/newsfirstlive-kannada/media/post_attachments/wp-content/uploads/2025/03/MUDHOL-HOUND-3.jpg)
ಮುಧೋಳ ಶ್ವಾನ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅತಿ ಪ್ರಸಿದ್ಧಿಯನ್ನು ಪಡೆದಿರುವ ಶ್ವಾನದ ತಳಿ. ಈ ಬೇಟೆಗಾರ ಮನೆಯಲ್ಲಿ, ತೋಟದಲ್ಲಿ ಇದ್ದರೆ ಸಾಕು. ಯಾವ ಸೆಕ್ಯೂರಿಟಿ ಗಾರ್ಡ್ನ ಅವಶ್ಯಕತೆಯೂ ಬೀಳುವುದಿಲ್ಲ. ಅಕ್ಷರಶಃ ಸೈನಿಕನಂತೆ ಮನೆ ಮತ್ತು ತೋಟಗಳನ್ನು ಕಾಯಬಲ್ಲ ಛಾತಿ ಈ ಶ್ವಾನಗಳಿಗಿದೆ. ಇವು ಒಂದು ಬಾರಿ ವೈರಿಯ ಬೆನ್ನಟ್ಟಿದರೆ, ಅದನ್ನು ಮಕಾಡೆ ಮಲಗಿಸಿ ರಕ್ತತರ್ಪಣ ಬಿಡುವವರೆಗೂ ಹಿಂದೆ ಸರಿಯುವುದಿಲ್ಲ, ಅಷ್ಟು ಖತರ್ನಾಕ್ ಬೇಟೆನಾಯಿ ಈ ಮುಧೋಳ ಶ್ವಾನ.
ಮುಧೋಳ ಶ್ವಾನಗಳ ಸ್ವಾಮಿನಿಷ್ಠೆಯೂ ಕೂಡ ಅದೇ ಮಟ್ಟದಲ್ಲಿ ಇರುತ್ತದೆ. ಹೀಗಾಗಿಯೇ ಇವುಗಳನ್ನು ಮೊಟ್ಟ ಮೊದಲ ಬಾರಿ 2017ರಲ್ಲಿ ಭಾರತೀಯ ಸೇನೆಯಲ್ಲಿ ಗಡಿಯನ್ನು ಕಾಯಲು ಬಳಸಿಕೊಳ್ಳಲು ಅವಕಾಶ ನೀಡಲಾಯಿತು. ಈ ಶ್ವಾನಗಳು ಈಗ ಭಾರತ ಮತ್ತು ಪಾಕ್ ಗಡಿಯಲ್ಲಿ ಶತ್ರುಗಳ ಪಾಳಯದ ಎದೆ ನಡುಗಿಸುವಂತೆ ಕಾವಲು ಕಾಯುತ್ತಿವೆ. ಹಲವು ಕಾರ್ಯಾಚರಣೆಗೆ ಇವುಗಳ ಬಳಕೆ ಆಗುತ್ತಿದೆ.
ಇವುಗಳ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಕಂಡ ಮರಾಠಾ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಾಕಿ ಅವುಗಳಿಗೆ ಸೇನೆಯ ತರಬೇತಿ ನೀಡಿ ತನ್ನ ಸೇನೆಯಲ್ಲಿ ಇಟ್ಟುಕೊಂಡಿದ್ದ ಎಂದು ಇತಿಹಾಸಗಳು ಹೇಳುತ್ತವೆ. ಮುಧೋಳ ಶ್ವಾನಗಳು ಮೊಟ್ಟ ಮೊದಲ ಬಾರಿಗೆ ಸೇನೆಯಲ್ಲಿ ಕಾರ್ಯಾಚರಣೆಗೆ ಬಳಕೆಯಾಗಿದ್ದು ಶಿವಾಜಿ ಮಹಾರಾಜರ ಸೇನೆಯಲ್ಲಿ.
ಇದನ್ನೂ ಓದಿ:ಶಿವಾಜಿ ಸಮಾಧಿ ಪಕ್ಕ ನಾಯಿಯ ಸ್ಮಾರಕ ಯಾಕೆ ಕಟ್ಟಲಾಗಿತ್ತು? ಮುಧೋಳ ಶ್ವಾನಕ್ಕೂ ಛತ್ರಪತಿಯ ಸೇನೆಗೂ ಇತ್ತಾ ನಂಟು?
ಇನ್ನು ಮುಧೋಳ ಸಂಸ್ಥಾನದ ಕೊನೆಯ ದೊರೆ ಶ್ರೀಮಂತ ರಾಜಾ ಭೈರವಸಿಂಹರಾವ್ ಮಾಲೋಜಿರಾವ್ ಘೋರ್ಪಡೆ. ಈ ಮುಧೋಳ ಶ್ವಾನಗಳ ಸಂತತಿಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು ಎಂದು ಕೂಡ ಇತಿಹಾಸಗಳು ಹೇಳುತ್ತವೆ. ಇದೇ ಮುಧೋಳ ಮಹಾರಾಜರು 1900ನೇ ಇಸ್ವಿಯಲ್ಲಿ 5ನೇ ಕಿಂಗ್ ಜಾರ್ಜ್ಗೆ ಒಂದು ಜೋಡಿ ಮುಧೋಳ ಶ್ವಾನಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಅಂದಿನಿಂದ ಮುಧೋಳ ತಳಿಗಳ ಜನಪ್ರಿಯತೆ ಹೆಚ್ಚಿತು. ಸದ್ಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿ ಅವುಗಳ ಸಂತಾನಭಿವೃದ್ಧಿಗಾಗಿಯೇ Canine Research & Information Center (Mudhol Hound), Thimmapur, Bagalkot ಎಂಬ ಕೇಂದ್ರವನ್ನು ಹುಟ್ಟು ಹಾಕಲಾಗಿದೆ. 2009ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಒಂದು ಕೇಂದ್ರವನ್ನು ಸ್ಥಾಪಿಸಲಾಯ್ತು. ಮುಧೋಳ ತಳಿಯ ಶ್ವಾನಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದಲೇ ಈ ಕೇಂದ್ರ ಸ್ಥಾಪನೆಗೊಂಡಿದೆ.
