/newsfirstlive-kannada/media/post_attachments/wp-content/uploads/2025/01/SURYA_TEAM-1.jpg)
ಪುಣೆ ಪಂದ್ಯ ಗೆದ್ದು ಟಿ20 ಸರಣಿ ಜಯಿಸಿದರೂ, ಟೀಮ್ ಇಂಡಿಯಾದಲ್ಲಿ ಸಮಾಧಾನ ಇಲ್ಲ. ಇಂದು ಮುಂಬೈನಲ್ಲಿ ನಡೆಯುವ ಮೆಗಾ ಫೈಟ್ಗೂ ಮುನ್ನ ಟೀಮ್ ಮ್ಯಾನೇಜ್ಮೆಂಟ್ ವಲಯದಲ್ಲಿ ಟೆನ್ಶನ್ ಶುರುವಾಗಿದೆ. ಸಿರೀಸ್ ಜಯಸಿದರೂ ಭಾರತ ತಂಡಕ್ಕೆ ಟೆನ್ಶನ್ ಯಾಕೆ?.
ಇಂಡೋ-ಇಂಗ್ಲೆಂಡ್ ಅಂತಿಮ ಟಿ20 ಫೈಟ್ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್ ವಾಂಖೆಡೆ ಅಂಗಳದಲ್ಲಿ ಸರಣಿಯ ಕೊನೆ ಫೈಟ್ ನಡೆಯಲಿದೆ. ಸರಣಿ ಗೆದ್ದಿರುವ ಟೀಮ್ ಇಂಡಿಯಾ ಮುಂಬೈ ಮಹಾನಗರಿಯಲ್ಲಿ ಗೆಲುವನ್ನ ಎದುರು ನೋಡ್ತಿದೆ. ಈಗಾಗಲೇ ಸರಣಿ ಕೈ ಚೆಲ್ಲಿರೋ ಪ್ರವಾಸಿ ಆಂಗ್ಲ ಪಡೆ ಕೊನೆ ಪಂದ್ಯ ಗೆದ್ದು ಮರ್ಯಾದೆ ಉಳಿಸಿಕೊಳ್ಳೋ ಯತ್ನದಲ್ಲಿದೆ.
ಮುಂಬೈ ಮಹಾಕಾಳಗಕ್ಕೆ ಕಿಚ್ಚು ಹಚ್ಚಿದ ವಿವಾದ.!
4ನೇ ಟಿ20 ಪಂದ್ಯದಲ್ಲಿ ಶಿವಂ ದುಬೆ ಕಂಕಷನ್ ಇಂಜುರಿಗೆ ತುತ್ತಾದ ಬಳಿಕ ಸಬ್ಸ್ಟಿಟ್ಯೂಟ್ ಪ್ಲೇಯರ್ ಆಗಿ ಹರ್ಷಿತ್ ರಾಣಾ ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ರು. ಅದೃಷ್ಟದ ಅವಕಾಶದಲ್ಲಿ ಡೆಬ್ಯೂ ಮಾಡಿದ ಹರ್ಷಿತ್ ರಾಣಾ, 3 ವಿಕೆಟ್ ಕಬಳಿಸಿ ಮ್ಯಾಚ್ ವಿನ್ನರ್ ಆದ್ರು. ಪಂದ್ಯ ಅಂತ್ಯವಾದ ಬೆನ್ನಲ್ಲೇ ಇದು ವಿವಾದಕ್ಕೆ ಕಾರಣವಾಯ್ತು. ಆಲ್ರೌಂಡರ್ ದುಬೆಗೆ ಕಂಕಷನ್ ಸಬ್ಸ್ಟಿಟ್ಯೂಟ್ ಆಗಿ ಸ್ಪೆಷಲಿಸ್ಟ್ ಬೌಲರ್ ಎಂಟ್ರಿಯಾಗಿದ್ದಕ್ಕೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕಿಡಿ ಕಾರಿದ್ದಾರೆ. ಹಲವು ಆಂಗ್ಲ ಪಡೆಯ ಮಾಜಿ ಪ್ಲೇಯರ್ಸ್ ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಈ ವಿವಾದ ಇಂದಿನ ಪಂದ್ಯಕ್ಕೆ ಕಿಚ್ಚು ಹಚ್ಚಿದೆ.
