/newsfirstlive-kannada/media/media_files/2025/08/23/mask-man-face-revealed022-2025-08-23-12-53-07.jpg)
ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ
ಅನಾಮಿಕನಿಗೆ ಬುರುಡೆ ಸಿಕ್ಕಿದ್ದು ಎಲ್ಲಿ ಅನ್ನೋ ಸತ್ಯ ರಿವೀಲ್!
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಪೊಲೀಸರಿಗೆ ದೂರು ಕೊಟ್ಟಿದ್ದ. ಜೊತೆಗೆ ಮೊದಲು ಪೊಲೀಸರ ನಂಬಿಕೆ ಗಳಿಸಲು ಒಂದು ತಲೆ ಬುರುಡೆಯನ್ನು ತಂದಿದ್ದ. ಆ ತಲೆ ಬುರುಡೆಯನ್ನು ಮಹಿಳೆಯ ತಲೆ ಬುರುಡೆ ಎಂದಿದ್ದ. ಈಗ ಆ ತಲೆ ಬುರುಡೆ ಮಹಿಳೆಯದ್ದಲ್ಲ ಎಂಬುದು ಪೋರೆನ್ಸಿಕ್ ಪರೀಕ್ಷೆಿಯಿಂದ ದೃಢಪಟ್ಟಿದೆ. ಜೊತೆಗೆ ಅದು ಭೂಮಿಯಲ್ಲಿ ಹೂತಿದ್ದ ತಲೆ ಬುರುಡೆಯೂ ಅಲ್ಲ. ಧರ್ಮಸ್ಥಳ ಭಾಗದ ತಲೆ ಬುರುಡೆಯೂ ಅಲ್ಲ. ಆ ತಲೆ ಬುರುಡೆಯೂ ಎಲ್ಲಿಂದ ತಂದಿದ್ದು ಎಂಬ ಸತ್ಯವನ್ನು ಎಸ್ಐಟಿ ಅಧಿಕಾರಿಗಳು ತನಿಖೆ ಮೂಲಕ ಪತ್ತೆ ಹಚ್ಚಿದ್ದಾರೆ.
ಮೆಡಿಕಲ್ ಕಾಲೇಜು ರಿಸರ್ಚ್ ಸೆಂಟರ್ನಿಂದ ಬುರುಡೆಯನ್ನು ತರಲಾಗಿತ್ತು ಎಂಬುದು ಈಗ ದೃಢವಾಗಿದೆ. 24 ವರ್ಷದ ಯುವತಿಯ ತಲೆ ಬುರುಡೆ ಎಂದು ದೂರುದಾರ ಚಿನ್ನಯ್ಯ ಅಲಿಯಾಸ್ ಚೆನ್ನ ಹೇಳಿದ್ದ. ಧರ್ಮಸ್ಥಳ ಕಾಡಲ್ಲಿ ಹೂತಿದ್ದೆ, ಅಲ್ಲಿಂದ ತಂದೇ ಎಂದಿದ್ದ ಚಾಲಾಕಿ ಚಿನ್ನಯ್ಯ. ನ್ಯಾಯಾಲಯದಲ್ಲೂ ಇದೇ ಹೇಳಿಕೆಯನ್ನು ಚಿನ್ನಯ್ಯ @ ಚೆನ್ನ ನೀಡಿದ್ದ. ಆದರೇ, ಎಫ್ಎಸ್ಎಲ್ ರಿಪೋರ್ಟ್ನಿಂದ ಬುರುಡೆ ರಹಸ್ಯ ಬಯಲಾಗಿದೆ.
ಚಿನ್ನಯ್ಯ ತಂದಿದ್ದ ತಲೆ ಬುರುಡೆ FSLಗೆ ಕಳುಹಿಸಿದ್ದ ಪೊಲೀಸರು, ರಿಪೋರ್ಟ್ ಬರುತ್ತಿದ್ದಂತೆ ದೂರುದಾರನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಬುರುಡೆ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎಸ್ಐಟಿ ತಂಡ ಪಡೆದುಕೊಂಡಿದೆ. ಸದ್ಯ ಬುರುಡೆಯನ್ನ ತಾನು ತಂದಿದ್ದಲ್ಲ ಎಂದಿರುವ ಚಿನ್ನಯ್ಯ @ ಚೆನ್ನ ಬುರುಡೆ ರಹಸ್ಯದ ಸೂತ್ರದಾರ ಹೆಸರನ್ನು ಎಸ್ಐಟಿಗೆ ತಿಳಿಸಿದ್ದಾನೆ. ಚಿನ್ನಯ್ಯ 8 ಜನರ ಹೆಸರನ್ನ SIT ಮುಂದೆ ಬಾಯ್ಬಿಟ್ಟಿದ್ದಾನೆ.
ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿರುವ SIT ಅಧಿಕಾರಿಗಳು, ಮೊದಲು ತಂದಿದ್ದ ತಲೆಬುರುಡೆಗೆ ಚಿನ್ನಯ್ಯ ವಾರ್ನಿಸ್ ಬಣ್ಣ ಸಹ ಹಚ್ಚಿರುವ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಬುರುಡೆಗೆ ಢವ ಢವ!
ಇಂದು ಕೂಡ ಚಿನ್ನಯ್ಯನ ವಿಚಾರಣೆ ಮುಂದುವರಿಯುತ್ತಿದೆ. ತನಿಖಾಧಿಕಾರಿ ಜಿತೇಂದ್ರ ದಯಾಮಾರಿಂದ ವಿಚಾರಣೆ ನಡೆಸುತ್ತಿದ್ದಾರೆ. ಚಿನ್ನಯ್ಯಗೆ ಕೇವಲ ಪ್ಯಾಂಟ್, ಶರ್ಟ್ ಧರಿಸಲು ಅವಕಾಶ ನೀಡಲಾಗಿದೆ. 24 ಗಂಟೆ ದೂರುದಾರ ಚಿನ್ನಯ್ಯನ ಮೇಲೆ ಎಸ್ಐಟಿ ಅಧಿಕಾರಿ ಗಳು ನಿಗಾ ವಹಿಸಿದ್ದಾರೆ. ಈ ಹಿಂದಿನಿಂದಲೂ ಪಂಚೆ, ಅಂಗಿ ದೂರುದಾರ ಚೆನ್ನ ಧರಿಸುತ್ತಿದ್ದ. ಬಟ್ಟೆಯಿಂದ ಚಿನ್ನಯ್ಯ ಅಲಿಯಾಸ್ ಚೆನ್ನ ಆತ್ಮಹತ್ಯೆ ಮಾಡಿಕೊಳ್ಳದಂತೆ ಎಸ್ಐಟಿ ಅಧಿಕಾರಿಗಳು ದಿನದ 24 ಗಂಟೆಯೂ ತೀವ್ರ ನಿಗಾ ವಹಿಸಿದ್ದಾರೆ. ಧರ್ಮಸ್ಥಳದ ಬಗ್ಗೆ ನಡೆದಿರುವ ದೊಡ್ಡ ಷಡ್ಯಂತ್ರವನ್ನು ತನಿಖೆಯ ಮೂಲಕವೇ ಬಯಲಿಗೆಳೆಯಬೇಕಾಗಿದೆ. ಈ ಷಡ್ಯಂತ್ರ ಬಯಲಿಗೆಳೆಯಲು ಆರೋಪಿ ಚಿನ್ನಯ್ಯನೇ ಪ್ರಮುಖ ಸಾಕ್ಷಿ ಕೂಡ ಹೌದು. ಚಿನ್ನಯ್ಯನ ಮುಂದೆ ಬಿಟ್ಟು ಷಡ್ಯಂತ್ರ ರೂಪಿಸಿದವರು ಬೇರೆಯೇ ಇದ್ದಾರೆ. ಯಾರೆಲ್ಲಾ ಷಡ್ಯಂತ್ರ ರೂಪಿಸಿದ್ದಾರೆ ಎನ್ನುವುದನ್ನು ಈ ಚಿನ್ನಯ್ಯನ ಮೂಲಕವೇ ಬಯಲಿಗೆಳೆಯಬೇಕು. ಹೀಗಾಗಿ ಈತ ಪೊಲೀಸ್ ಕಸ್ಟಡಿಯಲ್ಲಿದ್ದಾಗ, ತನ್ನ ಪ್ಲ್ಯಾನ್, ಷಡ್ಯಂತ್ರ ಎಲ್ಲವೂ ಪೊಲೀಸರಿಗೆ ಗೊತ್ತಾಯಿತು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತೆ. ಈತ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಂಡು ಈತನ ಮೂಲಕವೇ ಎಲ್ಲವನ್ನೂ ಬಾಯಿ ಬಿಡಿಸಿ ಜಗತ್ತಿಗೆ ತಿಳಿಸುವ ಕೆಲಸವನ್ನು ಎಸ್ಐಟಿ ಮಾಡಬೇಕಾಗಿದೆ. ಹೀಗಾಗಿ ದಿನದ 24 ಗಂಟೆಯೂ ಪೊಲೀಸ್ ಸಿಬ್ಬಂದಿ ಈತನ ಮೇಲೆ ನಿಗಾ ವಹಿಸಿದ್ದಾರೆ. ಚಿನ್ನಯ್ಯ ಧರಿಸುವ ಬಟ್ಟೆ, ಸೇವಿಸುವ ಆಹಾರ ಎಲ್ಲದ್ದರ ಮೇಲೂ ನಿಗಾ ವಹಿಸಲೇಬೇಕಾಗಿದೆ.
