/newsfirstlive-kannada/media/post_attachments/wp-content/uploads/2024/12/SM_KRISHAN_RAJYAPAL.jpg)
ಜನನಾಯಕರಾಗಿ ರಾಜ್ಯ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದ ಎಸ್.ಎಂ.ಕೃಷ್ಣ ಇನ್ನು ನೆನಪು ಮಾತ್ರ. ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಎಲ್ಲರಿಗೂ ಆದರ್ಶವಾಗಿತ್ತು.
ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅಜಾತಶತ್ರುಗಳಾಗಿ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ನೀಡಿದ ಸೇವೆ ಅನುಪಮ. ಐಟಿ, ಬಿಟಿ ಕ್ಷೇತ್ರಗಳಿಗೆ ನೀಡಿದ ಕೊಡುಗೆ, ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳಾಗಿವೆ. ದೇಶ ಮತ್ತು ರಾಜ್ಯ ಸದಾ ನೆನಪಿಸಿಕೊಳ್ಳುವ ಕೊಡುಗೆ ನೀಡಿದ್ದ ಎಸ್ಎಂ ಕೃಷ್ಣ ಎಲ್ಲಾ ರಾಜಕಾರಣಿಗಳಂತೆ ಇರಲಿಲ್ಲ. ಅವರು ತುಂಬಾ ಓದಿಕೊಂಡಿದ್ದರು, ಅಪಾರವಾದ ಜ್ಞಾನವನ್ನು ಸಂಪಾದಿಸಿದ್ದರು. ಇಂದಿಗೂ ಕೂಡ ಪುಸ್ತಕಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದರು.
ಇದನ್ನೂ ಓದಿ:ಎಸ್.ಎಂ ಕೃಷ್ಣಗೆ ಕೊನೆವರೆಗೂ ಕಾಡುತ್ತಲೇ ಇತ್ತು ಆ ಒಂದು ನೋವು; ಅಸಲಿಗೆ ಏನಾಗಿತ್ತು?
ಏನು ಓದಿದ್ದರು ಎಸ್ಎಂಕೆ..?
ಎಸ್ಎಂ ಕೃಷ್ಣ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ್ದರು. ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಹೈಸ್ಕೂಲ್ ಮುಗಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪೂರ್ಣಗೊಳಿಸಿದ್ದರು. ಬೆಂಗಳೂರಿನ ಗವರ್ನಮೆಂಟ್ ಆಫ್ ಲಾ ಕಾಲೇಜಿನಲ್ಲಿ ಕಾನೂನು ಪದವಿ (Government Law College) ಪಡೆದುಕೊಂಡಿದ್ದರು.
ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಗೆ ತೆರಳಿದ್ದರು. ಟೆಕ್ಸಾಸ್ನ ಡಲ್ಲಾಸ್ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾನಿಲಯದಿಂದ (Southern Methodist University) ಮಾಸ್ಟರ್ಸ್ ಆಫ್ ಲಾ ಪದವಿ ಪಡೆದುಕೊಂಡಿದ್ದರು. ಅಲ್ಲದೇ ಫುಲ್ಬ್ರೈಟ್ ಸ್ಕಾಲರ್ ಆಗಿಯೂ ವ್ಯಾಸಂಗ ಮಾಡಿ, ಭಾರತಕ್ಕೆ ಮರಳಿದ್ದರು. 1962 ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ:ಜನಪ್ರಿಯ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ಬಂದಿದ್ದು ಹೇಗೆ? SM ಕೃಷ್ಣ ಕುರಿತ ಸ್ವಾರಸ್ಯಕರ ಕತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