KGF ರೀತಿ ಅಮ್ಮನ ಆಸೆ ಈಡೇರಿಸಲು ಪಣತೊಟ್ಟ ಮಗ; ಚಿನ್ನದ ಸರ ಕೊಡಿಸಲು ಮಾಡಿದ್ದೇನು ಗೊತ್ತಾ?

author-image
admin
Updated On
KGF ರೀತಿ ಅಮ್ಮನ ಆಸೆ ಈಡೇರಿಸಲು ಪಣತೊಟ್ಟ ಮಗ; ಚಿನ್ನದ ಸರ ಕೊಡಿಸಲು ಮಾಡಿದ್ದೇನು ಗೊತ್ತಾ?
Advertisment
  • KGF ಸಿನಿಮಾದಲ್ಲಿ ಅಮ್ಮನ ಆಸೆ ಈಡೇರಿಸಲು ಚಿನ್ನದ ಸಾಮ್ರಾಜ್ಯ!
  • ಅಮ್ಮನ ಚಿನ್ನದ ಆಸೆ ಈಡೇರಿಸಲು ತಪ್ಪು ದಾರಿ ಹಿಡಿದು ಸಿಕ್ಕಿಬಿದ್ದ ಮಗ
  • ಹೇಗಾದ್ರೂ ಮಾಡಿ ಅಮ್ಮನ ಆಸೆ ಈಡೇರಿಸಲು ಇವ್ನು ಮಾಡಿದ್ದೇನು?

ಅಮ್ಮ ಅಂದ್ರೆ ಆಕಾಶ. ಈ ಜಗತ್ತಿನಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದ್ರೂ ಸಿಗುತ್ತೆ. ಆದ್ರೆ ಅಮ್ಮನ ಪ್ರೀತಿ ಒಂದನ್ನ ಬಿಟ್ಟು. ಅಮ್ಮನ ಪ್ರೀತಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕೆಜಿಎಫ್​ ಸಿನಿಮಾದಲ್ಲಿ ರಾಕಿಬಾಯ್​ ಅಮ್ಮನಿಗಾಗಿ ಬಂಗಾರದ ಸಾಮ್ರಾಜ್ಯವನ್ನೇ ಕಟ್ಟುತ್ತಾನೆ. ಅಮ್ಮನಿಗೆ ಕೊಟ್ಟ ಮಾತಿನಂತೆ ಟನ್​ಗಟ್ಟಲೇ ಚಿನ್ನ ಸಂಪಾದಿಸುತ್ತಾನೆ. ಇದೇ ರೀತಿ ಇಲ್ಲೊಬ್ಬ ಅಮ್ಮನ ಆಸೆ ಈಡೇರಿಸುವ ಪಣ ತೊಟ್ಟಿದ್ದ. ಆದ್ರೀಗ ತಾಯಿ ಆಸೆ ಈಡೇರಿಸಲು ಹೋದವನು ಜೈಲುಪಾಲಾಗಿದ್ದಾನೆ.