ಬುರುಡೆ ಬೆನ್ನುಹತ್ತಿ!
ತಮಿಳುನಾಡಿನ ಚಿಕ್ಕರಸಿ ಪಾಳ್ಯದಲ್ಲಿ ವಾಸವಿದ್ದ ಚೆನ್ನಯ್ಯ, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2 ವರ್ಷಗಳ ಹಿಂದೆ ಉಜಿರೆಗೆ ಬಂದು ಗ್ರಾ.ಪಂನಲ್ಲಿ ಕೆಲಸ ಮಾಡುತ್ತಿದ್ದ. ಸಫಾಯಿ ಕರ್ಮಚಾರಿಯಾಗಿ ಮತ್ತೆ ಕೆಲಸಕ್ಕೆ ಚೆನ್ನ ಸೇರಿದ್ದ . ತಮಿಳುನಾಡಿನ ಚಿಕ್ಕರಸಿ ಪಾಳ್ಯ ತೆರಳಿ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ದೂರುದಾರನ 2ನೇ ಪತ್ನಿ ಮತ್ತು ಮಕ್ಕಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಚಿನ್ನಯ್ಯನ ಸ್ನೇಹಿತರು, ಸಂಬಂಧಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬುರುಡೆ ಗ್ಯಾಂಗ್ನ ಷಡ್ಯಂತ್ರಕ್ಕೆ ಸಿಕ್ಕಿದೆ ಮತ್ತೊಂದು ಸಾಕ್ಷಿ! ಅಬ್ಬಬ್ಬಬ್ಬಾ.. ಏನಣ್ಣ ಈ ರೇಂಜ್ಗೆ ಬುರುಡೆ ಬಿಡ್ತೀಯಾ?
ಚಿನ್ನಯ್ಯ ಹೇಳಿದ ಕಥೆ ಕೇಳಿದೋರೆಲ್ಲಾ ಹೇಳ್ತಿರೋದು ಇದೇ! ಯಾವ ರೇಂಜ್ಗೆ ಕಥೆ ಕಟ್ಟಿದ್ದೀಯ ಕಣಣ್ಣ ಅಂತ ಎಲ್ಲರೂ ಶಾಕ್ ಆಗಿದ್ದಾರೆ. ತನಿಖೆ ಆರಂಭಕ್ಕೆ ಮೊದಲೇ ಮಾಸ್ಕ್ ಮ್ಯಾನ್ನ ಸಂದರ್ಶನ ನೀಡಿದ್ದ. ಅಲ್ಲೊಂದು ಕಥೆಯನ್ನ ಚಿನ್ನಯ್ಯ ಅಲಿಯಾಸ್ ಚೆನ್ನ ಹೇಳಿದ್ದಾನೆ. ದೂರಿನಲ್ಲಿರೋದಕ್ಕೂ, ಈ ಕಥೆಗೂ ತಾಳೆಯೇ ಆಗೋದಿಲ್ಲ. ಸಿನಿಮಾ ಸ್ಟೋರಿಯನ್ನೂ ಮೀರಿಸೋ ರೇಂಜ್ಗೆ ಕಥೆ ಹೆಣೆದಿದ್ದಾನೆ. ಮಾಸ್ಕ್ ಮ್ಯಾನ್ ಬಿಟ್ಟಿದ್ದು ಬರೀ ಬುರುಡೆಯ್ಲ, ಬ್ರಹ್ಮಾಂಡ ಬುರುಡೆ ಎಂಬುದು ಈಗ ಎಸ್ಐಟಿ ಅಧಿಕಾರಿಗಳಿಗೆ ಖಚಿತವಾಗಿದೆ.