ಈ ತಳಿಗಳು ತುಂಬಾ ಸಣಕಲು ದೇಹ ಹೊಂದಿದ್ದರೂ ಕೂಡ ಒಂದು ಹುಲಿಯನ್ನು ಕೂಡ ಸರಳವಾಗಿ ಎದುರಿಸಿ ಮಲಗಿಸುವ ಶಕ್ತಿಯನ್ನು ಹೊಂದಿವೆ. ಇವು ತಮ್ಮ ಶಕ್ತಿ ಹಾಗೂ ಚಾಣಾಕ್ಷತೆಗೆ ಮತ್ತು ಸ್ವಾಮಿನಿಷ್ಠೆಗೆ ಹೆಸರು ವಾಸಿ. ಅದು ಮಾತ್ರವಲ್ಲ ಅವುಗಳ ತೀಕ್ಷ್ಣ ಕಣ್ಣು ಅವುಗಳ ವಿಶೇಷ ಗುಣಗಳು. ಒಂದು ಬಾರಿ ಬೇಟೆ ಅವುಗಳ ಬಾಯಿಗೆ ಸಿಕ್ಕಿದರೆ ಅದನ್ನು ಬಾಯಿಯಿಂದ ಬಿಡಿಸುವುದು ಅಷ್ಟು ಸರಳವಲ್ಲ. ಅಂತಹ ಖತರ್ನಾಕ್ ಬೈಟ್ ಮುಧೋಳ ಶ್ವಾನಗಳು ಹೊಂದಿವೆ.
ಇದನ್ನೂ ಓದಿ:ಕೈದಿಯಾಗಿ ಬಂದವಳು.. ಮೊಘಲ್ ಸಾಮ್ರಾಜ್ಯದ ಮಹಾ ಸಾಮ್ರಾಜ್ಞಿನಿಯಾಗಿ ಬೆಳೆದಳು ! ಇದು ನಿಜಕ್ಕೂ ಒಂದು ರೋಚಕ ಕಥೆ
ಇನ್ನು ಮುಧೋಳ ಶ್ವಾನಗಳ ಇನ್ನೊಂದು ವಿಶೇಷ ಗುಣವೆಂದರೆ, ಅವು ಯಾವುದೇ ರೀತಿಯ ವಾತಾವರಣಕ್ಕೂ ಕೂಡ ಹೊಂದಿಕೊಳ್ಳಬಲ್ಲವು. ವಿಪರೀತ ಚಳಿ ಹಾಗೂ ಬಿಸಿಲು ಎರಡನ್ನು ಕೂಡ ಸಹಿಸುವ ಶಕ್ತಿ ಅವುಗಳ ಮೈಗುಣಕ್ಕಿದೆ. ಬೇಟೆನಾಯಿಗಳಲ್ಲಿ ಅತ್ಯಂತ ಚಾಣಾಕ್ಷ ನಾಯಿಗಳು ಅಂದ್ರೆ ಅದು ಮುಧೋಳ ನಾಯಿಗಳು. ಇವು ಗಂಟೆಗೆ 45 ಕಿಲೋ ಮೀಟರ್ ವೇಗದಲ್ಲಿ ಓಡುವ ಶಕ್ತಿಯನ್ನು ಹೊಂದಿವೆ. ಗ್ರೇ ಹೌಂಡ್ ತಳಿಗಿಂತಲೂ ಅತ್ಯಂತ ವೇಗವಾಗಿ ಓಡುವ ಶ್ವಾನದ ತಳಿ ಅಂದ್ರೆ ಅದು ಮುಧೋಳ ಶ್ವಾನ.
ಈ ರೀತಿಯ ವಿಶೇಷ ಗುಣಗಳನ್ನು ಹೊಂದಿರುವ ಕಾರಣದಿಂದಲೇ ಈ ತಳಿಗಳನ್ನು ಭಾರತೀಯ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಅವುಗಳಿಗೆ ವಿಶೇಷ ತರಬೇತಿ ನೀಡಿ ಗಡಿ ರಕ್ಷಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಅಂದ್ರೆ 2017ಕ್ಕೂ ಮೊದಲು ಆರ್ಮಿ ಮತ್ತು ಪೊಲೀಸ್ ಇಲಾಖೆಯಲ್ಲಿ ಕೇವಲ ಲ್ಯಾಬರಾಡರ್, ಜರ್ಮನ್ ಶಫರ್ಡ್ ಹಾಗೂ ಡಾಬರಮಾನ್ನಂತಹ ತಳಿಗಳನ್ನು ಮಾತ್ರ ತರಬೇತಿ ನೀಡಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು. ಈಗ ಮುಧೋಳ ಶ್ವಾನಕ್ಕೆ ಸೇನೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಪೊಲೀಸ್ ಇಲಾಖೆಯಲ್ಲೂ ಅವುಗಳನ್ನು ಉಪಯೋಗಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸದ್ಯ ಮುಧೋಳ ಶ್ವಾನಗಳ ಬೆಲೆಯೂ ಕೂಡ ದುಬಾರಿಯಾಗಿವೆ. ಒಂದು ಮುಧೋಳ ಪಪ್ಪಿ, 8 ಸಾವಿರ ರೂಪಾಯಿಂದ 20 ಸಾವಿರ ರೂಪಾಯಿವರೆಗೂ ಬೆಲೆಬಾಳುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