/newsfirstlive-kannada/media/media_files/2025/09/22/maruthi-bagli-2025-09-22-13-49-16.jpg)
ಟೌನ್ ಪ್ಲ್ಯಾನಿಂಗ್ ಆಫೀಸರ್ ಮಾರುತಿ ಬಾಗ್ಲಿಯ ವಿರುದ್ಧ ಆರೋಪಗಳ ಸರಮಾಲೆ!
ಲೋಕಾಯುಕ್ತ ದಾಳಿ ಬೆನ್ನಲ್ಲೇ ಭ್ರಷ್ಟ ಅಧಿಕಾರಿ ಮಾರುತಿ ಬಾಗ್ಲಿಯ ಅಸಲಿಯುತ್ತು ಬಟಾಬಯಲು ಆಗಿದೆ. ಟೌನ್ ಪ್ಲ್ಯಾನಿಂಗ್ ಆಫೀಸರ್ ಮಾರುತಿ ಬಾಗ್ಲಿ ಕರ್ಮಕಾಂಡ ಬೆಳಕಿಗೆ ಬಂದಿದೆ. ಸರ್ಕಾರಿ ಕೆಲಸಕ್ಕೆ ಸೇರಿದಾಗಿನಿಂದ ಮಾರುತಿ ಬಾಗ್ಲಿಯದ್ದು ಅಕ್ರಮಗಳ ಸರಮಾಲೆಯೇ ಇದೆ. ಪ್ರತಿ ವರ್ಗಾವಣೆ, ಪ್ರಮೋಶನ್​​ ನಲ್ಲಿ ನಿಯಮಬಾಹಿರ ಚಟುವಟಿಕೆ ನಡೆಸಿರುವ ಬಾಗ್ಲಿ , ಮುಡಾ ಹಗರಣದಲ್ಲೂ ಮಾರುತಿ ಬಾಗ್ಲಿಯ ಕೈಚಳಕ ಇದೆ. ಮುಡಾ ಮಾಜಿ ಆಯುಕ್ತ ದಿನೇಶ್​ ಕುಮಾರ್​​​ ಇ.ಡಿ.ಯಿಂದ ಅರೆಸ್ಟ್ ಆದ ​​ ಬೆನ್ನಲ್ಲೇ ಬಾಗ್ಲಿಗೂ ಢವ..ಢವ ಶುರುವಾಗಿದೆ.
ಇತ್ತೀಚೆಗಷ್ಟೇ ಮಾರುತಿ ಬಾಗ್ಲಿ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ಮಾರುತಿ ಬಾಗ್ಲಿಗೆ ಇದೀಗ ಮುಡಾ ಹಗರಣದಲ್ಲಿ ಆತಂಕ ಶುರುವಾಗಿದೆ. ವೈಟ್​ & ವೈಟ್ ಶರ್ಟ್​ ಹಾಕ್ಕೊಂಡು ಈತ ಮಾಡಿದ್ದೆಲ್ಲಾ ಅಕ್ರಮ. ಯಾವುದೇ ಸಿಬ್ಬಂದಿ, ಅಧಿಕಾರಿಗೆ ಸಿಗದ ಬ್ಯಾಕ್​ ಟು ಬ್ಯಾಕ್​​​ ಪ್ರಮೋಶನ್​​ಗಳು ಈತನಿಗೆ ಸಿಕ್ಕಿದ್ದು ಹೇಗೆ..? ಎಂಬ ಪ್ರಶ್ನೆ ಉದ್ಭವವಾಗಿದೆ. ಕೆಲವೇ ವರ್ಷಗಳಲ್ಲಿ ಗ್ರೂಪ್​​​-ಸಿ ವೃಂದದ ಹುದ್ದೆಯಿಂದ ಗ್ರೂಪ್​​​-ಬಿ, ಗ್ರೂಪ್​​​-ಎ ವೃಂದದ ಹುದ್ದೆ ಬಾಗ್ಲಿ ಗಿಟ್ಟಿಸಿಕೊಂಡಿದ್ದಾನೆ. ಸಹಾಯಕನಿಂದ - ಅಧಿಕಾರಿಯವರಗೆ ಪ್ರತಿ ಪ್ರಮೋಶನ್​​​ ನಲ್ಲಿ ಬಾಗ್ಲಿಯಿಂದ ಗೋಲ್ಮಾಲ್​​​ ನಡೆದಿದೆ.
