/newsfirstlive-kannada/media/media_files/2026/02/24/koppala-protest-against-factories-2026-02-24-16-44-28.jpg)
ಕಾರ್ಖಾನೆಗಳಿಂದ ಹೊರ ಬರ್ತಾ ಇರೋ ವಿಷ ಗಾಳಿಯನ್ನ ಸೇವಿಸಿಅನಾರೋಗ್ಯಕ್ಕೆ ತುತ್ತಾಗ್ತಿದ್ದಾರೆ ಕೊಪ್ಪಳದ ಜನರು. ಈ ಕಾರ್ಖಾನೆಗಳನ್ನ ಬಂದ್​​ ಮಾಡಿಸ್ಬೇಕು ಅಂತ ಸಾಕಷ್ಟು ವರ್ಷಗಳಿಂದ ಹೋರಾಟ ನಡೀತಾನೇ ಇದೆ. ಇವತ್ತೂ ಕೂಡಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳ ಭಾಗ್ಯ ನಗರ ಬಂದ್​ ಮಾಡಲಾಯಿತು.
ಕಿರಿಯರಿಂದ ಹಿರಿಯರ ವರೆಗೂ ಎಲ್ಲರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆಕ್ಸಿಜನ್​ ಮಾಸ್ಕ್​ ಹಿಡಿದು ಬಂದ ಮಕ್ಕಳು ನಮ್ಮ ಉಸಿರಿಗೆ ತೊಂದರೆ ಕೊಡ್ಬೇಡಿ ಅನ್ನೋ ಸಂದೇಶವನ್ನ ಸಾರಿದ್ರು. ಬಿಎಸ್​ಪಿಎಲ್, ಮುಕಂದ ಸುಮಿ, ಕಿರ್ಲೋಸ್ಕರ್ ಕಾರ್ಖಾನೆಗಳ ವಿಸ್ತರಣೆಯನ್ನ ವಿರೋಧಿಸಿ ಇವತ್ತು ಪ್ರತಿಭಟನೆ ಮಾಡಿದ್ದಾರೆ.
ಕೊಪ್ಪಳ - ಭಾಗ್ಯನಗರದಲ್ಲಿ ಕೊಪ್ಪಳ ಬಚಾವೋ ಆಂದೋಲನಾ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಬಂದ್ ಆಚರಣೆ ಮಾಡಿದ್ದು, ವ್ಯಾಪಾರಿಗಳಿಗೆ ಪ್ರಯಾಣಿಕರಿಗೆ ಬಂದ್​ ಬಿಸಿ ತಟ್ಟಿತ್ತು. ಗವಿಮಠದಿಂದ, ತಾಲೂಕು ಕ್ರೀಡಾಂಗಣದವರೆಗೆ ಪ್ರತಿಭಟನಾ ಱಲಿ ನಡೆಸಲಾಯ್ತು. ಬುಲ್ದೋಟಾ ಹಟಾವೋ ಅಂತ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಕಿಡಿಕಾರಿದ್ರು. ಇದೇ ವೇಳೆ ಕಾರ್ಖಾನೆ ಅಳವಡಿಸಿದ್ದ ವಿಶ್ರಾಂತಿ ಬೆಂಜ್ , ಗಿಡಗಳಿಗೆ ಅಳವಡಿಸಿದ ಬಲ್ದೋಟಾ ಟ್ರೀ ಸೇಫ್ಟಿಯನ್ನ ತೆರವು ಮಾಡಲಾಯ್ತು.
