ಉದ್ಯೋಗಾಕಾಂಕ್ಷಿಗಳ ಆಕ್ರೋಶ.. ಧಾರವಾಡ ಉದ್ವಿಗ್ನ!: ಪ್ರತಿಭಟನೆ, ಱಲಿ, ಕಲ್ಲು ತೂರಾಟ.. ನೇಮಕಾತಿ ಕಿಚ್ಚು!

ಧಾರವಾಡ ವಿದ್ಯಾಕಾಶಿ ಎಂದೇ ಹೆಸರಾದ ನಗರ. ಧಾರವಾಡದಲ್ಲಿ ಓದಿ ಪದವಿ ಪಡೆದ ವಿದ್ಯಾವಂತರ ಆಕ್ರೋಶ ಭುಗಿಲೆದ್ದಿತ್ತು. ಎಲ್ಲರ ಒತ್ತಾಯ ಒಂದೇ. ಸರ್ಕಾರ ತಕ್ಷಣವೇ ಖಾಲಿ ಇರುವ 2.80 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕು. ತಮಗೆ ಉದ್ಯೋಗ ನೀಡಬೇಕು ಅನ್ನೋ ಒತ್ತಾಯ. ಱಲಿ, ಕಲ್ಲು ತೂರಾಟ ನಡೆಯಿತು.