ಇತ್ತೀಚೆಗಷ್ಟೇ ಲೋಕಾಯುಕ್ತ ದಾಳಿ ವೇಳೆ ಮಾರುತಿ ಬಾಗ್ಲಿ ಬಳಿ ಅಪಾರ ಸಂಪತ್ತು ಇರೋದು ಪತ್ತೆಯಾಗಿತ್ತು . ಕಂತೆ ಕಂತೆ ನೋಟು, ಚಿನ್ನ, ಬೆಳ್ಳಿ, ಸೈಟುಗಳು, ಅಕ್ರಮ ಆಸ್ತಿ ಗಳಿಕೆ, ದಾಖಲೆಗಳು ಪತ್ತೆಯಾಗಿದ್ದವು. ದಾಳಿ ಬೆನ್ನಲ್ಲೇ ಮಾರುತಿ ಬಾಗ್ಲಿ ನಡೆಸಿರುವ ಎಲ್ಲಾ ಅಕ್ರಮಗಳು ಬೆಳಕಿಗೆ ಬಂದಿವೆ. ಸಂಪೂರ್ಣ ದಾಖಲೆ ಸಮೇತ ಮಾರುತಿ ಬಾಗ್ಲಿಯ ಕರ್ಮಕಾಂಡ ನ್ಯೂಸ್​ಫಸ್ಟ್​ ಬಿಚ್ಚಿಡ್ತಿದೆ.
ಹೈದರಾಬಾದ್​ - ಕರ್ನಾಟಕ ಮೀಸಲಾತಿ ದುರ್ಬಳಕೆ..!
ಹೈದರಾಬಾದ್ ಕರ್ನಾಟಕದ ಉದ್ಯೋಗ ನೇಮಕಾತಿಯ ಮೀಸಲಾತಿ ಪಡೆದು ಪ್ರಮೋಶನ್​ ಪಡೆದು ಮಾರುತಿ ಬಾಗ್ಲಿ ಕಳ್ಳಾಟ ನಡೆಸಿದ್ದಾನೆ. ಹೈ-ಕ ಮೀಸಲಾತಿ ಬಳಸಿ ಸಹಾಯಕನಿಂದ ಅಧಿಕಾರಿಯವರೆಗೆ ಪ್ರಮೋಶನ್​​ ಪಡೆದಿದ್ದಾನೆ. ಈ ಮಾರುತಿ ಬಾಗ್ಲಿಗೆ ಹೈದರಾಬಾದ್​ ಕರ್ನಾಟಕ ಪ್ರದೇಶದ 371 ಜೆ ವಿಧಿಯಡಿ ನೇಮಕಾತಿ, ಬಡ್ತಿ ಮೀಸಲಾತಿ ಬೇಕು, ಆದ್ರೆ ಅಲ್ಲಿಗೆ ಮಾತ್ರ ವರ್ಗಾವಣೆ ಬೇಡ ಎಂದಿದ್ದಾನೆ.