ಅಮ್ಮ ಈ ಪ್ರಪಂಚದಲ್ಲಿರೋ ಬಂಗಾರನ್ನೆಲ್ಲ ತಂದು ಕೊಡ್ತೀನಿ. ಈ ಒಂದೇ ಒಂದು ಮಾತು ಕೆಜಿಎಫ್ ಸಿನಿಮಾದಲ್ಲಿ ರಾಕಿಬಾಯ್​ ನರಾಚಿ ಅನ್ನೋ ನರಕದಲ್ಲಿ ಚಿನ್ನದ ನಿಧಿಯನ್ನ ತೆಗೆದು ಬಂಗಾರದ ಸಾಮ್ರಾಜ್ಯವನ್ನೇ ಕಟ್ಟಿಬಿಡ್ತಾನೆ. ಕೆಜಿಎಫ್​ ಸಿನಿಮಾದ ಮೂಲ ತಿರುಳೇ ಅಮ್ಮ. ಅಮ್ಮನಿಗಾದ ಅವಮಾನ. ಅಮ್ಮ ಅನುಭವಿಸಿದ ನರಕವೇ ರಾಕಿಬಾಯ್​ನನ್ನ ಚಿನ್ನದೊಡೆಯನಾಗಿ ಮಾಡುತ್ತೆ. ತಾಯಿಗೆ ನೀಡಿದ ಒಂದೇ ಒಂದು ಮಾತಿಗಾಗಿ ರಾಕಿ ಚಿನ್ನದೂರನ್ನೆ ಸೃಷ್ಟಿ ಮಾಡಿ ಬಿಟ್ಟಿರ್ತಾನೆ. ಇದು ರೀಲ್​.. ಸಿನಿಮಾದಲ್ಲಿ ಎಲ್ಲಾ ಸಾಧ್ಯ. ಆದ್ರೆ ಇಲ್ಲೊಬ್ಬ ಮಗ ಅಮ್ಮನ ಚಿನ್ನದ ಆಸೆಗಾಗಿ ತಪ್ಪು ದಾರಿ ಹಿಡಿದಿದ್ದ. ಆ ದಾರಿಯೇ ಇವತ್ತು ಈ ಮಗನನ್ನ ಜೈಲು ಸೇರುವಂತೆ ಮಾಡಿದೆ.

publive-image

ಕೆಜಿಎಫ್‌​​ನಲ್ಲಿ ಅಮ್ಮನ ಆಸೆ ಈಡೇರಿಸಲು ಚಿನ್ನ ತೆಗೆದ ಮಗ!
ಕುಂದಾನಗರಿಯಲ್ಲಿ ತಾಯಿಗಾಗಿ ಉಂಡ ಮನೆಗೆ ಕನ್ನ ಹಾಕಿದ ಮಗ
ಬೆಳಗಾವಿಯಲ್ಲಿ ಇಂತಹದೊಂದು ಅಪರೂಪದಲ್ಲೇ ಅಪರೂಪದ ಘಟನೆ ನಡೆದಿದೆ. ಈ ಫೋಟೋದಲ್ಲಿರೋ ಈತನ ಹೆಸರು ಕೃಷ್ಣ ಸುರೇಶ್. ಬೆಳಗಾವಿಯ ಜ್ಯೋತಿ ನಗರದಲ್ಲಿ ಈ ಕೃಷ್ಣ ಸುರೇಶ್ ವಾಸವಿದ್ದ. ಮದುವೆಯೂ ಆಗಿತ್ತು. ಹೆಂಡತಿ ತಾಯಿ ಜೊತೆ ಆರಾಮಾಗಿದ್ದ. ಬೆಳಗಾವಿ ನಗರದಲ್ಲಿದ್ದ ಎಚ್​​ಡಿಎಫ್​ಸಿ ಬ್ಯಾಂಕ್​ಗಳ ಎಟಿಎಮ್​ಗೆ ಹಣ ಹಾಕುವ ಕೆಲಸ ಮಾಡ್ತಿದ್ದ. ಗುತ್ತಿಗೆ ಆಧಾರದಲ್ಲಿ ಕೃಷ್ಣ ಸುರೇಶ್ ಈ ಕೆಲಸ ಮಾಡ್ತಿದ್ದ. ಈ ಕೆಲಸವನ್ನೇ ನಿಯತ್ತಾಗಿ ಮಾಡ್ಕೊಂಡಿದ್ರೆ ಇವತ್ತು ಕೃಷ್ಣ ಸುರೇಶನ ಲೈಫ್​ ಎಲ್ಲರಂತೆ ಚೆನ್ನಾಗಿ ಇರ್ತಿತ್ತೋ ಏನೋ.

