ಕ್ರೈಸ್ ಇಂಜಿನಿಯರ್ ಜನಾರ್ಧನ ಬಳಿ ನಾಲ್ಕೂವರೆ ಕೋಟಿ ರೂ. ಆಸ್ತಿ ಪತ್ತೆ : ಪುರುಷೋತ್ತಮ ದಾಸ್ ಹೆಗಡೆ ಬಳಿಯೂ ಕೋಟಿ ಕೋಟಿ ಆಸ್ತಿ ಪತ್ತೆ

ಕರ್ನಾಟಕದ ಲೋಕಾಯುಕ್ತ ಅಧಿಕಾರಿಗಳು ಇಂದು ನಾಲ್ವರು ಅಧಿಕಾರಿಗಳ ಮೇಲೆ ಆಕ್ರಮ ಆಸ್ತಿ ಗಳಿಕೆ ಆರೋಪದಡಿ ದಾಳಿ ನಡೆಸಿದ್ದಾರೆ. ಕ್ರೈಸ್ ಇಂಜಿನಿಯರ್ ಎಚ್‌.ಎಂ.ಜನಾರ್ಧನ ಬಳಿ ನಾಲ್ಕೂವರೆ ಕೋಟಿ ರೂಪಾಯಿ ಆಸ್ತಿಪಾಸ್ತಿ ಪತ್ತೆಯಾಗಿದೆ. ಪುರುಷೋತ್ತಮ ದಾಸ್ ಹೆಗಡೆ ಬಳಿಯೂ ಕೋಟಿಗಟ್ಟಲೇ ಆಸ್ತಿ ಪತ್ತೆಯಾಗಿದೆ.

author-image
Chandramohan
HM JANARDHAN LOKAYUKUTA RAID

HM ಜನಾರ್ಧನ ಬಳಿ 1.7 ಕೋಟಿ ರೂ ನಗದು ಪತ್ತೆ

Advertisment
  • ರಾಜ್ಯದಲ್ಲಿ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ
  • ಕ್ರೈಸ್ ಇಂಜಿನಿಯರ್ ಎಚ್‌.ಎಂ.ಜನಾರ್ಧನ ಬಳಿ 1.7 ಕೋಟಿ ರೂ ನಗದು ಪತ್ತೆ
  • ಪಿಡಬ್ಲ್ಯುಡಿ ಇಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ ಬಳಿಯೂ ಕೋಟಿ ಕೋಟಿ ಆಸ್ತಿ ಪತ್ತೆ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ…ನಡೆದಿದೆ. ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ  ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಕೇಸ್ ದಾಖಲಿಸಿ ದಾಳಿ ನಡೆಸಿ ಶೋಧ ನಡೆಸಲಾಗುತ್ತಿದೆ. 
ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಷನಲ್ ಇನ್ಸ್ ಟಿಟ್ಯೂಷನ್ ಸೊಸೈಟಿಯ ಇಂಜಿನಿಯರ್ ಎಚ್‌.ಎಂ.ಜನಾರ್ಧನ್  ಅವರ ಬೆಂಗಳೂರಿನ ಮನೆ, ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಮೊದಲು ಎಚ್‌.ಎಂ.ಜನಾರ್ಧನ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದರು. ಬಳಿಕ ಕ್ರೈಸ್ ಗೆ ವರ್ಗಾವಣೆಯಾಗಿದ್ದಾರೆ. ಕ್ರೈಸ್ ನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ ಆರೋಪ ಎಚ್‌.ಎಂ.ಜನಾರ್ಧನ ಮೇಲಿದೆ.

ಜನಾರ್ಧನ ಮನೆಯಲ್ಲಿ ಕೋಟಿ ಕೋಟಿ ನಗದು ಹಣವೇ ಪತ್ತೆಯಾಗಿದೆ. ಜನಾರ್ಧನ ಸ್ನೇಹಿತನ ಪ್ಲ್ಯಾಟ್ ನಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಹಣವನ್ನು ಲೆಕ್ಕ ಮಾಡಲು ಲೋಕಾಯುಕ್ತ ಅಧಿಕಾರಿಗಳು ಹಣ ಎಣಿಸುವ ಮೆಷಿನ್  ಅನ್ನು ತಂದಿದ್ದಾರೆ. ಎಚ್‌.ಎಂ.ಜನಾರ್ಧನ, ಗಳಿಸಿದ ಆದಾಯಕ್ಕಿಂತ ಶೇ.216 ರಷ್ಟು ಅಧಿಕ ಆಸ್ತಿಪಾಸ್ತಿ ಹೊಂದಿರುವುದು ಲೋಕಾಯುಕ್ತ ದಾಳಿ ವೇಳೆ ಬೆಳಕಿಗೆ ಬಂದಿದೆ. ಜನಾರ್ಧನ ಅವರು ಹೊಂದಿರುವ ಸ್ಥಿರಾಸ್ಥಿಗಳ ಮೌಲ್ಯವೇ ಬರೋಬ್ಬರಿ 3.20 ಕೋಟಿ ರೂಪಾಯಿ.  ಒಂದು ನಿವೇಶನ ಹಾಗೂ ಮೂರು ಮನೆಗಳನ್ನು ಜನಾರ್ಧನ ಹೊಂದಿದ್ದಾರೆ. ಒಟ್ಟು 34 ಎಕರೆ ಕೃಷಿ ಜಮೀನು ಹೊಂದಿದ್ದು, ಇದರ ಸಬ್ ರಿಜಿಸ್ಟ್ರಾರ್ ಮೌಲ್ಯ 66 ಲಕ್ಷದ 84 ಸಾವಿರ ರೂಪಾಯಿ ಎಂದು ಲೋಕಾಯುಕ್ತ ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಆದರೇ, ಕೃಷಿ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ ಇದಕ್ಕಿಂತ ಜಾಸ್ತಿಯೇ ಇರುತ್ತೆ.
ಜನಾರ್ಧನ ಮನೆಯಲ್ಲಿ 7.8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. 20 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಪತ್ತೆಯಾಗಿವೆ. ಇತರೆ 60 ಲಕ್ಷ ರೂಪಾಯಿ ಪತ್ತೆಯಾಗಿದೆ. ಒಟ್ಟಾರೆ ಜನಾರ್ಧನ ಆಸ್ತಿಪಾಸ್ತಿ ಮೌಲ್ಯ 4 ಕೋಟಿ 42 ಲಕ್ಷ ರೂಪಾಯಿ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಾಥಮಿಕ ಅಂದಾಜು ಹಾಕಿದ್ದಾರೆ. 

