/newsfirstlive-kannada/media/media_files/2026/01/27/bharat-natya-programme-2026-01-27-15-53-38.jpg)
ಬೆಂಗಳೂರಿನ ಉತ್ತರಹಳ್ಳಿಯ ಪೂರ್ಣಪ್ರಜ್ಞಾ ನಗರದಲ್ಲಿ ಭರತನಾಟ್ಯ ಕಾರ್ಯಕ್ರಮ ಆಭಾ ಆರೋಹಣ ಹೆಸರಿನಲ್ಲಿ ನಡೆಯಿತು. ಭರತನಾಟ್ಯ ಸಮಾರಂಭದ ಪೂರ್ವಭಾವಿಯಾಗಿ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಅಧ್ಯಕ್ಷರಾದ ಶ್ರೀ ಹಯಗ್ರೀವ ಆಚಾರ್, ಉಪಾಧ್ಯಕ್ಷ ಶ್ರೀ ಎಸ್ ಕೆ ಸುಧೀಂದ್ರ, ಕಾರ್ಯದರ್ಶಿ ಶ್ರೀ ಸುದರ್ಶನ ನಾಯಕ್ ಹಾಗೂ ನೃತ್ಯ ಪಟು ಶ್ರೀ ಪಾರ್ಶ್ವನಾಥ ಉಪಾಧ್ಯೆ ಮತ್ತು ನಮ್ಮ ಬಡಾವಣೆಯ ನಿವಾಸಿಗಳಾದ, ಬಿಸಿಸಿಐ ಮಾನ್ಯತೆ ಪಡೆದ ಅಂಪೈರ್ ಶ್ರೀ ಕೃಷ್ಣರಾಜ್ ಶ್ರೀನಾಥ್ ಅವರು ಉಪಸ್ಥಿತರಿದ್ದರು. ಶ್ರೀಮತಿ ಉಮಾ ಅಶ್ವಿನಿ ಕುಮಾರ್ ಮತ್ತು ಶ್ರೀಮತಿ ರಾಧಿಕಾ ಮಧು ಅವರ ಇಂಪಾದ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ದೀಪ ಬೆಳಗಿಸಿ ಆಭಾ - ಆರೋಹಣ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಅಶ್ವಿನಿ ಕುಮಾರ್ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಮಾತನಾಡಿದ ಶ್ರೀ ಕೃಷ್ಣರಾಜ್ ಶ್ರೀನಾಥ್, ಪೂರ್ಣಪ್ರಜ್ಞ ನಗರವು ಕ್ರೀಡೆಗೆ ಬಹಳ ವರ್ಷಗಳಿಂದಲೂ ಶ್ರೀ ಹಯಗ್ರೀವ ಆಚಾರ್ ಅವರ ಪ್ರೇರಣೆಯಿಂದ ಸ್ಫೂರ್ತಿ ನೀಡುತಿತ್ತು. ಇವತ್ತು ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳನ್ನು ನೋಡುತ್ತಾ ನಾವೂ ಅವರಂತೆ ಹಣ ಹೆಸರು ಮಾಡಬೇಕೆಂದು ನವಜನಾಂಗ ಬಯಸುತ್ತಿದೆಯೇ ಹೊರತು, ಆ ಯಶಸ್ಸಿನ ಹಿಂದಿನ ಪರಿಶ್ರಮದ ಬಗ್ಗೆ ಯೋಚಿಸುವ ಗೊಡವೆಗೆ ಹೋಗುತ್ತಿಲ್ಲ. ಇಚ್ಛಾಶಕ್ತಿ, ಸತತವಾದ ಅಭ್ಯಾಸ, ಗುರಿ ಮುಟ್ಟುವ ಛಲ ಮಾತ್ರ ನಮಗೆ ವಿಜಯಮಾಲೆ ಹಾಕುವುದು ಎನ್ನುವ ಮೂಲಕ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಶ್ರೀ ಶಶಾಂಕ್ ಆಚಾರ್ ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ ಸಭೆಯಲ್ಲಿರುವುದನ್ನು ಗುರುತಿಸಿದರು. ಅಧ್ಯಕ್ಷರಾದ ಶ್ರೀ ಹಯಗ್ರೀವ ಆಚಾರ್ ಮಾತನಾಡಿ ಸಂಘದ ಸಾಧನೆ ಚಟುವಟಿಕೆಗಳ ವಿವರಣೆ ನೀಡಿದರು. 9ನೇ ಕ್ಲಾಸಿನಲ್ಲಿ ಓದುತ್ತಿರುವ ಚಿನ್ಮಯ ಕೌಶಿಕ್ ಚೆಸ್ ನಲ್ಲಿ ಮಾಡಿದ ಅದ್ಭುತ ಸಾಧನೆಗೆ ವೇದಿಕೆಗೆ ಕರೆದು ಅವರ ತಂದೆ ತಾಯಿಯರಾದ ಶ್ರೀ ಭರತ್ ಕೌಶಿಕ್, ಶ್ರೀಮತಿ ಭಾರ್ಗವಿ ಕೌಶಿಕ್ ಅವರ ಸಮ್ಮುಖದಲ್ಲಿ ಯುವ ಪ್ರೇರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ವಿವಿಧ ಪ್ರಾಯೋಜಕರನ್ನು ವೇದಿಕೆಯ ಮೇಲೆ ಕರೆದು ಸನ್ಮಾನಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us