಿಗೆ ಮಲ್ಲಿಗೆ ಹೂವು ಅತೀ ಪ್ರಾಮುಖ್ಯ. ಆದ್ರೆ ಮಲ್ಲಿಗೆ ಬೆಳೆ ನಷ್ಟದ ಪರಿಣಾಮ ಹೂವುಗಳು ಸಿಗದೆ ಬೆಲೆಗಳು ಗಗನಕ್ಕೇರಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಸಂಗೀತ, ಮತ್ತು ನೃತ್ಯ ಮಹೋತ್ಸವ.. ದಿಗ್ಗಜ ಕಲಾವಿದರು ಭಾಗಿ!
ಕರಾವಳಿ ಅಂದ್ರೆ ದೈವ ಆರಾಧನೆ ತವರೂರು. ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಕೋಲ, ನೇಮೋತ್ಸವದ ಸಂಭ್ರಮ ಮನೆ ಮಾಡಿದೆ. ಪರಿವಾರ ದೈವಗಳ ನೇಮೋತ್ಸವ ವೈಭವದಿಂದ ನಡೆಯುತ್ತಿದೆ. ದೈವಗಳ ನೇಮೋತ್ಸವಕ್ಕೆ ನಗರದ ಮೂಲೆ ಮೂಲೆಯಿಂದ ಭಕ್ತರು ಹರಿದುಬರುತ್ತಿದ್ದಾರೆ. ಆದ್ರೆ, ದೈವಾರಾಧನೆಯಲ್ಲಿ ಪ್ರಮುಖ ಪಾತ್ರವಹಿಸೋ ಮಲ್ಲಿಗೆ ಬೆಲೆ ಏರಿಕೆ ದೈವಾರಾಧಕರ ಜೇಬಿಗೆ ಕತ್ತರಿ ಹಾಕಿದೆ.
ಶಂಕರಪುರ ಮಲ್ಲಿಗೆ ರಾಷ್ಟ್ರೀಯ ಮಾನ್ಯತೆ ಪಡೆದ ಹೂವು. ದೇವರಿಗೆ ಈ ಹೂವು ಅತೀ ಶ್ರೇಷ್ಠ. ಬಾಳೆಗಿಡದ ದಾರದಿಂದ ಅಟ್ಟಿಗಳನ್ನ ಮಾಡಿರುವ ಕಾರಣ ಈ ಹೂವಿಗೆ ಪ್ರಮುಖ ಪ್ರಾಶಸ್ತ್ಯ. ಜೊತೆಗೆ ಕರಾವಳಿಯಲ್ಲಿ ಈಗ ದೈವ ಮತ್ತು ದೇವರ ಜಾತ್ರೋತ್ಸವದ ಸೀಸನ್. ದೇವರ ಶಯನ ಪೂಜೆಗೆ ಮಲ್ಲಿಗೆ ಹೂವು ಬೇಕೇ ಬೇಕು. ಹೀಗಾಗಿ ಶಂಕರಪುರ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ. ಉಡುಪಿ ಜಿಲ್ಲೆ ಮಾತ್ರವಲ್ಲದೆ ಮುಂಬೈ ಸೇರಿದಂತೆ ಹೊರ ರಾಜ್ಯಗಳಿಗೆ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಶಂಕರಪುರದಲ್ಲಿ ಬೆಳೆಯುವ ಮಲ್ಲಿಗೆ ರಫ್ತಾಗುತ್ತೆ.
ಆದ್ರೆ, ಚಳಿ ಹಾಗೂ ಬಿಸಿಲನ ವಾತಾವರಣದಿಂದ ಮಲ್ಲಿಗೆ ಮೊಗ್ಗುಗಳು ಹಾಳಾಗುತ್ತಿವೆ. ಹೀಗಾಗಿ ಮಲ್ಲಿಗೆ ಕೊರತೆ ಹಿನ್ನಲೆ ಬೆಲೆ ಗಗನಕ್ಕೇರಿದೆ. ಅಟ್ಟಿಗೆ 950 ರಿಂದ 1000 ರೂಪಾಯಿವರೆಗೆ ಬೆಲೆ ಏರಿಕೆಯಾಗುತ್ತಿದೆ. ಕೃಷಿಕರು ಒಂದೆಡೆ ಸಂಕಷ್ಟದಲ್ಲಿದ್ದರೆ ಮಧ್ಯಮದವರ್ಗದ ಜನರು ಕೊಳ್ಳಲು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ. ಮಲ್ಲಿಗೆ ಬೆಳೆದವರಿಗೂ ಮಾರುವವರಿಗೂ ಸಂಕಷ್ಟದ ಕಾಲ ಎದುರಾಗಿದೆ.
ಮಲ್ಲಿಗೆಗೆ ಪರ್ಯಾಯವಾದ ಹೂವು ಇನ್ನೊಂದಿಲ್ಲ. ಈ ಕಾರಣದಿಂದ ಶಂಕರಪುರ ಮಲ್ಲಿಗೆ ದರ ಚಿನ್ನದರಕ್ಕೆ ಪೈಪೋಟಿ ನೀಡುತ್ತಿದೆ. ಬೆಳೆಗಾರನ ಹಿತದೃಷ್ಠಿಯಿಂದ ಸರ್ಕಾರ ಸೂಕ್ತ ಯೋಜನೆ, ಸರಿಯಾದ ಪರಿಹಾರ ಇಂತಹ ಸಮಯದಲ್ಲಿ ರೂಪಿಸುವುದು ಅನಿವಾರ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