/newsfirstlive-kannada/media/media_files/2025/08/16/krera-appealate-tribunal-2025-08-16-13-54-01.jpg)
ರೇರಾ ಮೇಲ್ಮನವಿ ನ್ಯಾಯಾಧೀಕರಣ ಮತ್ತು ಸೌದೇಲಾ ಕ್ವೀನ್ ಗೇಟ್ ಪ್ರಾಜೆಕ್ಟ್
ಬೆಂಗಳೂರು ಮತ್ತು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಬಿಲ್ಡರ್ ಮತ್ತು ಡೆವಲಪರ್ ಗಳಿಂದ ಮನೆ, ಪ್ಲ್ಯಾಟ್ ಖರೀದಿ ಮಾಡುವವರಿಗೆ ಕರ್ನಾಟಕದ ರೇರಾ ಮೇಲ್ಮನವಿ ನ್ಯಾಯಾಧೀಕರಣ ದೊಡ್ಡ ರೀಲೀಫ್ ನೀಡಿದೆ. ಮನೆ, ಪ್ಲ್ಯಾಟ್ ಖರೀದಿಗೆ ಮುಂಗಡ ಹಣ ನೀಡಿ, ಪ್ಲ್ಯಾಟ್ ನೀಡದೇ ಇದ್ದಲ್ಲಿ, ಪ್ಲ್ಯಾಟ್ ಖರೀದಿಯ ರಿಜಿಸ್ಟ್ರೇಷನ್ ಕೂಡ ಮಾಡಿಕೊಡದೇ ಇದ್ದರೇ, ಅಂಥ ರಿಯಲ್ ಎಸ್ಟೇಟ್ ಬಿಲ್ಡರ್ ಮತ್ತು ಡೆವಲಪರ್, ಖರೀದಿದಾರ ಗ್ರಾಹಕರಿಗೆ ಕಟ್ಟಿದ ಹಣಕ್ಕೆ ಬಡ್ಡಿಯನ್ನು ಪಾವತಿಸಬೇಕು ಎಂದು ರೇರಾ ಮೇಲ್ಮನವಿ ನ್ಯಾಯಾಧೀಕರಣ( ರೇರಾ ಅಪೇಲೇಟ್ ಟ್ರಿಬ್ಯುನಲ್) ತೀರ್ಪು ನೀಡಿದೆ.
ಕರ್ನಾಟಕದ ರೇರಾ( ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಅಥಾರಿಟಿ) 2023 ರಲ್ಲೇ ಮುಂಗಡವಾಗಿ ಪಾವತಿಸಿದ್ದ 34.4 ಲಕ್ಷ ರೂಪಾಯಿ ಹಣವನ್ನು ರೀಫಂಡ್ ಮಾಡಬೇಕೆಂದು ಬಿಲ್ಡರ್ ಮತ್ತು ಡೆವಲಪರ್ ಗೆ ಆದೇಶ ನೀಡಿತ್ತು. ಆದರೇ, ಪಾವತಿಸಿದ್ದ 34.4 ಲಕ್ಷ ರೂಪಾಯಿ ಮುಂಗಡ ಹಣಕ್ಕೆ ಬಡ್ಡಿ ಪಾವತಿಸುವುದನ್ನು ರೇರಾ ನಿರಾಕರಿಸಿತ್ತು.