ಸರಣಿ ಗೆದ್ದರೂ ಟೀಮ್ ಇಂಡಿಯಾಗೆ ತಪ್ಪದ ಟೆನ್ಶನ್.!
ಈಗಾಗಲೇ ಟೀಮ್ ಇಂಡಿಯಾ ಸರಣಿ ಗೆದ್ದಾಗಿದೆ. ಆದ್ರೂ, ತಂಡದಲ್ಲಿ ಟೆನ್ಶನ್ ತಪ್ಪಿಲ್ಲ. ಆಟಗಾರರ ಕಳಪೆ ಪರ್ಫಾಮೆನ್ಸ್ ಟೀಮ್ ಮ್ಯಾನೇಜ್ಮೆಂಟ್ ಟೆನ್ಶನ್ ಹೆಚ್ಚಿಸಿದೆ. ಅಂತಿಮ ಟಿ20 ಪರ್ಫಾಮೆನ್ಸ್ ಟೀಮ್ ಇಂಡಿಯಾದ ಹಲವು ಆಟಗಾರರ ಭವಿಷ್ಯ ನಿರ್ಧರಿಸಲಿದೆ.
‘ಸೈಲೆಂಟ್ ಸಂಜು’.. ಆರಂಭಿಕನ ಸ್ಥಾನಕ್ಕೆ ಕುತ್ತು.!
ಸೌತ್ ಆಫ್ರಿಕಾ ಪ್ರವಾಸದಲ್ಲಿ 2 ಸೆಂಚುರಿ ಸಿಡಿಸಿ ಮಿಂಚಿದ್ದ ಸಂಜು ಸ್ಯಾಮ್ಸನ್, ಟಿ20 ಫಾರ್ಮೆಟ್ನಲ್ಲಿ ಓಪನರ್ ಸ್ಥಾನವನ್ನ ಕಬ್ಜಾ ಮಾಡಿದರು. ಆದ್ರೆ, ಇಂಗ್ಲೆಂಡ್ ವಿರುದ್ಧ ಫ್ಲಾಪ್ ಶೋ ನೀಡಿದ್ದಾರೆ. 8.75ರ ಹೀನಾಯ ಸರಾಸರಿಯಲ್ಲಿ ರನ್ಗಳಿಸಿದ್ದು, ಈ ಪರ್ಫಾಮೆನ್ಸ್ ಸ್ಥಾನಕ್ಕೆ ಸಂಕಷ್ಟ ತಂದಿಟ್ಟಿದೆ. ಮುಂದಿನ ಸರಣಿಗಳಲ್ಲಿ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ತಂಡಕ್ಕೆ ಎಂಟ್ರಿ ಕೊಟ್ರೆ, ಸಂಜು ಸ್ಥಾನಕ್ಕೆ ಕುತ್ತು ಬರಲಿದೆ. ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ಇಂದಿನ ಪಂದ್ಯದಲ್ಲಿ ಸಿಡಿಲಬ್ಬರದ ಆಟ ಆಡಬೇಕಿದೆ.
ಸಾರಥಿ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ.!
ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನ ಅಧಿಪತಿ ಅನ್ನಿಸಿಕೊಂಡಿದ್ದ ಆಟಗಾರ. ಆದ್ರೆ, ನಾಯಕನ ಪಟ್ಟಕ್ಕೇರಿದ ಬಳಿ ಸೂರ್ಯ ಶೈನ್ ಆಗ್ತಿಲ್ಲ. ಆಫ್ರಿಕಾದಲ್ಲಿ ಫ್ಲಾಪ್ ಆದ ಸೂರ್ಯ, ಇದೀಗ ಇಂಗ್ಲೆಂಡ್ ಸರಣಿಯಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕೇವಲ 6.50ರ ಹೀನಾಯ ಸರಾಸರಿಯಲ್ಲಿ ರನ್ಗಳಿಸಿರೋ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಕೊನೆಯ ಟಿ20ಯಲ್ಲಾದ್ರೂ ಮಿಸ್ಟರ್ 360 ಈ ಪ್ರಶ್ನೆಗೆ ಆನ್ಸರ್ ಕೊಡ್ತಾರಾ ನೋಡಬೇಕಿದೆ. ಇಲ್ಲದಿದ್ರೆ, ನಾಯಕತ್ವಕ್ಕೆ ಕಂಟಕ ಬರೋ ಸಾಧ್ಯತೆಯಿದೆ.
