/newsfirstlive-kannada/media/media_files/2025/10/15/bgm_kolhapur-2025-10-15-20-36-02.jpg)
ಕೊಲ್ಹಾಪುರ: ಮಾಲೇಗಾಂವ್ ಪ್ರಕರಣದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರವು ದೊಡ್ಡ ಷಡ್ಯಂತ್ರ ಹೆಣೆದಿತ್ತು. ಇದರಿಂದಲೇ ಈ ಕೇಸ್​ನಲ್ಲಿ ಹಿಂದೂ ನಿಷ್ಠರನ್ನು ಕಾಂಗ್ರೆಸ್ ಆಡಳಿತಗಾರರು ಸಿಲುಕಿಸಿದರು ಎಂದು ಪ್ರಕರಣದಿಂದ ಮುಕ್ತರಾದ ಸಮೀರ್ ಕುಲಕರ್ಣಿ ಅವರು ಹೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕೊಲ್ಹಾಪುರದ ದೇವಲ ಕ್ಲಬ್​ನಲ್ಲಿ ನಡೆದ ಮಾಲೇಗಾಂವ್ ಸ್ಫೋಟದಲ್ಲಿ ನಿರ್ದೋಷಿಗಳೆಂದು ಸಾಬೀತಾದ ಧರ್ಮಯೋಧರು ಮತ್ತು ಅವರ ವಕೀಲರ ಸನ್ಮಾನ ಸಮಾರಂಭದಲ್ಲಿ ಅವರು ಮಾತಾಡಿದರು. ಕಾರ್ಯಕ್ರಮದಲ್ಲಿ ಧರ್ಮವೀರ ಸಮೀರ್ ಕುಲಕರ್ಣಿ ಮತ್ತು ಮೇಜರ್ ರಮೇಶ್ ಉಪಾಧ್ಯಾಯ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಹಾಗೆಯೇ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜಿಕರ್, ವಕೀಲ ಸಮೀರ್ ಪಟವರ್ಧನ್, ವಕೀಲೆ ಪ್ರೀತಿ ಪಾಟೀಲ್ ಮತ್ತು ಹಿಂದೂಪರ ಲೇಖಕ ವಿಕ್ರಮ ಭಾವೆ ಅವರಿಗೂ ಸನ್ಮಾನ ಮಾಡಲಾಯಿತು.
ದೊಡ್ಡ ಜನರ ಹೆಸರು ಹೇಳಲಿಲ್ಲ ಅಂತ ಬಂಧನ
ಮಾಲೇಗಾಂವ್ ಘಟನೆ ದಿನ ಮುಂಬೈಯಲ್ಲಿದ್ದೆ. ಆದರೂ ನನ್ನನ್ನು ಬಂಧಿಸಿ ಥಳಿಸಲಾಯಿತು. ಸರಸಂಘಚಾಲಕ ಡಾ ಮೋಹನ್ ಭಾಗವತ್, ಪ್ರವೀಣ್ ತೊಗಾಡಿಯಾ, ಶ್ರೀ ಶ್ರೀ ರವಿಶಂಕರ್, ಯೋಗಿ ಆದಿತ್ಯನಾಥ್ ಅವರ ಹೆಸರುಗಳನ್ನು ತೆಗೆದುಕೊಳ್ಳಲು ನನ್ನ ಮೇಲೆ ಒತ್ತಡ ಹಾಕಿದ್ದರು. ಇದರಿಂದ ನಮ್ಮನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಯಿತು. ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಹಾಳು ಮಾಡಿದರು. ಕೇವಲ ರಾಜಕೀಯ ಲಾಭಕ್ಕಾಗಿ ನಮ್ಮ ಮೇಲೆ ಅನ್ಯಾಯವಾಯಿತು ಎಂದು ಮಾಲೇಗಾಂವ್ ಕೇಸ್​ನ ನಿರ್ದೋಷಿ, ಭಾರತೀಯ ಸೈನ್ಯದಳದ ಮೇಜರ್ ರಮೇಶ್ ಉಪಾಧ್ಯಾಯ ಅವರು ಹೇಳಿದ್ದಾರೆ.
ಅನ್ಯಾಯ ಆದರೂ ಹಿಂದುತ್ವದ ಕಾರ್ಯ ಬಿಡಲ್ಲ
ಡಾ ನರೇಂದ್ರ ದಾಭೋಲ್ಕರ್ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲದಿದ್ದರೂ ನನ್ನನ್ನು ಮತ್ತು ವಕೀಲ ಸಂಜೀವ ಪುನಾಳೇಕರನ್ನು ಬಂಧಿಸಿದರು. ಹತ್ಯೆಯಾದ 15 ನಿಮಿಷಗಳಲ್ಲೇ ಅಂದಿನ ಸಿಎಂ ಪೃಥ್ವಿರಾಜ್ ಚವಾಣ್ ಅವರು, ಇದನ್ನು ಗೋಡ್ಸೆವಾದಿಗಳು ಮಾಡಿದ್ದಾರೆ ಎಂದು ಹೇಳಿದ್ದರು. ಇದರಿಂದ ಪ್ರಗತಿಪರರ ಆರೋಪಗಳು ಎಷ್ಟು ಸುಳ್ಳು ಮತ್ತು ಯೋಜಿತವಾಗಿರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ದಬ್ಬಾಳಿಕೆಯಿಂದ ನೀವು ನಮಗೆ ಹಿಂಸೆ ನೀಡಬಹುದು, ಆದರೆ ನಾವು ಹಿಂದುತ್ವದ ಕಾರ್ಯವನ್ನು ಬಿಡಲ್ಲ ಎಂದು ಲೇಖಕ ವಿಕ್ರಮ ಭಾವೆ ಅವರು ದೃಢವಾಗಿ ಪ್ರತಿಪಾದಿಸಿದರು.
ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಇದು
ಕಾಂಗ್ರೆಸ್ನಂತ ಜಾತ್ಯತೀತ ಆಡಳಿತಗಾರರು ಸಾಮ್ಯವಾದಿ ಮತ್ತು ಜಿಹಾದಿ ಶಕ್ತಿಗಳೊಂದಿಗೆ ಸೇರಿ ದೇಶದಲ್ಲಿ ಕೇಸರಿ ಭಯೋತ್ಪಾದನೆ ಇದೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದರು. ಇದಕ್ಕಾಗಿ ಮಾಲೇಗಾಂವ್ 2008, ಸಮಝೌತಾ ಸ್ಫೋಟ, ಮಡಗಾಂವ್ ಸ್ಫೋಟ 2009, ದಾಭೋಲ್ಕರ್-ಪಾನ್ಸರೆ ಹತ್ಯೆಯಂತ ಅನೇಕ ಪ್ರಕರಣಗಳಲ್ಲಿ ನಿರಪರಾಧಿ ಹಿಂದೂ ನಿಷ್ಠರನ್ನು ಸಿಲುಕಿಸಲಾಯಿತು. ಈ ಷಡ್ಯಂತ್ರಕ್ಕೆ ಬಲಿಯಾದವರ ಬೆನ್ನಿಗೆ ನಿಲ್ಲುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಡ ರಾಜ್ಯಗಳ ಸಂಘಟಕ ಸುನೀಲ್ ಘನವಟ್ ಅವರು ಹೇಳಿದ್ದಾರೆ.
14 ಸಾವಿರ ಹತ್ಯೆಗಳ ಬಗ್ಗೆ ಯಾರೂ ಮಾತಡಲ್ಲ
ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರು ಮಾತನಾಡಿ, ದಾಭೋಲ್ಕರ್, ಪಾನ್ಸರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆಯಾದ ನಂತರ ಅಳುತ್ತಾರೆ. ಆದರೆ ಸಾಮ್ಯವಾದಿಗಳು ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಹತ್ಯೆಗಳನ್ನು ಮಾಡಿದ್ದಾರೆ. ಇದರ ಬಗ್ಗೆ ಯಾರೂ ಏಕೆ ಮಾತಾಡಲ್ಲ. ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಸಿಲುಕಿಸಲಾದ ಇನ್ನು ಕೆಲವು ಹಿಂದೂ ನಿಷ್ಠರ ಸನ್ಮಾನವೂ ಇದೇ ಸ್ಥಳದಲ್ಲಿ ಮತ್ತು ಇದೇ ವೇದಿಕೆಯ ಮೇಲೆ ನಡೆಯಲಿದೆ. ನಾವು ಸಮಾಜದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಇಕೋಸಿಸ್ಟಂ ವಿರುದ್ಧ ಹೋರಾಡಬೇಕು ಎಂದರು.
ಇದನ್ನೂ ಓದಿ: ಕರಾವಳಿ ಮಾತ್ರವಲ್ಲ, ರಾಜ್ಯವ್ಯಾಪಿ ಕಂಬಳಕ್ಕೆ ಗ್ರೀನ್ ಸಿಗ್ನಲ್.. ಹೈಕೋರ್ಟ್​ ಆದೇಶ
ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸದ್ಗುರು ಸ್ವಾತಿ ಖಾಡ್ಯೆ, ಹಿಂದೂ ಏಕತಾ ಜಿಲ್ಲಾಧ್ಯಕ್ಷ ದೀಪಕ್ ದೇಸಾಯಿ ಮತ್ತು ನಗರ ಪ್ರಮುಖ ಗಜಾನನ ತೋಡಕರ್, ಮಹಾರಾಷ್ಟ್ರ ಮಂದಿರ ಮಹಾಸಂಘದ ಅಶೋಕ್ ಗುರವ, ಶಿವಸೇನೆಯ ಉಪಜಿಲ್ಲಾ ಪ್ರಮುಖ ಉದಯ ಭೋಸಲೆ ಮತ್ತು ಕಿಶೋರ್ ಘಾಟಗೆ, ಉದ್ದವ್ ಬಾಳಾಸಾಹೇಬ್ ಪಕ್ಷದ ಉಪಜಿಲ್ಲಾ ಪ್ರಮುಖ ಶಂಭಾಜಿರಾವ್ ಭೋಕರೆ ಮತ್ತು ಕರ್ವೀರ ತಾಲ್ಲೂಕು ಪ್ರಮುಖ ರಾಜು ಯಾದವ್, ಸ್ವಾತಂತ್ರ್ಯವೀರ ಸಾವರ್ಕರ್ ಸಾಹಿತ್ಯ ಮತ್ತು ವಿಜ್ಞಾನ ಮಂಡಳದ ಅಧ್ಯಕ್ಷ ನಿತಿನ್ ವಾಡೀಕರ್, ಉದ್ಯಮಿ ಶ್ರೀಮತಿ ಮನೀಷಾ ವಾಡೀಕರ್, ಶಿವಪ್ರತಿಷ್ಠಾನ ಹಿಂದೂಸ್ಥಾನದ ಜಿಲ್ಲಾ ಕಾರ್ಯವಾಹ ಸುರೇಶ್ ಯಾದವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಹಿಂದೂ ಜನಜಾಗೃತಿ ಸಮಿತಿಯ ಸುನೀಲ್ ಘನವಟ್ ಮಾಡಿದರು. ನಿರೂಪಣೆಯನ್ನು ವಿಪುಲ್ ಭೋಪಳೆ ಮತ್ತು ಅಮೋಲ್ ಕುಲಕರ್ಣಿ ಅವರು ನಡೆಸಿಕೊಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