/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಕೊಟ್ಟಿಲ್ಲ ಎಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆ ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಿಯಿತು.
ಕೋರ್ಟ್ ವಿಚಾರಣೆಗೆ ಜೈಲಿನ ಚೀಫ್ ಸೂಪರಿಡೆಂಟ್ ಸುರೇಶ್ ಕೂಡ ಹಾಜರಾಗಿದ್ದಾರೆ. ಕಳೆದ ವಿಚಾರಣೆ ವೇಳೆ ಜೈಲು ಸೂಪರಿಂಟೆಂಡೆಂಟ್ ಖುದ್ದು ಹಾಜರಾಗಲು ಕೋರ್ಟ್ ಆದೇಶ ನೀಡಿತ್ತು.
ಜೈಲಿನ ಅಧಿಕಾರಿಗಳ ಪರವಾಗಿ ಎಸ್ ಪಿಪಿ ಪ್ರಸನ್ನಕುಮಾರ್ ರಿಂದ ವಾದ ಮಂಡನೆ ನಡೆದಿದೆ.
ಜೈಲಿನ ಮ್ಯಾನುಯಲ್ ಪ್ರಕಾರ ಎಲ್ಲವನ್ನೂ ಕೊಟ್ಟಿದ್ದೇವೆ. ನಮಗೆ ಜಮಖನಾ ಕೊಡಿ ಅಂದ್ರೆ ಹೇಗೆ...?
ಅವರು ಕೇಳಿದ್ದೆಲ್ಲಾ ಕೊಡೋಕೆ ಆಗಲ್ಲ. ವಾಕಿಂಗ್ ಮಾಡೋದಕ್ಕೆ ಅವಕಾಶ ಕೊಟ್ಟಿದ್ದೇವೆ. ನನಗೆ ಬಿಸಿಲು ಬರ್ತಿಲ್ಲ ಅಂದ್ರೆ ಅದಕ್ಕೆ ನಾವು ಹೊಣೆಯಲ್ಲ. ಕ್ವಾರೆಂಟೆನ್ ಸೆಲ್ ಆಗಲಿ ಅಥವಾ ಎಲ್ಲಾದ್ರೂ ಆಗಲಿ ಎಲ್ಲವನ್ನೂ ಕೊಡೋದಕ್ಕೆ ಆಗೋದಿಲ್ಲ. ಈತ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜೈಲಿನ ಒಳಗೆ ಕೇಳುತ್ತಿದ್ದಾನೆ. ಆದರೆ ಜೈಲಿನ ಮ್ಯಾನ್ಯುಯಲ್ ಪ್ರಕಾರ ಏನು ಕೊಡಬಹುದು ಅಷ್ಟೆ ಕೊಡೋಕೆ ಆಗೋದು. ಜೈಲಿನ ಅಧಿಕಾರಿಗಳು ಇದನ್ನು ತೀರ್ಮಾನ ಮಾಡ್ತಾರೆ . ಜೈಲಿನಲ್ಲಿ ಎಲ್ಲಾ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಎಸ್.ಪಿ.ಪಿ. ಪ್ರಸನ್ನಕುಮಾರ್ ವಾದ ಮಾಡಿದ್ದರು.
ಜೈಲ್ ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ಕೊಡಲಾಗುತ್ತಿದೆ. ಕಂಬಳಿ, ಬೆಡ್ ಶೀಟ್, ಚೊಂಬು ತಟ್ಟೆ ಎಲ್ಲವನ್ನೂ ಕೊಡಲಾಗಿದೆ. ಹಾಸಿಗೆಯನ್ನು ಕೊಡಲು ಅವಕಾಶ ಇಲ್ಲ. ಪಲ್ಲಂಗ ಕೊಡಿ ಮಲಗಿಸಬೇಕು ಅಂದ್ರೆ ಅಗೋದಿಲ್ಲ. ವಾಕಿಂಗ್ ಮಾಡೋದಕ್ಕೆ ಅವಕಾಶ ಕೊಡಲಾಗಿದೆ . ಇದೇ ಸೆಲ್ ಅಲ್ಲಿ ಇರಬೇಕು ಅಂತ ಕೇಳುವ ಅಧಿಕಾರ ಆರೋಪಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಉಲ್ಲೇಖಿಸಿ ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ದರು.
