/newsfirstlive-kannada/media/media_files/2025/08/06/dharmasthala-youtuber-2025-08-06-19-50-22.jpg)
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಯೂಟ್ಯೂಬರ್ಗಳ ಮೇಲೆ ಹಲ್ಲೆ ನಡೆದಿದೆ. ನೇತ್ರಾವತಿಯ ಪಾಂಗಳ ಎಂಬಲ್ಲಿ 3 ಮಂದಿ ಯೂಟ್ಯೂಬರ್ಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪ್ರತಿಷ್ಠಿತ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಹಲ್ಲೆ ಮಾಡಲಾಗಿದೆಯಂತೆ. ಹಲ್ಲೆ ಖಂಡಿಸಿ ಪಾಂಗಳ ಕ್ರಾಸ್ ಬಳಿ ನೂರಾರು ಜನ ಸೇರಿದ್ದು, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ: ಮಾಧುರಿ ಆನೆಗಾಗಿ ಅಂಬಾನಿ ವಿರುದ್ಧ ಸಿಡಿದು ನಿಂತ ಜನ- ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ವಂತಾರ
ಏನಿದು ಪ್ರಕರಣ..?
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾವು ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸ್ತಿದೆ. ಅನಾಮಿಕ ದೂರುದಾರ ಕೊಟ್ಟ ಮಾಹಿತಿ ಆಧಾರದ ಮೇಲೆ ಎಸ್ಐಟಿ, ಅಲ್ಲೇ ಬೀಡು ಬಿಟ್ಟು ತೀವ್ರ ತನಿಖೆ ನಡೆಸ್ತಿದೆ. ಸದ್ಯ ಬುರುಡೆ ರಹಸ್ಯವನ್ನು ಬೆನ್ನು ಹತ್ತಿರುವ ಅಧಿಕಾರಿಗಳು, ಅನಾಮಿಕ ಗುರುತು ಮಾಡಿದ ಜಾಗವನ್ನು ಅಗೆದು ಅಸ್ಥಿ ಪಂಜರಕ್ಕಾಗಿ ಹುಡುಕಾಟ ನಡೆಸ್ತಿದೆ.
ಮತ್ತೊಂದು ಕಡೆ ಎಸ್ಐಟಿ ತನಿಖೆಯನ್ನು ಮಾಧ್ಯಮಗಳು ಹಾಗೂ ಯುಟ್ಯೂಬರ್ಗಳು ನಿರಂತರವಾಗಿ ವರದಿ ಮಾಡುತ್ತಿವೆ. ಆದರೆ ಕೆಲವು ಯೂಟ್ಯೂಬರ್ಗಳು, ಧರ್ಮಸ್ಥಳ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿವೆ ಅನ್ನೋದು ಅಲ್ಲಿನ ಸ್ಥಳೀಯರ ಆರೋಪ. ನಮ್ಮ ಕ್ಷೇತ್ರದ ಮತ್ತು ಪ್ರತಿಷ್ಠಿತ ಕುಟುಂಬ ಒಂದನ್ನು ಗುರಿಯಾಗಿಸಿಕೊಂಡು ಯೂಟ್ಯೂಬರ್ಗಳು ಸುಳ್ಳು ಸುದ್ದಿಯನ್ನು ಹೇಳ್ತಿದ್ದಾರೆ ಎಂದು ಸ್ಥಳೀಯರು ರೊಚ್ಚಿಗೆದ್ದಿದ್ದಾರೆ.
ಇವತ್ತು ಆಗಿದ್ದು ಏನು..?
