/newsfirstlive-kannada/media/post_attachments/wp-content/uploads/2024/12/SM-KRISHNA-9.jpg)
ಎಸ್.ಎಂ.ಕೃಷ್ಣ ಅವರ ಸೇವೆ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೂ ಅಪಾರ. ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ ಕೇಂದ್ರ ಸಚಿವರಾಗಿಯೂ ದೇಶಕ್ಕೆ ತಮ್ಮದೆಯಾದ ಉಡುಗೊರೆ ನೀಡಿದ್ದಾರೆ. 72ನೇ ವಿದೇಶಾಂಗ ಸಚಿವರಾಗಿ ಎಸ್ಎಂ ಕೃಷ್ಣ ದೊಡ್ಡ, ದೊಡ್ಡ ಕೊಡುಗೆಗಳನ್ನು ಕೊಟ್ಟು ಹೋಗಿದ್ದಾರೆ.
ವಿದೇಶಾಂಗ ಸಚಿವರಾಗಿ SM ಕೃಷ್ಣ..
2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದಲ್ಲಿ ಎಸ್ಎಂ ಕೃಷ್ಣ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಧಿಕಾರದ ಅವಧಿಯಲ್ಲಿ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ, ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಸ್ನೇಹಮಯಿಯಾಗಿ ಕೊಂಡೊಯ್ಯಲು ಪ್ರಯತ್ನಿಸಿದ್ದರು. ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ಚೀನಾ, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ಇಂಗ್ಲೆಂಡ್ ದೇಶಗಳ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು. ಇದೆಲ್ಲದರ ಹೊರತಾಗಿ ಅಮೆರಿಕದ ಆಗಿನ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಜತೆ ಭಾರತದ ರಾಜತಾಂತ್ರಿಕ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದರು. ಕೃಷ್ಣ ಅವರ ಕಾಲದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಮತ್ತಷ್ಟು ವೃದ್ಧಿಯಾಗಿತ್ತು.
ವಿಶ್ವಸಂಸ್ಥೆಯಲ್ಲಿ ಭಾರತ
ವಿಶ್ವಸಂಸ್ಥೆ ವಿಚಾರಕ್ಕೆ ಬರೋದಾದರೆ.. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಬೇಕು ಎಂದು ಸಮರ್ಥವಾಗಿ ಪ್ರತಿಪಾದಿಸಿದವರಲ್ಲಿ ಕೃಷ್ಣ ಪ್ರಮುಖರು. ಎಲ್ಲಾ ದೇಶಗಳಂತೆ ಭಾರತ ಸಮರ್ಥವಾದ ದೇಶ. ನಮಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಬೇಕು. ಅದಕ್ಕೆ ಬೇಕಾದ ಅರ್ಹತೆ ನಮಗಿದೆ ಎಂದು ಪ್ರತಿಪಾದಿಸಿದ್ದರು. ಪಾಕಿಸ್ತಾನ, ಚೀನಾ ಜತೆ ಬಾಂಧವ್ಯ ವೃದ್ಧಿಗಾಗಿ ಎಸ್ಎಂಕೆ ಸಾಕಷ್ಟು ಪ್ರಯತ್ನಪಟ್ಟಿದ್ದರು.
ಇದನ್ನೂ ಓದಿ:ಎಸ್.ಎಂ ಕೃಷ್ಣಗೆ ಕೊನೆವರೆಗೂ ಕಾಡುತ್ತಲೇ ಇತ್ತು ಆ ಒಂದು ನೋವು; ಅಸಲಿಗೆ ಏನಾಗಿತ್ತು?
ಕೃಷ್ಣ ಅವರ ಕಾಲದಲ್ಲಿ ಪಾಸ್ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ ಸುಲಭ ಇರಲಿಲ್ಲ. ಅದನ್ನು ಸರಳೀಕರಿಸಿದ ಕೀರ್ತಿ ಎಸ್ಎಂ ಕೃಷ್ಣಗೆ ಸಲ್ಲುತ್ತದೆ. ಪಾಸ್ಪೋರ್ಟ್ ನೀತಿಯಲ್ಲಿ ಅಮೂಲಾಗ್ರಹ ಬದಲಾವಣೆ ತಂದು, ಆಧುನೀಕರಣಗೊಳಿಸಿದರು. ವಿಶೇಷ ಅಂದರೆ ದೇಶದ ವಿವಿಧ ಕಡೆ ಸುಮಾರು 77 ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದರು. ಪಾಸ್ಪೋರ್ಟ್ ನೀಡಿಕೆಯಲ್ಲಿ ವಿಳಂಬವಾಗದಂತೆ ಪರಿಹಾರ ಕಂಡುಕೊಳ್ಳಲು ಇ-ಗವರ್ನೆನ್ಸ್ ಕಾರ್ಯಕ್ರಮ ಜಾರಿಗೆ ತಂದರು.
ಇದು ಕೋಟ್ಯಂತರ ಭಾರತೀಯರಿಗೆ ತುಂಬಾನೇ ಅನುಕೂಲ ಆಗಿದೆ. ಕೃಷ್ಣ ವಿದೇಶಾಂಗ ಮಂತ್ರಿ ಆಗಿದ್ದಾಗಲೇ ಅಂದರೆ 2011ರಲ್ಲಿ ಲಿಬಿಯಾ ಕ್ರಾಂತಿ ಉಂಟಾಗಿತ್ತು. ಆ ಸಂದರ್ಭದಲ್ಲಿ ಸುಮಾರು 18 ಸಾವಿರ ಭಾರತೀಯರು ಅಪಾಯಕ್ಕೆ ಸಿಲುಕಿದ್ದರು. ಆಗ ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಕೃಷ್ಣ ಮಹತ್ವದ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೇ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ 4 ವರ್ಷ ಸೇವೆ ಸಲ್ಲಿಸಿದ್ದರು. ಆ ಮೂಲಕ ಎಸ್ಎಂಕೆ ಇಡೀ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ:ಕನ್ನಡಕ್ಕಾಗಿ ವಾರದ ಹಿಂದಷ್ಟೇ ಪತ್ರ ಬರೆದಿದ್ದ SM ಕೃಷ್ಣ; ಹಿರಿಯ ಮುತ್ಸದ್ದಿಯ ಕೊನೆಯ ಪತ್ರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