ಸರ್ಕಾರದ ಆದೇಶಕ್ಕೂ ತಲೆಬಾಗದ ಬಾಗ್ಲಿಯಿಂದ ಕಾನೂನುಬಾಹಿರ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲಾತಿ ಬಳಸಿ ಗ್ರೂಪ್​ ಸಿ ಯಿಂದ ಗ್ರೂಪ್​​​​ ಬಿ ಗೆ ಬಡ್ತಿಯನ್ನು ಈತ ಪಡೆದಿದ್ದಾನೆ. ಉದ್ಯೋಗ ಮತ್ತು ಪ್ರಮೋಶನ್​​ಗೆ ಹೈ-ಕ ಮೀಸಲಾತಿ ಬೇಕು ಆದ್ರೆ ಆ ಸ್ಥಳಕ್ಕೆ ವರ್ಗಾವಣೆ ಬೇಡ ಎಂದಿದ್ದಾನೆ. ಹೈ-ಕ ಭಾಗಕ್ಕೆ ವರ್ಗಾವಣೆ ಮಾಡಿದ್ರೂ ಒಂದೇ ಒಂದು ದಿನ ಆ ಭಾಗಕ್ಕೆ ಮಾರುತಿ ಬಾಗ್ಲಿ ತೆರಳಿಲ್ಲ. ಬೆಂಗಳೂರು ಬಿಟ್ಟು ಕದಲದ ಮಾರುತಿ ಬಾಗ್ಲಿಯ ಉದ್ದೇಶ ಬೇರೆನೇ ಇದೆ.
ತನ್ನ ಅಕ್ರಮಗಳಿಗೆ ಬೆಂಗಳೂರನ್ನೇ ಪ್ರೈಮ್​​​ ಸೆಂಟರ್​ ಆಗಿ ಮಾರುತಿ ಬಾಗ್ಲಿ​ ಮಾಡಿಕೊಂಡಿದ್ದಾನೆ. ಹೀಗಾಗಿ ಕೆಲಸಕ್ಕೆ ಸೇರಿ 15 ವರ್ಷಗಳಾದ್ರೂ ಒಂದು ದಿನ ಕೂಡ ಹೈದರಾಬಾದ್​ ಕರ್ನಾಟಕದಲ್ಲಿ ಸೇವೆ ಸಲ್ಲಿಸಿಲ್ಲ.
ಭ್ರಷ್ಟ ಮಾರುತಿ ಬಾಗ್ಲಿ ಅಕ್ರಮಗಳ ಸರಮಾಲೆ ನೋಡೋದಾದ್ರೆ?
ಡಿಪ್ಲೋಮಾ ವಿದ್ಯಾರ್ಹತೆ ಮೇಲೆ 2010ರಲ್ಲಿ ಸಹಾಯಕ ನಗರ ಯೋಜಕನಾಗಿ ನೇಮಕವಾಗಿದ್ದಾನೆ. ಮೈಸೂರಿನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಗ್ರೂಪ್-ಸಿ ವೃಂದದ ಹುದ್ದೆಗೆ ನಿಯೋಜನೆ ಆಗಿತ್ತು. ಅದಾಗಿ ಎರಡೇ ವರ್ಷಕ್ಕೆ ಅಂದ್ರೆ 2012ರಲ್ಲಿ ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡ ಬಾಗ್ಲಿ, ಬಿಡಿಎ ನಗರ ಯೋಜನಾ ವಿಭಾಗಕ್ಕೆ ಸಹಾಯಕ ನಗರ ಯೋಜಕನಾಗಿಯೇ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. 