/newsfirstlive-kannada/media/post_attachments/wp-content/uploads/2025/07/American-Airlines-flight-5.jpg)
ಕಳೆದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯಿತು. ಜೂನ್ನಲ್ಲಿ ಇರಾನ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ನಡೆಯಿತು. ಜುಲೈನಲ್ಲಿ ಕಾಂಬೋಡಿಯಾ ಮತ್ತು ಥೈಲ್ಯಾಂಡ್ (Cambodia vs Thailand) ಸಂಘರ್ಷ ಶುರುವಾಗಿದೆ. ಈ ಎರಡೂ ದೇಶಗಳು ಬೌದ್ಧರಾಗಿದ್ದರೂ, ಅವುಗಳ ನಡುವಿನ ವಿವಾದಕ್ಕೆ ಕಾರಣ ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ‘ಹಿಂದೂ ದೇವಾಲಯ’!
ಸುಮಾರು ನೂರು ವರ್ಷಗಳಿಂದ ಈ ಎರಡೂ ದೇಶಗಳು ದೇವಾಲಯಕ್ಕಾಗಿ ಕಿತ್ತಾಡಿಕೊಳ್ತಿದ್ದವು. ಈಗ ಯುದ್ಧವೇ ಶುರುವಾಗಿದೆ. ‘ಥೈಲ್ಯಾಂಡ್ ಆಕ್ರಮಣಕಾರಿ’ ಅಂತಾ ಆರೋಪಿಸಿ ಕಾಂಬೋಡಿಯಾ ಫೈರಿಂಗ್ ಶುರುಮಾಡಿತ್ತು. ನಂತರ ಥಾಯ್ ವಾಯುಪಡೆ F-16 ಫೈಟರ್ ಜೆಟ್ಗಳೊಂದಿಗೆ ಕಾಂಬೋಡಿಯಾದಲ್ಲಿನ ಮಿಲಿಟರಿ ನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಅಟ್ಯಾಕ್ ಮಾಡಿದೆ.
ಇದನ್ನೂ ಓದಿ: IIT ವಿದ್ಯಾರ್ಥಿಗಳಿಗೆ ವರ್ಷಕ್ಕೆ 1 ಕೋಟಿ ರೂಪಾಯಿ ಸಂಬಳ.. 500 ಹುದ್ದೆಗಳ ಆಫರ್!
ಸಂಘರ್ಷದ ಮೂಲ..
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಮಧ್ಯೆ 817 ಕಿಮೀ ಉದ್ದದ ಭೂ-ಗಡಿ ವಿವಾದ ಇದೆ. ಇದಕ್ಕಾಗಿ ಶತಮಾನಗಳಿಂದ ಸಂಘರ್ಷ ನಡೀತಿದೆ. ಪರಿಣಾಮ ನೂರಾರು ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. 2011 ರಲ್ಲಿ ನಡೆದ ಫಿರಂಗಿ ದಾಳಿಯೂ ಸೇರಿದೆ. ದೀರ್ಘ ಗಡಿ ವಿವಾದದ ಕೇಂದ್ರದಲ್ಲಿ ಶತ ಶತಮಾನಗಳಿಂದಿರುವ ದೇವಾಲಯಗಳಿವೆ. ಇವು ಮೊದಲು ಹಿಂದೂ ಯಾತ್ರಾ ಸ್ಥಳವಾಗಿದ್ದವು. ನಂತರ ಬೌದ್ಧಧರ್ಮಕ್ಕೆ ಸೇರಿಸಲ್ಪಟ್ಟವು.
ದೇವಾಲಯದ ವಿವಾದವೇನು?
ಡಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ (Dangrek mountains) ಶಿವನ ದೇಗುಲ (Preah Vihear temple) ಇದೆ. ಇದನ್ನು 9 ಮತ್ತು 11ನೇ ಶತಮಾನದ ಹೊತ್ತಿಗೆ ನಿರ್ಮಾಣ ಮಾಡಲಾಗಿದೆ ಎಂದು ನಂಬಲಾಗಿದೆ. ಇಲ್ಲಿ ಮಹಾದೇವನನ್ನು ಪೂಜಿಸಲಾಗುತ್ತಿತ್ತು. ನಂತರ ಇದನ್ನು ಬೌದ್ಧ ಧಾರ್ಮಿಕ ಸಂಕೀರ್ಣವಾಗಿ ಪರಿವರ್ತಿಸಲಾಯಿತು. ಇಲ್ಲಿನ ದೇವಾಲಯವು ಐತಿಹಾಸಿಕ ಖಮೇರ್ ಸಾಮ್ರಾಜ್ಯದ (Khmer Empire) ಕಾಲಕ್ಕೆ ಸೇರಿದ್ದಾಗಿದೆ. ಈ ಸಾಮ್ರಾಜ್ಯದ ಗಡಿಗಳು ಕಾಂಬೋಡಿಯಾ ಮತ್ತು ಥೈಲ್ಯಾಂಡ್ನ ಕೆಲವು ಭಾಗಗಳಿಗೆ ವಿಸ್ತರಿಸಿದ್ದವು. ಐತಿಹಾಸಿಕ ಆಧಾರದ ಮೇಲೆ ಕಾಂಬೋಡಿಯಾ, ಇಲ್ಲಿರುವ ದೇಗುಲ ತನಗೆ ಸೇರಬೇಕು ಎಂದು ಹೇಳಿಕೊಳ್ತಿದೆ. ಇದಕ್ಕೆ ಪ್ರತಿಯಾಗಿ ಥೈಲ್ಯಾಂಡ್ ತನ್ನ ಸುರಿನ್ ಪ್ರಾಂತ್ಯದ ಭಾಗವಾಗಿದೆ. ದೇವಾಲಯದ ಮೇಲೆ ನಮಗೆ ಹಕ್ಕಿದೆ ಎಂದು ಹೇಳಿಕೊಳ್ಳುತ್ತಿದೆ.
ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ, 15 ಕಂಪನಿ, ಐಷಾರಾಮಿ ಜೀವನ ಎಲ್ಲ ಬಿಟ್ಟ.. ಶಿವಭಕ್ತನಾದ ಉದ್ಯಮಿ!
1962ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ICJ) ದೇವಾಲಯವು ಕಾಂಬೋಡಿಯಾದ ಭಾಗವೆಂದು ತೀರ್ಪು ನೀಡಿದೆ. ಹೀಗಿದ್ದೂ ಥಾಯ್, ಇನ್ನೂ ತನ್ನ ಸೇನೆಯನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿದೆ. ಹೀಗಾಗಿ ಭೂಮಿಯ ಮಾಲೀಕತ್ವದ ಬಗ್ಗೆ ಎರಡೂ ದೇಶಗಳ ನಡುವೆ ವಿವಾದವಿದೆ.
ವಿವಾದದ ಮೂಲ..
ಇನ್ನು, ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ವಿವಾದದ ಮೂಲ 1904 ಮತ್ತು 1907. ಈ ಅವಧಿಯಲ್ಲಿ ಫ್ರಾನ್ಸ್ ಎರಡು ದೇಶಗಳ ಮೇಲೆ ನಿಯಂತ್ರಣ ಹೊಂದಿತ್ತು. ಹಾಗಾಗಿ ಎರಡು ದೇಶಗಳ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. 1904ರ ಒಪ್ಪಂದದಲ್ಲಿ ಎರಡೂ ದೇಶಗಳ ಗಡಿಯನ್ನು ನೈಸರ್ಗಿಕ ಜಲಾನಯನ ಪ್ರದೇಶ ಅಂದರೆ ಬೆಟ್ಟದ ಇಳಿಜಾರಿನ ಪ್ರಕಾರ ನಿರ್ಧರಿಸಲು ಒಪ್ಪಿಕೊಂಡಿದ್ದವು. 1907 ರಲ್ಲಿ ಮಾಡಲಾದ ನಕ್ಷೆಯು ಥೆಲ್ಯಾಂಡ್ನಿಂದ ದಿಕ್ಕಿನಿಂದ ವಿಮುಖವಾಯಿತು ಮತ್ತು ದೇವಾಲಯವನ್ನು ಕಾಂಬೋಡಿಯಾದ ಭಾಗವೆಂದು ಪರಿಗಣಿಸಲಾಯಿತು.
