/newsfirstlive-kannada/media/post_attachments/wp-content/uploads/2025/01/ROHIT.jpg)
ಆರೆಂಜ್ ಸಿಟಿ ನಾಗ್ಪುರ, ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. T20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನ 4-1 ಅಂತರದಿಂದ ಮಣಿಸಿರುವ ಟೀಮ್ ಇಂಡಿಯಾ, ಏಕದಿನ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ರೋಹಿತ್ ಪಡೆ, ಎದುರಾಳಿಗಳ ವಿರುದ್ಧ ಸ್ಪಿನ್ ಅಸ್ತ್ರ ಬಳಸಲು ತುದಿಗಾಲಲ್ಲಿ ನಿಂತಿದೆ. ಮತ್ತೊಂದೆಡೆ ಟೀಮ್ ಇಂಡಿಯಾದ ಸ್ಪಿನ್ ಅಸ್ತ್ರಕ್ಕೆ, ಇಂಗ್ಲೆಂಡ್ ಉತ್ತರ ಏನು?.
T20 ಸರಣಿ ಮುಗೀತು, ಇದೀಗ ಹೈವೋಲ್ಟೇಜ್ ಏಕದಿನ ಸರಣಿಯತ್ತ, ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳ ಚಿತ್ತ ನೆಟ್ಟಿದೆ. ಕಿತ್ತಳೆ ನಗರಿ ನಾಗ್ಪುರದಲ್ಲಿ ಇಂದು, ವಿಶ್ವಕ್ರಿಕೆಟ್ನ ಎರಡು ಬಲಿಷ್ಠ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿ ಫೈಟ್ ನಡೆಸಲಿವೆ.
ಅಗ್ರೆಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡಲು ಹೊರಟಿರುವ ಇಂಗ್ಲೆಂಡ್ಗೆ, ಟೀಮ್ ಇಂಡಿಯಾ ಮತ್ತೆ ಸ್ಪಿನ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈಗಾಗಲೇ T20 ಸರಣಿಯಲ್ಲಿ ಸ್ಪಿನ್ಗೆ ಸ್ಟನ್ ಆದ ಆಂಗ್ಲರಿಗೆ, ಏಕದಿನ ಸರಣಿಯಲ್ಲೂ ಸೋಲಿನ ಭೀತಿ ಶುರುವಾಗಿದೆ.
ಆರೆಂಜ್ ಸಿಟಿಗೆ ಕಾಲಿಟ್ಟ ಆಂಗ್ಲರಿಗೆ ಟೆನ್ಶನ್ ಶುರು..!
ಮುಂಬೈನಿಂದ ಸೀದಾ ನಾಗ್ಪುರಕ್ಕೆ ಬಂದಿಳಿದ ಇಂಗ್ಲೆಂಡ್ ಆಟಗಾರರು, ಟೆನ್ಶನ್ನಲ್ಲೇ ಹೋಟೆಲ್ ರೂಮ್ಗೆ ತೆರಳಿದ್ರು. T20 ಸರಣಿಯಲ್ಲಿ ಇಂಡಿಯನ್ ಕಂಡೀಷನ್ಸ್ಗೆ ಹೊಂದಿಕೊಳ್ಳಲಾಗದೇ ತ್ರೀವ ಮುಖಭಂಗ ಅನುಭವಿಸಿದ ಆಂಗ್ಲರು, ಏಕದಿನ ಸರಣಿ ಗೆಲ್ಲುವ ಒತ್ತಡದಲ್ಲಿದ್ದಾರೆ. ಆದ್ರೆ ಇಂಡಿಯನ್ ಸ್ಪಿನ್ನರ್ಸ್ ಮುಂದೆ, ಅದು ಸುಲಭವಲ್ಲ ಅನ್ನೋದು ಜೋಸ್ ಬಟ್ಲರ್ ಪಡೆಗೆ ಚೆನ್ನಾಗೇ ಗೊತ್ತು.
ನಾಗ್ಪುರ ಪಿಚ್ ಸ್ಪಿನ್ನರ್ಸ್ಗೆ ಸ್ವರ್ಗ, ಎದುರಾಳಿಗಳಿಗೆ ಢವ ಢವ..!
ನಾಗ್ಪುರದಲ್ಲಿ ನಡೆಯಲಿರೋ ಮೊದಲ ಏಕದಿನ ಪಂದ್ಯಕ್ಕೆ, ಕ್ಯೂರೇಟರ್ ಫ್ರೆಶ್ ಪಿಚ್ ನೀಡಲಿದ್ದಾರೆ. ವಿಶೇಷ ಅಂದ್ರೆ, ಆ ಪಿಚ್ ಸ್ಪಿನ್ನರ್ಸ್ಗೆ ಹೆಚ್ಚು ನೆರವಾಗಲಿದೆ. ಈ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳು ಸ್ಪಿನ್ ವಿರುದ್ಧ ಪರದಾಡಲಿದ್ದಾರೆ. ರನ್ಗಳಿಸೋದು ಅಷ್ಟು ಸುಲಭವಲ್ಲ. ಹಾಗಾಗಿ ಇಂಗ್ಲೆಂಡ್ ಆಟಗಾರರಿಗೆ, ಪಂದ್ಯಕ್ಕೂ ಮೊದಲೇ ಢವ ಢವ ಶುರುವಾಗಿದೆ.
