/newsfirstlive-kannada/media/media_files/2025/11/22/siddapura-robberry-case-money-recovery-2025-11-22-17-41-21.jpg)
ಪೊಲೀಸರಿಂದ 6.40 ಕೋಟಿ ರೂ ಹಣ ವಶಕ್ಕೆ
ದಿ ಗ್ರೇಟ್ ಸಿದ್ದಾಪುರ ರಾಬರಿ.. ಮಾಡಿದ ಪ್ಲಾನ್.. ಹಾಕಿದ್ದ ಸ್ಕೆಚ್.. ಎಸ್ಕೇಪ್ ಆದ ರೀತಿ ಎಲ್ಲವೂ ಸಕ್ಸಸ್. ಆದ್ರೆ, ದುಡ್ಡು ಕೈ ಸೇರಿದ್ಮೇಲೆ ಏನ್ಮಾಡ್ಬೇಕು? ಇದೇ ಮ್ಯಾಟರ್ ಬೆಂಗಳೂರಲ್ಲಿ ರಾಬರಿ ಗ್ಯಾಂಗ್ಗೆ ಗೊತ್ತಿರ್ಲಿಲ್ವೇನೋ? ಸಿಎಂಎಸ್ ವಾಹನ ಅಡ್ಡಗಟ್ಟಿ ದೋಚಿದ್ದ ಮಿಕಗಳು ಒಂದೊಂದಾಗೇ ಬಲೆಗೆ ಬೀಳ್ತಿವೆ. ದರೋಡೆ ಮಾಡಿಕೊಂಡು ಹೋಗಿದ್ದ ಕೋಟಿ ಕೋಟಿ ಹಣವನ್ನ ಪೊಲೀಸರು ರಿಕವರಿ ಮಾಡಿದ್ದಾರೆ.
ಕಂತೆ ಕಂತೆ ಕಾಸು.. ಕೋಟಿ ಕೋಟಿ ದುಡ್ಡು.. ನೋಡಿ ಇದೇ ಹಣಕ್ಕಾಗಿ ದಿ ಗ್ರೇಟ್ ಸಿದ್ದಾಪುರ ರಾಬರಿ ನಡೆದಿದ್ದು. ಆದ್ರೆ, ದರೋಡೆಕೋರರು ರಂಗೋಲಿ ಕೆಳಗೆ ತೂರಿದ್ರೆ ಈ ದುಡ್ಡಲ್ಲಿ ಕಾಣ್ತಿರೋ ಬಿಸಿಪಿ ಅಂದ್ರೆ ಬೆಂಗಳೂರು ಸಿಟಿ ಪೊಲೀಸರು ನೆಲವನ್ನೇ ಬಗೆದು ಅದರೊಳಗೆ ಅಡಗಿ ಕೂತಿದ್ದ ಖದೀಮರನ್ನ ಬಲೆಗೆ ಬೀಳಿಸಿದ್ದಾರೆ. ಬಿಲದೊಳಗೆ ಬಚ್ಚಿಟ್ಟಿದ್ದ ಕೋಟಿ ಕೋಟಿ ಹಣವನ್ನೂ ಜಪ್ತಿ ಮಾಡಿದ್ದಾರೆ.
ಡೈರಿ ಸರ್ಕಲ್ ಬಳಿ ದರೋಡೆ.. ಮೂವರು ಖದೀಮರ ಸೆರೆ!
₹6.40 ಕೋಟಿ ಹಣ ರಿಕವರಿ.. ಪೊಲೀಸರಿಗೆ ಶಹಬ್ಬಾಸ್ ಗಿರಿ!
