/newsfirstlive-kannada/media/media_files/2025/10/11/spl-26-robberry-master-mind-2025-10-11-16-17-43.jpg)
ಕಾರ್ ಡ್ರೈವರ್ ಆಗಿದ್ದ ಶಂಕರ್ ಹಾಗೂ ಆರೋಪಿ ರಾಜೇಂದ್ರ ಮನೋತ್
ಬೆಂಗಳೂರಿನ ಯಲಹಂಕದಲ್ಲಿ ಇತ್ತೀಚೆಗೆ ಸ್ಪೆಷಲ್ 26 ಸಿನಿಮಾ ಶೈಲಿಯಲ್ಲಿ ಮನೆಯಿಂದ ಒಂದೂವರೆ ಕೋಟಿ ರೂಪಾಯಿ ಹಣವನ್ನು ದೋಚಲಾಗಿತ್ತು. ಖಾಸಗಿ ಕಾಲೇಜಿನ ಪ್ರೊಫೆಸರ್ ಒಬ್ಬರ ಮನೆಯಿಂದ ಜಮೀನು ಖರೀದಿಗಾಗಿ ತಂದು ಇಟ್ಟಿದ್ದ ಒಂದೂವರೆ ಕೋಟಿ ರೂಪಾಯಿ ಹಣವನ್ನು ಕೇವಲ 15 ನಿಮಿಷದಲ್ಲಿ ತಾವು ಎಸಿಬಿ ಅಧಿಕಾರಿಗಳೆಂದು ಹೇಳಿಕೊಂಡು ಬಂದಿದ್ದ ತಂಡ ದೋಚಿಕೊಂಡು ಹೋಗಿತ್ತು. ಪ್ರೊಫೆಸರ್ ಗಿರಿರಾಜು ಮನೆಯಲ್ಲೇ ಒಂದೂವರೆ ಕೋಟಿ ರೂಪಾಯಿ ಹಣ ಹಗಲ್ಲಲ್ಲೇ ದರೋಡೆ ಆಗಿತ್ತು. ಮನೆಗೆ ಬಂದಿದ್ದವರು ಎಸಿಬಿ ಅಧಿಕಾರಿಗಳೂ ಅಲ್ಲ, ಲೋಕಾಯುಕ್ತದವರೂ ಅಲ್ಲ. ಎಲ್ಲರೂ ಹಣ ದರೋಡೆಗೆ ಬಂದಿದ್ದವರು. ಮನೆಯಲ್ಲಿದ್ದ ಮಹಿಳೆಯರನ್ನು ಹೆದರಿಸಲು ಎಸಿಬಿ ಹೆಸರು ಹೇಳಿದ್ದರು.
ಈಗ ಈ ಪ್ರಕರಣವನ್ನು ಭೇದಿಸುವಲ್ಲಿ ಯಲಹಂಕ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೊಫೆಸರ್ ಗಿರಿರಾಜು ಮನೆಯಲ್ಲಿ ಕ್ಯಾಶ್ ಹಣವನ್ನು ಇಟ್ಟಿರುವುದು ಗೊತ್ತಿರುವವರೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಪ್ರಾರಂಭದಲ್ಲೇ ಇತ್ತು. ಅದು ನಿಜವಾಗಿದೆ. ಪ್ರೊಫೆಸರ್ ಗಿರಿರಾಜು ಮನೆಯಲ್ಲಿ ಒಬ್ಬ ಕಾರ್ ಡ್ರೈವರ್ ಇದ್ದ. ಕಾರ್ ಡ್ರೈವರ್ ಗೆ ಮನೆಯಲ್ಲಿ ಕ್ಯಾಶ್ ಹಣ ಇರೋದು ಗೊತ್ತಿತ್ತು. ಆತನೇ ಬೇರೆಯವರಿಗೆ ಹೇಳಿ ದರೋಡೆ ಮಾಡಿಸಿದ್ದಾನೆ. ಈ ಮನೆ ದರೋಡೆ ಪ್ರಕರಣ ಸಂಬಂಧ 6 ಜನರನ್ನ ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಜಗನ್ ಮೋಹನ್ ಗೌಡ, ರಾಜೇಂದ್ರ ಮನೋತ್, ಶಂಕರ್, ಶ್ರೀನಿವಾಸ್, ಕಿರಣ್ ಜೈನ್, ಹೇಮಂತ್ ಜೈನ್, ಬಂಧಿತರು.
ಅಷ್ಟಕ್ಕೂ ರಾಬರಿ ಫ್ಲಾನ್ ಮಾಡಿದ್ದು ಹೇಗಿತ್ತು ಅನ್ನೋದೇ ಇಂಟರೆಸ್ಟಿಂಗ್. ಈ ಹಿಂದೆ ಅವರ ಮನೆಯಲ್ಲಿ ಡ್ರೈವರ್ ಅಗಿದ್ದವನು ಕೊಟ್ಟ ಇನ್ಪಾರ್ಮೆಷನ್ ಮೇಲೆಯೇ ಈ ರಾಬರಿ ನಡೆದಿದೆ. ಈ ಹಿಂದೆ ಗಿರಿರಾಜು ಮನೆಯಲ್ಲಿ ಡ್ರೈವರ್ ಅಗಿ ಕೆಲಸ ಮಾಡಿಕೊಂಡಿದ್ದ ಶಂಕರ್ ಅನಂತರ ಡ್ರೈವರ್ ಕೆಲಸ ಬಿಟ್ಟಿದ್ದ.
ಅನಂತರ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಶಂಕರ್ ಗೆ ಜಗನ್ ಮೋಹನ ಗೌಡ ಹಾಗೂ ರಾಜೇಂದ್ರ ಮನೋತ್ ಪರಿಚಯವಾಗಿದ್ದರು. ಅವರಿಬ್ಬರಿಗೂ ಗಿರಿರಾಜು ಮನೆಯಲ್ಲಿ ಹಣವಿರುವ ಬಗ್ಗೆ ಹೇಳಿದ್ದು ಶಂಕರ್ . ಅನಂತರ ಎಸಿಬಿ ಅಧಿಕಾರಿಗಳು ನಾವು ಎಂದು ಹೇಳಿ ಪ್ರೊಫೆಸರ್ ಗಿರಿರಾಜು ಮನೆಗೆ ರೇಡ್ ಮಾಡುವ ಪ್ಲ್ಯಾನ್ ಅನ್ನು ಆರೋಪಿಗಳು ರೂಪಿಸಿದ್ದರು. ರಾಜೇಂದ್ರ ಮನೋತ್ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಮನೆಗೆ ರೇಡ್ ಮಾಡಲು ಇನ್ನೂ ಇಬ್ಬರನ್ನ ಇದಕ್ಕೆ ಸೇರಿಸಿಕೊಂಡಿದ್ದ. ಹೇಮಂತ್ ಜೈನ್, ಕಿರಣ್ ಜೈನ್ ಇವರನ್ನ ಅಧಿಕಾರಿಗಳ ಪಾತ್ರದಲ್ಲಿ ಅಭಿನಯಿಸುವುದಕ್ಕೆ ನೇಮಿಸಿಕೊಂಡಿದ್ದರು.
ರಾಜೇಂದ್ರ ಮನೋತ್ ತನ್ನ ಸ್ನೇಹಿತನ ಇನ್ನೋವಾ ಕಾರನ್ನು ಮನೆ ದರೋಡೆ ಮಾಡಲು ತೆಗೆದುಕೊಂಡು ಬಂದಿದ್ದ . ನಾವು ಎಸಿಬಿ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಎಂದು ಪ್ರೊಫೆಸರ್ ಗಿರಿರಾಜು ಮನೆಗೆ ನುಗ್ಗಿದ್ದ ಆರೋಪಿಗಳು, ನಿಮ್ಮ ಮನೆಯಲ್ಲಿ ಕ್ಯಾಶ್ ಇದೆ, ಅದನ್ನು ಚೆಕ್ ಮಾಡಬೇಕು ಎಂದು ಹೇಳಿದ್ದರು. ಮನೆಯಲ್ಲಿ ಆ ವೇಳೆ ಪ್ರೊಫೆಸರ್ ಗಿರಿರಾಜು ಇರಲಿಲ್ಲ. ಮನೆಯಲ್ಲಿ ಗಿರಿರಾಜು ಪತ್ನಿ ಸೇರಿದಂತೆ ಇಬ್ಬರು ಹೆಂಗಸರು ಇದ್ದರು. ಗಿರಿರಾಜು ತಂದೆ ಮನೆಯಲ್ಲಿ ಇದ್ದರು. ಗಿರಿರಾಜು ತಂದೆಯನ್ನು ಬಾತ್ ರೂಮುನಲ್ಲಿ ಲಾಕ್ ಮಾಡಿ ಆರೋಪಿಗಳು ಕೂಡಿ ಹಾಕಿದ್ದರು. ಮನೆಯಲ್ಲಿದ್ದ ಹೆಂಗಸರಿಗೆ ಆರೋಪಿಗಳು ಅವಾಜ್ ಹಾಕಿದ್ದರು. ಹೆಂಗಸರಿಗೆ ಬೆದರಿಸಿದ್ದರು. ಮನೆಯಲ್ಲಿ ಹಣ ಎಲ್ಲಿ ಇಟ್ಟಿದ್ದೀರಿ, ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು. ಮನೆಯ ಅಡುಗೆ ಮನೆಯಲ್ಲಿದ್ದ ಹಣವನ್ನು ಹೆಂಗಸರು ತಂದು ಆರೋಪಿಗಳ ಮುಂದೆ ಇಟ್ಟಿದ್ದರು. ತಕ್ಷಣವೇ ಆರೋಪಿಗಳು 1 ಕೋಟಿ 50 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಮನೆಯಿಂದ ಪರಾರಿಯಾಗಿದ್ದರು.
ಸಿನಿಮಾ ಶೈಲಿಯಲ್ಲಿ ಪ್ರೊಫೆಸರ್ ಗಿರಿರಾಜು ಮನೆಯಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಹಣ ದರೋಡೆಯಾಗಿತ್ತು. ಈ ದರೋಡೆ ಶೈಲಿ ಪೊಲೀಸರಿಗೂ ಸ್ಪೆಷಲ್ 26 ಸಿನಿಮಾವನ್ನು ನೆನಪಿಸುವಂತಿತ್ತು. ಯಲಹಂಕ ಪೊಲೀಸ್ ಠಾಣೆಗೆ ಪ್ರೊಫೆಸರ್ ಗಿರಿರಾಜು ದೂರು ನೀಡಿದ್ದರು.
ದರೋಡೆ ಕೇಸ್ ತನಿಖೆಗೆ ಇಳಿದ ಪೊಲೀಸರಿಗೆ ಮೊದಲಿಗೆ ಆರೋಪಿಗಳು ಬಂದಿದ್ದ ಇನ್ನೋವಾ ಕಾರ್ ಬಗ್ಗೆ ಮಾಹಿತಿ ಜಾಲಾಡಿದ್ದಾರೆ. ಆ ಇನ್ನೋವಾ ಕಾರ್ ಯಾವುದೆಂದು ಪತ್ತೆ ಹಚ್ಚಿದ್ದಾರೆ. ನಂತರ ಕಾರ್ ಸಂಚರಿಸಿದ ಮಾರ್ಗಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರು ನಂಬರ್ ಪ್ಲೇಟ್ ಕೂಡ ಬದಲಾವಣೆ ಮಾಡಿದ್ದು ಪತ್ತೆಯಾಗಿದೆ. ಕಾರ್ ನಲ್ಲಿ ಬೆಂಗಳೂರಿನ ವಿಜಯನಗರ, ದೊಮ್ಮಲೂರು, ಸಂಜಯ್ ನಗರ, ರಾಮಮೂರ್ತಿ ನಗರ ಸುತ್ತಿದ್ದು ಪತ್ತೆಯಾಗಿತ್ತು. ಕೊನೆಗೆ ಆಂಧ್ರದ ಮದನಪಲ್ಲಿಗೆ ಆರೋಪಿಗಳು ಹೋಗಿದ್ದರು. ಯಲಹಂಕ ಪೊಲೀಸರು ಕೂಡ ಮದನಪಲ್ಲಿಗೆ ಹೋಗಿ ಆರೋಪಿಗಳ ವಶಕ್ಕೆ ಪಡೆದಿದ್ದಾರೆ.