2015ರಲ್ಲಿ ಹೈದರಾಬಾದ್​ - ಕರ್ನಾಟಕ ಮೀಸಲಾತಿ ದುರ್ಬಳಕೆ ಮಾಡಿಕೊಂಡು ಪ್ರಮೋಶನ್​​ ಅನ್ನು ಮಾರುತಿ ಬಾಗ್ಲಿ ಪಡೆದಿದ್ದಾನೆ. ಸಹಾಯಕ ನಗರ ಯೋಜಕರ ಹುದ್ದೆ (ಗ್ರೂಪ್​​-ಸಿ)ಯಿಂದ ನಗರ ಯೋಜಕರ ಹುದ್ದೆ(ಗ್ರೂಪ್ ಬಿ ವೃಂದದ ಹುದ್ದೆ)ಗೆ ಮುಂಬಡ್ತಿ ಪಡೆದಿದ್ದಾನೆ. ಕೆಲಸಕ್ಕೆ ಸೇರಿ ಐದೇ ವರ್ಷಕ್ಕೆ ಗ್ರೂಪ್​​-ಸಿ ಯಿಂದ ಗ್ರೂಪ್​​-ಬಿ ವೃಂದದ ಹುದ್ದೆ ಬಾಗ್ಲಿ ಗಿಟ್ಟಿಕೊಂಡಿದ್ದಾನೆ. 2020ರಲ್ಲಿ ಈತನ ಅಕ್ರಮಗಳ ಹಿನ್ನೆಲೆ ಭ್ರಷ್ಟ ಮಾರುತಿ ಬಾಗ್ಲಿಯನ್ನ ಸರ್ಕಾರ ಬಿಡಿಎಯಿಂದ ರಾಯಚೂರಿಗೆ ವರ್ಗಾವಣೆ ಮಾಡಿತ್ತು. ರಾಯಚೂರಿಗೆ ವರ್ಗಾವಣೆ ಮಾಡಿದ್ರೂ ಒಂದು ದಿನವೂ ಅಲ್ಲಿ ಕೆಲಸ ಮಾಡದ ಮಾರುತಿ ಬಾಗ್ಲಿ , ರಾಯಚೂರಿಗೆ ತೆರಳದೆ ಕೂಡಲೇ ಅದೇ ಆದೇಶವನ್ನು ಮಾರ್ಪಡಿಸಿಕೊಂಡು ಬಿಬಿಎಂಪಿ ನಗರ ಯೋಜನಾ ವಿಭಾಗದಲ್ಲಿ 2022, ಏಪ್ರಿಲ್​​ವರೆಗೆ ಕರ್ತವ್ಯ ನಿರ್ವಹಣೆ ಮಾಡಿದ್ದಾನೆ.
2010ರಿಂದ ರಿಂದ 2022ರವರೆಗೆ ಹೈದ್ರಾಬಾದ್-ಕರ್ನಾಟಕ ಮೀಸಲಾತಿಯಡಿಯಲ್ಲಿ ನೇಮಕ ಮತ್ತು ಮುಂಬಡ್ತಿ ಪಡೆದಿದ್ದಾನೆ. ಆದ್ರೆ ಒಂದು ದಿನವೂ ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯದಲ್ಲಿ ಕೆಲಸ ನಿರ್ವಹಿಸಿಲ್ಲ. ಇದಾದ ಬಳಿಕ 2022ರಲ್ಲಿ ಮತ್ತೆ ಹೈ-ಕ ನಿಯಮಗಳನ್ನ ಉಲ್ಲಂಘಿಸಿ ಪ್ರಮೋಶನ್​​ ಪಡೆದಿರುವ ಮಾರುತಿ ಬಾಗ್ಲಿ ನಿಯಮಬಾಹಿರವಾಗಿ ನಗರ ಯೋಜಕರ ಹುದ್ದೆ (ಗ್ರೂಪ್​​-ಬಿ)ಯಿಂದ - ಸಹಾಯಕ ನಿರ್ದೇಶಕರ ಹುದ್ದೆಗೆ (ಗ್ರೂಪ್ ಎ ವೃಂದ)ಕ್ಕೆ ಮುಂಬಡ್ತಿ ಪಡೆದಿದ್ದಾನೆ.
ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ 26 ನಯೋಸೇ 2022(ಇ) ದಿನಾಂಕ 11/4/2022 ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ಪ್ರಮೋಶನ್​​ ಅನ್ನು ಮಾರುತಿ ಬಾಗ್ಲಿ ಪಡೆದಿರುವ ಗಂಭೀರ ಆರೋಪ ಇದೆ.
