/newsfirstlive-kannada/media/post_attachments/wp-content/uploads/2025/01/BNG_GAVI_GANGADARESHWARA5.jpg)
ಬೆಂಗಳೂರು: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಡಗರ- ಸಂಭ್ರಮದ ಕಲರವ ಮೂಡಿದೆ. ಗುಡಿ, ಗೋಪುರ ಹಾಗೂ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ಸಿಲಿಕಾನ್ ಸಿಟಿಯ ಗವಿಪುರದಲ್ಲಿನ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಇಂದು ಸಂಜೆ ನಡೆಯುವ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಇದ್ದಾರೆ.
ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವಾಗ ಸೂರ್ಯ ಕಿರಣಗಳು ದೇವಾಲಯದಲ್ಲಿನ ಶಿವ ಲಿಂಗವನ್ನು ಸ್ಪರ್ಶಿಸಲಿವೆ. ಈ ಹಿನ್ನೆಲೆಯಲ್ಲಿ ಇಂದು ಗವಿಗಂಗಾಧರ ದೇವಸ್ಥಾನದ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಬೆಳ್ಳಗ್ಗೆ 5 ಗಂಟೆಗೆ ಪೂಜೆ ಆರಂಭವಾಗಿದ್ದು ಪುಷ್ಪಾಭಿಷೇಕ, ಮಹಮಂಗಳಾರತಿ, ಪಂಚಾಭೀಷೇಕ ಮಾಡಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಜೆ 5.14 ರಿಂದ 5.17ರವರೆಗೆ ಒಟ್ಟು 3 ನಿಮಿಷ ಕಾಲ ಗವಿಗಂಗಾಧರೇಶ್ವರ ಸ್ವಾಮಿಯನ್ನ ಸೂರ್ಯ ರಶ್ಮಿ ಸ್ಪರ್ಶಿಸಲಿದೆ.
ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಹತ್ತರ ಕಾರ್ಯ.. ಕೈ, ಕಾಲು ಇಲ್ಲದವರಿಗೆ ಕೃತಕ ಜೋಡಣೆ
ಈ ಮಹಾನ್ ವಿಸ್ಮಯ ನೋಡಲು ಎಲ್ಲ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೇವಾಲಯದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕೌತುಕ ಕಣ್ತುಂಬಿಕೊಳ್ಳಲು ಭಕ್ತರ ಕಾತುರತೆ ಹೆಚ್ಚಿದೆ. ಶಿವ ದರ್ಶನಕ್ಕಾಗಿ ಭಕ್ತರ ದಂಡು ದೇವಾಲಯದತ್ತ ಆಗಮಿಸುತ್ತಿದ್ದು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಅಲ್ಲದೇ ಸೂರ್ಯರಶ್ಮಿ ವೀಕ್ಷಣೆಗೆ ಸಂಜೆ ದೇವಾಲಯದ ಆವರಣದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