ಇದರ ವಿರುದ್ಧ ಖರೀದಿದಾರ ಗ್ರಾಹಕರು ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ರೇರಾ ಮೇಲ್ಮನವಿ ನ್ಯಾಯಾಧೀಕರಣವು 34.4 ಲಕ್ಷ ರೂಪಾಯಿ ಹಣಕ್ಕೆ ಬಡ್ಡಿಯನ್ನೂ ಕೂಡ ಪಾವತಿಸಬೇಕು ಎಂದು ಬಿಲ್ಡರ್ ಮತ್ತು ಡೆವಲಪರ್ ಗೆ ಆದೇಶಿಸಿದೆ. ಬಡ್ಡಿ ಪಾವತಿಗೆ ನಿರಾಕರಿಸಿದ ರೇರಾ ಆದೇಶವನ್ನು ರೇರಾ ಮೇಲ್ಮನವಿ ನ್ಯಾಯಾಧೀಕರಣ ತಿರಸ್ಕರಿಸಿದೆ. ಇದರಿಂದಾಗಿ ಗ್ರಾಹಕರಿಗೆ ಈಗ 34.4 ಲಕ್ಷ ರೂಪಾಯಿ ಜೊತೆಗೆ ಆ ಹಣಕ್ಕೆ ಕಳೆದ 9 ವರ್ಷಗಳ ಬಡ್ಡಿ ಹಣವನ್ನು ಬಿಲ್ಡರ್ ಮತ್ತು ಡೆವಲಪರ್ , ಗ್ರಾಹಕರಿಗೆ ನೀಡಬೇಕಾಗಿದೆ. ಇದು ಗ್ರಾಹಕರಿಗೆ ಸಿಕ್ಕ ಜಯ. ಗ್ರಾಹಕರ ಹಿತಾಸಕ್ತಿ ರಕ್ಷಣೆಯಾದಂತೆ ಆಗಿದೆ.
2013 ರಲ್ಲಿ ಬೆಂಗಳೂರಿನ ಬೇಗೂರು- ಹುಳಿಮಾವು ರಸ್ತೆಯ ನಿವಾಸಿ ಕಿರಣ್ ಸಾರಥ್ ಮತ್ತು ಅವರ ತಾಯಿ ಸೌಭಾಗ್ಯ ಪ್ಲ್ಯಾಟ್ ಖರೀದಿಗಾಗಿ ಸೌದೇಲಾ, ಕ್ವೀನ್ ಗೇಟ್ ಪ್ರಾಜೆಕ್ಟ್ ನಲ್ಲಿ ಪ್ಲ್ಯಾಟ್ ಬುಕ್ ಮಾಡಿದ್ದರು. ಮುಂದಿನ ನಾಲ್ಕು ವರ್ಷಗಳ ಕಾಲ ಮುಂಗಡ ಹಣವನ್ನ ಪಾವತಿಸಿದ್ದರು. ಬರೋಬ್ಬರಿ 34.4 ಲಕ್ಷ ರೂಪಾಯಿ ಹಣ ಪಾವತಿಸಿದ್ದರು. 80.1 ಲಕ್ಷ ರೂಪಾಯಿಗೆ ಪ್ಲ್ಯಾಟ್ ಖರೀದಿಯ ಮಾತುಕತೆ ನಡೆದಿತ್ತು. ಆದರೇ, ಬಿಲ್ಡರ್, ಭರವಸೆ ಕೊಟ್ಟಂತೆ, ನಾಲ್ಕು ವರ್ಷದಲ್ಲಿ ಪ್ಲ್ಯಾಟ್ ಅನ್ನು ನಿರ್ಮಿಸಿ ಖರೀದಿದಾರ ಗ್ರಾಹಕರಿಗೆ ನೀಡಲಿಲ್ಲ. ಜೊತೆಗೆ ಪ್ಲ್ಯಾಟ್ ನ ಮಾರಾಟದ ರಿಜಿಸ್ಟ್ರೇಷನ್ ಪತ್ರವನ್ನೂ ಮಾಡಿಕೊಡಲಿಲ್ಲ. ಪ್ಲ್ಯಾಟ್ ಅನ್ನು ಖರೀದಿದಾರ ಗ್ರಾಹಕರಿಗೆ ನೀಡಲೇ ಇಲ್ಲ.