ಕೃಷ್ಣ ಸುರೇಶನದ್ದು ಮಿಡ್ಲ್‌ಕ್ಲಾಸ್ ಕುಟುಂಬ. ಮನೆಗೆ ಇವನೇ ಆಸರೆ. ಇರೋದ್ರಲ್ಲಿ ಈ ಕುಟುಂಬ ನೆಮ್ಮದಿಯಾಗಿತ್ತು. ಆದ್ರೆ ಈ ಕೃಷ್ಣ ಸುರೇಶನ ತಾಯಿಗೆ ಚಿನ್ನ ಹಾಕೋಬೇಕು ಅನ್ನೋ ಆಸೆ ಹುಟ್ಟಿಕೊಂಡಿದೆ. ಮಿಡ್ಲ್​ ಕ್ಲಾಸ್​ ಲೈಫ್​ ಲೀಡ್ ಮಾಡ್ತಿದ್ದ ಸುರೇಶ್​ಗೆ​ ಅಮ್ಮನಿಗಾಗಿ ಚಿನ್ನ ಮಾಡಿಸುವ ಶಕ್ತಿ ಇರಲಿಲ್ಲ. ಹಾಗಂತ ಅಮ್ಮನ ಆಸೆ ಈಡೇರಿಸೋದೆ ಇರೋದಕ್ಕೆ ಇಷ್ಟ ಇರಲಿಲ್ಲ. ಹೀಗಾಗಿ ಹೇಗಾದ್ರೂ ಮಾಡಿ ಅಮ್ಮನ ಆಸೆ ಈಡೇರಿಸಬೇಕು ಅಂದುಕೊಂಡಿದ್ದ ಕೃಷ್ಣ ಸುರೇಶ್ ವಾಮಮಾರ್ಗದ ದಾರಿ ಹಿಡಿದಿದ್ದ. ಆದ್ರೆ ಆ ದಾರಿ ಇವತ್ತು ಅವನು ಬದುಕಿನ ಮೇಲೆ ಕರಿ ಚಾಯೆ ಆವರಿಸುವಂತೆ ಮಾಡಿದೆ.

ಉಂಡ ಮನೆಗೆ ಕನ್ನ! ಎಟಿಎಮ್​ನಲ್ಲಿ ಲಕ್ಷ ಲಕ್ಷ ಹಣ ಕಳ್ಳತನ
ಕೃಷ್ಣ ಸುರೇಶ್​ಗೆ ತಾಯಿ ಆಸೆಯನ್ನ ಈಡೇರಿಸಬೇಕಾಗಿತ್ತು. ಕಷ್ಟ ಪಟ್ಟು ದುಡಿದು ಅಮ್ಮನ ಆಸೆ ಪೂರೈಸಿದ್ರೆ ಇವತ್ತು ಚೆನ್ನಾಗಿ ಇರ್ತಿದ್ದ ಏನೋ ಆದ್ರೆ ಅಮ್ಮನಿಗಾಗಿ ಈ ಸುರೇಶ್​ ತಪ್ಪು ದಾರಿ ತುಳಿದಿದ್ದ. ಅಸಲಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಕೃಷ್ಣ ಸುರೇಶ್​ ಎಟಿಎಮ್​ಗಳಿಗೆ ಹಣ ಹಾಕೋದು ಮಾಡ್ತಿದ್ದ. ಯಾವಾಗ ಚಿನ್ನ ಮಾಡಿಸ್ಬೇಕು ಅನ್ನೋ ಆಲೋಚನೆ ತಲೆಗೆ ಬಂತು, ಆಗ ಕೃಷ್ಣ ಸುರೇಶ್ ಕಣ್ಣಿಗೆ ಕಂಡಿದ್ದೆ ಈ ಎಟಿಎಮ್​​ಗಳು. ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲ ಎಚ್‌ಡಿಎಫ್‌ಸಿ ಎಟಿಎಂಗೆ ಕೃಷ್ಣ ಹಣ ಹಾಕ್ತಿದ್ದ. ಈ ಎಟಿಎಮ್​ ಕೀಗಳು ಕೂಡ ಕೃಷ್ಣ ಬಳಿಯಲ್ಲೇ ಇರ್ತಿದ್ವು. ಆಗ ಈ ಎಟಿಎಮ್​​ನ್ನೆ ದೋಚೋದಕ್ಕೆ ಸುರೇಶ್ ಕೃಷ್ಣ ಸಂಚು ರೂಪಿಸಿದ್ದ