ಏಕದಿನ ಸರಣಿಯಲ್ಲೂ ಬಟ್ಲರ್ ಪಡೆಗೆ ಸ್ಪಿನ್ ಭೀತಿ..!
5 ಪಂದ್ಯಗಳ T20 ಸರಣಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್, ಮ್ಯಾಚ್ ವಿನ್ನರ್ಸ್ ಆದ್ರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ರವಿ ಬಿಷ್ನೋಯ್ ಸೇರಿ, ಇಂಗ್ಲೆಂಡ್ ಬ್ಯಾಟಿಂಗ್ ಲೈನ್ಅಪ್ನ ಧೂಳಿಪಟ ಮಾಡಿದ್ರು. ಇದೀಗ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ, ತಂಡಕ್ಕೆ ಮರಳಿದ್ದಾರೆ. ಹಾಗಾಗಿ ಏಕದಿನ ಸರಣಿಯಲ್ಲೂ ಇಂಗ್ಲೆಂಡ್ ಬ್ಯಾಟರ್ಸ್ಗೆ ರನ್ಗಳಿಸೋದು ಮತ್ತಷ್ಟು ಕಠಿಣವಾಗಲಿದೆ. ಕಾರಣ, ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐವರು ಸ್ಪಿನ್ನರ್ಸ್ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಆಸೆ ತೋರಿಸಿ ಮಕ್ಮಲ್ ಟೋಪಿ.. ಲಕ್ಷ ಲಕ್ಷ ಕಳೆದುಕೊಂಡ ಜಮೀನು ಮಾಲೀಕ ಏನ್ ಮಾಡಿದ?
ಚಕ್ರವರ್ತಿ ಆಗಮನದಿಂದ ತಲೆಕೆಡಿಸಿಕೊಂಡ ಇಂಗ್ಲೆಂಡ್..!
ತಮಿಳುನಾಡಿನ ಇನ್ಫಾರ್ಮ್ ಲೆಗ್ಸ್ಪಿನ್ನರ್ ವರುಣ್ ಚಕ್ರವರ್ತಿ, T20 ತಂಡದಲ್ಲಿ ಮಾತ್ರ ಸ್ಥಾನ ಪಡೆದುಕೊಂಡಿದ್ದರು. ಆದ್ರೆ T20 ಸರಣಿಯಲ್ಲಿ ವರುಣ್ ನೀಡಿದ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ಗೆ, ಬಿಸಿಸಿಐ ಏಕದಿನ ತಂಡಕ್ಕೆ ಪ್ರಮೋಟ್ ಮಾಡಿದೆ. 5 ಪಂದ್ಯಗಳ T20 ಸರಣಿಯಲ್ಲಿ 14 ವಿಕೆಟ್ ಪಡೆದಿದ್ದ ವರುಣ್ ಎಂಟ್ರಿ, ಇದೀಗ ಆಂಗ್ಲರ ನಿದ್ದೆ ಕೆಡಿಸಿದೆ.
T20 ಸರಣಿಯಲ್ಲಿ ಇಂಗ್ಲೆಂಡ್ಗೆ ಸ್ಪಿನ್ನರ್ಸ್ ವಿಲನ್..!
ಕೊಲ್ಕತ್ತಾ, ಚೆನ್ನೈ, ರಾಜ್ಕೊಟ್, ಪುಣೆ ಮತ್ತು ಮುಂಬೈನಲ್ಲಿ, ಇಂಗ್ಲೆಂಡ್ಗೆ ಟೀಮ್ ಇಂಡಿಯಾ ಸ್ಪಿನ್ನರ್ಗಳೇ ವಿಲನ್ಗಳಾಗಿ ಕಾಡಿದರು. ವರುಣ್ ಚಕ್ರವರ್ತಿ, ಬಿಷ್ನೊಯ್, ಅಕ್ಷರ್, ವಾಷಿಂಗ್ಟನ್ ಸುಂದರ್ ಮತ್ತು ಅಭಿಷೇಕ್ ಶರ್ಮಾ ಸೇರಿ ಒಟ್ಟು 28 ವಿಕೆಟ್ ಪಡೆದಿದ್ದರು. T20 ಸರಣಿ ಗೆಲುವಿನಲ್ಲಿ, ಸ್ಪಿನ್ನರ್ಸ್ ಪ್ರಮುಖ ಪಾತ್ರವಹಿಸಿದ್ದರು. ಟೀಮ್ ಇಂಡಿಯಾ ಮತ್ತೆ ಸ್ಪಿನ್ ಟು ವಿನ್ ಫಾರ್ಮುಲಾಗೆ ಮುಂದಾಗಿರೋದು, ಒಳ್ಳೆ ಐಡಿಯಾನೇ, ಆದ್ರೆ ಐದು ಮಂದಿ ಸ್ಪಿನ್ನರ್ಗಳ ಪೈಕಿ, ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಅನ್ನೋದೇ, ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