/newsfirstlive-kannada/media/media_files/2025/10/01/mp-chindwara-kidney-failure02-2025-10-01-12-32-09.jpg)
ಚಿಂದ್ವಾರ ಜಿಲ್ಲೆಯಲ್ಲಿ ಕಲಬೆರಕೆ ಸಿರಫ್ ಗಳಿಂದ 6 ಮಕ್ಕಳ ಸಾವು ಶಂಕೆ!
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನ ನಡೆದಿದೆ. ಕಳೆದ 15 ದಿನಗಳಲ್ಲಿ ಕಿಡ್ನಿ ವೈಫಲ್ಯದಿಂದ ಆರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ದಾರುಣ ದುರಂತದಿಂದಾಗಿ ಜಿಲ್ಲೆಯ ಜನರು ಶಾಕ್ ಗೊಳಗಾಗಿದ್ದಾರೆ. ಮಕ್ಕಳ ಸಾವು ಪ್ರಾರಂಭದಲ್ಲಿ ಜ್ವರದಿಂದ ಆಗಿರಬಹುದು ಎಂದುಕೊಂಡಿದ್ದರು. ಆದರೇ, ತನಿಖೆ ನಡೆದ ಬಳಿಕ ಕಲಬೆರಕೆ ಕಫ್ ಸಿರಪ್ ಕಾರಣದಿಂದಾಗಿ ಮಕ್ಕಳ ಸಾವು ಸಂಭವಿಸಿದೆ ಎಂಬುದು ಶಂಕೆ ವ್ಯಕ್ತವಾಗಿದೆ.
ಸಾವನ್ನಪ್ಪಿದ ಮಕ್ಕಳೆಲ್ಲಾ ಐದು ವರ್ಷದೊಳಗಿನವರು. ಮಕ್ಕಳು ಮೊದಲಿಗೆ ಕೋಲ್ಡ್ ಮತ್ತು ಜ್ವರ ಇದೆ ಎಂದು ಹೇಳಿದ್ದರು. ಸ್ಥಳೀಯ ವೈದ್ಯರು ಕಫ್ ಸಿರಪ್ ಅನ್ನು ನೀಡುವಂತೆ ಪ್ರಿಸ್ಕಿಪ್ಷನ್ ನೀಡಿದ್ದರು. ಕಫ್ ಸಿರಪ್ ನೀಡಿದ ಬಳಿಕ ಮಕ್ಕಳು ಚೇತರಿಕೆಯಾದಂತೆ ಕಂಡು ಬಂದರು. ಆದರೇ, ಕೆಲವೇ ದಿನಗಳಲ್ಲಿ ಕೋಲ್ಡ್ ಮತ್ತು ಜ್ವರ ಮತ್ತೆ ಬಂದಿತ್ತು. ಜೊತೆಗೆ ಸಡನ್ ಆಗಿ ಮೂತ್ರವಿಸರ್ಜನೆ ಕಡಿಮೆಯಾಗಿತ್ತು. ತಕ್ಷಣವೇ ವೇಗವಾಗಿ ಮಕ್ಕಳ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಕಿಡ್ನಿ ಸೋಂಕು ಆರಂಭವಾಯಿತು.
ತಕ್ಷಣ, ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ನಾಗಪುರಕ್ಕೆ ರವಾನೆ ಮಾಡಲಾಗಿತ್ತು. ಆದರೇ ಮೂವರು ಮಕ್ಕಳು ನಾಗಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಮ್ಮ ಮಕ್ಕಳು ಈ ಮೊದಲು ಈ ರೀತಿ ಅನಾರೋಗ್ಯಕ್ಕೀಡಾಗಿರಲಿಲ್ಲ ಎಂದು ಮಕ್ಕಳನ್ನು ಕಳೆದುಕೊಂಡ ಪೋಷಕರು ಹೇಳುತ್ತಿದ್ದಾರೆ. ಈ ಭಾರಿ ಮಕ್ಕಳಿಗೆ ಸ್ವಲ್ಪ ಜ್ವರ ಮಾತ್ರ ಇತ್ತು. ಸಿರಫ್ ನೀಡಿದ ಬಳಿಕ ಮೂತ್ರ ವಿಸರ್ಜನೆ ನಿಂತಿತು. ನಮಗೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನೋವಿನಿಂದ ಪೋಷಕರು ಹೇಳಿದ್ದಾರೆ.
ಇನ್ನೂ ಈ ಮಕ್ಕಳ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ, ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆಗಳು ಡೈಥಿಲೀನ್ ಗ್ಲೈಕಾಲ್ ಮಿಶ್ರಣದ ಇರುವುದನ್ನು ಬಹಿರಂಗಪಡಿಸಿದಾಗ ಮಹತ್ವದ ತಿರುವು ಬಂದಿತು. ಇದು ಹೆಚ್ಚಾಗಿ ಔಷಧೀಯ ವಿಷಕ್ಕೆ ಸಂಬಂಧಿಸಿದ ವಿಷಕಾರಿ ರಾಸಾಯನಿಕವಾಗಿದೆ. ಹೆಚ್ಚಿನ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್ಗಳನ್ನು ನೀಡಲಾಗಿತ್ತು.
ಚಿಂದ್ವಾರ ಜಿಲ್ಲಾಧಿಕಾರಿ ಶೀಲೇಂದ್ರ ಸಿಂಗ್ ಅವರು ಜಿಲ್ಲೆಯಾದ್ಯಂತ ಎರಡು ಸಿರಪ್ಗಳ ಮಾರಾಟವನ್ನು ತಕ್ಷಣವೇ ನಿಷೇಧಿಸಿದರು . ವೈದ್ಯರು, ಔಷಧಾಲಯಗಳು ಮತ್ತು ಪೋಷಕರಿಗೆ ತುರ್ತು ಸಲಹೆಯನ್ನು ನೀಡಿದರು.
"ಬಯಾಪ್ಸಿ ವರದಿಯು ಕಲುಷಿತ ಔಷಧವು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವೆಂದು ಬಲವಾಗಿ ಸೂಚಿಸುತ್ತದೆ. ತೊಂದರೆಗೊಳಗಾದ ಹಳ್ಳಿಗಳ ನೀರಿನ ಮಾದರಿಗಳು ಯಾವುದೇ ಸೋಂಕನ್ನು ತೋರಿಸಿಲ್ಲ. ಔಷಧದ ಲಿಂಕ್ ಅನ್ನು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಸಿಂಗ್ ಹೇಳಿದರು.
ಗಂಭೀರತೆಯನ್ನು ಪರಿಗಣಿಸಿ, ಜಿಲ್ಲಾಡಳಿತವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ತಂಡವನ್ನು ಕರೆಸಿದೆ.