ಕಿರಣ್ ಸಾರಥ್ ಮತ್ತು ತಾಯಿ ಸೌಭಾಗ್ಯ ಪದೇ ಪದೇ ಬಿಲ್ಡರ್ ಅನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆದರೂ, ಪ್ಲ್ಯಾಟ್ ಅನ್ನು ನೀಡಲಿಲ್ಲ, ಮಾರಾಟದ ರಿಜಿಸ್ಟ್ರೇಷನ್ ಅನ್ನು ಮಾಡಿಕೊಡಲಿಲ್ಲ.
ಆದರೇ, 2022ರ ಮಾರ್ಚ್ ನಲ್ಲಿ ಬಿಬಿಎಂಪಿ ಸೌದೇಲಾ, ಕ್ವೀನ್ ಗೇಟ್ ಪ್ರಾಜೆಕ್ಟ್ ಗೆ ಭಾಗಶಃ ವಾಸಯೋಗ್ಯ ಪ್ರಮಾಣಪತ್ರ (ಓ.ಸಿ.) ನೀಡಿತ್ತು. ಅಷ್ಟೊತ್ತಿಗೆ ಕಿರಣ್ ಸಾರಥ್, ತಾಯಿ ಸೌಭಾಗ್ಯ ಪ್ಲ್ಯಾಟ್ ಗಾಗಿ ಹಣ ಕಟ್ಟಿ 9 ವರ್ಷಗಳಾಗಿತ್ತು. ಹೀಗಾಗಿ ಪ್ರಾಜೆಕ್ಟ್ ಸಹವಾಸವೇ ಬೇಡ ಎಂದು ಖರೀದಿದಾರ ಗ್ರಾಹಕ ಕಿರಣ್ ಸಾರಥ್, ತಾಯಿ ಸೌಭಾಗ್ಯ ನಿರ್ಧರಿಸಿದ್ದರು.
2022 ಜುಲೈ, 20 ರಂದು ತಾಯಿ- ಮಗ ತಾವು ಕಟ್ಟಿರುವ 34.4 ಲಕ್ಷ ರೂಪಾಯಿ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಲು ಸೌದೇಲಾ ಕ್ವೀನ್ ಗೇಟ್ ಪ್ರಾಜೆಕ್ಟ್ ನ ಬಿಲ್ಡರ್ ಗೆ ಆದೇಶ ನೀಡಬೇಕೆಂದು ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ 2023ರ ಡಿಸೆಂಬರ್ 2 ರಂದು ಆದೇಶ ನೀಡಿದ್ದ ರೇರಾ, ಸೌಭಾಗ್ಯ ಮತ್ತು ಕಿರಣ್ ಸಾರಥ್ ಗೆ ಕಟ್ಟಿರುವ 34.4 ಲಕ್ಷ ರೂಪಾಯಿ ಹಣವನ್ನ ಬಿಲ್ಡರ್ ವಾಪಸ್ ನೀಡಬೇಕೆಂದು ಆದೇಶ ನೀಡಿತ್ತು. ಆದರೇ, ಬಡ್ಡಿ ಹಣ ಪಾವತಿಸಬೇಕೆಂಬ ಮನವಿಯನ್ನು ತಿರಸ್ಕರಿಸಿತ್ತು. ಇದಕ್ಕೆ ರೇರಾ 2 ಕಾರಣಗಳನ್ನು ನೀಡಿತ್ತು. ಕಿರಣ್ ಸಾರಥ್- ಸೌಭಾಗ್ಯ ಅವರೇ ಸ್ವಪ್ರೇರಣೆಯಿಂದ ಪ್ರಾಜೆಕ್ಟ್ ನಲ್ಲಿ ಪ್ಲ್ಯಾಟ್ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಪ್ಲ್ಯಾಟ್ ಖರೀದಿಯ ರಿಜಿಸ್ಟರ್ ಆಗ್ರಿಮೆಂಟ್ ಆಗಿಲ್ಲ ಎಂದು ಕಾರಣ ನೀಡಿತ್ತು.
ರೇರಾದ ಈ ಆದೇಶದ ವಿರುದ್ಧ ಕಿರಣ್ ಸಾರಥ್ ಮತ್ತು ಸೌಭಾಗ್ಯ, ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಬಿಲ್ಡರ್ ರೇರಾ ಕಾಯಿದೆಯ ಸೆಕ್ಷನ್ 13 ಅನ್ನು ಉಲಂಘಿಸಿದ್ದಾರೆ. ಪ್ಲ್ಯಾಟ್ ನ ಒಟ್ಟು ವೆಚ್ಚದ ಶೇ.10 ಕ್ಕಿಂತ ಹೆಚ್ಚಿನ ಹಣವನ್ನು ರಿಜಿಸ್ಟ್ರೇಷನ್ ಆಗ್ರಿಮೆಂಟ್ ಮಾಡಿಕೊಡದೇ, ಗ್ರಾಹಕರಾದ ನಮ್ಮಿಂದ ಪಡೆದಿದ್ದಾರೆ. 2016 ರಲ್ಲಿ ಇ ಮೇಲ್ ನಲ್ಲಿ ಬೇಸ್ ಮೆಂಟ್ ಸ್ಲ್ಯಾಬ್ ಅನ್ನು ಮೂರೂವರೆ ವರ್ಷದ ಬಳಿಕ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಇದರಿಂದಾಗಿ ಪ್ಲ್ಯಾಟ್ ನಿರ್ಮಾಣದ ವಿಳಂಬವನ್ನು ಒಪ್ಪಿಕೊಂಡಂತೆ ಆಯಿತು. ಬೇರೆ ಖರೀದಿದಾರರಿಗೂ ಸ್ಟಾಂಡರ್ಡ್ ಆಗಿ 30 ತಿಂಗಳಲ್ಲಿ ಪ್ಲ್ಯಾಟ್ ನಿರ್ಮಾಣ ಮಾಡಿಕೊಡುವುದಾಗಿ ಆಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. 6 ತಿಂಗಳು ಗ್ರೇಸ್ ಸಮಯವನ್ನು ಪಡೆದಿದ್ದಾರೆ. ಮೊದಲ ಕಂತಿನ ಹಣವನ್ನು ಕಟ್ಟಿದ ಮುಂದಿನ 3 ವರ್ಷದಲ್ಲಿ ಪ್ಲ್ಯಾಟ್ ಅನ್ನು ನಮಗೆ ನೀಡಬೇಕಾಗಿತ್ತು.
ಆದರೇ, ಬಿಲ್ಡರ್ ನಮ್ಮನ್ನು 2018 ರಲ್ಲಿ ಸಂಪರ್ಕಿಸಿ, ಆಗ್ರಿಮೆಂಟ್ ಮಾಡಿಕೊಡುವುದಾಗಿ ಹೇಳಿದ್ದರು. ಬುಕ್ಕಿಂಗ್ ಮಾಡಿದ 5 ವರ್ಷದ ಬಳಿಕ ಆಗ್ರಿಮೆಂಟ್ ಮಾಡಿಕೊಡುವುದಾಗಿ ಹೇಳಿದ್ದರು. ಇಷ್ಟೊತ್ತಿಗೆ ನಮಗೆ ಈ ಖರೀದಿಯ ಪ್ರಕ್ರಿಯೆ, ವಿಳಂಬದಿಂದ ಸಾಕಷ್ಟು ಹತಾಶೆಯಾಗಿತ್ತು. ಹೀಗಾಗಿ ನಾವು ಈ ಪ್ರಾಜೆಕ್ಟ್ ನಲ್ಲಿ ಪ್ಲ್ಯಾಟ್ ಖರೀದಿಯಿಂದಲೇ ಹಿಂದೆ ಸರಿಯಲು ನಿರ್ಧರಿಸಿದ್ದೇವು. 2019 ರ ಫೆಬ್ರವರಿ ತಿಂಗಳಲ್ಲಿ ಪ್ಲ್ಯಾಟ್ ಖರೀದಿಯ ರದ್ದುಪಡಿಸುವ ಅಂತಿಮ ಪ್ರಕ್ರಿಯೆ ನಡೆಯಿತು. ಆದರೇ, 2024 ರಲ್ಲಿ ಬಿಲ್ಡರ್ 2 ಡಿಮ್ಯಾಂಡ್ ಡ್ರಾಫ್ಟ್ ಮೂಲಕ 34.4 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿದ್ದಾರೆ.
