ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆ: ಕೆ-ರೈಡ್ ನಿಂದ ಸಾಮಾಜಿಕ ಭದ್ರತಾ ಸರ್ಟಿಫಿಕೇಟ್ ವಿತರಣೆ

ಕೆ-ರೈಡ್ ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಬ್ ಆರ್ಬನ್ ರೈಲು ಯೋಜನೆಯಿಂದ ತೊಂದರೆಗೊಳಗಾದ ಜನರಿಗೆ ಕೆ- ರೈಡ್ ನಿಂದ ಸಾಮಾಜಿಕ ಭದ್ರತಾ ಪ್ರಮಾಣಪತ್ರಗಳನ್ನು ಎಂ.ಡಿ. ಲಕ್ಷ್ಮಣ್ ಸಿಂಗ್ ವಿತರಿಸಿದ್ದಾರೆ. ಸಾಮಾಜಿಕ ಭದ್ರತಾ ಸರ್ಟಿಫಿಕೇಟ್ ಲಾಭಗಳನ್ನು ವಿವರಿಸಿದ್ದಾರೆ.

author-image
Chandramohan
K RIDE SOCIAL SECURITY CERTIFICATE DISTRIBUTION
Advertisment


ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯಿಂದ ತೊಂದರೆಗೊಳಗಾದ ವ್ಯಕ್ತಿಗಳು, ಸ್ಲಂ ನಿವಾಸಿಗಳು, ಆಕ್ರಮ ನಿವಾಸಿಗಳು, ಕಾರ್ಮಿಕರಿಗೆ ಕೆ-ರೈಡ್ ಸಾಮಾಜಿಕ ಪ್ರಮಾಣಪತ್ರಗಳನ್ನು ವಿತರಿಸಿದೆ. ಕೆ.ರೈಡ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಸಾಮಾಜಿಕ ಪ್ರಮಾಣಪತ್ರಗಳನ್ನು ವಿತರಿಸಿ, ಈ ಸರ್ಟಿಫಿಕೇಟ್ ನಿಂದ ಆಗುವ ಸಾಮಾಜಿಕ ಭದ್ರತಾ ಲಾಭವನ್ನು ವಿವರಿಸಿದ್ದಾರೆ. 
ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ಸಾಮಾಜಿಕ ಭದ್ರತಾ ಕ್ರಮಗಳ ಏಕೀಕರಣದ ಮಹತ್ವವನ್ನು ಒತ್ತಿ ಹೇಳಿದ್ದರು. ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಯು ನಗರ ಸಾರಿಗೆಯನ್ನು ಸುಧಾರಿಸಿ, ಸಂಚಾರ ದಟ್ಟಣೆಯನ್ನು ತಗ್ಗಿಸಲಿದೆ. ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತೆ. ಜೊತೆಗೆ ಸಬ್ ಆರ್ಬನ್ ರೈಲು ಯೋಜನೆಯಿಂದ ತೊಂದರೆಗೊಳಗಾದ ಸಮುದಾಯಗಳಿಗೆ ನ್ಯಾಯಸಮ್ಮತ ಪರಿಹಾರ, ಸಾಮಾಜಿಕ ಭದ್ರತಾ ವ್ಯಾಪ್ತಿ ಮತ್ತು ಜೀವನೋಪಾಯ  ಪುನರ್ ಸ್ಥಾಪನೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಎಂ.ಡಿ. ಲಕ್ಷ್ಮಣ್ ಸಿಂಗ್ ಅವರು ಹೇಳಿದರು.  ಸಬ್ ಆರ್ಬನ್ ರೈಲು ಯೋಜನೆಯಿಂದ ತೊಂದರೆಗೊಳಗಾದ ಜನರು ನೀಡಿದ ಸಹಕಾರಕ್ಕೆ ಲಕ್ಷ್ಮಣ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾರ್ವಜನಿಕ ಹಿತದೃಷ್ಟಿಯಿಂದ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. 

K RIDE SOCIAL SECURITY CERTIFICATE DISTRIBUTION (1)



ಯೋಜನೆಯ ತಯಾರಿ ಹಂತದಲ್ಲಿ ಪುನರ್ ವಸತಿ ಕಾರ್ಯ ಯೋಜನೆ ಅಡಿಯಲ್ಲಿ ನಡೆಸಲಾದ ಸಮಗ್ರ ಜನಗಣತಿ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆಯ ಮೂಲಕ ಲಿಂಗರಾಜಪುರ ಮತ್ತು ಬಾಣಸವಾಡಿ ಪ್ರದೇಶಗಳ ಕಾರಿಡಾರ್-2 ಮಾರ್ಗಸೂಚಿಯ 1.2 ಕಿ.ಮೀ. ವ್ಯಾಪ್ತಿಯಲ್ಲಿ 263 ಯೋಜನೆಯಿಂದ ತೊಂದರೆಗೊಳಗಾದ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 100 ಅಧಿಸೂಚಿತ ನಿವಾಸಿಗಳು, 163 ಆಕ್ರಮ ನಿವಾಸಿಗಳು ಸೇರಿದ್ದಾರೆ. ಕರ್ನಾಟಕ ಸ್ಲಂ ಅಭಿವೃದ್ದಿ ಮಂಡಳಿಯ ಸಹಕಾರದೊಂದಿಗೆ ಅರ್ಹ ತೊಂದರೆಗೊಳಗಾದ ನಿವಾಸಿಗಳಿಗೆ ಹಕ್ಕುಗಳ ಕುರಿತು,  ಮಾಹಿತಿ ನೀಡಲಾಯಿತು. ಸಮಾಲೋಚನೆ ನಡೆಸಿದ ನಂತರ ಆರ್ಥಿಕ ಸಹಾಯವನ್ನು ನೀಡಲಾಯಿತು. ಕೆ-ರೈಡ್ ನಿಂದ ಅಗತ್ಯ ಬೆಂಬಲವನ್ನು ಪಡೆದ ಬಳಿಕ  ಸ್ವಯಂ ಪ್ರೇರಿತವಾಗಿ ಸ್ಥಳಾಂತರಗೊಂಡರು. 
ಕಾರ್ಯಕ್ರಮದಲ್ಲಿ ರುಡ್ ಶೆಟ್‌ನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ, ವಿವಿಧ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮ ಅವಕಾಶಗಳ ಕುರಿತು ಹಾಗೂ ಅವುಗಳಲ್ಲಿ ಹೇಗೆ ನೋಂದಾಣಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು. 
ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯ ಸಂಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು. ಕೇಂದ್ರ, ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳು, ವಿಮಾ ಯೋಜನೆಗಳ ಕುರಿತು ವಿವರವಾಗಿ ತಿಳಿಸಿದ್ದರು. 
ಪ್ರಧಾನಮಂತ್ರಿ ಜನಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆಯಡಿ ಜನರನ್ನು ಫಲಾನುಭವಿಗಳಾಗಿ ಮಾಡಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೆ 6 ವಿಮಾ ರಕ್ಷಣೆ ಸಿಗಲಿದೆ. 
ಈ ಮೂಲಕ ಸಬ್ ಆರ್ಬನ್ ರೈಲು ಯೋಜನೆಯಿಂದ ತೊಂದರೆಗೊಳಗಾದವರಿಗೆ ಪುನರ್ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ. ಸುಸ್ಥಿರ ಮೂಲಸೌಕರ್ಯ ಅಭಿವೃದ್ದಿಗೆ ಕೆ-ರೈಡ್ ಬದ್ದವಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

K RIDE SOCIAL SECURITY CERTIFICATE
Advertisment