/newsfirstlive-kannada/media/media_files/2026/02/11/hdk-and-chandra-babu-naidu-meeting-1-2026-02-11-12-28-50.jpg)
ಕೋಲಾರ ಜಿಲ್ಲೆಗೆ ಕೃಷ್ಣಾ ನದಿ ನೀರು ಹರಿಸಲು ಮನವಿ
ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರಕ್ಕೆ ಕೃಷ್ಣಾ ನದಿ ನೆರೆ ನೀರು ಹರಿಸುವ ಬೇಡಿಕೆಯನ್ನು ಈಗ ಆಂಧ್ರಪ್ರದೇಶ ಸರ್ಕಾರದ ಮುಂದೆ ಇಡಲಾಗಿದೆ. ನಿನ್ನೆ ದೆಹಲಿಗೆ ಭೇಟಿ ನೀಡಿದ್ದ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಮುಂದೆ ಕೃಷ್ಣಾ ನದಿಯ ಪ್ರವಾಹದಿಂದ ನೀರು ಸಮುದ್ರ ಪಾಲಾಗುತ್ತಿದೆ. ಹೀಗೆ ವ್ಯರ್ಥವಾಗಿ ನೀರು ಸಮುದ್ರ ಸೇರುವ ಬದಲು ಆಂಧ್ರದ ಗಡಿ ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವಂತೆ ಮನವಿ ಮಾಡಲಾಗಿದೆ. ಕೋಲಾರ ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಈ ಮನವಿಯನ್ನು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮಾಡಿದ್ದಾರೆ. ಆಂಧ್ರ ಗಡಿಯಲ್ಲಿರುವ HNSS ಯೋಜನೆ ಮೂಲಕ ಜಿಲ್ಲೆಗಳಿಗೆ ನೀರು ಹರಿಸಲು ಮನವಿ ಮಾಡಲಾಗಿದೆ. ಕರ್ನಾಟಕದ 3 ಜಿಲ್ಲೆಗಳ ನೀರಿನ ಬವಣೆಯ ಕುರಿತು ಚಂದ್ರಬಾಬು ನಾಯ್ಡು ಅವರಿಗೆ ಸಂಸದ ಮಲ್ಲೇಶ್ ಬಾಬು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದೇ ವೇಳೆ ವಸ್ತು ಸ್ಥಿತಿಯನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ವಿವರಿಸಿದ್ದಾರೆ. ಮಲ್ಲೇಶ್ ಬಾಬು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಇಬ್ಬರೂ ಬಯಲು ಸೀಮೆಯ ಜಿಲ್ಲೆಗಳಿಗೆ ಕೃಷ್ಣಾ ನದಿಯ ನೀರು ಅನ್ನು ಹರಿಸುವಂತೆ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ.
ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಕುರಿತು ಚಂದ್ರ ಬಾಬು ನಾಯ್ಡುಗೆ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಗಡಿಭಾಗದಲ್ಲಿ ಆಂಧ್ರ ಪ್ರದೇಶ ಸರ್ಕಾರವು 'ಹಂದ್ರಿ ಸುಜಲಾ ಶ್ರವಂತಿ ಯೋಜನೆ' ಅಂದರೇ, ಹೆಚ್.ಎನ್.ಎಸ್.ಎಸ್ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಕರ್ನಾಟಕದ ಈ ಮೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೆಚ್ಚುವರಿ ನೆರೆ ನೀರನ್ನು ಕೊಡಬೇಕು. ಈ ಮನವಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಲ್ಲೇಶ್ ಬಾಬು ಇಬ್ಬರೂ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಆಂಧ್ರ ಪ್ರದೇಶದ ಗಡಿಯನ್ನು ಹಂಚಿಕೊಂಡಿವೆ. ಪಾಲಾರ್ ಮತ್ತು ಪೆನ್ನಾರ್ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಈ ಭಾಗದ ಜನರು ಅನೇಕ ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಲಭ್ಯವಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಮಾನವೀಯ ದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು . ನಿಮ್ಮ ಮನವಿಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುವೆ ಎಂಬ ಭರವಸೆಯನ್ನು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ನೀಡಿದ್ದಾರೆ. ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ನೀವು ಹೇಳಿದ ಮೂರು ಜಿಲ್ಲೆಗಳ ನೀರಿನ ಸಮಸ್ಯೆ ಬಗ್ಗೆ ನನಗೂ ಮಾಹಿತಿ ಇದೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/02/11/hdk-and-chandra-babu-naidu-meeting-2026-02-11-12-29-16.jpg)
ಮಲ್ಲೇಶ್ ಬಾಬು ಬರೆದಿರುವ ಪತ್ರದಲ್ಲಿರುವ ಪ್ರಮುಖ ಅಂಶಗಳು
ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜನರು ಕೃಷಿಯನ್ನ ಅವಲಂಬಿಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶಕ್ಕೆ ತರಕಾರಿ, ಹಣ್ಣು,ಹಾಲು,ಹೂ ಮತ್ತು ಅಗತ್ಯ ವಸ್ತುಗಳನ್ನ ಈ ಜಿಲ್ಲೆಗಳು ಪೂರೈಸುತ್ತಿವೆ. 2007ಕ್ಕೂ ಮುನ್ನ ಐದು ಸಾವಿರ ಕೆರೆಗಳ ಕೋಲಾರದಲ್ಲಿ ಇದ್ದವು . ಈಗ ಬರಪೀಡಿತ ಪ್ರದೇಶವಾಗಿದೆ. ೧೫೦೦-೨೦೦೦ ಅಡಿವರೆಗೂ ಬೋರ್ ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಬತ್ತಿ ಹೋಗಿದೆ. ಕೆಸಿ ವ್ಯಾಲಿ, ಹೆಚ್ ಎನ್ ವ್ಯಾಲಿ ಮೂಲಕ ಬೆಂಗಳೂರಿನಿಂದ ಸಂಸ್ಕರಿತ ನೀರು ಹರಿಸಲಾಗುತ್ತಿದೆ. ಇದರಲ್ಲಿ ಕೆಮಿಕಲ್ ನೀರು ಹೆಚ್ಚು ಇದೆ. ಜನರಿಗೆ ಜೀವಕ್ಕೆ ತೊಂದರೆ ಆಗುತ್ತೆ . ಮಾನವನ ಹಕ್ಕುಗಳಿಗೆ ಧಕ್ಕೆಯಾಗಿದೆ. ಕೃಷ್ಣಾ ನದಿ ನೀರು ಸಮುದ್ರ ಪಾಲು ಆಗುತ್ತಿದೆ. 10 ವರ್ಷಗಳಲ್ಲಿ 699 ಟಿಎಂಸಿ ನೀರು ಸಮುದ್ರ ಸೇರಿದೆ. ಹಾಗಾಗಿ ಹೆಚ್ ಎನ್ ಎಸ್ ಎಸ್ ಯೋಜನೆಯಿಂದ ನೀರು ಹರಿಸಿ. ಪನ್ನಾರ್, ಬಂಕಾಪುರ ಸೇರಿದಂತೆ ಕರ್ನಾಟಕ ಗಡಿ ಭಾಗದಲ್ಲಿ ಕೃಷ್ಣಾ ನದಿ ನೀರು ತರಲಾಗಿದೆ. ಇಲ್ಲಿಂದ ನೀರನ್ನ ಮೂರು ಜಿಲ್ಲೆಗಳ ಕುಡಿಯುವ ನೀರಿಗಾಗಿ ಹರಿಸಿ ಎಂದು ಮನವಿ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ಮನವಿಗೆ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇತ್ತೀಚೆಗೆ ಚಿಂತಾಮಣಿಗೆ ಬಂದಿದ್ದ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅವರಿಗೂ ಅವಿಭಜಿತ ಕೋಲಾರ ಜಿಲ್ಲೆಗೆ ಆಂಧ್ರದ ಗಡಿಯಿಂದಲೇ ಕೃಷ್ಣಾ ನದಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನ ನಿವೃತ್ತ ಜಸ್ಟೀಸ್ ಗೋಪಾಲ್ ಗೌಡ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜಿ.ಕೆ.ಕೃಷ್ಣಾರೆಡ್ಡಿ ಮನವಿ ಮಾಡಿದ್ದರು. ಈಗ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ನೇರವಾಗಿ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us