ಈಗ ರೇರಾ ಮೇಲ್ಮನವಿ ನ್ಯಾಯಾಧೀಕರಣವು , ಬಿಲ್ಡರ್ ಭಾರಿ ಪ್ರಮಾಣದ ಹಣವನ್ನು ಗ್ರಾಹಕರಿಂದ ಪಡೆದು, ಅವರಿಗೆ ಖರೀದಿಯ ಆಗ್ರಿಮೆಂಟ್ ಮಾಡಿಕೊಟ್ಟಿಲ್ಲ. ರಿಜಿಸ್ಟಾರ್ ಆಗ್ರಿಮೆಂಟ್ ಇಲ್ಲವೆಂದು ಪಾವತಿಸಿದ ಹಣಕ್ಕೆ ಬಡ್ಡಿ ಕೇಳಬಾರದು ಎಂಬ ರೇರಾ ಆದೇಶ ಸರಿ ಇಲ್ಲ. ಸಮರ್ಥನೀಯವೂ ಅಲ್ಲ. ಬಿಲ್ಡರ್, ಪ್ರಾಜೆಕ್ಟ್ ಗೆ ವಾಸ ಯೋಗ್ಯ ಪ್ರಮಾಣಪತ್ರ(ಓ.ಸಿ.) ಪಡೆಯಲು ಹತ್ತಿರ ಹತ್ತಿರ ಒಂದು ದಶಕ ಸಮಯ ತೆಗೆದುಕೊಂಡಿದ್ದಾರೆ. ಮೊದಲ ಕಂತಿನ ಹಣವನ್ನು ಖರೀದಿದಾರ ಗ್ರಾಹಕರಿಂದ ಕಟ್ಟಿಸಿಕೊಂಡ 5 ವರ್ಷದ ಬಳಿಕ ಬಿಲ್ಡರ್, ರಿಜಿಸ್ಟಾರ್ ಆಗ್ರಿಮೆಂಟ್ ಮಾಡಿಕೊಡಲು ಮುಂದಾಗಿದ್ದಾರೆ. ಇದು ಸೇವಾ ನಿಯಮಗಳ ಉಲಂಘನೆ. ಹೀಗಾಗಿ ಬಿಲ್ಡರ್, 2017ರ ಏಪ್ರಿಲ್ 30 ರವರೆಗೆ ಪಾವತಿಸಿದ ಹಣಕ್ಕೆ ವಾರ್ಷಿಕ ಶೇ.9 ರಷ್ಟು ಬಡ್ಡಿಯನ್ನು ಖರೀದಿದಾರ ಗ್ರಾಹಕರಿಗೆ ಪಾವತಿಸಬೇಕೆಂದು ಬಿಲ್ಡರ್ ಗೆ ರೇರಾ ಮೇಲ್ಮನವಿ ನ್ಯಾಯಾಧೀಕರಣ ಆದೇಶ ನೀಡಿದೆ. ಇದರಿಂದಾಗಿ ಈಗ ಖರೀದಿದಾರ ಗ್ರಾಹಕರಾದ ಕಿರಣ್ ಸಾರಥ್ ಮತ್ತು ತಾಯಿ ಸೌಭಾಗ್ಯ ಅವರಿಗೆ ಅಸಲು ಹಣದ ಜೊತೆಗೆ ಅದರ ಬಡ್ಡಿಯೂ ಸಿಗಲಿದೆ. ಗ್ರಾಹಕರು ಹಕ್ಕು ಮತ್ತು ಹಿತಾಸಕ್ತಿ ಈಗ ರಕ್ಷಣೆಯಾದಂತೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