/newsfirstlive-kannada/media/media_files/2025/08/18/darshan-in-jail-2025-08-18-07-07-27.jpg)
ಜೈಲಿನಲ್ಲಿರುವ ನಟ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಮತ್ತೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ನಡೆದಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಬ್ಲೂ ಜಾಕೆಟ್ ಧರಿಸಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು.
ನ್ಯಾಯಾಧೀಶರು ಎಲ್ಲ ಆರೋಪಿಗಳ ಹಾಜರಾತಿಯನ್ನು ಪಡೆದರು. ನಟ ದರ್ಶನ್ ಇಂದು, ಕೈ ಕಟ್ಟಿ ಬೇರೆ ಆರೋಪಿಗಳ ಹಿಂದೆ ನಿಂತಿದ್ದು, ವಿಡಿಯೋ ಕಾನ್ಪರೆನ್ಸ್ ವಿಚಾರಣೆ ವೇಳೆ ಕೋರ್ಟ್ ಹಾಲ್ ನಲ್ಲಿ ಉಪಸ್ಥಿತರಿದ್ದ ವಕೀಲರಿಗೆ ಕಂಡು ಬಂತು.
ಇನ್ನೂ ಎ1 ಆರೋಪಿ ಪವಿತ್ರಾಗೌಡ ಪರ ವಕೀಲರು, ಪೊಲೀಸರು ಈಗಾಗಲೇ ತನಿಖೆ ಪೂರ್ಣಗೊಳಿಸಿ ಚಾರ್ಜ್ ಷೀಟ್ ಸಲ್ಲಿಸಿರುವುದರಿಂದ ಕೋರ್ಟ್ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಬೇಕೆಂದು ಮನವಿ ಮಾಡಿಕೊಂಡರು.
ಆದರೇ, ಇಂದಿನ ವಿಚಾರಣೆಗೆ ಕಾರ್ತಿಕ್ ಹಾಗೂ ಮತ್ತೊಬ್ಬ ಆರೋಪಿ ಗೈರಾಗಿದ್ದರು. ಹೀಗಾಗಿ ನ್ಯಾಯಾಲಯವು ದೋಷಾರೋಪ ಹೊರಿಸಲಿಲ್ಲ. ವಿಚಾರಣೆಯನ್ನು ಸೆಪ್ಟೆಂಬರ್ 25 ಕ್ಕೆ ಮುಂದೂಡಿತ್ತು. ಸೆಪ್ಟೆಂಬರ್ 25 ರಂದು ಕೋರ್ಟ್, ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸುವ ಸಾಧ್ಯತೆ ಇದೆ.
ಇನ್ನೂ ಕಳೆದ ಭಾರಿಯ ವಿಚಾರಣೆಯ ವೇಳೆ ನಟ ದರ್ಶನ್, ಕೈ ಎತ್ತಿ ಮಾತನಾಡಲು ಅವಕಾಶ ಕೇಳಿದ್ದರು. ಆಗ ಮಾತನಾಡಿದ್ದ ನಟ ದರ್ಶನ್, ನನಗೆ ಜೈಲಿನಲ್ಲಿ ಸ್ವಲ್ಪ ಪಾಯಿಸನ್ ಕೊಡಿ ಸ್ವಾಮಿ ಎಂದು ಜಡ್ಜ್ ಗೆ ಮನವಿ ಮಾಡಿಕೊಂಡಿದ್ದರು. ಆದರೇ, ಇಂದು ಮಾತನಾಡಲು, ತನ್ನ ಕಷ್ಟ ಹೇಳಿಕೊಳ್ಳಲು ನಟ ದರ್ಶನ್ ಮುಂದಾಗಲಿಲ್ಲ. ಇಂದಿನ ವಿಚಾರಣೆ ವೇಳೆ ನಟ ದರ್ಶನ್ ಮೌನಕ್ಕೆ ಶರಣಾಗಿದ್ದರು. ಹಾಸಿಗೆ, ದಿಂಬು ಕೊಡುತ್ತಿಲ್ಲ ಎಂದು ದರ್ಶನ್ 2ನೇ ಭಾರಿ ಸಲ್ಲಿಸಿರುವ ಅರ್ಜಿಯ ಆದೇಶವನ್ನು ಕೋರ್ಟ್ ಈಗಾಗಲೇ ಕಾಯ್ದಿರಿಸಿದೆ.
ದರ್ಶನ್ ಗೆ ಹಾಸಿಗೆ ದಿಂಬು ಕೊಟ್ಟಿಲ್ಲ ಅನ್ನೋ ವಿಚಾರವು ಇಂದು ಕೋರ್ಟ್ ನಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಕೋರ್ಟ್ ಜಡ್ಜ್ ಜೈಲು ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದ್ದರು.
ಜೈಲು ಮ್ಯಾನ್ಯುಯಲ್ ನಲ್ಲಿ ಇರುವಂತೆ ದರ್ಶನ್ ಗೆ ಸೌಲಭ್ಯ ಕೊಡಲಾಗಿದೆ ಎಂದು ಜೈಲಾಧಿಕಾರಿಗಳು ಕೋರ್ಟ್ ಗೆ ತಿಳಿಸಿದ್ದರು.
ಇನ್ನೂ ಈ ಕೊಲೆ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೆಲವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ತೀರ್ಮಾನದ ಬಳಿಕವೇ ದೋಷಾರೋಪ ನಿಗದಿ ಮಾಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.