lokayukuta raid janardhan house money seized (2)

ಇನ್ನೂ ಲೋಕೋಪಯೋಗಿ ಇಲಾಖೆಯ ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ ಅವರ ಮೇಲೂ ಲೋಕಾಯುಕ್ತ ದಾಳಿಯಾಗಿದೆ. ಸದ್ಯ ಕರ್ನಾಟಕ ಸ್ಟೇಟ್ ಹೈವೇ ಡೆವಲಪ್ ಮೆಂಟ್ ಪ್ರಾಜೆಕ್ಟ್ ನ ಚೀಫ್ ಇಂಜಿನಿಯರ್ ಆಗಿ ಪುರುಷೋತ್ತಮ ದಾಸ್ ಹೆಗಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷೋತ್ತಮ ದಾಸ್ ಅವರಿಗೆ ಸೇರಿದ ಒಟ್ಟು 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಮೈಸೂರಿನಲ್ಲಿ 5 ಕಡೆ ಮತ್ತು ಬೆಂಗಳೂರಿನಲ್ಲಿ 6 ಕಡೆ ದಾಳಿ ನಡೆಸಿ ಕಾಗದ ಪತ್ರಗಳ ಪರಿಶೀಲನೆ…ನಡೆಸಿದ್ದಾರೆ. 
ಬೆಂಗಳೂರಿನ ಪದ್ಮನಾಭನಗರದಲ್ಲಿ ಪುರುಷೋತ್ತಮ ದಾಸ್ ಹೆಗಡೆ ಅವರ ಮನೆ ಇದೆ.  ನಾಲ್ಕನೇ ಮುಖ್ಯರಸ್ತೆಯಲ್ಲಿರುವ ಮನೆ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಇತ್ತೀಚೆಗೆ ಐಷಾರಾಮಿ ಮನೆಯನ್ನು ಪುರುಷೋತ್ತಮ ದಾಸ್ ಅವರು ನಿರ್ಮಾಣ ಮಾಡಿದ್ದಾರೆ. ಮೂರು ಅಂತಸ್ತಿನ ಮನೆಯನ್ನು ಪುರುಷೋತ್ತಮ ದಾಸ್ ಹೆಗಡೆ ನಿರ್ಮಿಸಿದ್ದು, ಮನೆಗೆ ಪರ್ಜನ್ಯ ಎಂಬ ಹೆಸರಿಟ್ಟು ಅದ್ದೂರಿ ಗೃಹ ಪ್ರವೇಶ ಮಾಡಿದ್ದರು. ಎರಡು ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಪದ್ಮನಾಭನಗರದ ಪುರುಷೋತ್ತಮ ದಾಸ್ ಹೆಗಡೆ ಮನೆ ಮೇಲೆ ದಾಳಿ ನಡೆಸಿದ್ದಾರೆ. 
ಪುರುಷೋತ್ತಮ ದಾಸ್ ಹೆಗಡೆ ಎರಡು ಶಾಲೆಗಳ ಮಾಲೀಕರೂ ಸಹ ಆಗಿದ್ದಾರೆ. ಸೈಟ್ ದಾಖಲೆ ಸಿಕ್ಕಿವೆ. ಮನೆಗಳು ಇವೆ. ನಗದು ಹಣ ಸಿಕ್ಕಿದೆ. ಚಿನ್ನಾಭರಣ ಕೂಡ ಸಿಕ್ಕಿದೆ ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ. 

lokayukuta raid janardhan house money seized (3)




ಇನ್ನೂ ದಾವಣಗೆರೆಯ ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ ಅರ್ಜುನ್ ಆರ್‌.ಎಚ್. ಹಾಗೂ ಧಾರವಾಡದ ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯ ಸರ್ವೇಯರ್ ಸೋಮಲಿಂಗಪ್ಪ ಮೇಲೆ ಲೋಕಾಯುಕ್ತ ದಾಳಿಯಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

LOKAYUKUTA RAID
Advertisment