author-image
Chandramohan
dharwad job seekers protest
Advertisment


ಇದು ಸರ್ಕಾರಿ ಉದ್ಯೋಕಾಂಕ್ಷಿಗಳ ಆಕ್ರೋಶ... ಸಿಎಂ ಕುರ್ಚಿ ಕದನದಲ್ಲೇ ಬ್ಯುಸಿಯಾಗಿರುವ ರಾಜ್ಯ ಸರ್ಕಾರಕ್ಕೆ ಇವತ್ತು ಉದ್ಯೋಗಾಕಾಂಕ್ಷಿಗಳು ಬಿಸಿ ಮುಟ್ಟಿಸಿದ್ದಾರೆ.. ವಿದ್ಯಾಕಾಶಿ ಧಾರವಾಡದಲ್ಲಿ ಸೇರಿದ ಸಾವಿರಾರು ಅಭ್ಯರ್ಥಿಗಳು ಪ್ರತಿಭಟನೆ, ಱಲಿ, ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದ್ರು.. ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿತು. 
ಬೇಕೇ ಬೇಕೇ ನ್ಯಾಯ ಬೇಕು.. ವೀ ವಾಂಟ್ ಜಸ್ಟೀಸ್... ಧಿಕ್ಕಾರ ಧಿಕ್ಕಾರ. ಸರ್ಕಾರಕ್ಕೆ ಧಿಕ್ಕಾರ... ಸಿಎಂ, ಡಿಸಿಎಂ ಭಿತ್ತಿಪತ್ರ ಹಿಡಿದು ಉದ್ಯೋಗಾಕಾಂಕ್ಷಿಗಳ ಆಕ್ರೋಶ.. ಪ್ರತಿಭಟನಾ ಮೆರವಣಿಗೆ.. ...ಅಭ್ಯರ್ಥಿಗಳ ಮನವೊಲಿಸುತ್ತಿರುವ ಪೊಲೀಸ್ ಅಧಿಕಾರಿಗಳು...ಅಂದಹಾಗೆ, ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ವಿದ್ಯಾಕಾಶಿ ಧಾರವಾಡ ಉದ್ವಿಗ್ನಗೊಂಡಿದ್ದ ಪರಿ ಇದು.. 
ಉದ್ಯೋಗಾಕಾಂಕ್ಷಿಗಳ ಆಕ್ರೋಶ.. ಧಾರವಾಡ ಉದ್ವಿಗ್ನ!
ಪ್ರತಿಭಟನೆ.. ಱಲಿ.. ಕಲ್ಲು ತೂರಾಟ.. ನೇಮಕಾತಿ ಕಿಚ್ಚು!
ಇವತ್ತು ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಪ್ರತಿಭಟನಾ ಱಲಿ ಬಿರುಗಾಳಿಯಂತೆ ನುಗ್ಗಿದ್ದು ಪೊಲೀಸರ ಭದ್ರತಾ ಕೋಟೆಯನ್ನೇ ಭೇದಿಸಿದೆ..  ಕಳೆದ ಎರಡೂ ವರ್ಷಗಳಿಂದ ಒಂದೇ ಒಂದು ಸರ್ಕಾರಿ ನೇಮಕಾತಿ ಮಾಡದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಭ್ಯರ್ಥಿಗಳ ಸೇನೆ ರಣಾರ್ಭಟಿಸಿದೆ..   ಇದುವರೆಗೆ ಮೂರು ಭಾರಿ ಪ್ರತಿಭಟನೆ ಮಾಡಿದ್ದ ಉದ್ಯೋಗಾಂಕ್ಷಿಗಳು ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ  ಮತ್ತೊಮ್ಮೆ ಸಿಡಿದೆದ್ದಿದ್ದಾರೆ, ಧಾರವಾಡದ ಶ್ರೀನಗರ ವೃತ್ತದಲ್ಲಿ ಸೇರಿದ ಸಾವಿರಾರು ಉದ್ಯೋಗಾಂಕ್ಷಿಗಳು ಪೊಲೀಸರ ವಿರೋಧದ ನಡುವೆಯೂ ಬೃಹತ್ ಹೋರಾಟ ನಡೆಸಿದ್ರು.. ಜಯನಗರ ವೃತ್ತದವರೆಗೂ ಪ್ರತಿಭಟನಾ ಱಲಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ರು..
ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ವಿಪಕ್ಷ ಬಿಜೆಪಿ ಸಾಥ್!
ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ರೂ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಬಿಜೆಪಿ ನಾಯಕರು ಸಾಥ್ ನೀಡಿದ್ರು.. ಇದುವರೆಗೆ ಸೈಲೆಂಟ್ ಆಗಿದ್ದ ಕಮಲ ನಾಯಕರು ಅಭ್ಯರ್ಥಿಗಳ ಅರಣ್ಯರೋಧನಕ್ಕೆ ದನಿಗೂಡಿಸಿದ್ರು.. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡದೇ ದಿನ ದೂಡುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ರು..
ಸಿಎಂ, ಡಿಸಿಎಂ ಚಪ್ಪಲಿಹಾರ ಹಾಕಿ ಭಾವಚಿತ್ರಕ್ಕೆ ಬೆಂಕಿ!
ಪ್ರತಿಭಟನೆಯಲ್ಲಿ R.ಅಶೋಕ್, ಬೆಲ್ಲದ್, ಛಲವಾದಿ ಭಾಗಿ
ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಸಾಗ್ತಾ ಇದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಸಾಥ್ ನೀಡಿದ್ರು.. ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್ ನಾಯಕರ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ, ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ರು.. ಇದೇ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ ನಡೆದಿದ್ದು ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್  ರಫೀಕ್ ಹಾಗೂ ತಹಸೀಲ್ದಾರ್ ಗಾಯಗೊಂಡ್ರು.. ಹುಬ್ಬಳ್ಳೀ-ಧಾರವಾಡ ಪೊಲೀಸ್ ಕಮಿಷನರ್​ ಶಶಿಕುಮಾರ್ ನೇತೃತ್ವದಲ್ಲಿ ಪ್ರತಿಭಟನಾನಿರತ ಅಭ್ಯರ್ಥಿಗಳ ಸಾಗರವನ್ನು ತಡೆಯಲು ಪೊಲೀಸರು ಸಾಕ್ ಸಾಕಾಗಿ ಹೋದ್ರು.
‘ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ನೇಮಕಾತಿ ಮಾಡ್ತಿಲ್ಲ’
ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ
ರಾಜ್ಯ ಸರ್ಕಾರದ ಯೋಗ್ಯತೆಗೆ  3 ವರ್ಷಗಳಲ್ಲಿ ಒಂದು ನೇಮಕಾತಿ ಮಾಡಲು ಆಗಿಲ್ಲ ಅಂತ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ರು.. ಸರ್ಕಾರ ದಿವಾಳಿಯಾಗಿದೆ. ಹಣ ಇಲ್ಲ.. ಉದ್ಯೋಗ ಖಾತ್ರಿ ವಿರೋಧ ಮಾಡೋರು ಉದ್ಯೋಗ ಕೊಡ್ತಿಲ್ಲ, ಎಡಬಿಡಂಗಿ ಸರ್ಕಾರ ಅಂತ ಹಿಗ್ಗಾಮುಗ್ಗಾ ಜಾಡಿಸಿದ್ರು
‘ಹಣ ಇಲ್ಲದ್ದಕ್ಕೆ ನೇಮಕಾತಿ ಮಾಡಿಲ್ಲ’ 
‘ಎಡಬಿಡಂಗಿ ಕಾಂಗ್ರೆಸ್ ಸರ್ಕಾರ’  
ಬಿಜೆಪಿ ನಾಯಕರ ಬ್ಯಾನರನ್ನೇ ಹರಿದ ಅಭ್ಯರ್ಥಿಗಳು!
ಇದೇ ವೇಳೆ ಉದ್ಯೋಗಾಕಾಂಕ್ಷಿಗಳ ಪರ ಪ್ರತಿಭಟನೆ ಮಾಡ್ತಿದ್ದ ಬಿಜೆಪಿ ನಾಯಕರ ಬ್ಯಾನರನ್ನೇ ಹರಿದು ಹಾಕಿದ ಪ್ರಸಂಗ ನಡೀತು.. ರಾಜಕೀಯ ಕಿತ್ತಾಟ, ಅಭ್ಯರ್ಥಿಗಳ ಗೋಳಾಟ ಅಂತ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.. ಅಭ್ಯರ್ಥಿಗಳ ಪ್ರತಿಭಟನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ತಿದೆ ಅಂತ ಡಿಸಿಎಂ ಡಿಕೆಶಿ ಕಿಡಿಕಾರಿದ್ದಾರೆ..