ಈ ವೇಳೆ ಜೈಲು ಅಧಿಕಾರಿ ಸುರೇಶ್ ರನ್ನು ಜಡ್ಜ್ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ಎಲ್ಲವನ್ನೂ ಕೊಡುತ್ತಾ ಇದ್ದೀರಾ? ಎಂದು ಜಡ್ಜ್ ಪ್ರಶ್ನಿಸಿದ್ದರು. ಜೈಲ್ ಮ್ಯಾನ್ಯುಯಲ್ ಪ್ರಕಾರ ಕೊಡಲಾಗುತ್ತಿದೆ ಎಂದು ಜೈಲು ಸೂಪರಿಂಟೆಂಡೆಂಟ್ ಸುರೇಶ್ ಉತ್ತರಿಸಿದ್ದರು.
ಬಳಿಕ ನಟ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಆರಂಭಿಸಿದ್ದರು.
ಮೊದಲ ದಿನ ಹೋದಾಗ ಏನು ಇದೆ ಅದನ್ನೇ ಕೊಟ್ಟಿರೋದು . ಅದನ್ನು ಹೊರತುಪಡಿಸಿ ಬೇರೇನೂ ಹೊಸದಾಗಿ ಕೊಟ್ಟಿಲ್ಲ. ಒಂದು, ತಟ್ಟೆ ಲೋಟ ಚೊಂಬು, ಕಂಬಳಿ ಬಿಟ್ಟು ಏನು ಕೊಟ್ಟಿಲ್ಲ . ಜೈಲು ಅಧಿಕಾರಿಗಳಿಗೆ ಕೋರ್ಟ್ ಆದೇಶ ಅರ್ಥ ಆಗಿಲ್ಲ. ಅವರಿಗೆ ಇಂಗ್ಲೀಷ್ ಬರೋದಿಲ್ಲ ಅನ್ಸುತ್ತೆ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು.
ಆದರೇ, ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಅಧಿಕಾರಿಗಳ ಘನತೆಗೆ ತರಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಬಳಿಕ ಸೌಮ್ಯ ಭಾಷೆಯಲ್ಲಿ ವಾದಿಸಲು ಕೋರ್ಟ್ ವಕೀಲ ಸುನೀಲ್ ಅವರಿಗೆ ಸೂಚನೆ ನೀಡಿತು.
ಬಳಿಕ ಕೋರ್ಟ್ ಆದೇಶದಲ್ಲಿ ಯಾವುದು ಉಲ್ಲಂಘನೆ ಆಗಿದೆ ಎಂಬ ಬಗ್ಗೆ ವಾದ ಮಾಡಿ ಎಂದು ವಕೀಲ ಸುನೀಲ್ಗೆ ಕೋರ್ಟ್ ಸೂಚಿಸಿತು. ಜೈಲಿನ ಅಧಿಕಾರಿಗಳಿಗೆ ಅವರದ್ದೇ ಆದ ಅಧಿಕಾರವಿರುತ್ತೆ . ಯಾವುದರ ಉಲ್ಲಂಘನೆ ಆಗಿದೆ ಅದನ್ನ ಹೇಳಿ ಎಂದು ಕೋರ್ಟ್ ವಕೀಲ ಸುನೀಲ್ ಅವರಿಗೆ ಸೂಚಿಸಿತು.