ಥೈಲ್ಯಾಂಡ್ ಮೊದಲು ಆ ನಕ್ಷೆಯನ್ನು ಒಪ್ಪಿಕೊಂಡಿತ್ತು. ಆದರೆ 1930ರ ದಶಕದಲ್ಲಿ ಥೈಲ್ಯಾಂಡ್ನಲ್ಲಿ ಮತ್ತೆ ರಾಜಕೀಯ ಅಲೆ ಶುರುವಾಗಿದೆ. ದೇವಾಲಯಕ್ಕಾಗಿ ಪ್ರತಿಭಟನೆ ತೀವ್ರಗೊಂಡಿತು. ನಂತರ ಪ್ರಕರಣ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರುತ್ತದೆ. ICJ 1962 ರಲ್ಲಿ ದೇವಾಲಯವನ್ನು ಕಾಂಬೋಡಿಯಾಗೆ ಹಸ್ತಾಂತ ಮಾಡುತ್ತದೆ. 2013ರಲ್ಲಿ ದೇವಾಲಯದ ಸುತ್ತಲಿನ ಭೂಮಿಯೂ ಕಾಂಬೋಡಿಯಾಕ್ಕೆ ಸೇರಿದೆ ಎಂದು ICJ ತೀರ್ಪು ನೀಡಿತು. ಇಲ್ಲಿ ಎರಡೂ ದೇಶಗಳ ಜನರು ದೇವಾಲಯವನ್ನು ಹೆಮ್ಮೆಯ ವಿಷಯವನ್ನಾಗಿ ತೆಗೆದುಕೊಂಡಿದ್ದು, ಇದೀಗ ಅದು ಪ್ರತಿಷ್ಠೆಯಾಗಿ ಬದಲಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?
ಕಳೆದ ಫೆಬ್ರವರಿಯಲ್ಲಿ ಕಾಂಬೋಡಿಯನ್ ಸೈನಿಕರು ಈ ಪ್ರದೇಶಕ್ಕೆ ಎಂಟ್ರಿ ನೀಡಿದ್ದರು. ಮಾತ್ರವಲ್ಲ, ಅಲ್ಲಿದ್ದ ಥಾಯ್ ಸೈನಿಕರ ಮುಂದೆ ರಾಷ್ಟ್ರಗೀತೆ ಹಾಡಿ ಸವಾಲು ಹಾಕಿದ್ದರು. ಆಗ ಉಂಟಾಗಿದ್ದ ಉದ್ವಿಗ್ನತೆ ಏಪ್ರಿಲ್ನಲ್ಲಿ ಕೊನೆಗೊಂಡಿತ್ತು. 2008ರ ಆರಂಭದಲ್ಲಿ ದೇವಾಲಯ ಸಂಕೀರ್ಣದ ಒಂದು ಭಾಗವಾದ ಪ್ರಿಯಾ ವಿಹಾರ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲು ಕಾಂಬೋಡಿಯಾ ಪ್ರಯತ್ನಿಸಿದಾಗ ಉದ್ವಿಗ್ನತೆ ಹೆಚ್ಚಾಗಿತ್ತು. ಇತ್ತೀಚೆಗೆ ಕಾಂಬೋಡಿಯಾ ದೇವಾಲಯದ ಸಮೀಪವಿರುವ ಪ್ರದೇಶಕ್ಕೆ ಭಾರೀ ಶಸ್ತ್ರಸಜ್ಜಿತ ಸೈನಿಕರನ್ನು ಕಳುಹಿಸಿದೆ ಎಂದು ಥಾಯ್ ಸೈನ್ಯ ಹೇಳಿದೆ. ಕಾಂಬೋಡಿಯಾ ಕೂಡ ಈ ಪ್ರದೇಶಕ್ಕೆ ಕಣ್ಗಾವಲು ಡ್ರೋನ್ಗಳನ್ನು ಕಳುಹಿಸಿದೆ ಎಂದು ಥೈಲ್ಯಾಂಡ್ ಹೇಳಿದೆ. ಥಾಯ್ ಸೈನ್ಯವು ಒಳನುಗ್ಗಲು ಪ್ರಯತ್ನಿಸಿದೆ ಎಂದು ಕಾಂಬೋಡಿಯಾ ಆರೋಪಿಸಿ ರಕ್ಷಣೆಗಾಗಿ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಈಗ ಥಾಯ್ ಹೇಳಿಕೊಳ್ತಿದೆ.
ಇದನ್ನೂ ಓದಿ: ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