dharwad job seekers protest (1)





ಅದೇನೇ ಇರಲಿ, ವಿಪಕ್ಷಗಳನ್ನು ದೂರುತ್ತಾ ಕೂತಿರುವ ಸರ್ಕಾರ ಉದ್ಯೋಗಾಕಾಂಕ್ಷಿಗಳ ಹಿತವನ್ನು ಮರೆತೇಬಿಟ್ಟಿದೆ.. ಹತ್ತತ್ರ ಮೂರು ವರ್ಷ ಕಳೀತಾ ಬಂದಿದೆ, ಸರ್ಕಾರಿ ಹುದ್ದೆಗಳ ನೇಮಕಾತಿಗೆ ಗ್ರಹಣ ಹಿಡಿದಂತಾಗಿದೆ.. ಪಂಚ ಗ್ಯಾರಂಟಿಗಳ ಈಡೇರಿಕೆ ಹಾಗೂ ಕುರ್ಚಿ ಕದನದಲ್ಲೇ ಮುಳುಗಿರುವ ಸರ್ಕಾರ ಅಭಿವೃದ್ಧಿ ಜೊತೆಗೆ ನೇಮಕಾತಿಯನ್ನೂ ಗಾಳಿಗೆ ತೂರಿದೆ.. ಲಕ್ಷಾಂತರ ಅಭ್ಯರ್ಥಿಗಳು ಚಾತಕಪಕ್ಷಿಗಳಂತೆ ಕಾದು ಕೂತಿದ್ದಾರೆ.. ಈಗಲಾದ್ರೂ ಸರ್ಕಾರ ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಬೇಕಿದೆ..

ಪ್ರಕಾಶ್ ನೂಲ್ವಿ ಜೊತೆ ವಿನೋದ್ ಉಚ್ಚಂಗಿ, ನ್ಯೂಸ್​​ಫಸ್ಟ್​, ಹುಬ್ಬಳ್ಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Demand for government recruitment Job seekers protest
Advertisment