ಕಂಬಳಿ ಮತ್ತು ವಾಕಿಂಗ್ ಅವಕಾಶ ನೀಡಲಾಗಿದೆ. 25*3 ಅಡಿಯಲ್ಲಿ ವಾಕಿಂಗ್ ಅವಕಾಶ ಕೊಟ್ಟಿದ್ದಾರೆ. ಬ್ಯಾರಕ್ ಒಳಗೆ ವಾಕಿಂಗ್ ಮಾಡಿಸುತ್ತಾ ಇದ್ದಾರೆ ಎಂದು ಸುನೀಲ್ ಹೇಳಿದ್ದರು.
ಭದ್ರತೆ ಕಾಪಾಡೋದು , ಆರೋಪಿ ಸುರಕ್ಷತಾ ದೃಷ್ಟಿಯಿಂದ ಜೈಲಾಧಿಕಾರಿಗಳ ಕರ್ತವ್ಯ ಅಲ್ವಾ ಎಂದು ಜಡ್ಜ್ ಹೇಳಿದ್ದರು. ಜೈಲು ಮ್ಯಾನುಯಲ್ ಪ್ರಕಾರ ಏನೇನು ಬೇಕು ಅದನ್ನು ಹೇಳಿ ಎಂದು ಜಡ್ಜ್ ಪ್ರಶ್ನಿಸಿದ್ದರು.
ದರ್ಶನ್ ಗೆ ಪ್ರತ್ಯೇಕವಾಗಿ ಲೆಡ್ಜರ್ ಇಟ್ಟಿದ್ದಾರೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದ್ದರು.
ಯಾಕೆ ಪ್ರತ್ಯೇಕವಾದ ಲೆಡ್ಜರ್ ಎಂದು ವಕೀಲ ಸುನೀಲ್ ಪ್ರಶ್ನಿಸಿದ್ದರು.
ಇದರಿಂದ ನಿಮಗೇನೂ ತೊಂದರೆ ಎಂದು ಎಸ್ ಪಿಪಿ ಪ್ರಸನ್ನಕುಮಾರ್, ಅದು ಜೈಲು ಅಧಿಕಾರಿಗಳಿಗೆ ಇರುವ ಅಧಿಕಾರ ಎಂದು ಉತ್ತರ ಕೊಟ್ಟರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಜೈಲಾಧಿಕಾರಿಗಳ ಜವಾಬ್ದಾರಿ. ಅದನ್ನು ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಿರುತ್ತಾರೆ. ಇದೇ ಬ್ಯಾರೆಕ್ ನಲ್ಲಿ ಇಡಿ ಎಂದು ಹೇಗೆ ಹೇಳಬೇಕು ಎಂದು ಜಡ್ಜ್ ಹೇಳಿದ್ದರು.
ಕ್ವಾರಂಟೈನ್ ಅನ್ನೋ ವಿಚಾರವೇ ಇಲ್ಲ . ಆಗಿದ್ದರೂ ಕೂಡ ದರ್ಶನ್ ನ ಅದೇ ಬ್ಯಾರಕ್ ಅಲ್ಲಿ ಇಟ್ಟಿದ್ದಾರೆ. ತಿಂಗಳು ಕಳೆದರೂ ಅದೇ ಸೆಲ್ ಅಲ್ಲಿ ಇಟ್ಟಿದ್ದಾರೆ. ಎಲ್ಲರಿಗೂ ಕೂಡ ಅದೇ ರೀತಿ ಮಾಡ್ತಾರಾ...? ದರ್ಶನ್ ಗೆ ಹಿಂಸೆ ನೀಡಲಾಗ್ತಿದೆ ಎಂದು ನಟ ದರ್ಶನ್ ಪರ ವಕೀಲ ಸುನಿಲ್ ವಾದಿಸಿದ್ದರು.
