/newsfirstlive-kannada/media/media_files/2026/03/09/dalit-internal-reservation-conflict-2026-03-09-18-40-23.jpg)
ಯಾಕೋ ಮೀಸಲಾತಿ ಕಿಚ್ಚು ಹಸ್ತವನ್ನ ವ್ಯಸ್ತ ಮಾಡೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.. ಉದ್ಯೋಗ ಭರ್ತಿಗೆ ಸಿದ್ದು ಸರ್ಕಾರ ಸಿದ್ಧಗೊಳ್ತಿದ್ದಂತೆ ಒಳ ಮೀಸಲಾತಿ ಕಿಡಿ, ದಿಢೀರ್​​ ಹಾರಿದೆ.. ಫೆಬ್ರುವರಿ 26ಕ್ಕೆ ಕೈಗೊಂಡ ನಿರ್ಧಾರವೊಂದು ದಲಿತ ಎಡಗೈ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.. ಗುರುವಾರ ತನಕ ಡೆಡ್​ಲೈನ್​ ಕೊಟ್ಟಿದೆ.. ಇತ್ತ ಪರಿಸ್ಥಿತಿ ಶಮನಕ್ಕೆ ಪರಂ-ಮುನಿಯಪ್ಪ ಭೇಟಿಯೂ ನಡೆದಿದೆ..
ಒಳ ಮೀಸಲಾತಿ.. ರಾಜ್ಯ ರಾಜಕೀಯದಲ್ಲಿ ಭುಗಿಲೆದ್ದ ಹೊಸ ಬೆಂಕಿ.. ಸ್ವಪಕ್ಷದಲ್ಲೇ ಹೊತ್ತಿಕೊಂಡ ಈ ಭಿನ್ನಾಭಿಪ್ರಾಯದ ಕಿಡಿ, ಪರಿಸ್ಥಿತಿ ಕೈಮೀರಿಸುತ್ತಿದೆ.. ಬಿಕ್ಕಟ್ಟಿನ ಶಮನಕ್ಕೆ ಸಿದ್ದು-ಡಿಕೆಶಿ ಕಸರತ್ತು ನಡೆಸ್ತಿದ್ದು ಮುಂದಿನ ದಿನಗಳಲ್ಲಿ ಹಸ್ತವನ್ನೇ ಸಂಕಷ್ಟಕ್ಕೆ ಸಿಲುಕಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿಸಿದೆ..
ಕಾಂಗ್ರೆಸ್​​ ಸರ್ಕಾರವನ್ನ ಇಕ್ಕಟ್ಟಿಗೆ ತಳ್ಳಿದ ಒಳ ಮೀಸಲಾತಿ!
ಗುರುವಾರದ ವರೆಗೆ ಡೆಡ್​ಲೈನ್​​ ಕೊಟ್ಟ ಹೋರಾಟ ಸಮಿತಿ!
ಒಳ ಮೀಸಲಾತಿ ವಿಚಾರ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೂಗುಕತ್ತಿ ರೀತಿ ಭಾಸ ಆಗ್ತಿದೆ.. ಕಮಲ ಮನೆಯಿಂದ ಎದ್ದು ಬಂದ ವೋಟು ಕೊಟ್ಟ ಎಸ್​ಸಿ ಒಳ ಪಂಗಡಗಳು ಬೆಂಕಿಯುಂಡೆ ಆಗಿ ಕಾಣಿಸ್ತಿದೆ.. ಈ ಸಮಸ್ಯೆಗೆ ಪರಿಹಾರ ಕಾಣದಿದ್ದಲ್ಲಿ 2028ರ ವಿಧಾನಸಭಾ ಎಲೆಕ್ಷನ್​​​​ ಮೇಲೆ ರಾಜಕೀಯ ಪರಿಣಾಮ ನಿಶ್ಚಿತ ಅನ್ನೋ ವಿಶ್ಲೇಷಣೆ ನಡೀತಿದೆ.. ಇವತ್ತು ಕರ್ನಾಟಕ ಸಮಸ್ತ ಒಳಮೀಸಲಾತಿ ಸಮಿತಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರವನ್ನ ಖಂಡಿಸಿದೆ..
