/newsfirstlive-kannada/media/post_attachments/wp-content/uploads/2023/07/KRS-Dam-3.jpg)
ಮಂಡ್ಯದ ಕೆಆರ್ಎಸ್ ಜಲಾಶಯದ ದೃಶ್ಯ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವ್ಯಾಪಕ ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂಗೆ ಒಳ ಹರಿವಿನ ನೀರಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಕೆಆರ್ಎಸ್ ಡ್ಯಾಂ ಕಳೆದ ತಿಂಗಳೇ ಭರ್ತಿಯಾಗಿರುವುದರಿಂದ ಈಗ ಒಳ ಹರಿವಿನ ನೀರುನ್ನು ಸಂಪೂರ್ಣವಾಗಿ ಗೇಟ್ ತೆಗೆದು ನದಿಗೆ ಬಿಡಲಾಗುತ್ತಿದೆ. ತಮಿಳುನಾಡಿನತ್ತ ಈಗ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಕೆ.ಆರ್.ಎಸ್.ಡ್ಯಾಂ ನಿಂದ 80 ಸಾವಿರ ಕ್ಯೂಸೆಕ್ ಗಿಂತ ಹೆಚ್ಚಿನ ಪ್ರಮಾಣದ ನೀರು ಅನ್ನು ಬಿಡುಗಡೆ ಮಾಡಲಾಗಿದೆ.
ಹೆಚ್ಚಿನ ಪ್ರಮಾಣದ ನೀರು ಅನ್ನು ನದಿಗೆ ಬಿಡುಗಡೆಯಿಂದ ಕಾವೇರಿ ನದಿಯಲ್ಲಿ ಪಾತ್ರದ ಜನರಿಗೆ ಪ್ರವಾಹ ಆತಂಕ ಎದುರಾಗಿದೆ. ಕಾವೇರಿ ನೀರಾವರಿ ನಿಗಮ ಹಾಗು ಜಿಲ್ಲಾಡಳಿತದಿಂದ ಜನರಿಗೆ ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ. ನದಿಗೆ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಡಳಿತ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಡ್ಯ ಜಿಲ್ಲಾಡಳಿತದಿಂದ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯ ಪ್ರಕಟಣೆ ಹಾಗೂ ಕೆಆರ್ಎಸ್ ಡ್ಯಾಮ್ ಪೋಟೋ.
ನದಿ ಪಾತ್ರದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಹಾಲ್ನೊರೆಯಂತೆ ಡ್ಯಾಂ ನಿಂದ ನದಿಗೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಭಾರಿ ಪ್ರಮಾಣದ ನೀರು ಅನ್ನು ನದಿಗೆ ಬಿಡಲಾಗಿದೆ. ಕಾವೇರಿ ನದಿಪಾತ್ರಕ್ಕೆ ಹಾಗೂ ತಗ್ಗು ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ಮಂಡ್ಯ ಜಿಲ್ಲಾಡಳಿತವು ನಿಷೇಧಿಸಿದೆ. ನದಿಪಾತ್ರದ ತಗ್ಗು ಪ್ರದೇಶಗಳಿಗೆ ರೈತರು ಕೃಷಿ ಚಟುವಟಿಕೆಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ನದಿಪಾತ್ರದಲ್ಲಿನ ಸೇತುವೆ, ಪ್ರೇಕ್ಷಣಿಯ ಸ್ಥಳಗಳಲ್ಲಿ ಪೋಟೋ, ಸೆಲ್ಪಿ ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಕಾವೇರಿ ನದಿಯಲ್ಲಿ ಈಜಾಡುವುದನ್ನು ಕೂಡ ನಿಷೇಧಿಸಲಾಗಿದೆ. ಕಾವೇರಿ ನದಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಈಜಾಡಲು ಇಳಿದರೇ, ಕೊಚ್ಚಿಕೊಂಡು ಹೋಗುವ ಅಪಾಯ ಇದೆ. ಹೀಗಾಗಿ ಜಿಲ್ಲಾಡಳಿತವೂ ಜನರಿಗೆ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.