ಜೈಲಿನ ಮ್ಯಾನುಯಲ್ ನ ನಿಯಮಗಳನ್ನು ಓದಿ ವಾದ ದರ್ಶನ್ ಪರ ವಕೀಲ ಸುನಿಲ್ ವಾದಮಂಡನೆ ಮಾಡಿದ್ದರು. ವಿಚಾರಣಾಧೀನ ಕೈದಿಗೆ ಜೈಲಿನ ಓಳಗೆ ಏನೆಲ್ಲಾ ಒದಗಿಸಬೇಕು . ಯಾವ ಸೆಲ್ ನಲ್ಲಿ ಇಡಬೇಕೆಂಬುದನ್ನ ಕೋರ್ಟ್ ಗಮನಕ್ಕೆ ವಕೀಲ ಸುನಿಲ್ ತಂದರು.
ಸುನೀಲ್ ವಾದಕ್ಕೆ ಮತ್ತೊಮ್ಮೆ ಆಕ್ಷೇಪಣೆ ವ್ಯಕ್ತಪಡಿಸಿ ಎಸ್ ಪಿಪಿ ಪ್ರಸನ್ನಕುಮಾರ್ ವಾದಿಸಿದ್ದರು.
ನಾವು ಎಲ್ಲೂ ದರ್ಶನ್ ಸೆಲೆಬ್ರೆಟಿ ಅಂತ ಹೇಳಿಲ್ಲ. ದರ್ಶನ್ ಒಬ್ಬ ಕೊಲೆ ಆರೋಪಿ ಅಷ್ಟೇ. ನಾವ್ಯಾಕೆ ಸೆಲೆಬ್ರೆಟಿ ಎನ್ನಬೇಕು. ಅದನ್ನು ನೀವು ಹೇಳ್ತಾ ಇರೋದು ಅಂತ ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು.
ಇನ್ನೂ ನಟ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮುಂದುರಿಸುತ್ತಾರೆ, ಇದೇ ಆಗೋಯ್ತು, ಕೋರ್ಟ್ ಆದೇಶ ಮಾಡಿದ್ದರೂ, ಸೌಲಭ್ಯಗಳನ್ನು ಕೊಟ್ಟಿಲ್ಲ. ಎಷ್ಟು ಜನ ವಿಐಪಿ ಗಳು ಜೈಲಿಗೆ ಹೋಗಿ ಬಂದರು. ಆದ್ರೆ ದರ್ಶನ್ ಗೆ ಮಾತ್ರ ಯಾಕೆ ಹೀಗೆ ಮಾಡ್ತಿದ್ದಾರೆ. ಕಾಲಾಪಾನಿ ಜೈಲಿನಲ್ಲೂ ಹೀಗೆ ಮಾಡಲ್ಲ. 14 ದಿನ ಮಾತ್ರ ಕ್ವಾರಂಟೆನ್ ಸೆಲ್ ನಲ್ಲಿ ಇಡಬೇಕು . ಆದ್ರೆ ಯಾಕೆ ಈ ರೀತಿ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ ಎಂದು ಸುನೀಲ್ ವಾದಿಸಿದ್ದರು.
ರೇಪಿಸ್ಟ್ ಉಮೇಶ್ ರೆಡ್ಡಿ, ಟೆರರಿಸ್ಟ್ ಗಳಿಗೆ ವಿಐಪಿ ಸೌಲಭ್ಯ, ದರ್ಶನ್ ಗೆ ಯಾವ ಸೌಲಭ್ಯವೂ ಇಲ್ಲ ಎಂದ ವಕೀಲ ಸುನೀಲ್
ಜೈಲಿಗೆ ಎಷ್ಟು ವಿಐಪಿಗಳು ಹೋಗಿ ಬಂದರು. ಅವರಿಗೆ ಇದೇ ರೀತಿ ಸೆಕ್ಯುರಿಟಿ ಕೊಡ್ತಾರಾ? ದರ್ಶನ್ ಗೆ ಮಾತ್ರ ಯಾಕೆ ಇಷ್ಟೊಂದು ಸೆಕ್ಯುರಿಟಿ? ನೋಡೋಣ ಸ್ವಾಮಿ ಎಷ್ಟು ದಿನ ಅದೇ ಸೆಲ್ ನಲ್ಲಿ ಇಡ್ತಾರೋ.
