/newsfirstlive-kannada/media/post_attachments/wp-content/uploads/2025/07/COBRA_SNAKE.jpg)
ರಾಜ್ಯದಲ್ಲಿ ಹಾವು ಕಡಿತ ಕೇಸ್ ಸಂಖ್ಯೆ ಏರಿಕೆ
ರಾಜ್ಯದಲ್ಲಿ ಇನ್ನೂ ಈ ತಿಂಗಳ ಅಂತ್ಯದವರೆಗೂ ಮಳೆಗಾಲ ಇದೆ. ರಾಜ್ಯದ ಉದ್ದಗಲಕ್ಕೂ ಭಾರಿ ಮಳೆ ಸುರಿಯುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೇ, ಮಳೆ ಹೆಚ್ಚಾದಂತೆ ರಾಜ್ಯದಲ್ಲಿ ಹಾವು ಕಡಿತದ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಈ ವರ್ಷ ಹಾವು ಕಡಿತದಿಂದ 79 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಹಾವು ಕಚ್ಚಿ ಪ್ರಕಾಶ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಷೂಗಳಲ್ಲಿ ಹಾವು ಸೇರಿಕೊಂಡು ಕಚ್ಚಿದ ಬಳಿಕ ಪ್ರಕಾಶ್ ಮೃತಪಟ್ಟಿದ್ದರು. ರಾಜ್ಯದಲ್ಲಿ 2025ರ ಜನವರಿ 1 ರಿಂದ ಆಗಸ್ಟ್ 17 ರ ತನಕ 13,494 ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ಈ ವರ್ಷ ಕರ್ನಾಟಕದಲ್ಲಿ ಇದುವರೆಗೂ ಹಾವು ಕಡಿತದಿಂದ 79 ಮಂದಿ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಲ್ಲಿ ಹಾವು ಕಡಿತಕ್ಕೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಹಾವು ಕಡಿತದ 394 ಪ್ರಕರಣ ದಾಖಲಾಗಿವೆ.
ಮಳೆಗಾಲದಲ್ಲಿ ಹಾವುಗಳ ಬಗ್ಗೆ ಜನರು ಹುಷಾರಾಗಿರಬೇಕು. ಮನೆ, ಜಮೀನು, ತೋಟಗಳಲ್ಲಿ ಎಲ್ಲೆಂದರಲ್ಲಿ ಹಾವುಗಳ ಕಾಣಿಸಿಕೊಳ್ಳುತ್ತಾವೆ. ಮಳೆಗಾಲದಲ್ಲಿ ಬಿಲಗಳಿಂದ ಹಾವುಗಳು ಹೊರಗೆ ಬರುತ್ತಾವೆ. ಹಾವು ಕಡಿತ ಸಂಭವಿಸಿದಾಗ, ತಕ್ಷಣವೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ. ಮನೆ ಔಷಧಿ, ನಾಟಿ ಔಷಧಿಗಳಿಂದ ಜೀವ ಹೋಗುತ್ತೆ. ಈ ಬಗ್ಗೆ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.