ಎಟಿಎಂಗೆ ಹಣ ಹಾಕಿ ಬಳಿಕ ತಾನೇ ಕದ್ದ ! ಕದ್ದ ಹಣದಲ್ಲಿ ತಾಯಿಗೆ ಚಿನ್ನ ಮಾಡಿಸಿದ
ತಾಯಿಗೆ ಚಿನ್ನ ಮಾಡಿಸ್ಬೇಕು ಅಂತ ಅಂದುಕೊಂಡು ಕೃಷ್ಣ ಸುರೇಶ್​, ಯಾವೆಲ್ಲ ಎಟಿಎಮ್​ಳಿಗೆ ಹಣ ಹಾಕ್ತಿದ್ನೋ, ಅದೇ ಎಟಿಎಮ್​ಗೆ ಮತ್ತೆ ವಾಪಸ್ ಹೋಗಿ ಹಾಕಿದ್ದ ಹಣವನ್ನು ಎಗರಿಸಿಕೊಂಡು ಬಂದಿದ್ದ. ಎರಡು ದಿನಗಳ ‌ಹಿಂದೆ ಎಚ್‌ಡಿಎಫ್‌ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ ಕೃಷ್ಣಾ. ಕೆಲ ಹೊತ್ತಿನ ಬಳಿಕ‌ ತಾನೇ ಬಂದು ಲಾಕ್ ಓಪನ್ ಮಾಡಿ ಎಟಿಎಮ್​ನಲ್ಲಿದ್ದ 8.5 ಲಕ್ಷ ಹಣವನ್ನ ದೋಚ್ಕೊಂಡು ಹೋಗಿದ್ದ. ಇದಾದ ಮೇಲೆ ಅದೇ ಹಣದಲ್ಲಿ ತಾಯಿಗೆ ಚಿನ್ನದ ಸರ ಮಾಡಿಸಿಕೊಟ್ಟಿದ್ದ ಆದ್ರೆ ಯಾವಾಗ ಬ್ಯಾಂಕ್​ನವರಿಗೆ ಎಟಿಎಮ್​ನಲ್ಲಿದ್ದ ಹಣ ಮಾಯ ಆಗಿದ್ದು ಗೊತ್ತಾಯ್ತೊ, ಆಗ ಕೃಷ್ಣ ಸುರೇಶ್​ನ ಕೈಚಳಕದ ಬಗ್ಗೆ ಗೊತ್ತಾಗಿದೆ.

publive-image

ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಕಳ್ಳನ ಕೈಚಳಕ!
ಕೃಷ್ಣ ಸುರೇಶ ಹಣ ಹಾಕೋದು ಮತ್ತು ಅವನೇ ಬಂದು ಅದೇ ಹಣವನ್ನ ಕದ್ಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬ್ಯಾಂಕಿನವರು ದೂರು ಕೊಟ್ಟ ತಕ್ಷಣ ಪೊಲೀಸರು ಎಲ್ಲ ಎಟಿಎಮ್​ಗಳನ್ನ ಪರಿಶೀಲನೆ ನಡೆಸಿದ್ದಾರೆ. ಆಗ ಕೃಷ್ಣ ಸುರೇಶ ಹಣ ಕದ್ಕೊಂಡು ಹೋಗಿರೋದು ಬೆಳಕಿಗೆ ಬಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡ್ತಿದ್ದ ಕೃಷ್ಣಾ ಕದ್ಕೊಂಡು ಹೋಗಿದ್ದ ಹಣದಲ್ಲಿ 1.54 ಲಕ್ಷ ಕೊಟ್ಟು ತಾಯಿಗೆ ಚಿನ್ನದ ಸರ ಮಾಡಿಸಿದ್ದ. ಇನ್ನೊಂದಿಷ್ಟು ಹಣದಲ್ಲಿ ಜಾಲಿ ಜಾಲಿ ಅಂತ ಎಂಜಾಯ್ ಮಾಡಿದ್ದ. ಆದ್ರೀಗ ಮಾಡಿದ್ದುಣ್ಣೊ ಮಾರಾಯ ಅಂತ ಕಂಬಿ ಹಿಂದೆ ಬಂಧಿಯಾಗಿದ್ದಾನೆ.