ಬುರುಡೆ ಮ್ಯಾನ್ ಬಿಟ್ಟ ಮೊದಲ ಬುರುಡೆಯೇ ಹೇಳುತ್ತೆ ಸಾಕ್ಷ್ಯ!
ರಾಷ್ಟ್ರೀಯ ಮಾಧ್ಯಮಕ್ಕೆ ಚಿನ್ನಯ್ಯ ನೀಡಿದ್ದ ಹೇಳಿಕೆಯೇ ಬೇರೆ
ಇದಕ್ಕೂ ಮೊದಲೇ ಕೊಟ್ಟ ಸಂದರ್ಶನದಲ್ಲಿ ಹೇಳಿರೋದೇ ಬೇರೆ. ನಾಲ್ಕೈದು ಜನ ಇರ್ತಿದ್ರು, ಮೇಲ್ವಿಚಾರಕರ ಸೂಚನೆಯಂತೆ ಕೆಲಸ ಮಾಡುತ್ತಿದ್ದೆ. ನಾವೆಲ್ಲಾ ಹೋಗಿ ಶವಗಳನ್ನ ಹೂಳುತ್ತಿದ್ದೆವು ಅಂತ ಮೊದಲು ಹೇಳಿಕೆ ನೀಡಿದ್ದಾನೆ. ಆದ್ರೆ ಸಂದರ್ಶನದಲ್ಲಿ ಹೇಳಿರೋದು ತಾನೊಬ್ಬನೇ ಹೋಗಿ ಹೂಳ್ತಿದ್ದೆ ಎಂದು ಹೇಳಿದ್ದಾನೆ. ನಾನೊಬ್ಬನೇ ಹೊತ್ಕೊಂಡು ಹೋಗಿ ಹೂಳುತ್ತಿದ್ದೆ ಅಂತ ಹೇಳಿಕೆ ನೀಡಿದ್ದಾನೆ. ಪೊಲೀಸರ ಸಮ್ಮುಖದಲ್ಲೇ ಹೂಳುತ್ತಿದ್ದೆ ಅಂತಲೂ ಚಿನ್ನಯ್ಯ ಹೇಳಿದ್ದಾನೆ.
ಸತ್ಯ ಹೇಳಲು ಬಂದಿದ್ದರ ಬಗ್ಗೆಯೇ ಸುಳ್ಳು ಹೇಳಿದ ಚಿನ್ನಯ್ಯ!
ತನಗೆ ಕಾಡಿದ ಪಾಪ ಪ್ರಜ್ಞೆಯ ಬಗ್ಗೆ ಚಿನ್ನಯ್ಯನಿಗೇ ಕ್ಲಾರಿಟಿ ಇಲ್ಲ. ಪೊಲೀಸರಿಗೆ ಕೊಟ್ಟ ದೂರಿನಲ್ಲಿ ದಶಕದಿಂದ ಕಾಡ್ತಿದ್ದ ಪಾಪಪ್ರಜ್ಞೆ ಅಂತ ಉಲ್ಲೇಖ ಮಾಡಿದ್ದಾನೆ. ಸಂದರ್ಶನದಲ್ಲಿ ಜ್ಞಾನೋದಯ ಆಗಿದ್ದು ಸೌಜನ್ಯ ಕೇಸ್ನಿಂದ ಅಂತ ಹೇಳಿದ್ದಾನೆ. ಸೌಜನ್ಯ ಬಗ್ಗೆ ಯೂ ಟ್ಯೂಬ್ ವಿಡಿಯೋಗಳನ್ನ ನೋಡಿ ಪಾಪಪ್ರಜ್ಞೆ ಕಾಡಿತ್ತು ಎಂದು ಕೂಡ ಹೇಳಿದ್ದಾನೆ. ಇದರಲ್ಲಿ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂದು ಜನರು, ಎಸ್ಐಟಿ ಗೊಂದಲಕ್ಕೊಳಗಾಗಿದ್ದಾರೆ.
