/newsfirstlive-kannada/media/media_files/2025/09/03/bharathi-met-cm-siddaramaiah-2025-09-03-13-13-23.jpg)
ಸಿಎಂ ಸಿದ್ದರಾಮಯ್ಯ ಭೇಟಿಯಾದ ನಟಿ ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ
ನಿನ್ನೆಯಷ್ಟೇ ಕನ್ನಡ ಚಿತ್ರರಂಗದ ನಟಿಯರಾದ ಜಯಾಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದಿವಂಗತ ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅಧಿಕೃತ ಮನವಿ ಸಲ್ಲಿಸಿದ್ದರು.
ಇಂದು ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕನಿಷ್ಠ 10 ಗುಂಟೆ ಜಾಗವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಲಿಖಿತ ಮನವಿ ಸಲ್ಲಿಸಿದ್ದಾರೆ. ಜೊತೆಗೆ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಸಿಎಂ ಸಿದ್ದರಾಮಯ್ಯಗೆ ಭಾರತಿ ಹಾಗೂ ಅನಿರುದ್ಧ ಮನವಿ ಸಲ್ಲಿಸಿದ್ದಾರೆ.
ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ನಾಳೆ ನಡೆಯುವ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಭಾರತಿ, ಹಾಗೂ ಅನಿರುದ್ಧಗೆ ಭರವಸೆ ನೀಡಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಮತ್ತೊಬ್ಬ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯ ನಿರೀಕ್ಷೆ ಮೂಢಿದೆ. ಈಗಾಗಲೇ ದಿವಂಗತ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದೆ.
ಇನ್ನೂ ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಸಿಎಂಗೆ ಮನವಿ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಸಿಎಂ ರನ್ನ ಭೇಟಿ ಮಾಡಿದ್ದೇವು. ವಿಷ್ಣು ವರ್ಧನ್ ಅವರ ಅಭಿಮಾನಿಗಳಿಗಾಗಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ರವರ ಸ್ಮಾರಕಕ್ಕೆ ಜಾಗ ಕೇಳಿದ್ದೇವೆ. ಅದಕ್ಕೆ ಸಿಎಂ ಸರಿ ಎಂದಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳ್ತೇನೆ. ಕರ್ನಾಟಕ ರತ್ನ ಕೊಡಿ ಎಂದು ನಾನು ಕೇಳಲ್ಲ. ಆದರೆ ಅಭಿಮಾನಿ ಗಳು ಕೇಳುತ್ತಿದ್ದಾರೆ. ಅವರಿಗಾಗಿ ಕರ್ನಾಟಕ ರತ್ನ ಕೊಡಬೇಕು. ಅಭಿಮಾನಿಗಳು ಬಂದು ನಮಸ್ಕಾರ ಮಾಡಲು ಜಾಗಕ್ಕೆ ಅನುಮತಿ ಕೊಡಬೇಕು . ೧೮ನೇ ತಾರೀಖಿನಂದು ವಿಷ್ಣುರವರ ಹುಟ್ಟು ಹಬ್ಬ ಇದೆ. ಅಷ್ಟರೊಳಗೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಸರ್ಕಾರ ಅನುಮತಿ ಕೊಡಬಹುದೆಂಬ ನಿರೀಕ್ಷೆ ಇದೆ ಎಂದಿದ್ದಾರೆ.
ಇನ್ನೂ ವಿಷ್ಣುವರ್ಧನ್ ಅಳಿಯ ನಟ ಅನಿರುದ್ದ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಅಭಿಮಾನ್ ಸ್ಟುಡಿಯೋ ದಲ್ಲಿರುವ ಹತ್ತು ಗುಂಟೆ ಜಾಗಕ್ಕಾಗಿ ಮನವಿ ಮಾಡಿದ್ದೇವೆ. ಆ ಜಾಗದಲ್ಲಿ ಮಂಟಪ ನಿರ್ಮಿಸಲು ಅನುಮತಿ ಕೊಡಿ ಎಂದು ಕೇಳಿದ್ದೇವೆ. ಹಿಂದೆ ಅಲ್ಲಿ ನಾವೇ ಮಂಟಪವನ್ನು ಕಟ್ಟಿದ್ದೇವು. ಈಗಲೂ ಜಾಗ ಕೊಟ್ಟರೆ ನಾವೇ ಮಂಟಪ ಕಟ್ಟಿಕೊಳ್ತೇವೆ. ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಜೊತೆಗೂ ಸಿಎಂ ಮಾತಾಡಿದ್ದಾರೆ . ಅವರು ಕೂಡ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ . ಸೆಪ್ಟೆಂಬರ್ ೧೮ ರೊಳಗೆ ಜಾಗಕ್ಕೆ ಅನುಮತಿ ಸಿಗಬಹುದು. ನಾಳೆಯ ಕ್ಯಾಬಿನೆಟ್ ನಲ್ಲಿ ಕರ್ನಾಟಕ ರತ್ನದ ಬಗ್ಗೆ ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ನಾಳೆ ಚರ್ಚೆ ಆಗಿ ಅಪ್ಪ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಯಾಗುವ ಸಾಧ್ಯತೆ ಇದೆ ಎಂದು ನಟ ಅನಿರುದ್ಧ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.