ದರೋಡೆ ಮಾಡಿದ್ದ ಒಂದೂವರೆ ಕೋಟಿ ರೂಪಾಯಿ ಹಣವನ್ನು ನಾಲ್ಕು ಜನರು ಹಂಚಿಕೊಂಡಿದ್ದರು. ಆರೋಪಿಗಳ ಬಳಿ ಹಂತ ಹಂತವಾಗಿ ಒಟ್ಟು ಒಂದು ಕೋಟಿ ಇಪತ್ತೇಳು ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಶ್ರೀನಿವಾಸ್ ಗೌಡ, ಶ್ರೀನಿವಾಸ್, ಕಿರಣ್ ಜೈನ್ ಮತ್ತು ಹೇಮಂತ್ ಜೈನ್
ವಿಚಾರಣೆ ವೇಳೆ ಪ್ರೊಫೆಸರ್ ಗಿರಿರಾಜು ಮನೆಯಲ್ಲಿ ಕಾರ್ ಡ್ರೈವರ್ ಆಗಿದ್ದ ಶಂಕರಗೆ ಪ್ರೊಫೆಸರ್ ಗಿರಿರಾಜ್ ಮನೆಯಲ್ಲಿ ಹಣ ಇರುವುದು ಗೊತ್ತಿತ್ತು. ಹೀಗಾಗಿ ವಿಚಾರವನ್ನು ಜಗನ್ ಮೋಹನ್ ಜೊತೆಗೆ ಹೇಳಿಕೊಂಡಿದ್ದ. ಪ್ಲಾನ್ ನಂತೆ ಮನೆಗೆ ನುಗ್ಗಿ ಎಸಿಬಿ ಅಧಿಕಾರಿಗಳು ಎಂದು ಹೇಳಿ ಈ ಗ್ಯಾಂಗ್ ಹಣ ದೋಚಿದ್ದರು. ಒಂದು ಇನ್ನೋವಾ ಕಾರು, ಒಂದು ಒಮಿನಿ ಕಾರು ಮತ್ತು ಕಾರಿನ ನಕಲಿ ನಂಬರ್ ಪ್ಲೇಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆಯಾಗಿದ್ದ ಹಣದಲ್ಲಿ ಶೇ.80 ರಷ್ಟು ಹಣವನ್ನು ಈಗಾಗಲೇ ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಮೀನು ಖರೀದಿಗಾಗಿ ಹಣವನ್ನು ಮನೆಯಲ್ಲಿ ತಂದು ಇಡುವಾಗ ಮನೆ ಮಾಲೀಕರು ಎಚ್ಚರದಿಂದ ಇರಬೇಕು. ತಮ್ಮ ಸುತ್ತ ಮುತ್ತ ಇರುವವರಿಗೆ ಗೊತ್ತಾದರೂ, ಈ ರೀತಿ ಮನೆಯ ದರೋಡೆಯಾಗುತ್ತೆ. ಜಮೀನು, ಸೈಟ್ ಮಾರಾಟದಿಂದ ಬಂದ ಹೆಚ್ಚಿನ ಹಣವನ್ನು ಬ್ಯಾಂಕ್ ಗಳಲ್ಲಿ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಅಕೌಂಟ್ ತೆರೆದು ಇಡಲು ಅವಕಾಶ ಇದೆ. ಇದರಿಂದ ಆದಾಯ ತೆರಿಗೆಯ ಪಾವತಿಯಿಂದಲೂ ವಿನಾಯಿತಿ ಪಡೆಯಬಹುದು. ಬ್ಯಾಂಕ್ ಅಕೌಂಟ್ ನಲ್ಲಿ ಇಡದೇ, ಮನೆಯಲ್ಲೇ ಕ್ಯಾಶ್ ಇಟ್ಟರೇ, ಹೀಗೆ ಗೊತ್ತಿರುವವರಿಂದಲೇ ಹಣ ದರೋಡೆಯಾಗುತ್ತೆ, ಎಚ್ಚರ. ಎಚ್ಚರ.
ಆರೋಪಿ ಜಗನ್ ಮೋಹನ್ ಹಾಗೂ ಯಲಹಂಕ ಪೊಲೀಸ್ ಠಾಣೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.