/newsfirstlive-kannada/media/media_files/2025/09/11/acp-subbanna-robberry-2025-09-11-13-32-24.jpg)
ನಿವೃತ್ತ ಎಸಿಪಿ ಸುಬ್ಬಣ್ಣ ಮೇಲೆ ದಾಳಿ, ದರೋಡೆ!
ಬೆಂಗಳೂರಿನಲ್ಲಿ ಹಗಲಲ್ಲೇ ದರೋಡೆ ನಡೆದಿದೆ. ಸಾಮಾನ್ಯ ವ್ಯಕ್ತಿಗಳನ್ನಲ್ಲ, ಡೇರಿಂಗ್ ಪೊಲೀಸ್ ಆಫೀಸರ್ ಆಗಿದ್ದ ಎಚ್.ಸುಬ್ಬಣ್ಣ ಅವರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ, ದರೋಡೆ ಮಾಡಲಾಗಿದೆ. ನಿವೃತ್ತ ಎಸಿಪಿ ಎಚ್. ಸುಬ್ಬಣ್ಣ ಅವರ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು ಸುಬ್ಬಣ ಅವರ ಬಳಿ ಇದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಕಳೆದ ಸೆಪ್ಟೆಂಬರ್ ಒಂದು ನಿವೃತ್ತ ಎಸಿಪಿ ಸುಬ್ಬಣ್ಣ, ಬೆಂಗಳೂರಿನ ಹೆಬ್ಬಾಳದ ವೆರ್ಟನರಿ ಆಸ್ಪತ್ರೆ ಬಳಿ ಬೆಳಿಗ್ಗೆಯೇ ವಾಕಿಂಗ್ ಮಾಡುತ್ತಿದ್ದಾಗ ಈ ದರೋಡೆ ನಡೆದಿತ್ತು. ಸುಬ್ಬಣ ಅವರ ಮೈ ಮೇಲಿದ್ದ ಚಿನ್ನದ ಸರ, ಬ್ರಾಸ್ ಲೆಟ್ ಅನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು. ಬೆಳಿಗ್ಗೆ 9.30ರ ಸುಮಾರಿಗೆ ಎಚ್. ಸುಬ್ಬಣ್ಣ ಬೆಳಿಗ್ಗೆಯೇ ವಾಕಿಂಗ್ ಮುಗಿಸಿಕೊಂಡು ಹೆಬ್ಬಾಳದ ವೆರ್ಟನರಿ ಆಸ್ಪತ್ರೆ ಬಳಿಯಿಂದ ಮನೆ ಕಡೆಗೆ ಹೊರಟಿದ್ದರು. ಈ ವೇಳೆ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಬಂದಿದ್ದ ದರೋಡೆಕೋರರು, ಸುಬ್ಬಣ್ಣ ಅವರ ಬಳಿಯಿಂದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದರು. ಸುಮಾರು 8 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ದರೋಡೆಕೋರರು ಸುಬ್ಬಣ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಹಲ್ಲೆ ನಡೆಸಿದ್ದರು. ದರೋಡೆಕೋರರ ದಾಳಿಯಿಂದ ಸುಬ್ಬಣ್ಣ ಅವರ ಕೈಗೆ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಸುಬ್ಬಣ್ಣ ಅವರು ಚಿಕಿತ್ಸೆ ಪಡೆದಿದ್ದಾರೆ. ತಮ್ಮ ಮೇಲೆ ನಡೆದ ದಾಳಿ, ಹಲ್ಲೆ ಹಾಗೂ ದರೋಡೆ ಬಗ್ಗೆ ನಿವೃತ್ತ ಎಸಿಪಿ ಎಚ್.ಸುಬ್ಬಣ್ಣ ಸಂಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದರೋಡೆ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಡೇರಿಂಗ್ ಆಫೀಸರ್ ಎಚ್.ಸುಬ್ಬಣ್ಣ