ಧರ್ಮಸ್ಥಳ ಪ್ರಕರಣದ ಬಗ್ಗೆ ನಿರಂತರವಾಗಿ ವರದಿ ಮಾಡಿಕೊಂಡು ಬರುತ್ತಿದ್ದ ಸುಮಾರು 40 ಯೂಟ್ಯೂಬರ್ಗಳು ಇವತ್ತು ಧರ್ಮಸ್ಥಳಕ್ಕೆ ಬರುತ್ತಿದ್ದರು. ಈ ವಿಚಾರ ಅಲ್ಲಿನ ಸ್ಥಳೀಯರಿಗೆ ಗೊತ್ತಾಗಿದೆ. ಯೂಟ್ಯೂಬರ್ಗಳ ಸುಳ್ಳು ಸುದ್ದಿಯನ್ನು ಖಂಡಿಸಿ ಪ್ರತಿಭಟನೆ ಮುಂದಾಗಿದ್ದಾರೆ. ಈ ವೇಳೆ ಯೂಟ್ಯೂಬರ್ಗಳು ಹಾಗೂ ಧರ್ಮಸ್ಥಳ ಗ್ರಾಮದ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಆಗ ನೂಕಾಟ, ತಳ್ಳಾಟ ನಡೆದು ಕೆಲವು ಯೂಟ್ಯೂಬರ್ಗಳ ಮೇಲೆ ಹಲ್ಲೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಗಂಭೀರವಾಗಿ ಗಾಯಗೊಂಡಿರುವ ಮೂವರು ಯೂಟ್ಯೂಬರ್ಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀವ್ರಗೊಂಡ ಗಲಾಟೆ..
ನೂಕಾಟ, ತಳ್ಳಾಟದಲ್ಲಿ ಗಲಾಟೆ ತೀವ್ರಗೊಂಡಿತ್ತು. ಸ್ಥಳೀಯರು ಹಲ್ಲೆ ಮಾಡ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಕೆಲವು ಕ್ಯಾಮರಾಗಳನ್ನೂ ಒಡೆದು ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಕೂಡ ಸಾಕ್ಷಿಯಾಗಿ ಇವೆ.
ಸ್ಥಳೀಯರ ಆರೋಪ ಏನು..?
ಧರ್ಮಸ್ಥಳ ವಿರುದ್ಧದ ಆರೋಪ ಪ್ರಕರಣದಲ್ಲಿ ಎಸ್ಐಟಿ ತನಿಖೆ ನಡೆಸ್ತಿದೆ. ತನಿಖೆಯಿಂದ ಸತ್ಯ ಹೊರ ಬರಲಿದೆ. ಆದರೆ ಕೆಲವು ಯೂಟ್ಯೂಬರ್ಗಳು ಸುಖಾ ಸುಮ್ಮನೆ ಕ್ಷೇತ್ರದ ಬಗ್ಗೆ ಸುಳ್ಳು ಆರೋಪ ಮಾಡ್ತಿದ್ದಾರೆ. ಇದು ನಿಲ್ಲಬೇಕು. ಯೂಟ್ಯೂಬರ್ಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಏನಾಗ್ತಿದೆ..?
ಸದ್ಯ ಧರ್ಮಸ್ಥಳ ಗ್ರಾಮಸ್ಥರೆಲ್ಲ ಅಲ್ಲಿನ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಯೂಟ್ಯೂಬರ್ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕ್ಷೇತ್ರದ ಬಗ್ಗೆ ಸುಳ್ಳು ಮಾಹಿತಿ ನೀಡ್ತೀರೋದನ್ನು ನಾವು ಸಹಿಸಲ್ಲ. ನಮಗೆ ನ್ಯಾಯಬೇಕು. ಕ್ಷೇತವನ್ನು ನಾವು ಉಳಿಸಿಕೊಳ್ಳಬೇಕು. ಇದಕ್ಕೆಲ್ಲ ಪೊಲೀಸರು ನಮಗೆ ಪರಿಹಾರ ನೀಡಬೇಕು ಅಂತಾ ಧರ್ಮಸ್ಥಳ ಠಾಣೆ ಮುಂದು ಪ್ರತಿಭಟನೆ ನಡೆಸ್ತಿದ್ದಾರೆ. ಪೊಲೀಸರು ಸ್ಥಳೀಯರ ಮನವೊಲಿಸರು ಪ್ರಯತ್ನ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