/newsfirstlive-kannada/media/post_attachments/wp-content/uploads/2024/11/ven-ajahn-siripanyo.jpg)
ಹಣ ಯಾರಿಗೆ ಬೇಡ? ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನುವ ಮಾತೇ ಇದೆ. ಎಲ್ಲರೂ ಹಣ, ಕಾರು, ಬಂಗಲೆ ಕನಸು ಕಾಣುತ್ತಲೇ ನಿತ್ಯ ದುಡಿಯುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕೋಟಿ, ಕೋಟಿ ಸಂಪತ್ತನ್ನೇ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾನೆ.
45,339 ಕೋಟಿ ರೂ. ಸಂಪತ್ತು ಹೊಂದಿರುವ ಮಲೇಷ್ಯಾದ ಉದ್ಯಮಿ ಆನಂದ್ ಕೃಷ್ಣನ್ರ ಏಕೈಕ ಪುತ್ರ ವೆನ್ ಆಜಾನ್ ಸಿರಿಪಾನ್ಯೋ (Ven Ajahn Siripanyo) ಶ್ರೀಮಂತ ಪ್ರಪಂಚದಿಂದ ದೂರ ಹೋಗುವ ದಾರಿಯನ್ನು ಆಯ್ಕೆ ಮಾಡಿಕೊಂಡು ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಅಕ್ಕಿನೇನಿ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ; ಕಿರಿಮಗನ ಕೈ ಹಿಡಿದ ಈ ಚೆಲುವೆ ಯಾರು?
ಉದ್ಯಮಿ ಅಂದರೆ ಸಾಮಾನ್ಯ ಉದ್ಯಮಿಯಲ್ಲ. ಜಗತ್ತಿನ ಕೆಲವೇ ಕೆಲವು ಶ್ರೀಮಂತರ ಪಟ್ಟಿಯಲ್ಲಿ ಗುರುತಿಸುವ ಸಾಮರ್ಥ್ಯ ಹೊಂದಿದ್ದ ವ್ಯಕ್ತಿ. ಮಲೇಷ್ಯಾದ 3ನೇ ಶ್ರೀಮಂತ ಆನಂದ್ ಕೃಷ್ಣನ್ರ ಮಗ ವೆನ್ ಆಜಾನ್ ಸಿರಿಪಾನ್ಯೋ, ಅನಾಮತ್ತು 45 ಸಾವಿರ ಕೋಟಿ ಮೌಲ್ಯದ ಸಂಪತ್ತನ್ನೇ ತೊರೆದು ತಮ್ಮ 18ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಮಲೇಷ್ಯಾದಲ್ಲಿ ಎಕೆ ಎಂದೇ ಹೆಸರಾಗಿರುವ ಉದ್ಯಮಿ ಆನಂದ್ ಕೃಷ್ಣನ್ ಹಲವು ಕ್ಷೇತ್ರಗಳಲ್ಲಿ ತಮ್ಮ ಉದ್ಯಮ ಬೆಳೆಸಿದ್ದವರು. ದೂರ ಸಂಪರ್ಕ, ಮಾಧ್ಯಮ, ತೈಲ & ಅನಿಲ, ರಿಯಲ್ ಎಸ್ಟೇಟ್ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲೂ ತಮ್ಮ ವ್ಯಾಪಾರ ವಿಸ್ತರಿಸಿದವರು. ಟೆಲಿಕಾಂ ಕ್ಷೇತ್ರದಲ್ಲಿ ತಮ್ಮ ಹೆಗ್ಗುರುತು ಮೂಡಿಸಿದವರು.
ಆನಂದ್ ಕೃಷ್ಣನ್ ಅವರ ಕಂಪನಿ ಏರ್ಸೆಲ್, ಭಾರತದ ಪ್ರಮುಖ ದೂರಸಂಪರ್ಕ ಕಂಪನಿ. ಅಲ್ಲದೇ ಒಂದು ಕಾಲಕ್ಕೆ ಚೆನ್ನೈ ಸೂಪರ್ ಕಿಂಗ್ಸ್ನ ಪ್ರಾಯೋಜಕರೂ ಕೂಡ ಆಗಿದ್ದವರು. ಸುಮಾರು 9 ಕಂಪನಿಗಳಲ್ಲಿ ಅಪಾರ ಹೂಡಿಕೆ ಮಾಡಿರುವ ಆನಂದ್ ಕೃಷ್ಣನ್, ಬೌದ್ಧ ಧರ್ಮಕ್ಕೆ ಸೇರಿದವರು. ಹಲವು ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿರುವ ಆನಂದ್ ಕೃಷ್ಣನ್ ಬೌದ್ಧ ಧರ್ಮ, ಶಿಕ್ಷಣ, ಮಾನವೀಯ ಕಾರ್ಯಗಳಿಗೆ ಧನ ಸಹಾಯ ಮಾಡುತ್ತಾರೆ.
ಇದನ್ನೂ ಓದಿ: ತಂದೆಯಿಲ್ಲದ ಕೊರಗು.. ಹುತಾತ್ಮ ಯೋಧನ ಮಗಳ ಮದುವೆಗೆ ಬಂದ ಸೈನಿಕರು; ಇದು ಮನಮಿಡಿಯುವ ಸ್ಟೋರಿ!