ಭಾರತದಲ್ಲಿ ಅದೆಷ್ಟು ಆರೋಪಿಗಳಿಗೆ ಇಷ್ಟು ಸೆಕ್ಯುರಿಟಿ ಕೊಡ್ತಾರೆ ಹೇಳಿ. ಕ್ವಾರಂಟೈನ್ ಸೆಲ್ ನಲ್ಲಿ 14 ದಿನ ಇಡ್ತಾರೆ ಅಷ್ಟೇ. ಆದ್ರೆ ಇವರು ಇನ್ನು ಅದೆಷ್ಟು ದಿನ ಇಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ. 45 ದಿನದಿಂದ ಕ್ವಾರಂಟೈನ್ ಅಲ್ಲಿ ಇದ್ದಾರೆ . ರೇಪಿಸ್ಟ್ ಉಮೇಶ್ ರೆಡ್ಡಿಗೆ ವಿಐಪಿ ಟ್ರೀಟ್ ಮೆಂಟ್ ಕೊಡ್ತಾ ಇದ್ದಾರೆ. ಕಲರ್ ಟಿವಿ ನೀಡಿದ್ದಾರೆ. ದರ್ಶನ್ ಗೆ ಏನು ಕೊಡ್ತಾ ಇಲ್ಲ, ಯಾವ ಸೌಲಭ್ಯವೂ ಇಲ್ಲ.
ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಅದರ ದಾಖಲೆಗಳು ಕೊಡ್ತೀನಿ ಬೇಕಿದ್ರೆ ಎಂದು ವಕೀಲ ಸುನೀಲ್ ವಾದಿಸಿದ್ದರು.
ಇದಕ್ಕೆ ನಮಗೆ ಈಗ ಟೈಂ ಇಲ್ಲ, ಬೇರೆ ಕೆಲಸ ಇದೆ. ನಿಮಗೆ ಏನ್ ಬೇಕೋ ಅದನ್ನ ಮಾತ್ರ ಕೇಳಿ ಎಂದು ಜಡ್ಜ್ ಹೇಳಿದ್ದರು.
ಎಸ್ಪಿಪಿ ಪ್ರಸನ್ನ ಕುಮಾರ್ ಅವರೇ, ಜೈಲರ್ ನ ಮಿಸ್ ಲೀಡ್ ಮಾಡ್ತಾ ಇದ್ದಾರೆ. ಇಲ್ಲದ ಕಾನೂನು ಇವರು ಸೃಷ್ಟಿ ಮಾಡುತ್ತಾ ಇದ್ದಾರೆ ಎಂದು ವಕೀಲ ಸುನೀಲ್ ವಾದಿಸಿದ್ದರು.
ಇದಕ್ಕೆ ಮತ್ತೊಮ್ಮೆ ಎಸ್ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಜೈಲು ಮ್ಯಾನ್ಯುಯಲ್ ನಲ್ಲಿ ಕ್ವಾರಂಟೈನ್ ಪದವೇ ಇಲ್ಲ ಎಂದ ವಕೀಲ ಸುನೀಲ್
ಕ್ವಾರಂಟೈನ್ ಪದ ತೋರಿಸಿ, ಅರ್ಜಿ ವಾಪಸ್ ಪಡೆಿಯಿರಿ ಎಂದ ಎಸ್ಪಿಪಿ
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡ್ತೀನಿ. ಕ್ವಾರಂಟೈನ್ ಅನ್ನೋ ಪದ ಜೈಲು ಮ್ಯಾನುಯಲ್ ಅಲ್ಲಿ ಇಲ್ಲ.
ಆ ಪದ ಇದ್ದರೆ ನಾನು ಈಗಲೇ ಕೇಸ್ ವಿತ್ ಡ್ರಾ ಮಾಡ್ತೀನಿ ಎಂದು ವಕೀಲ ಸುನೀಲ್ ಹೇಳಿದ್ದರು.