ನೈಬಲೇಜರ್ ಹಾಕಿಕೊಂಡು ಉಸಿರಾಡುವ ಜನರು
ಪ್ರತಿಭಟನೆಯಲ್ಲಿ ಜೇವರ್ಗಿ ಶ್ರೀ, ಸಾಣೇಹಳ್ಳಿ ಶ್ರೀಗಳು ಹಿರೇಬಾಗನಾಳ್, ಹಾಲವರ್ತಿಯ ಜನರು ಭಾಗಿಯಾಗಿದ್ರು. ಹಿರೇಬಾಗನಾಳ್, ಹಾಲವರ್ತಿ ಗ್ರಾಮಗಳಲ್ಲಿ ಜನರು ನೈಬಲೇಜರ್ ಹಾಕಿಕೊಂಡು ಉಸಿರಾಡುವ ಸ್ಥಿತಿಯಲ್ಲಿದ್ದಾರೆ. ಎಳೆಯರಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಅಸ್ತಮಾ, ಕೆಮ್ಮು, ಉಸಿರಾಟದ ಸಮಸ್ಯೆಯಂಥ ಕಾಯಿಲೆಗಳು ಕಾಣಿಸಿಕೊಂಡಿವೆ. ಕಾರ್ಖಾನೆಗಳ ಧೂಳು ರೈತರ ಬೆಳೆಗಳ ಮೇಲೆ ಬೀಳುತ್ತಿದೆ. ಮನೆ, ಊರಿನ ಮೇಲೂ ಕಾರ್ಖಾನೆ ಧೂಳು ಬೀಳುತ್ತಿದೆ. ಎಲ್ಲವೂ ಧೂಳ್ ಮಯವಾಗಿದೆ. ಹಳ್ಳಿಗಳಲ್ಲಿ ಶುದ್ದ ಗಾಳಿ ಇರುತ್ತೆ ಅನ್ನೋ ನಂಬಿಕೆ ಇರುತ್ತೆ. ಆದರೇ, ಕೊಪ್ಪಳದ ಹಿರೇಬಾಗನಾಳ್, ಹಾಲವರ್ತಿ ಗ್ರಾಮಗಳಲ್ಲಿ ಶುದ್ದಗಾಳಿ ಎಂಬುದೇ ಮರಿಚೀಕೆಯಾಗಿದೆ.
ಪ್ರತಿಭಟನಾ ಱಲಿಯಲ್ಲಿ ಮಾತನಾಡಲು ಬಂದ ಜನಪ್ರತಿನಿಧಿಗಳ ವಿರುದ್ಧ ಜನಸಾಮಾನ್ಯರು ಕಿಡಿಕಾರಿದ್ರು. ಭಾಷಣ ಮಾಡಲು ಬಂದ ಮಾಜಿ ಸಂಸದ ಸಂಗಣ್ಣ ಕರಡಿಗೆ ಜನ ತರಾಟೆಗೆ ತೆಗೆದುಕೊಂಡ್ರು. ವೇದಿಕೆ ಏರಿ ಮೈಕ್ ಕಿತ್ತುಕೊಂಡ ಮಹಿಳೆ..ನಮ್ಗೆ ನ್ಯಾಯ ಬೇಕು ನಿಮ್ಮ ಭಾಷಣ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಸಿಎಂ ಡಿಸಿಎಂಗೆ ವಿಷಯ ತಲುಪಿಸೋದಾಗಿ ಕರಡಿ ಸಂಗಣ್ಣ ಭರವಸೆ ನೀಡಿದ್ರು
ಬಲ್ಡೋಟಾ ಬಿಟ್ಟು ಉಳಿದ ಕಾರ್ಖಾನೆಗಳನ್ನ ಬಂದ್ ಮಾಡಲ್ಲ
ಶಾಸಕ ರಾಘವೇಂದ್ರ ಹಿಟ್ನಾಳ್ ಶಾಕಿಂಗ್ ಹೇಳಿಕೆಗೆ ಆಕ್ರೋಶ
ಇದೇ ವೇಳೆ ಪ್ರತಿಭನಾ ಸ್ಥಳಕ್ಕೆ ಬಂದ ಶಾಸಕ ರಾಘವೇಂದ್ರ ಹಿಟ್ನಾಳ್ ಶಾಕಿಂಗ್​ ಹೇಳಿಕೆ ನೀಡಿ ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾದ್ರು. ಬುಲ್ದೋಟ ಒಂದನ್ನ ಬಿಟ್ಟು ಬೇರಾವ ಕಾರ್ಖಾನೆಗಳನ್ನೂ ಬಂದ್​ ಮಾಡಲ್ಲ ಅಂತ ಹೇಳಿದ್ದು, ಹೋರಾಟಗಾರರನ್ನ ಮತ್ತಷ್ಟು ಕೆರಳಿಸಿದೆ.
ಹೋರಾಟ ಆರಂಭವಾಗಿ ಒಂದು ವರ್ಷ ಕಳೆದಿದೆ. ಅದೆಷ್ಟೋ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇಶದ ಭವಿಷ್ಯವಾಗಿರೋ ಈ ಪುಟ್ಟ ಮಕ್ಕಳ ಮುಖ ನೋಡಿನಾದ್ರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ರಾಜು, ನ್ಯೂಸ್​ ಫಸ್ಟ್​, ಕೊಪ್ಪಳ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us