ಸಹಾಯಕ ನಿರ್ದೇಶಕರ ಹುದ್ದೆಗೆ (ಗ್ರೂಪ್ ಎ ವೃಂದ) ಮುಂಬಡ್ತಿ ನೀಡಿ ಮಾಲೂರು ಯೋಜನಾ ಪ್ರಾಧಿಕಾರಕ್ಕೆ ನಿಯೋಜನೆ ಮಾಡಿಸಿಕೊಂಡಿದ್ದ. ಮಾಲೂರು ಯೋಜನಾ ಪ್ರಾಧಿಕಾರದಿಂದ ಕೇವಲ ನಾಲ್ಕೇ ತಿಂಗಳಿಗೆ ಬಿಡಿಎಗೆ ವಾಪಾಸ್​ ಬಂದು ನೆಲೆಯೂರುತ್ತಾನೆ. 2023 ಮೇನಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ್​ ರಿಗೆ ವಿಶೇಷ ಕರ್ತವ್ಯಾಧಿಕಾರಿ (OSD)ಯಾಗಿ ನೇಮಕವಾಗಿದ್ದ.
ಈತನ ಭ್ರಷ್ಟಾಚಾರ ಮಿತಿ ಮೀರುತ್ತಿದ್ದಂತೆ, 2025 ಮೇನಲ್ಲಿ ನಗರಾಭಿವೃದ್ದಿ ಸಚಿವರ OSD ಹುದ್ದೆಯಿಂದ ಬಿಡುಗಡೆಗೊಳಿಸಿ ಕೊಪ್ಪಳ ಜಿಲ್ಲೆಗೆ ವರ್ಗಾವಣೆಯನ್ನು ಸರ್ಕಾರ ಮಾಡಿದೆ. ಬಳಿಕ ವರ್ಗಾವಣೆ ಆದೇಶವನ್ನ ಕೂಡ ಮಾರ್ಪಡಿಸಿ ನಿರ್ದೇಶಕ ತಿಪ್ಪೇಸ್ವಾಮಿ ಕೃಪೆಯಿಂದ ಅವರದ್ದೇ ಕಚೇರಿ MS ಬಿಲ್ಡಿಂಗ್​​​ಗೆ ಬಂದು ಸೇರಿಕೊಂಡಿದ್ದಾನೆ. ಇಷ್ಟೆಲ್ಲಾ ಅಕ್ರಮ, ಭ್ರಷ್ಟಾಚಾರ, ಪ್ರಭಾವ ಬಳಕೆ ಹಿನ್ನೆಲೆ ಜುಲೈ 23ರಂದು ಮಾರುತಿ ಬಾಗ್ಲಿ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ಭ್ರಷ್ಟ ಮಾರುತಿ ಬಾಗ್ಲಿಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ ಕೆಲ ಅಧಿಕಾರಿಗಳು..!
ಬೆಂಗಳೂರಿನ ಎಂ.ಎಸ್. ಬಿಲ್ಡಿಂಗ್ ನಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೆಂಕಟಾಚಲಪತಿ ಮಾರುತಿ ಬಾಗ್ಲಿಗೆ ಸಪೋರ್ಟ್​ ಮಾಡುತ್ತಿದ್ದಾರೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕ ತಿಪ್ಪೇಸ್ವಾಮಿ ಈತನ ಬೆನ್ನೆಲುಬು ಆಗಿ ನಿಂತಿದ್ದಾರೆ. ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಗೆ OSD ಆಗಿದ್ದ ಎಂಬ ಕಾರಣಕ್ಕೆ ಬಾಗ್ಲಿ ಮಾಡುವ ಅಕ್ರಮಗಳಿಗೂ ಹಿರಿಯ ಅಧಿಕಾರಿಗಳ ಬೆಂಬಲ ಸಿಗುತ್ತಿದೆ. ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೂ ಕೆಲವು ತಿಂಗಳ ಹಿಂದಷ್ಟೇ ಲೋಕಾಯುಕ್ತ ದಾಳಿಯಾಗಿತ್ತು.
