/newsfirstlive-kannada/media/media_files/2025/10/01/mysore-ayudha-pooja-2025-10-01-16-19-23.jpg)
ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ
ನಾಡಹಬ್ಬ ದಸರೆಗೆ ಒಂದೇ ಒಂದು ದಿನ ಬಾಕಿ ಉಳಿದಿದೆ. ಈವತ್ತು ಅರಮನೆ ಅಂಗಳದಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ನಡೆದರೆ, ಅತ್ತ ಪಂಜಿನ ಕವಾಯತು ಮೈದಾನದಲ್ಲಿ ರೋಮಾಂಚನಕಾರಿಯಾಗಿ ವೈಮಾನಿಕ ಪ್ರದರ್ಶನ ಕಂಡಿತು. ಇದೇ ಸಂದರ್ಭಕ್ಕೆ ದಸರೆಯ ಎಲ್ಲ ಕಾರ್ಯಕ್ರಮಗಳು ಸಮಾಪ್ತಿಯಾದವು
* ಅರಮನೆ ಅಂಗಳದಲ್ಲಿ ಕಳೆಗಟ್ಟಿದ ಗತಕಾಲದ ವೈಭವ
* ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಗೆ ಪೂಜೆ
* ರಾಜರು ಬಳಸುತ್ತಿದ್ದ ಆಯುಧಗಳು, ಕತ್ತಿ, ಗುರಾಣಿ, ಐಷಾರಾಮಿ ಕಾರುಗಳಿಗೂ ಪೂಜೆ
ಅರಮನೆ ಅಂಗಳದಲ್ಲಿ ಇವತ್ತು ಗತಕಾಲದ ವೈಭವ ಮೇಳೈಸಿತ್ತು. ಬೆಳಗ್ಗಿನಿಂದಲೂ ಕೂಡ ಹಲವು ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ರಾಜಪೋಷಾಕಿನಲ್ಲಿದ್ದ ಯದುವೀರ್ ಒಡೆಯರ್ ಬೆಳಗ್ಗೆ ಪ್ರಾತಃ ಕಾಲದಿಂದ ಅರಮನೆಯಲ್ಲಿ ಪೂಜೆ, ಹೋಮ,ಹವನ ನೆರೆವೇರಿಸಿದ್ದರು. ಹತ್ತು ಗಂಟೆ ಬಳಿಕ ರಾಜಮಹಾರಾಜರು ಬಳಸುತ್ತಿದ್ದ ಆಯುಧಗಳು, ಕತ್ತಿಗುರಾಣಿಗಳು, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆಗಳಿಗೆ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿದರು.
ಇದೇ ವೇಳೆ ರಾಜರು ಬಳಸುತ್ತಿದ್ದ ವಾಹನಗಳು,ಐಷಾರಾಮಿ ಕಾರುಗಳಿಗೆ ಪೂಜೆ ಸಲ್ಲಿಸಲಾಯಿತು. ಆ ಮೂಲಕ ಅರಮನೆ ಆಯುಧಪೂಜಾ ಕೈಂಕರ್ಯ ಸಮಾಪ್ತಿ ಆಯ್ತು.
ಇತ್ತ, ಬನ್ನಿಮಂಟಪದ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಸೂರ್ಯಕಿರಣ್ ಟೀಂ ಅತ್ಯಾಕರ್ಷಕ ವೈಮಾನಿಕ ಪ್ರದರ್ಶನ ನಡೆಸಿಕೊಟ್ಟರು. ಬಳಿಕ ಚಿತ್ತಾಕರ್ಷಕ ಡ್ರೋನ್ ಶೋ ಕಣ್ಮನ ಸೆಳೆಯಿತು. ನಂತರ ನಡೆದ ಪಂಜಿನ ಕವಾಯತು ರಿಹರ್ಸಲ್ ನೋಡುಗರ ಹೃನ್ಮನ ಗೆದ್ದಿತು.
ಈ ನಡುವೆ ದಸರೆ ಅಂಗವಾಗಿ ತೆರೆದುಕೊಂಡಿದ್ದ ರೈತದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಏಳು ಕಡೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.
ಒಟ್ಟಾರೆ, ನಾಡಹಬ್ಬ ದಸರೆಯ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗುವ ಹೊತ್ತಿಗೆ ಬಹುತೇಕ ಕಾರ್ಯಕ್ರಮಗಳು ತೆರೆ ಕಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.