ದುಡಿದ ಹಣವೇ ಉಳಿಯಲ್ಲ.. ಇನ್ನು ಕಂಡೋರ ಹಣ ಕದ್ರೆ ಉಳಿಯೋದುಂಟಾ.. ಹಾಗೇನೆ ಬೆಂಗಳೂರಿನ ಸಿದ್ದಾಪುರ ವ್ಯಾಪ್ತಿಯಲ್ಲಿ ನಡೆದಿದ್ದ 7.11 ಕೋಟಿ ರೂಪಾಯಿ ಹಣ ರಾಬರಿ ಕೇಸ್ನ ಹಾದಿಗಳ್ಳರು ತಗ್ಲಾಕಿಕೊಂಡಿದ್ದಾರೆ. ಇಬ್ಬರು ಮಾಸ್ಟರ್ ಮೈಂಡ್ಸ್.. ಹಣ ಕದ್ದು ಪರಾರಿಯಾಗಿದ್ದ ಖದೀಮ ಬೆಂಗಳೂರು ಸಿಟಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಖದೀಮರು ಕೈಗೆ ಸಿಕ್ಮೇಲೆ ಅವರ ಬಳಿ ಇದ್ದ ಕಂಡೋರ ಹಣ ಸಿಗದೇ ಇರುತ್ತಾ? ಸಿಎಂಎಸ್ ವಾಹನದಿಂದ ಲಪಟಾಯಿಸಿದ್ದ 7.11 ಕೋಟಿಯಲ್ಲಿ 5 ಕೋಟಿ 76 ಲಕ್ಷ ರೂಪಾಯಿ ಹಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಸಂಜೆ ಮತ್ತೆ ಮೂವರು ಅನ್ನು ಬಂಧಿಸಿ, 70 ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ 6 ಕೋಟಿ 40 ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡಂತಾಗಿದೆ.
ಮಹಾ ದರೋಡೆ ಪ್ರಕರಣ ಮಾಸ್ಟರ್ ಮೈಂಡ್, ಕಾನ್ಸ್ಟೇಬಲ್ ಅಣ್ಣಪ್ಪ ನಾಯಕನನ್ನ ಪೊಲೀಸರು ಮೊದಲು ಖೆಡ್ಡಾಕ್ಕೆ ಕೆಡವಿದ್ರು. ಬಳಿಕ ಅವನಿಂದ ಝೇವಿಯರ್ ಎಂಬ ಸಿಎಂಎಸ್ ಮಾಜಿ ಉದ್ಯೋಗಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದ. ಆಂಧ್ರಪ್ರದೇಶದ ಕುಪ್ಪಂನಲ್ಲಿ ದರೋಡೆ ಬಳಸಿದ್ದ ಇನ್ನೋವಾ ಕಾರನ್ನ ಬಿಟ್ಟು ವ್ಯಾಗನಾರ್ ಕಾರಲ್ಲಿ ಚೆನ್ನೈಗೆ ಎಸ್ಕೇಪ್ ಆಗುವಾಗ ಝೇವಿಯರ್ನ ಪೊಲೀಸರು ಬಂಧಿಸಿದ್ರು. ಈಗ ದರೋಡೆಗೆ ಸಾಥ್ ಕೊಟ್ಟಿದ್ದ ಸಿಎಂಎಸ್ ಉದ್ಯೋಗಿ ಗೋಪಿ ಎಂಬುವನನ್ನ ಪೊಲೀಸರು ಬಂಧಿಸಿದ್ದಾರೆ. ಖದೀಮ ಝೇವಿಯರ್ನಿಂದ ಸೂಟ್​ಕೇಸ್​, 2 ಚೀಲ, ಬ್ಯಾಗ್​ನಲ್ಲಿ ಕೊಂಡೋಯ್ದಿದ್ದ 5.76 ಕೋಟಿ ರೂಪಾಯಿಯನ್ನ ಸೀಜ್ ಮಾಡಿ ತಂದ ಪೊಲೀಸರು ಕಮಿಷನರ್ ಕಚೇರಿಯಲ್ಲಿ ಬಿಸಿಪಿ ಮಾದರಿಯಲ್ಲಿ ಜೋಡಿಸಿಟ್ಟು ತಮ್ಮ ಶ್ರಮವನ್ನ ಪ್ರದರ್ಶಿಸಿದ್ದಾರೆ.
200ಕ್ಕೂ ಅಧಿಕ ಸಿಬ್ಬಂದಿ ಶ್ರಮ.. ಸೆರೆ ಸಿಕ್ಕಿದ್ದೇ ರೋಚಕ!
ಪ್ರಕರಣದ ಮಾಹಿತಿ ನೀಡಿದ ಬೆಂಗಳೂರು ಕಮಿಷನರ್!