ವೇಗಿ ಮೊಹ್ಮದ್ ಶಮಿ ಫಿಟ್ನೆಸ್ ಕಥೆ ಏನು.?
ಇಂಗ್ಲೆಂಡ್ ಸರಣಿಯಲ್ಲಿ 14 ತಿಂಗಳ ಬಳಿಕ ವೇಗಿ ಮೊಹಮ್ಮದ್ ಶಮಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದಾರೆ. ಶಮಿ ಫಿಟ್ ಅನ್ನೋ ಕಾರಣಕ್ಕೆ ಈ ಸರಣಿಯ ಜೊತೆಗೆ ಮಹತ್ವದ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಶಮಿಗೆ ಸ್ಥಾನ ನೀಡಲಾಗಿದೆ. ಆದ್ರೆ, ಕಮ್ಬ್ಯಾಕ್ ಸೀರಿಸ್ನಲ್ಲಿ ಶಮಿ ಆಡಿರೋದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ಆ ಪಂದ್ಯದಲ್ಲೂ ಎಫೆಕ್ಟಿವ್ ಎನಿಸಿಕೊಳ್ಳದ ಶಮಿ, ವಿಕೆಟ್ ಕಬಳಿಸುವಲ್ಲೂ ವಿಫಲರಾಗಿದ್ದಾರೆ. ಸದ್ಯ ಶಮಿ ಫಿಟ್ನೆಸ್ ಮೇಲೆ ಅನುಮಾನ ಶುರುವಾಗಿದ್ದು, ಕೊನೆಯ ಟಿ20ಯಲ್ಲಿ ಆಡಿ ಮ್ಯಾಚ್ ಫಿಟ್ನೆಸ್ ಸಾಬೀತುಪಡಿಸ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:T20 ತಂಡದಲ್ಲಿ ಇಂದು ಮಹತ್ವದ ಬದಲಾವಣೆ.. ಪಂದ್ಯ ನಡೆಯುವುದು ಎಲ್ಲಿ, ಯಾವಾಗ?
ಉಪನಾಯಕ ಅಕ್ಷರ್ ಪಟೇಲ್ ಕೂಡ ಆಲ್ರೌಂಡ್ ಪರ್ಫಾಮೆನ್ಸ್ ನೀಡುವಲ್ಲಿ ಫೇಲ್ ಆಗಿದ್ದಾರೆ. ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್, ಬ್ಯಾಟಿಂಗ್ನಲ್ಲಿ ಫ್ಲಾಪ್ ಆಗಿದ್ದಾರೆ. 3 ಇನ್ನಿಂಗ್ಸ್ನಲ್ಲಿ ಕೇವಲ 7.33ರ ಸರಾಸರಿಯಲ್ಲಿ ರನ್ಗಳಿಸಿರುವ ಅಕ್ಷರ್ಗೂ ಇದು ಅಗ್ನಿಪರೀಕ್ಷೆ ಕಣ.
ಉಳಿದಂತೆ ಇಡೀ ಸರಣಿಯಲ್ಲಿ ಗುಡ್ ಪಾರ್ಟ್ನರ್ಶಿಪ್ನ ಕೊರತೆ ಟೀಮ್ ಇಂಡಿಯಾಗೆ ಹಿನ್ನಡೆಯಾಗಿದೆ. ಬೌಲಿಂಗ್ ವಿಭಾಗದಲ್ಲೂ ಇನ್ಕನ್ಸಿಸ್ಟೆನ್ಸಿ ತಂಡವನ್ನ ಬಿಡದೇ ಕಾಡಿದೆ. ಸರಣಿ ಗೆದ್ದ ಸಂಭ್ರಮದ ನಡುವೆ, ಈ ಎಲ್ಲಾ ಸಮಸ್ಯೆಗಳು ಟೀಮ್ ಇಂಡಿಯಾದ ಟೆನ್ಶನ್ ಹೆಚ್ಚಿಸಿವೆ. ಹಳಿ ತಪ್ಪಿದ ಆಟಗಾರರು ಅಂತಿಮ ಟಿ20ಯಲ್ಲಿ ಟ್ರ್ಯಾಕ್ಗೆ ಮರಳ್ತಾರಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