ಗುರುವಾರ 12ನೇ ತಾರೀಖಿನಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.. ಫೆಬ್ರವರಿ 26ರ ಸಂಪುಟದ ಉದ್ಯೋಗ ಭರ್ತಿ ತೀರ್ಮಾನಕ್ಕೆ ವಿರೋಧಿಸಿ, ಒಳಮೀಸಲಾತಿ ತಪ್ಪಿಸುವ ಹುನ್ನಾರ ಅಂತ ಟೀಕಿಸಿದೆ.. ಈ ಆದೇಶ ಹಿಂಪಡೆಯದಿದ್ರೇ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡೋ ನೈತಿಕತೆ ಸಿಎಂ ಸಿದ್ದರಾಮಯ್ಯರಿಗೆ ಇರಲ್ಲ ಅಂತ ಮಾರಸಂದ್ರ ಮುನಿಯಪ್ಪ ಕಟುವಾಗಿ ಟೀಕಿಸಿದ್ದಾರೆ..
ವಿಷಮಿಸ್ತಿರುವ ಒಳ ಮೀಸಲಾತಿ ಅಸಮಾಧಾನ ಶಮನಕ್ಕೆ ಯತ್ನ ಸಾಗಿದೆ.. ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪರ ನಿವಾಸಕ್ಕೆ ಭೇಟಿಯಾಗಿ ಗೃಹ ಸಚಿವ ಪರಮೇಶ್ವರ್​ ಮಾತ್ನಾಡಿದ್ದಾರೆ.. ಜನ್ಮದಿನ ನೆಪದಲ್ಲಿ ಮುನಿಯಪ್ಪ ಭೇಟಿಯಾಗಿ ಶುಭಾಶಯ ಕೋರಿ ಚರ್ಚಿಸಿದ್ದಾರೆ ಅಂತ ಗೊತ್ತಾಗಿದೆ..
ಬಳಿಕ ಮಾತ್ನಾಡಿದ ಗೃಹ ಸಚಿವ ಪರಂ, ಸಮಸ್ಯೆ ಆಗಿದ್ದೆಲ್ಲಿ ಅನ್ನೋದನ್ನ ಬಿಚ್ಚಿಟ್ರು.. ನಾಗಮೋಹನ್ ದಾಸ್ ವರದಿ ಪ್ರಕಾರವೇ ಮೂರು ವರ್ಗ ಆಗಿತ್ತು.. ಆದ್ರೆ ಕೋರ್ಟ್​, ಶೇ.56 ಆಗೋದಿಲ್ಲ, ಶೇ.50 ಸೀಲಿಂಗ್ ಆಗಿದೆ ಅಂತ ಹೇಳ್ತು.. ಸದ್ಯ ಗೊಂದಲ ಆಗಬಾರದು ಅಂತ ಚರ್ಚೆ ನಡೀತಿದೆ.. ಮುಂದಿನ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡ್ತೇವೆ ಎಂದ್ರು.
ಸಚಿವ ಕೆ.ಹೆಚ್.ಮುನಿಯಪ್ಪ, ಶೇ.56 ಆಗಲ್ಲ ಅಂತ ಬಂದಾಗ ಹಂಚಿಕೊಳ್ಳಬೇಕು.. ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಹೋಗ್ಬೇಕು.. ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡ್ತೇವೆ ಎಂದ್ರು.. ಇದೇ ವೇಳೆ, ಚುನಾವಣೆ ಪ್ರಣಾಳಿಕೆ ನೆನಪಿಸಿ ಎಚ್ಚರಿಕೆ ನೀಡಿದ್ದಾರೆ..
ಒಟ್ಟಾರೆ, ನಮ್ಮಲ್ಲಿ ಯಾವ ಟೀಂ ಇಲ್ಲ, ಭಿನ್ನಾಭಿಪ್ರಾಯ ಇಲ್ಲ ಅಂತ ದಲಿತ ನಾಯಕರು ಹೇಳ್ತಿದ್ದಾರೆ.. ಆದ್ರೆ, ಅಸಲಿಗೆ ಒಳಮೀಸಲಾತಿ ಜಟಾಪಟಿ ನಡೀಯುತ್ತಿದೆ.. ಶೇ.50ರ ಅನ್ವಯದಲ್ಲೇ ಮೀಸಲಾತಿ ನೇಮಕಾತಿ ಆದಲ್ಲಿ ವಿಕೋಪ ತಿರುಗೋದು ನಿಶ್ಚಿತ..
/filters:format(webp)/newsfirstlive-kannada/media/media_files/2026/03/09/dalit-internal-reservation-conflict-1-2026-03-09-18-42-23.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us