ನವೆಂಬರ್ 19 ರಂದು ನಡೆದಿದ್ದ ಮಹಾದರೋಡೆಯನ್ನ ಭೇದಿಸಿದ್ದೇ ರಣರೋಚಕ.. 3 ತಿಂಗಳಿನಿಂದ ಸಂಚು ಮಾಡಿ ಖದೀಮರ ಗ್ಯಾಂಗ್ ಕಟ್ಟಿದ್ದ ಅಣ್ಣಪ್ಪನ ಆಟವನ್ನ ಪೊಲೀಸರು 54 ಗಂಟೆಯಲ್ಲೇ ಠುಸ್ ಮಾಡಿದ್ದಾರೆ. 3 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನ ಬಲೆಗೆ ಬೀಳಿಸಲು ಶ್ರಮಿಸಿದ 200ಕ್ಕೂ ಹೆಚ್ಚು ಬೆಂಗಳೂರು ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ ಶಹಬ್ಬಾಸ್ ಗಿರಿ ನೀಡಿದ್ದಾರೆ. ರಿಕವರಿಯಾಗದೇ ಬಾಕಿ ಉಳಿದಿರುವ 1.35 ಕೋಟಿ ಹಣ, ಉಳಿದ ದರೋಡೆಕೋರರಿಗಾಗಿ ಹುಡುಕಾಟ ನಡೆಯುತ್ತಿರೋ ಬಗ್ಗೆಯೂ ಕಮಿಷನರ್ ಮಾಹಿತಿ ನೀಡಿದ್ದಾರೆ.
ಪಕ್ಕಾ ಸಿನಿಮೀಯ ಸ್ಟೈಲಲ್ಲಿ ದರೋಡೆಕೋರರ ಪ್ಲಾನ್
ನವೆಂಬರ್ 19ರಂದು ಅಶೋಕ ಪಿಲ್ಲರ್ ಬಳಿ ಸಿಎಂಎಸ್ ವಾಹನ ಅಡ್ಡಗಟ್ಟಿದ್ದ ಖದೀಮರು ಆರ್.ಬಿ.ಐ ಆಫೀಸರ್ಸ್ ಎಂದು ಹೆದರಿಸಿ ಡೈರಿ ಸರ್ಕಲ್ ಫ್ಲೈ ಓವರ್ವರೆಗೂ ಕರೆದೊಯ್ದಿದ್ರು. ಸಿಎಂಎಸ್ ಕ್ಯಾಶ್ ವ್ಯಾನ್​ನಲ್ಲಿ ಆರೋಪಿ ಗೋಪಿ ಹತ್ತಿ ಕುಳಿತಿದ್ದ.. ನಿಮ್ಹಾನ್ಸ್ ಬಳಿ ಕಸ್ಟೋಡಿಯನ್, ಮತ್ತು ಗನ್ ಮ್ಯಾನ್ನ ಇಳಿಸಿದ್ರು. ಬಳಿಕ ಸಿಸಿಟಿವಿ ಇಲ್ಲದ ಜಾಗವನ್ನೇ ಗುರುತಿಸಿ ಅಲ್ಲೇ ರಾಬರಿ ಮಾಡಿ ಎಸ್ಕೇಪ್ ಆಗಿದ್ರು ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಖದೀಮರ ಸ್ಕೆಚ್ನ ರಿವೀಲ್ ಮಾಡಿದ್ದಾರೆ.
ದಿ ಗ್ರೇಟ್ ಸಿದ್ದಾಪುರ ರಾಬರಿ ಪ್ರಕರಣವನ್ನ ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈಗ ಉಳಿದ ಆರೋಪಿಗಳಾದ ನವೀನ್, ನೆಲ್ಸನ್, ರವಿ ರಾಕೇಶ್, ದಿನೇಶ್ ಹಾಗೂ ಜಿತೇಶ್ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಕಿಂಗ್ಪಿನ್ಗಳು, ಮಾಸ್ಟರ್ ಮೈಂಡ್ಗಳೇ ಪೊಲೀಸರ ಗಾಳಕ್ಕೆ ಬೀದ್ಮೇಲೆ ಇನ್ನ ಈ ಚಿಕ್ಕಪುಟ್ಟ ಮಿಕಗಳು ಇವತ್ತೋ? ನಾಳೆನೋ ಸಿಕ್ಕಿಬಿಳೋದು ಖಚಿತ. ಇಂದು ಸಂಜೆ ಹೈದರಾಬಾದ್ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, 70 ಲಕ್ಷ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ. ಇದರಿಂದಾಗಿ ಇದುವರೆಗೂ ಒಟ್ಟಾರೆ 6 ಕೋಟಿ 40 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದಂತಾಗಿದೆ. ಇನ್ನೂ 71 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯೋದು ಬಾಕಿ ಇದೆ.
ಸಂದೇಶ್ ಜೊತೆ ಶಿವಕುಮಾರ್, ಕ್ರೈಂಬ್ಯುರೋ, ನ್ಯೂಸ್ಫಸ್ಟ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us