publive-image

ದುರಂತ ಏನಂದ್ರೆ ಫಸ್ಟ್ ಟೈಮ್​ ಲೈಫ್​ನಲ್ಲಿ ಈ ಕೃಷ್ಣ ಸುರೇಶ್ ಕಳ್ಳತನದ ಕೆಲಸಕ್ಕೆ ಹಾಕಿದ್ದ. ಅಮ್ಮ ಆಸೆ ಪಟ್ಳು ಅನ್ನೋ ಕಾರಣಕ್ಕೆ ಎಟಿಎಮ್​ಗಳನ್ನ ದೋಚಿದ್ದ. ಆದ್ರೆ ಏನ್ ಮಾಡೋದು ಇವನ ಪ್ಲಾನ್ ಉಲ್ಟಾ ಆಗಿ ಈಗ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ.

ಇದನ್ನೂ ಓದಿ: ಪದೇ ಪದೇ ವಾಶ್‌ರೂಂಗೆ ಹೋಗುತ್ತಿದ್ದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು; ಕಾರಣವೇನು? 

ಮಗ ಏನೋ ಅಮ್ಮನಿಗಾಗಿ ಕಳ್ಳಹಾದಿ ಹಿಡಿದು ತಪ್ಪು ಮಾಡಿದ್ದ ಆದ್ರೆ ತಾಯಿಯಾದವಳು ಮಗನನ್ನ ಪ್ರಶ್ನೆ ಮಾಡ್ಬೇಕಿತ್ತು. ತಪ್ಪು ದಾರಿಯಿಂದ ಮಗ ಚಿನ್ನ ತಂದಿದ್ದಾನೆ ಅನ್ನೋದು ಗೊತ್ತಾದ್ಮೆಲೆ ಬುದ್ಧಿ ಹೇಳಿಬೇಕಿತ್ತು. ಈಗ ಮಾಡಿದ ತಪ್ಪಿಗೆ ಕೃಷ್ಣ ಸುರೇಶ್​ ಪೊಲೀಸರ ಅತಿಥಿಯಾಗಿದ್ದಾನೆ. ಕೇಸ್​ನನ್ನ ಭೇದಿಸಿರುವ ಪೊಲೀಸರು ಒಟ್ಟು ಎಂಟು ಲಕ್ಷ ಹಣದಲ್ಲಿ 5.74 ಲಕ್ಷ ಹಣವನ್ನ ಜಪ್ತಿ ಮಾಡಿದ್ದಾರೆ.

ಅಮ್ಮನ ಆಸೆ ಈಡೇರಿಸೋಕೆ ಹೋಗಿ ಉಂಡ ಮನೆಗೆ ಕನ್ನ ಹಾಕಿದ ಮಗ ಜೈಲಲ್ಲಿದ್ದಾನೆ. ಮಗನ ಪರಿಸ್ಥಿತಿ ನೋಡಿ ಅಮ್ಮನಿಗೂ ಸಂಕಟ. ಏನೋ ಮಾಡಲು ಹೋಗಿ ಇನ್ನೇನು ಮಾಡಿದ ಮಗನಿಗೂ ಸಂಕಟ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment