/newsfirstlive-kannada/media/media_files/2025/09/15/lingayath_1-2025-09-15-22-18-30.jpg)
ಬೆಂಗಳೂರು: ವೀರಶೈವ ಲಿಂಗಾಯತ ಜಾತಿ/ಉಪಜಾತಿಗಳ ಪಟ್ಟಿಯಲ್ಲಿ ಹಲವಾರು ಗೊಂದಲ ಇರುವುದರಿಂದ ಅವುಗಳನ್ನ ಸರಿಪಡಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಕಾಂತರಾಜ್ ಆಯೋಗವು ವೀರಶೈವ ಲಿಂಗಾಯತಕ್ಕೆ ಸಂಬಂಧಿಸಿದಂತೆ 79 ಜಾತಿ/ಉಪಜಾತಿಗಳನ್ನ ಪ್ರಕಟಣೆ ಮಾಡಿದ್ದರು. ಆದರೆ ಸಮೀಕ್ಷೆ ನಂತರ ನೀಡಿದ ವರದಿಯಲ್ಲಿ 95 ದಾಖಲಾಗಿದ್ದವು. ಈಗ ಮತ್ತೆ ಆಯೋಗವು 84 ಜಾತಿ/ಉಪಜಾತಿಗಳನ್ನ ಪ್ರಕಟಣೆ ಮಾಡಿದೆ. ವೀರಶೈವ ಲಿಂಗಾಯತ ಮಹಾಸಭಾ ಕೇವಲ 32 ಜಾತಿ/ಉಪಜಾತಿಗಳನ್ನ ಸೇರಿಸುವಂತೆ ಹೇಳಿದ ಮೇಲೆ 135 ಜಾತಿ/ಉಪಜಾತಿಗಳನ್ನ ಪ್ರಕಟ ಮಾಡಲಾಗಿದೆ.
ಆದರೆ ಈಗ 40 ಜಾತಿ/ಉಪಜಾತಿಗಳನ್ನ ಸೇರಿಸಲಾಗಿದ್ದು ಇವುಗಳನ್ನ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರವರ್ತಿತ ಮಾಡಲಾಗಿದೆ. ಇದಕ್ಕೆ ಆಯೋಗ ಯಾವ ಮಾನದಂಡ ಅನುಸರಿಸಿದೆ ಎನ್ನುವುದು ಸ್ಪಷ್ಟವಾಗಿಲ್ಲ. ನಮ್ಮ ಸಮಾಜಕ್ಕೆ ಸೇರಿದ ಎಲ್ಲ ಜಾತಿ/ಉಪಜಾತಿಗಳನ್ನ ಒಂದೇ ಕಡೆ ಸೇರಿಸುವಂತೆ ಮನವಿ ಮಾಡಿದ್ದರೂ ಈವರೆಗೂ ಯಾವುದೇ ಪ್ರಯೋಜನಾವಾಗಿಲ್ಲ ಎಂದು ಮಹಾಸಭಾ ಹೇಳಿದೆ.
ಇನ್ನು ಕರಡು ಕೈಪಿಡಿ ತಯಾರಿಸಿ ಸಾರ್ವಜನಿಕರಿಗೆ ನೀಡುವಂತೆ ಕೋರಲಾಗಿತ್ತು. ಗಣತಿ ಮಾಡುವಾಗ ಪಡೆದ ಮಾಹಿತಿ ಗೌಪ್ಯವಾಗಿ ಇಡುತ್ತಾರಾ?, ಜಾತಿ ಪ್ರಮಾಣಪತ್ರವನ್ನು ಸರ್ಕಾರದಿಂದ ನೀಡ್ತಾರಾ, ಇಲ್ಲವೇ? ಎನ್ನುವುದನ್ನ ಈವರೆಗೂ ಸ್ಪಷ್ಟಪಡಿಸಿಲ್ಲ. ಹೀಗಾಗಿ ಆಯೋಗದ ಕೆಲಸದ ಮೇಲೆ ಅನುಮಾನ ಮೂಡುತ್ತದೆ. ಇದರ ಜೊತೆಗೆ ಕೈಪಿಡಿಯಲ್ಲಿ ಸಾಕಷ್ಟು ತಪ್ಪುಗಳಿದ್ದರೂ ಸಮೀಕ್ಷೆಗೆ ಮುಂದಾಗಿರುವುದು ಎಷ್ಟು ಸರಿ? ಇಂತಹ ಗೊಂದಲ, ಅನುಮಾನಗಳಿಗೆ ಅವಕಾಶ ನೀಡದೇ ಪಾರದರ್ಶಕವಾಗಿ ನಡೆದುಕೊಳ್ಳುವಂತೆ ವೀರಶೈವ ಲಿಂಗಾಯತ ಮಹಾಸಭಾ, ಆಯೋಗವನ್ನು ಕೋರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