ತಾನೆಷ್ಟು ಶವಗಳನ್ನ ಹೂತಿದ್ದೇನೆ ಅನ್ನೋದೇ ಚೆನ್ನನಿಗೆ ಗೊತ್ತಿಲ್ಲ!
ಮೊದಲು 100 ಶವಗಳ ಲೆಕ್ಕವನ್ನ ಕೊಟ್ಟಿದ್ದ ಮಾಸ್ಕ್ ಮ್ಯಾನ್ ಚೆನ್ನ ಅಲಿಯಾಸ್ ಚಿನ್ನಯ್ಯ. ಆದ್ರೆ ಸಂದರ್ಶನದಲ್ಲಿ ಸಾವಿರಾರು ಶವಗಳ ಹೂತಿದ್ದೆ ಎಂದು ಹೇಳಿದ್ದಾನೆ. ಮೊದಲು ಹೇಳಿದ್ರಲ್ಲಿ 90 ಹೆಣ್ಮಕ್ಕಳು, 10 ಪುರುಷರದ್ದು ಅಂದಿದ್ದ. ಆದ್ರೀಗ ಸಾವಿರದಿಂದ, ಸಾವಿರದೈನೂರು ಶವ ಅನ್ನೋ ಕಥೆ ಹೇಳಿದ್ದಾನೆ. ಇಂತಹ ಸುಳ್ಳು ಕಥೆಗಳನ್ನ ಕಟ್ಟಿದ್ದಕ್ಕೇ ಚಿನ್ನಯ್ಯ @ ಚೆನ್ನ ಲಾಕ್ ಆಗಿದ್ದಾನೆ.
ಶವಗಳನ್ನ ಹೂತಿರುವ ಜಾಗದ ಬಗ್ಗೆಯೂ ಕಂತೆ ಕಂತೆ ಬುರುಡೆ!
ರಾಷ್ಟ್ರೀಯ ಮಾಧ್ಯಮದಲ್ಲಿ ನಾಲ್ಕೈದು ಜನ ಶವಗಳನ್ನು ಹೂಳುತ್ತಿದ್ದೇವು ಎಂದು ಹೇಳಿದ್ದಾನೆ. ನಾಲ್ಕೈದು ಜನ ಹೋಗಿ ಶವಗಳನ್ನ ಹೂಳುತ್ತಿದ್ದೆವು ಅಂತ ಹೇಳಿಕೆ ಕೊಟ್ಟಿದ್ದ. ಆದ್ರೆ ಈಗ ಹೇಳೋದೇ ತನಗಲ್ಲದೆ ಬೇರೆ ಯಾರಿಗೂ ಶವ ಹೂತಿರುವ ಬಗ್ಗೆ ಗೊತ್ತೇ ಇಲ್ಲ ಅಂತ ಹೇಳಿದ್ದಾನೆ. ಶವಗಳನ್ನ ಹೂತಿರುವ ಜಾಗ ತನಗಲ್ಲದೆ ಬೇಱರಿಗೂ ಗೊತ್ತಿಲ್ಲ ಅಂತ ಕೂಡ ಹೇಳಿದ್ದಾನೆ. ಹೀಗೆ ಹತ್ತಾರು ಗೊಂದಲಕಾರಿ ಹೇಳಿಕೆಗಳನ್ನು ನೀಡಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಎಸ್ಐಟಿ ಅಧಿಕಾರಿಗಳಲ್ಲೂ ಅನುಮಾನ ಬರಲು ಕಾರಣವಾಗಿದ್ದ. ಈ ಅನುಮಾನದ ಮೇಲೆ ವೈಜ್ಞಾನಿಕವಾಗಿ ಮೊದಲ ತಲೆ ಬುರುಡೆಯ ಬಗ್ಗೆ ತನಿಖೆ ನಡೆಸಿದಾಗ, ಈತ ತಲೆ ಬುರುಡೆಯನ್ನು ಇಲ್ಲೇ ಧರ್ಮಸ್ಥಳದಿಂದ ತಂದೆ ಎಂದು ಹೇಳಿದ್ದು ಸುಳ್ಳು ಎಂಬುದು ದೃಢಪಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.