ನಿವೃತ್ತ ಎಸಿಪಿ ಎಚ್.ಸುಬ್ಬಣ್ಣ ಬಗ್ಗೆ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರಿದೆ. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಎಚ್.ಸುಬ್ಬಣ್ಣ ಸಬ್ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಎಸಿಪಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ 2003-04 ರಲ್ಲಿ ಪತ್ನಿಯೇ ತನ್ನ ಗಂಡನನ್ನು ಮನೆಯಲ್ಲೇ ಹತ್ಯೆ ಮಾಡಿಸಿದ್ದಳು. ಕಲ್ಬುರ್ಗಿಯ ವೈದ್ಯ ವಿದ್ಯಾರ್ಥಿಯ ಜೊತೆ ಅಫೇರ್ ಹೊಂದಿದ್ದ ಪತ್ನಿ, ಗಂಡ ಮನೆಗೆ ಬಂದಾಗ, ಪ್ರಿಯಕರನನ್ನು ಮನೆಗೆ ಕರೆಸಿಕೊಂಡು, ರೂಮುನ ಸಜ್ಜಾದಲ್ಲಿ ಅಡಗಿಕೊಳ್ಳುವಂತೆ ಮಾಡಿದ್ದಳು. ಮಧ್ಯರಾತ್ರಿ ಅಬಕಾರಿ ಗುತ್ತಿಗೆದಾರನಾಗಿದ್ದ ಗಂಡನನ್ನು ಹೆಂಡತಿಯೇ ಹತ್ಯೆ ಮಾಡಿಸಿದ್ದಳು. ಈ ಕೊಲೆ ಕೇಸ್ ಆಗ ಬೆಂಗಳೂರಿನಿಂದ ಹಿಡಿದು ದೂರದ ಕಲ್ಬುರ್ಗಿವರೆಗೂ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಈ ಕೊಲೆ ಕೇಸ್ ಬೆಂಗಳೂರಿನ ಹೈಪ್ರೊಫೈಲ್ ಕೊಲೆ ಕೇಸ್ ಆಗಿತ್ತು. ಈ ಕೇಸ್ ಅನ್ನು ಭೇಧಿಸಿ, ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದು ಇದೇ ಎಚ್.ಸುಬ್ಬಣ್ಣ ಎಂಬ ಪೊಲೀಸ್ ಅಧಿಕಾರಿ.
ಬೆಂಗಳೂರಿನ ಲಗ್ಗೆರೆ, ರಾಜಗೋಪಾಲ ನಗರ, ಪೀಣ್ಯ ಭಾಗದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಚ್.ಸುಬ್ಬಣ್ಣ ಕೆಲಸ ಮಾಡಿದ್ದಾರೆ. ಜೊತೆಗೆ ತುಮಕೂರು ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಸಮುದಾಯದ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಇಂದಿಗೂ ಸಕ್ರಿಯವಾಗಿದ್ದಾರೆ. ಇಂಥ ಅಧಿಕಾರಿಯ ಮೇಲೆ ದರೋಡೆ ನಡೆದಿದ್ದು ಜನರು ಬೆಚ್ಚಿಬೀಳುವಂತೆ ಮಾಡಿತ್ತು. ಕೊನೆಗೂ ಸಂಜಯ ನಗರ ಪೊಲೀಸರು ಕೆಲವೇ ದಿನಗಳಲ್ಲಿ ದರೋಡೆ ಕೃತ್ಯದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿವೃತ್ತ ಎಸಿಪಿ ಸುಬ್ಬಣ್ಣ ಮೇಲೆ ದಾಳಿ ನಡೆಸಿ, ದರೋಡೆ ಮಾಡಿದ್ದ ಮೂವರು ಆರೋಪಿಗಳ ಬಂಧನ
ಮೊಹಮ್ಮದ್ ಸಲ್ಮಾನ್, ಸಯ್ಯದ್ ಮೋಹಿಸಿನ್, ಸೈಯ್ಯದ್ ಇರ್ಫಾನ್ ಎಂಬ ಮೂವರು ಆರೋಪಿಗಳನ್ನು ಸಂಜಯ ನಗರ ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಎಸಿಪಿ ಸುಬ್ಬಣ್ಣ ಮನೆಗೆ ನಗರಾಭಿವೃದ್ದಿ ಖಾತೆ ಸಚಿವರೂ ಆದ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಭೇಟಿ ನೀಡಿ, ಸುಬ್ಬಣರ ಆರೋಗ್ಯ ವಿಚಾರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.