ಸಚಿವರ ವಿಶೇಷ ಕರ್ತವ್ಯಾಧಿಕಾರಿಯ ಹುದ್ದೆಯಿಂದ ಬಿಡುಗಡೆಗೊಳಿಸಿದ್ರೂ ಬಾಗ್ಲಿ ಅನಧಿಕೃತವಾಗಿ ಸಚಿವರ ಕಚೇರಿಯಲ್ಲೇ ಬೀಡುಬಿಟ್ಟಿದ್ದ. OSDಯಿಂದ ನಿರ್ದೇಶಕರ ಕಚೇರಿಗೆ ವರ್ಗಾವಣೆಗೊಂಡಿದ್ರೂ ಸಹ ಅನಧಿಕೃತವಾಗಿ ಸಚಿವರ ಆಪ್ತ ಕಾರ್ಯಾಲಯದಲ್ಲಿ ಮಾರುತಿ ಬಾಗ್ಲಿ ಠಿಕಾಣಿ ಹೂಡಿದ್ದಾನೆ. ಮಾರುತಿ ಬಾಗ್ಲಿಗೆ ಸದ್ಯಎಂ.ಎಸ್​ ಬಿಲ್ಡಿಂಗ್​​​​ ನ ನಿರ್ದೇಶಕರ ಕಚೇರಿಯಲ್ಲಿ ಯಾವುದೇ ಕೆಲಸ ನೀಡದೇ ಸರ್ಕಾರಿ ವೇತನವನ್ನ ನೀಡಲಾಗ್ತಿದೆ . ಇದು ಕಾನೂನು ಮತ್ತು ನಿಯಮಬಾಹಿರ ಎಂಬ ಆರೋಪ ಇದೆ.
ನಗರಾಭಿವೃದ್ದಿ ಸಚಿವರ ಓಎಸ್ಡಿ ಹುದ್ದೆಯಿಂದ ಈ ಹಿಂದೆಯೇ ವರ್ಗಾವಣೆ
ಮುಂಬಡ್ತಿ ವಿಚಾರ ಹೈಕೋರ್ಟ್​​ನಲ್ಲಿ ವಿಚಾರಣೆ..!
ಮಾರುತಿ ಬಾಗ್ಲಿ ದಿಢೀರ್​​ ಅಂತಾ ಗ್ರೂಪ್​​-ಸಿ ಯಿಂದ ಗ್ರೂಪ್​​​-ಎ ವೃಂದಕ್ಕೆ ಪ್ರಮೋಶನ್​​​ ಗಿಟ್ಟಿಸಿಕೊಂಡಿದ್ದಾನೆ. ಇವನಿಗೆ ಮುಂಬಡ್ತಿ ನೀಡಿರೋದನ್ನ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ಅರ್ಜಿ ಸಂಖ್ಯೆ 1483 ಮತ್ತು 1484 of 2022 ಪ್ರಕರಣ ದಾಖಲಾಗಿದೆ. ವೆಂಕಟೇಶ್​ ಎಂಬ ವ್ಯಕ್ತಿ ದೂರು ದಾಖಲು ಮಾಡಿದ್ದಾರೆ. ಕರ್ನಾಟಕ ಆಡಳಿತ ನ್ಯಾಯ ಮಂಡಳಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ. ಈತನ ಪ್ರಮೋಶನ್​​ ನಿಯಮಬಾಹಿರ ಅಂತ ಕೆಎಟಿ ಆದೇಶ ನೀಡಿದೆ. ಕರ್ನಾಟಕ ನ್ಯಾಯ ಮಂಡಳಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿರುವ ಮಾರುತಿ ಬಾಗ್ಲಿ, ಕೆಎಟಿ ಆದೇಶ ರದ್ದುಪಡಿಸಬೇಕೆಂದು ಮನವಿ ಮಾಡಿದ್ದಾನೆ. ಸದ್ಯ ಹೈಕೋರ್ಟ್​​ನಲ್ಲಿ ಈ ಪ್ರಕರಣ ರಿಟ್​ ಅರ್ಜಿ ಸಂಖ್ಯೆ 20918/2023, 20875/2023 ವಿಚಾರಣೆ ಹಂತದಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.,