/newsfirstlive-kannada/media/post_attachments/wp-content/uploads/2025/01/SHUBMAN-GILL.jpg)
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್​ ಸೇರಿ ಒಟ್ಟು ನಾಲ್ವರು ಗುಜರಾತ್ ಟೈಟನ್ಸ್ ಆಟಗಾರರಿಗೆ ಸದ್ಯದಲ್ಲಿಯೇ ಗುಜರಾತ್​ ಸಿಐಡಿಯಿಂದ ಸಮನ್ಸ್ ಬರುವ ಸಾಧ್ಯತೆಯಿದೆ. ನಾಲ್ವರು ಆಟಗಾರರು 450 ಕೋಟಿ ರೂಪಾಯಿಯ ಪೊಂಜಿ ಸ್ಕ್ಯಾಮ್​​ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಗಿಲ್​ ಸೇರಿ ಗುಜರಾತ್ ಟೈಟನ್ಸ್​ನ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಹಾಗೂ ಮೋಹಿತ್ ಶರ್ಮಾ ವಿಚಾರಣೆ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪೂಂಜಿ ಹಗರಣದ ಪ್ರಮುಖ ಮಾಸ್ಟರ್ ಮೈಂಡ್ ಭೂಪೇಂದ್ರ ಸಿನ್ಹಾ ಜಲಾನನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಜಲಾ ಈ ಕ್ರಿಕೆಟಿಗರು ಭಾಗಿಯಾಗಿರುವ ಈ ಹೂಡಿಕೆಯಲ್ಲಿ ಹೂಡಿಕೆದಾರ ಹಣ ವಾಪಸ್ ಮಾಡುವಲ್ಲಿ ವಿಫಲವಾದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ
ಪೂಂಜಿ ಸ್ಕ್ಯಾಮ್​ನ ಪ್ರಮುಖ ರೂವಾರಿಯೇ ಜಲಾ ಎಂದು ಹೇಳಲಾಗುತ್ತಿದೆ. ಚಿಟ್​ಫಂಡ್ ಹೂಡಿಕೆಯ ಆಸೆ ತೋರಿಸಿ ಒಂದಲ್ಲ, ಎರಡಲ್ಲ, ಬರೋಬ್ಬರಿ 450 ಕೋಟಿ ರೂಪಾಯಿ ಹಣವನ್ನು ಲಪಟಾಯಿಸಿದ್ದಾನೆ. ಈತ ಗುಜರಾತ್​ನ ಹಲವು ಜಿಲ್ಲೆಗಳಲ್ಲಿ ತನ್ನ ಕಚೇರಿಯನ್ನು ತೆರೆದಿದ್ದ, ತಲೋಡ್​, ಹಿಮ್ಮತ್​ನಗರ ಹಾಗೂ ವಡೋದರಾದಲ್ಲಿ ಕಚೇರಿಗಳಿದ್ದವು. ಹಣ ಹೂಡಿಕೆದಾರರನ್ನು ಸೆಳೆಯಲು ಅಂತ ಹಲವು ಏಜೆಂಟ್​ಗಳನ್ನು ನೇಮಕ ಮಾಡಿಕೊಂಡಿದ್ದ.
ವರದಿಗಳು ಹೇಳುವ ಪ್ರಕಾರ ಗುಜರಾತ್ ಟೈಟನ್ಸ್ ತಂಡದ ನಾಯಕ ಈ ಒಂದು ಚಿಟ್​ಫಂಡ್​ನಲ್ಲಿ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರಂತೆ. ಇವರ ಜೊತೆ ಮೋಹಿತ್ ಶರ್ಮಾ, ತೆವಾಟಿಯಾ ಹಾಗೂ ಸುದರರ್ಶನ್ ಕೂಡ ಅಲ್ಪ ಮೊತ್ತದ ಹೂಡಿಕೆಯನ್ನು ಮಾಡಿದ್ದಾರೆ. ಸದ್ಯ ಗಿಲ್​ ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಭಾರತ ತಂಡದ ಭಾಗಿಯಾಗಿದ್ದು, ಸದ್ಯ ಟೆಸ್ಟ್ ಮುಗಿದ ಮೇಲೆ ಗಿಲ್​ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಹೋಗುವ ಸಾಧ್ಯತೆ ಇದೆ.
ಸಿಐಡಿ ಕ್ರೈಂನ ಡಿಐಜಿ ಪರೀಕ್ಷಿತ್ ರಾಥೋಡ್ ಹೇಳುವ ಪ್ರಕಾರ ಜಲಾ ಬಿಝಡ್​ ಫೈನಾನ್ಸಿಯಲ್ ಸರ್ವಿಸ್ ಎನ್ನುವ ಕಂಪನಿಯನ್ನು ತೆರೆದು ಹೂಡಿಕೆದಾರರಿಗೆ ಭಾರಿ ಪ್ರಮಾಣದ ಲಾಭ ಮಾಡಿಕೊಡುವದಾಗಿ ಹೇಳಿ ಅವರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಹೀಗೆ ನಂಬಿಸಿ ಸಾಕಷ್ಟು ಹಣವನ್ನು ಪೀಕಿದ ಮೇಲೆ ಕಳೆದ ಒಂದು ತಿಂಗಳಿನಿಂದ ಈತ ನಾಪತ್ತೆಯಾಗಿದ್ದ. ಡಿಸೆಂಬರ್ 27 ರಂದು ಮೆಹಸಾನಾ ಜಿಲ್ಲೆಯಲ್ಲಿ ಭೂಪೇಂದ್ರ ಸಿನ್ಹಾ ಜಲಾನನ್ನು ಪೊಲೀಸರು ಬಂಧಿಸಿದ್ದು, ಸದ್ಯ ಜನವರಿ 4 ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us