ತಕ್ಷಣವೇ ಜೈಲು ಮ್ಯಾನ್ಯುಯಲ್ ನಲ್ಲಿ ಕ್ವಾರಂಟೈನ್ ಅನ್ನೋ ಪದ ಇರೋದನ್ನು ಎಸ್ಪಿಪಿ ಪ್ರಸನ್ನ ಕುಮಾರ್ ತೋರಿಸಿದ್ದರು. ಒಂದಲ್ಲ, 11 ಕಡೆಗಳಲ್ಲಿ ಈ ಪದ ಮ್ಯಾನುಯಲ್ ನಲ್ಲಿ ಇದೆ. ಕ್ವಾರಂಟೈನ್ ಸಬ್ಮೀಷನ್ ಅಂತಾನೂ ಇದೆ. ಹಾಗಿದ್ರೆ ಈಗ ಅರ್ಜಿ ವಾಪಸ್ ತಗೋಳಪ್ಪ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದರು.
1974 ರ ಜೈಲು ಮ್ಯಾನುಯಲ್ ನಲ್ಲೇ ಇದೆ. ಯಾವ ಯಾವ ಆರೋಪಿಗೆ ಯಾವ ಯಾವ ಸೆಕ್ಯುರಿಟಿ ನೀಡಬೇಕು ಅಂತ ಜೈಲು ಮ್ಯಾನ್ಯುಯಲ್ ನಲ್ಲೇ ಇದೆ. ಅದರಲ್ಲಿ ಸಜಾ ಬಂಧಿ ಕೈದಿಗಳಿಗೆ ಮೂರು ರೀತಿ ಸೆಕ್ಯುರಿಟಿ ನೀಡಬಹುದು. A,B,C ಅಂತ ಮೂರು ರೀತಿ ಇದೆ . ದರ್ಶನ್ ವಿಚಾರಣಾಧೀನ ಕೈದಿ . ಆತನಿಗೆ ಯಾವ ರೀತಿ ಸೆಕ್ಯುರಿಟಿ ನೀಡಬೇಕು ಅಂತಾನೂ ಇದೆ . ಅದರಂತೆ ನಾವು ಸೆಕ್ಯೂರಿಟಿ ನೀಡಿದ್ದೇವೆ . ಕ್ವಾರಂಟೈನ್ ಸೆಲ್ ನಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಲು ಆಗಲ್ಲ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದರು. ಕ್ವಾರಂಟೈನ್ ವಾರ್ಡ್ ಕೂಡ ಜೈಲಿನ ಒಂದು ಭಾಗವೇ. ಅಲ್ಲಿಂದ ಶಿಫ್ಟ್ ಮಾಡಲೇ ಬೇಕು ಅಂತಾ ಇಲ್ಲ. ಜೈಲಿನ ಮ್ಯಾನ್ಯುಯಲ್ ನಲ್ಲಿ ಕೆಲ ಷರತ್ತುಗಳಿವೆ. ಏನಾದರೂ ವರ್ತನೆಗಳು ನಡೆದರೆ, ಏನಾದರೂ ನಿಯಮಗಳು ಉಲ್ಲಂಘನೆಯಾದರೆ ಬದಲಾವಣೆಗೆ ಅವಕಾಶ ಇರುತ್ತೆ. ಕೈದಿ/ಆರೋಪಿಯ ವರ್ತನೆಯಿಂದ ಕೆಲ ಬದಲಾವಣೆ ಮಾಡಬಹುದು. ಆದರೆ ಸದ್ಯ ದರ್ಶನ್ ನ ಶಿಫ್ಟ್ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದರು.