ಇಂತಹ ಉದ್ಯಮಿ, ತಮ್ಮ ಏಕೈಕ ಪುತ್ರ ವೆನ್ ಅನುವಂಶಿಕವಾಗಿ ತಮ್ಮ ಉದ್ಯಮ ಬೆಳೆಸುತ್ತಾನೇ ಎಂದೇ ನಂಬಿದ್ದರು. ಆದರೆ ಆದದ್ದೇ ಬೇರೆ. ಲಂಡನ್ನಲ್ಲಿ ತನ್ನ ಇಬ್ಬರು ಸಹೋದರಿಯೊಂದಿಗೆ ಬೆಳೆದ ಅವರು ಅಸಾಧಾರಣ ಭಾಷಾ ಸಾಮರ್ಥ್ಯ ಹೊಂದಿದ್ದಾರೆ. 8 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕೋಟಿ ಡಾಲರ್ ಸಂಪತ್ತು ತೊರೆದು ಸನ್ಯಾಸತ್ವ ಸ್ವೀಕರಿಸುವ ಅವರ ನಿರ್ಧಾರ ಇಡೀ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.
ಒಮ್ಮೆ ಅವರು ಥೈಲ್ಯಾಂಡ್ಗೆ ಭೇಟಿ ನೀಡಿದಾಗ ಅವರು ಬೌದ್ಧ ಸನ್ಯಾಸತ್ವದೆಡೆಗೆ ಆಕರ್ಷಿತರಾದರು. ಅಲ್ಲಿ ಅವರು ತಾತ್ಕಾಲಿಕ ದೀಕ್ಷೆ ಪಡೆದರು. ಅಲ್ಪಾವಧಿಯ ಸನ್ಯಾಸತ್ವದ ದೀಕ್ಷೆ ಅವರನ್ನು ಸಂಪೂರ್ಣ ಆಧ್ಯಾತ್ಮಿಕ ಜೀವನದತ್ತ ನಡೆಯುವಂತೆ ಮಾಡಿತು.
ಕಳೆದ 2 ದಶಕಗಳಿಂದ ವೆನ್ ಸನ್ಯಾಸತ್ವ ಜೀವನಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಸದ್ಯ ಥಾಯ್ಲ್ಯಾಂಡ್ನ ಮ್ಯಾನ್ಮಾರ್ ಗಡಿಯಲ್ಲಿರುವ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ. ಸಿರಿಪಾನ್ಯೋ ಥೇರವಾಡ ಬೌದ್ಧ ಸಂಪ್ರದಾಯವನ್ನು ಅನುಸರಿಸುತ್ತಾರೆ. ಮಿಲಿಯನ್ ಡಾಲರ್ ವ್ಯವಹಾರ ಮುನ್ನಡೆಸುವ ಬದಲು ಕಳೆದ 20 ವರ್ಷಗಳಿಂದ ಸರಳವಾಗಿ ಸನ್ಯಾಸತ್ವ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಅನುಯಾಯಿಗಳಿಗೆ ಶಾಂತಿ, ಸಾವಧಾನತೆ, ಆಂತರಿಕ ಶಾಂತಿಯನ್ನು ಬೋಧಿಸುತ್ತಾರೆ. ಅವರ ಸನ್ಯಾಸಿ ಜೀವನದ ಹೊರತಾಗಿಯೂ ತಮ್ಮ ತಂದೆಯನ್ನು ಆಗಾಗ ಭೇಟಿಯಾಗುತ್ತಾರೆ. ಸಿರಿಪಾನ್ಯೋ ತಾಯಿ ಥಾಯ್ಲೆಂಡ್ನ ಮೊಮ್ವಜಾರೊಂಗ್ಸೆ ಸುಪ್ರಿಂದಾ ಚಕ್ರಬನ್ ಅವರು ಥಾಯ್ಲೆಂಡ್ನ ರಾಜಮನೆತನದವರಾಗಿದ್ದಾರೆ.
ಅಪಾರ ಸಂಪತ್ತು, ಬಹುಕೋಟಿ ಸಾಮ್ರಾನ್ಯವನ್ನು ಅನುವಂಶಿಕವಾಗಿ ತಮ್ಮ ಮಗ ವಿಸ್ತರಿಸುತ್ತಾನೆ ಎಂದು ಉದ್ಯಮಿ ಆನಂದ ಕೃಷ್ಣನ್ ಭಾವಿಸಿದ್ದರು. ಆದರೆ ಪುತ್ರ ಭೌತಿಕ ಸಂಪತ್ತನ್ನು ತಿರಸ್ಕರಿಸಿ, ಆಂತರಿಕ ಶಾಂತಿಯನ್ನು ಬೋಧಿಸುತ್ತ ತಪಸ್ವಿ ಜೀವನ ಆರಿಸಿಕೊಂಡು ಬೇರೆಯೇ ದಾರಿ ಹಿಡಿದಿದ್ದಾರೆ.
ವರದಿ - ವಿಶ್ವನಾಥ್ ಜಿ. (ಸೀನಿಯರ್ ಕಾಪಿ ಎಡಿಟರ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