ಜೈಲಿನಲ್ಲಿ ಯಾವ ಕೃತ್ಯದ ಆರೋಪಿಗೆ ಏನು, ಯಾವ ರೀತಿ ನಡೆಸಿಕೊಳ್ಳಲಾಗುತ್ತೆ ಅನ್ನೋ ಬಗ್ಗೆ, ಒಂದು ಬ್ಯಾರೆಕ್ ನಿಂದ ಮತ್ತೊಂದು ಕಡೆ ಶಿಫ್ಟ್ ಮಾಡುವ ಬಗ್ಗೆ ಇರುವ ನಿಯಮಗಳ ಬಗ್ಗೆಯೂ ವಾದ ಮಂಡನೆ ನಡೆಯಿತು. 1964 ರ ಜೈಲು ನಿಯಮಗಳ ಅಡಿ ಏನೆಲ್ಲಾ ಇದೆ, ಯಾವ ಆರೋಪಿ/ಕೈದಿಯನ್ನ ಹೇಗೆ ನಡೆಸಿಕೊಳ್ಳಬೇಕು, ಆತನನ್ನ ಯಾವ ಬ್ಯಾರೆಕ್ ಗೆ ಯಾವಾಗ ಶಿಫ್ಟ್ ಮಾಡಬಹುದು ಅನ್ನುವ ಬಗ್ಗೆ ಉಲ್ಲೇಖ ಇದೆ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು. ಇಲ್ಲಿ ದರ್ಶನ್ ರನ್ನ ತಮ್ಮ ಸೆಕ್ಯುರಿಟಿ ಕಾರಣಗಳಿಂದ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿದ್ದಾರೆ..
ಜನರಲ್ ಬ್ಯಾರೆಕ್ ಗೆ ಶಿಫ್ಟ್ ಮಾಡಲು ಇವರಿಗೆ ಭಯ. ಜನರಲ್ ಬ್ಯಾರೆಕ್ ನಲ್ಲಿ ಕೆಲ ಕೆಲಸಗಳು ನಡೆದಿವೆ. ಅಧಿಕಾರಿಗಳ ವಿರುದ್ಧವೇ ಎಫ್ಐಆರ್ ಆಗಿತ್ತು. ಜೈಲಿನಲ್ಲಿ ಮೊಬೈಲ್, ಸಿಗರೇಟ್ ಹೇಗೆ ಬಂತು? ಜನರಲ್ ಸೆಲ್ ಗೆ ದರ್ಶನ್ ನ ಕಳಿಸಿದ್ರೆ ಇವರು ಕಂಟ್ರೋಲ್ ತಪ್ಪುವ ಭಯ ಇದೆ. ಬೇಲಿನೇ ಎದ್ದು ಹೊಲ ಮೇಯ್ದಂಗೆ ಮಾಡ್ತಾರೆ. ಅದಕ್ಕೆ ಕ್ವಾರಂಟೈನ್ ಸೆಲ್ ನಿಂದ ಶಿಫ್ಟ್ ಮಾಡುತ್ತಿಲ್ಲ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು.
ಸುನೀಲ್ ವಾದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ವಾದದ ಸಂದರ್ಭದಲ್ಲಿ ಎಸ್ಪಿಪಿ ವಿರುದ್ಧ ವಕೀಲ ಸುನೀಲ್ ಕೆಲ ಮಾತುಗಳನ್ನಾಡಿದ್ದರು. ಇವೆಲ್ಲಾ ಯಾಕೆ, ಏನಿದೆ ಅಷ್ಟು ಮಾತ್ರ ಹೇಳಿ ಎಂದು ಜಡ್ಜ್ ಗರಂ ಆದರು. ಇಂತಹ ಮಾತುಗಳು ಯಾಕೆ? ವಾದ ಮಾತ್ರ ಮಾಡಲಿ ಎಂದು ಎಸ್ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊನೆಗೆ ಕೋರ್ಟ್, ಅಕ್ಟೋಬರ್ 9ನೇ ತಾರೀಖಿಗೆ ಆದೇಶವನ್ನು ಕಾಯ್ದಿರಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.